HRM

ಬದುಕಿನ ಒಳಿತಿಗಾಗಿ ಅನುಸರಿಸಬೇಕಾದ ಮೂರನೆಯ ದಾರಿ ಯಾವುದು? ಚೆನ್ನಾಗಿ ಬದುಕಿದವರನ್ನು ಗಮನಿಸಿದಾಗ ಕಾಣಿಸುವ ಆ ದಾರಿಯೇ ಪರರಿಗೆ ಸಹಾಯ ಮಾಡುವುದು.


ನಮಗೆ ಯಾರು ಸಹಾಯ ಮಾಡಿದ್ದಾರೆ? ನಾವು ಯಾಕೆ ಇತರರಿಗೆ ಸಹಾಯ ಮಾಡಬೇಕು? ಎಂಬ ಪ್ರಶ್ನೆ ಕೇಳುವವರು ಹಲವರು. ಹೀಗೆ ಪ್ರಶ್ನೆ ಕೇಳುವ ಮನೋಭಾವವನ್ನು ಒಂದು ಕ್ಷಣ ಬದಿಗಿಟ್ಟು, ನಮ್ಮ ಬದುಕನ್ನು ಅವಲೋಕಿಸಿದರೆ ಈ ಪ್ರಶ್ನೆಗಳಿಗೆ ನೇರಾನೇರ ಉತ್ತರ ಸಿಗುತ್ತದೆ.


ಎಲ್ಲ ಧರ್ಮಗಳೂ ಉಪದೇಶಿಸುವ ಒಂದು ಸಂಗತಿ: ನಿಮ್ಮ ಆಹಾರ ತಿನ್ನುವ ಮುಂಚೆ ಪ್ರಾರ್ಥನೆ ಮಾಡಿ. ಇದು ಯಾಕೆಂದು ಯೋಚಿಸಿದ್ದೀರಾ? ನೀವು ತಿನ್ನುವ ಧಾನ್ಯಗಳು, ತರಕಾರಿಗಳು, ಹಣ್ಣುಗಳು ಇವನ್ನೆಲ್ಲ ಬೆಳೆಸಿದವರು ಯಾರು? ನೀವು ಯಾವತ್ತೂ ಕಾಣದವರು; ಬಿಸಿಲೆನ್ನದೆ ಮಳೆಯೆನ್ನದೆ ನಿಮಗಾಗಿ ಹೆಣಗಿದವರು; ನೆರೆ, ಬಿರುಮಳೆ, ಉರಿಬಿಸಿಲು, ಬಿರುಗಾಳಿ, ಬರಗಾಲ, ಆಲಿಕಲ್ಲು, ನೀರಿನ ತತ್ವಾರ – ಇವನ್ನೆಲ್ಲ ನಿಭಾಯಿಸಿ ನಿಮಗೆ ತುತ್ತು ನೀಡುವವರು. ನಿಮ್ಮಿಂದ ಆ ಕಾಯಕ ಮಾಡಲಾದೀತೇ?


ನಿಮಗೆ ಸಾವಿರಾರು ಜನರು ಸಹಾಯ ಮಾಡಿದ್ದಾರೆ! ನೀವು ಓಡಾಡುವ ರಸ್ತೆ ಮಾಡಿದವರು ಯಾರು? ನೀವು ವಾಸವಾಗಿರುವ ಮನೆ ಕಟ್ಟಿದವರು ಯಾರು? ನಿಮಗೆ ಹೆಸರೇ ಗೊತ್ತಿಲ್ಲದವರು. ಅಂದರೆ, ನಿಮ್ಮ ಬದುಕು ಹಸನಾಗಿಸಲಿಕ್ಕಾಗಿ ಅದೆಷ್ಟು ಜನರು ಹೆಣಗಿದ್ದಾರೆ ಹಾಗೂ ಹೆಣಗುತ್ತಿದ್ದಾರೆ! ನೀವು ಮಾಡಲು ತಯಾರಿಲ್ಲದ ಕೆಲಸಗಳನ್ನು ನಿಮಗಾಗಿ ಮಾಡಿದವರನ್ನು, ಮಾಡುತ್ತಿರುವವರನ್ನು ಮರೆಯಲಾದೀತೇ? ಅಷ್ಟೇ ಅಲ್ಲ, ಅವರಂತೆ ನೀವೂ ಪರರಿಗೆ ನಿಮ್ಮಿಂದಾದ ಸಹಾಯ ಮಾಡಬೇಡವೇ?


ನೀವು ಯಾಕೆ ಇತರರಿಗೆ ಸಹಾಯ ಮಾಡಬೇಕು? ಇದೊಂದು ಯಕ್ಷಪ್ರಶ್ನೆ. ನಿಮ್ಮ ಬಾಲ್ಯದ ಸಹಪಾಠಿಗಳಲ್ಲಿ ಎಷ್ಟು ಜನರು ತೀರಿಕೊಂಡಿದ್ದಾರೆ? ನಿಮ್ಮ ಓರಗೆಯವರಲ್ಲಿ ಎಷ್ಟು ಜನರು ಇಹಲೋಕ ತ್ಯಜಿಸಿದ್ದಾರೆ? ನೀವು ಉಳಿದಿದ್ದೀರಲ್ಲಾ…. ನೀವೆಷ್ಟು ಪುಣ್ಯವಂತರು! ಅದಕ್ಕಾಗಿ, ನೀವಿರುವಷ್ಟು ದಿನ ಇತರರಿಗೆ ಸಹಾಯ ಮಾಡಬೇಕು. ಇನ್ನೂ ಒಂದು ಸಂಗತಿ: ಕೈಯಿಲ್ಲದ, ಕಾಲಿಲ್ಲದ, ಕಣ್ಣಿಲ್ಲದ, ಮಾತು ಬಾರದ, ಕಿವಿ ಕೇಳದ, ಮಾನಸಿಕ ಸಮತೋಲನವಿಲ್ಲದ ಸಾವಿರಾರು ಜನರನ್ನು ನೀವು ಕಂಡಿದ್ದೀರಿ. ನಿಮಗೆ ಆ ಜಗನ್ನಿಯಾಮಕ ಇವೆಲ್ಲವನ್ನೂ ಕೊಟ್ಟಿದ್ದಾನೆ; ಮಾತ್ರವಲ್ಲ, ಊನವಿಲ್ಲದೆ ಕೊಟ್ಟಿದ್ದಾನೆ. ಅದಕ್ಕಾಗಿಯಾದರೂ, ಇವೆಲ್ಲವನ್ನೂ ಸಮರ್ಪಕವಾಗಿ ಬಳಸಿ ಇತರರಿಗೆ ಸಹಾಯ ಮಾಡಬೇಕು, ಅಲ್ಲವೇ?


ಬಹಳ ಜನರು ಕೇಳುವ ಮತ್ತೊಂದು ಪ್ರಶ್ನೆ: ಪರರಿಗೆ ಸಹಾಯ ಮಾಡಲು ನನ್ನ ಬಳಿ ಏನಿದೆ? ನನ್ನಲ್ಲಿ ಯಾವುದೇ ಸೊತ್ತುಗಳಿಲ್ಲ. ಇಂಥವರು ತಾವು ಯೋಚನೆ ಮಾಡುವ ಧಾಟಿಯನ್ನೇ ಬದಲಾಯಿಸ ಬೇಕಾಗಿದೆ. ಯಾಕೆಂದರೆ, ಪ್ರತಿಯೊಬ್ಬರ ಬಳಿಯೂ ಕೋಟಿಗಟ್ಟಲೆ ರೂಪಾಯಿಗಳ ಸೊತ್ತುಗಳಿವೆ. ಉದಾಹರಣೆಗೆ, ಕಣ್ಣುಗಳು,ಕಿಡ್ನಿಗಳು, ಯಕೃತ್, ಹೃದಯ ಇತ್ಯಾದಿ. ಇವಕ್ಕೆ ಲಕ್ಷಗಟ್ಟಲೆ ಹಣ ಕೊಟ್ಟು ಖರೀದಿಸಲು ತುದಿಗಾಲಲ್ಲಿ ನಿಂತವರು ಇದ್ದಾರೆ. ಇದು ಯಾವುದನ್ನಾದರೂ ಅವರಿಗೆ ಮಾರಲು ಸಿದ್ಧರಿದ್ದೀರಾ? ಇಲ್ಲ, ಯಾಕೆಂದರೆ ಅವು ಬೆಲೆ ಕಟ್ಟಲಾಗದ  ಸೊತ್ತುಗಳು. ಇಂತಹ ಸೊತ್ತುಗಳ ಒಡೆಯರಾಗಿದ್ದು, ನನ್ನ ಬಳಿ ಏನೂ ಇಲ್ಲ ಎಂದರೆ ಒಪ್ಪಲಾದೀತೇ? ಹಾಗಾಗಿ, ಇವೆಲ್ಲ ಅಮೂಲ್ಯ ಸೊತ್ತುಗಳನ್ನು ಅಚ್ಚುಕಟ್ಟಾಗಿ ಬಳಸಿ ಇತರರಿಗೆ ಸಹಾಯ ಮಾಡಿ. ನಿಮ್ಮಿಂದ ಏನನ್ನು ಮಾಡಲು ಸಾಧ್ಯವೋ ಅದನ್ನು ಮಾಡಿ. ನೊಂದವರ ಮುಖದಲ್ಲಿ ನಗು ಅರಳಿಸಲು ನಿಮ್ಮೊಂದು ಮುಗುಳುನಗು ಸಾಕು!


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ


ಪರರಿಗೆ ಯಾಕೆ ಸಹಾಯ ಮಾಡಬೇಕು? ಎಂಬ ಪ್ರಶ್ನೆಗೆ ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ ಮನಮುಟ್ಟುವ ಉತ್ತರ ಕೊಟ್ಟಿದ್ದಾರೆ. ಬೆಟ್ಟದಡಿಯ ಹುಲ್ಲಾಗು; ಪಶುಗಳಿಗೆ ಮೇವಾಗು (ಚರಂಡಿ ಬದಿಯ ಹುಲ್ಲಾದರೆ ಪಶುಗಳೂ ತಿನ್ನುವುದಿಲ್ಲ). ಅಂದರೆ ಪರೋಪಕಾರಿಯಾಗು. ಮನೆಯವರಿಗಂತೂ ಮಲ್ಲಿಗೆಯಾಗು; ಯಾವಾಗಲೂ ಅವರ ಮನವನ್ನರಳಿಸು. ವಿಧಿ ಕಷ್ಟಗಳ ಮಳೆ ಸುರಿದಾಗ ಕಲ್ಲಾಗು; ಗೊಣಗದೆ ಸಹಿಸಿಕೋ. ದೀನದುರ್ಬಲರಿಗೆ ಬೆಲ್ಲಸಕ್ಕರೆಯಾಗು; ನಿನಗಿಂತ ಹೆಚ್ಚಿನ ಸಂಕಟದಲ್ಲಿ ಇರುವವರಿಗೆ ಕೈಲಾದ ಸಹಾಯ ಮಾಡು. ಇದೆಲ್ಲ ಆಗಲಿಕ್ಕಾಗಿ ಎಲ್ಲರೊಳಗೊಂದಾಗು ಎನ್ನುತ್ತಾರೆ ಡಿವಿಜಿ. ಸಾಧ್ಯವೇ? ಎಲ್ಲರೊಳಗೆ ಒಂದಾದಾಗ ಮಾತ್ರ, ಪರರಿಗೆ ನೋವು ಮಾಡುವುದೆಂದರೆ ನಮಗೆ ನಾವೇ ನೋವು ಮಾಡಿಕೊಂಡಂತೆ ಎಂಬುದು ತಿಳಿಯುತ್ತದೆ. ಈ ಉದಾತ್ತ ತತ್ವವನ್ನು ದಿಗಂತಕ್ಕೆ ವಿಸ್ತರಿಸುತ್ತಾ ಬುದ್ಧ ಹೇಳುತ್ತಾನೆ: “ಪರರಿಗೆ ಬಡಿದಾಗ, ಬಯ್ದಾಗ ಮಾತ್ರವಲ್ಲ; ಪರರ ಬಗ್ಗೆ ಕೆಟ್ಟ ಯೋಚನೆ ಮಾಡಿದಾಗಲೂ ನೀನು ಅವರಿಗೆ ನೋವು ಕೊಡುತ್ತಿ.” ಹಾಗೆ ಮಾಡದೆ ಇರಬೇಕಾದರೆ, ಪರರನ್ನು ತನ್ನಂತೆ ಬಗೆಯಬೇಕಾಗುತ್ತದೆ.


ಪರರಿಗೆ ಯಾಕೆ ಸಹಾಯ ಮಾಡಬೇಕು? ಎಂಬ ಚಿಂತನೆಯಲ್ಲಿ ಗಮನಿಸಬೇಕಾದ ಮಗದೊಂದು ಸಂಗತಿ:
ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ
ಮಿಗಿಲಾವುದೆರಡರೊಳು ನಿನ್ನ ಬೆಲೆ ಏನು?
ಬಗೆಯದೀ ಲೆಕ್ಕವನು ಜಗದುಣಿಸನುಂಬವನು
ಮೃಗಮಾತ್ರನಲ್ಲವೇಂ? – ಮರುಳ ಮುನಿಯ


ಈ ಜಗತ್ತಿನಿಂದ ನೀನು ಪಡೆದದ್ದು ಎಷ್ಟು? ಈ ಜಗತ್ತಿಗೆ ನೀನು ಕೊಟ್ಟದ್ದು ಎಷ್ಟು? ಇವೆರಡರಲ್ಲಿ ಹೆಚ್ಚು ಯಾವುದು? ಅದರಲ್ಲಿ ನಿನ್ನ ಕೊಡುಗೆ ಎಷ್ಟು? ಈ ಲೆಕ್ಕಾಚಾರ ಮಾಡದೆ, “ಜಗತ್ತಿನಿಂದ ನನಗೆ ಇನ್ನಷ್ಟು ಸಿಗಲಿ, ಮತ್ತಷ್ಟು ಸಿಗಲಿ” ಎನ್ನುತ್ತಾ ಬಾಚಿಕೊಳ್ಳುವವನು ಮೃಗಮಾತ್ರನಲ್ಲವೇ? ಎಂದು ಕೇಳುತ್ತಾರೆ ಡಿವಿಜಿ.
ಆದ್ದರಿಂದ, ಜಗತ್ತಿನಿಂದ ಪಡೆದದ್ದು ಸಾಕು ಎಂಬ ಭಾವ ನಮ್ಮಲ್ಲಿ ಬೆಳೆಯಲಿ; ಇನ್ನಾದರೂ ಜಗತ್ತಿಗೆ ಕೊಡುವ ಬುದ್ಧಿ ಬರಲಿ. ಅದರಿಂದ ನಮ್ಮೆಲ್ಲರ ಬದುಕಿಗೆ ಒಳಿತಾಗಲಿ.
(ಆಗಸ್ಟ್ 2019)

ಚೆನ್ನಾಗಿ ಬದುಕಿದವರನ್ನು ಗಮನಿಸಿದಾಗ, ಬದುಕಿನ ಒಳಿತಿಗಾಗಿ ಅನುಸರಿಸಬೇಕಾದ ಎರಡನೆಯ ದಾರಿ ಕಾಣಿಸುತ್ತದೆ. ಅದುವೇ ಎಲ್ಲದರಲ್ಲೂ ಒಳಿತನ್ನೇ ನೋಡುವುದು.


ಬದುಕಿನಲ್ಲಿ ಒಂದಾದ ಮೇಲೊಂದು ಘಟನೆಗಳು ಜರಗುತ್ತಲೇ ಇರುತ್ತವೆ. ಪ್ರತಿಯೊಂದು ಘಟನೆಯ ಪರಿಣಾಮ ಬೇರೆಬೇರೆ ವ್ಯಕ್ತಿಗಳ ಮೇಲೆ ಬೇರೆಬೇರೆ. ಉದಾಹರಣೆಗೆ ಪರೀಕ್ಷಾ ಫಲಿತಾಂಶದ ಪ್ರಕಟಣೆ ಒಂದು ಘಟನೆ. ಆಗ ಉತ್ತಮ ಅಂಕ ಗಳಿಸಿದವರಿಗೆ ಮತ್ತು ಪಾಸಾದವರಿಗೆ ಸಂತೋಷ. ಆದರೆ ಕಡಿಮೆ ಅಂಕ ಗಳಿಸಿದವರಿಗೆ ಹಾಗೂ ಫೈಲಾದವರಿಗೆ ದುಃಖ. ಸಂಗೀತ, ನೃತ್ಯ, ಚಿತ್ರರಚನೆ, ರಸಪ್ರಶ್ನೆ, ಆಟೋಟ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳ ಫಲಿತಾಂಶ ಘೋಷಿಸಿದಾಗಲೂ ಹೀಗೆಯೇ ಆಗುತ್ತದೆ. ಹಾಕಿ, ಕ್ರಿಕೆಟ್, ಫುಟ್‍ಬಾಲ್, ಬಾಸ್ಕೆಟ್‍ಬಾಲ್, ಕೊಕ್ಕೋ, ಕಬಡ್ಡಿ ಇಂತಹ ಆಟಗಳ ರಾಜ್ಯ/ ರಾಷ್ಟ್ರೀಯ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಿದಾಗಲೂ ಅದೇ ಕತೆ. ಚುನಾವಣಾ ಫಲಿತಾಂಶ ಪ್ರಕಟವಾದಾಗಲೂ ಅದೇ ಕಥೆವ್ಯಥೆ.


ಹಾಗಾಗಿ, ಈ ಘಟನೆಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಒಂದು ಲೋಟದಲ್ಲಿ ಅರ್ಧ ನೀರಿರುವಾಗ, ಆ ಲೋಟ ಅರ್ಧ ತುಂಬಿದೆ ಎಂಬುದೂ ನಿಜ; ಅದು ಅರ್ಧ ಖಾಲಿ ಎಂಬುದೂ ನಿಜ. ಲೋಟ ಅರ್ಧ ತುಂಬಿದೆ ಎಂದು ಭಾವಿಸುವುದೇ ಸಕಾರಾತ್ಮಕ ಯೋಚನೆ. ಆ ಲೋಟ ಅರ್ಧ ಖಾಲಿ ಎಂದುಕೊಳ್ಳುವುದೇ ನಕಾರಾತ್ಮಕ ಯೋಚನೆ.


ನಕಾರಾತ್ಮಕ ಯೋಚನೆಯಿಂದ ಯಾವುದೇ ಪ್ರಯೋಜನವಿಲ್ಲ. ಆದರೆ, ಸಕಾರಾತ್ಮಕ ಯೋಚನೆ ಬದುಕನ್ನೇ ಬದಲಾಯಿಸ ಬಲ್ಲದು, ಅಲ್ಲವೇ? ಮಾನ್ಯ ನರೇಂದ್ರ ಮೋದಿಯವರು 2014ರಲ್ಲಿ ಭಾರತದ ಪ್ರಧಾನಿಯಾದರು. ಆ ವರುಷ ಸ್ವಾತಂತ್ರ್ಯ ದಿನದಂದು ಎರಡು ಮುಖ್ಯ ಯೋಜನೆಗಳನ್ನು ಘೋಷಿಸಿದರು. ಇನ್ನು ಆರು ತಿಂಗಳೊಳಗೆ ಇಪ್ಪತ್ತು ಕೋಟಿ ಬ್ಯಾಂಕ್ ಎಕೌಂಟುಗಳನ್ನು ತೆರೆದು, ನಮ್ಮ ದೇಶದ ಪ್ರತಿಯೊಂದು ಕುಟುಂಬವೂ ಕನಿಷ್ಠ ಒಂದು ಬ್ಯಾಂಕ್ ಎಕೌಂಟು ಹೊಂದುವಂತೆ ಮಾಡುವುದು ಮೊದಲನೆಯ ಯೋಜನೆ. ಇನ್ನು ಒಂದು ವರುಷದೊಳಗೆ, ಪ್ರತಿಯೊಂದು ಶಾಲೆಯಲ್ಲಿಯೂ ಹೆಣ್ಣುಮಕ್ಕಳಿಗೆ ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದು ಎರಡನೆಯ ಯೋಜನೆ.


“ಇದೆಲ್ಲ ಆಗುವಹೋಗುವ ಕೆಲಸವಲ್ಲ” ಎಂದು ಟೀಕಿಸಿದವರು ಹಲವರು. ಯಾಕೆಂದರೆ ಆ ಯೋಜನೆಗಳ ಅಗಾಧತೆ ಹಾಗಿತ್ತು. ಆದರೆ, ಆರೇ ತಿಂಗಳಲ್ಲಿ ವಿವಿಧ ಬ್ಯಾಂಕುಗಳಲ್ಲಿ “ಜನ್ ಧನ್” ಯೋಜನೆ ಅನುಸಾರ ಇಪ್ಪತ್ತು ಕೋಟಿ ಹೊಸ ಉಳಿತಾಯ ಎಕೌಂಟುಗಳನ್ನು ತೆರೆಯಲಾಯಿತು. ಜನವರಿ 2019ರಲ್ಲಿ ಜನ್ ಧನ್ ಬ್ಯಾಂಕ್ ಖಾತೆಗಳ ಸಂಖ್ಯೆ 33 ಕೋಟಿ ದಾಟಿತ್ತು. ಆ ಎಕೌಂಟುಗಳಲ್ಲಿ ಆಗಲೇ 90,000 ಕೋಟಿ ರೂಪಾಯಿ ಠೇವಣಿ ಇದೆ. ಇದರಿಂದಾಗಿ, ಅಡುಗೆ ಅನಿಲ ಸಿಲಿಂಡರಿನ ಸಬ್ಸಿಡಿಯಿಂದ ತೊಡಗಿ ಸರಕಾರದ ಹಲವು ಯೋಜನೆಗಳ ಸಬ್ಸಿಡಿ/ ಹಣ ಸಹಾಯವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲು ಸಾಧ್ಯವಾಗಿದೆ. ಹಾಗೆಯೇ, ಒಂದು ವರುಷದೊಳಗೆ ಲಕ್ಷಗಟ್ಟಲೆ ಶಾಲೆಗಳಲ್ಲಿ ಬಾಲಕ – ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಯಿತು. ಅವುಗಳ ನಿರ್ವಹಣೆಗೂ ವ್ಯವಸ್ಥೆ ಮಾಡಲಾಯಿತು.


ಈ ಯೋಜನೆಗಳನ್ನು ಘೋಷಿಸಿ, ಅವುಗಳ ಸಾಧನೆಗೆ ಸಮರೋಪಾದಿಯಲ್ಲಿ ಮುನ್ನುಗ್ಗಿದ ಕಾರಣದಿಂದಾಗಿ, ಗಡುವಿನ ಮುಂಚೆಯೇ ಗುರಿ ತಲಪಲು ಸಾಧ್ಯವಾಯಿತು ಎಂಬುದು ಗಮನಾರ್ಹ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಗಳಿಸಿದ ನಂತರ 67 ವರುಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ ಒಂದೇ ವರುಷದಲ್ಲಿ ಸಾಧಿಸಲಾಯಿತು ಎಂಬುದು ಸಕಾರಾತ್ಮಕ ಚಿಂತನೆಯ ಅಂದರೆ ಒಳಿತನ್ನೇ ನೋಡುವುದರ ತಾಕತ್ತಿನ ಪುರಾವೆ, ಅಲ್ಲವೇ?


ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ವೈಯುಕ್ತಿಕ ನೆಲೆಯಲ್ಲಿಯೂ ಸಕಾರಾತ್ಮಕ ಚಿಂತನೆಯಿಂದ ಸಹಾಯವಾಗುತ್ತದೆ. ಇದನ್ನೇ “ಮಂಕುತಿಮ್ಮನ ಕಗ್ಗ”ದ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನಮರು ಮಾರ್ಮಿಕವಾಗಿ ತಿಳಿಸುತ್ತಾರೆ:
ಸತ್ತೆನೆನಬೇಡ; ಸೋತೆನೆನಬೇಡ
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು
ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ


ಬದುಕಿನಲ್ಲಿ ಯಾವತ್ತೂ “ನಾನು ಸತ್ತೆ, ನಾನು ಸೋತೆ, ನನ್ನ ಸತ್ತ್ವದ ಚಿಲುಮೆ ಬತ್ತಿ ಹೋಯಿತು” ಎನ್ನಬೇಡ. ಮೃತ್ಯುವೆಂಬುದು ಕೂಡ ನಾಟಕದಲ್ಲಿ ಪರೆದೆ ಇಳಿದಂತೆ; ಮತ್ತೆ ಪರದೆ ಮೇಲೇರುತ್ತದೆ, ನಾಳೆಯ ಬಾಳು ಮುಂದುವರಿಯುತ್ತದೆ ಎನ್ನುತ್ತಾರೆ ಡಿ.ವಿ.ಜಿ.


ಜೀವನದಲ್ಲಿ ಅತ್ಯಂತ ದೊಡ್ಡ ದುಃಖ ಆಪ್ತರ ಸಾವು. ಹಾಗಂತ, ಮೃತ್ಯು ಬಂದು ಎಗರಿದಾಗ ಅಳುತ್ತಾ ಕೂತರೆ ಸತ್ತವರು ಎದ್ದು ಬರುತ್ತಾರೆಯೇ? ಇಲ್ಲ. ಅದರ ಬದಲಾಗಿ, ಅಗಲಿದವರ ನೆನಪಿನಲ್ಲಿ ಮುನ್ನಡೆದರೆ ಹೊಸ ಬದುಕು ತೆರೆದುಕೊಳ್ಳುತ್ತದೆ. ಎರಡು ಕುಟುಂಬಗಳ ಕತೆ ಗಮನಿಸೋಣ. ಎರಡೂ ಕುಟುಂಬಗಳ ಬೆಳೆದು ನಿಂತ ಮಗಂದಿರು ವಿಧಿವಶರಾದರು. ಮೊದಲನೆಯ ಕುಟುಂಬದ ತಂದೆ, ಮಗ ಸತ್ತ ದುಃಖದಲ್ಲಿ ಮುಳುಗಿ ಹೋದ. ಮಗನ ಸಾವಿನ ನೋವಿನಿಂದ ಹೊರಬರಲಾಗದೆ ಚಡಪಡಿಸಿದ. ಎಲ್ಲದರಲ್ಲಿಯೂ ಆಸಕ್ತಿ ಕಳಕೊಂಡ. ಕೊನೆಗೆ ಈತನ ಆರೋಗ್ಯವೂ ಹದಗೆಟ್ಟು, ಈತನೂ ಒಂದು ವರುಷದಲ್ಲೇ ತೀರಿಕೊಂಡ. ಹಾಗಾದರೆ, ಈತ ದುಃಖ ಪಟ್ಟು ಏನು ಸಾಧಿಸಿದಂತಾಯಿತು?


ಎರಡನೆಯ ಕುಟುಂಬದ ತಂದೆ, ಮಗ ಸತ್ತ ದುಃಖದ ಭಾರವನ್ನು ಎದುರಿಸಲು ತಯಾರಾದ. ಮಗನ ಸಾವು ಜಗನ್ನಿಯಾಮಕನ ನಿರ್ಧಾರ ಎಂದು ಸ್ವೀಕರಿಸಿದ. ದುಃಖ ತಡೆಯಲು ಕಷ್ಟವಾದಾಗ, ತನ್ನ ಮಗ ಬದುಕಿದ್ದ ಇಪ್ಪತ್ತು ವರುಷಗಳಲ್ಲಿ ನೀಡಿದ ಸಂತೋಷದ ಅನುಭವಗಳನ್ನು ನೆನಪು ಮಾಡಿಕೊಂಡ. ನನ್ನ ಮಗ ಸತ್ತರೇನಂತೆ. ನನ್ನ ಮನೆಯ ಬೀದಿಯ ಇತರ ಮನೆಗಳ ಮಕ್ಕಳು ನನ್ನ ಮಗನಂತೆಯೇ ಎಂದು ಭಾವಿಸಿದ. ಆ ಎಲ್ಲ ಮನೆಗಳ ಮಕ್ಕಳನ್ನು ಆಗಾಗ ಮಾತನಾಡಿಸ ತೊಡಗಿದ. ಅವರಿಗೆ ಶಾಲಾ ಪುಸ್ತಕ, ಸಮವಸ್ತ್ರ ನೀಡ ತೊಡಗಿದ. ನಿಧಾನವಾಗಿ ಆತನ ದುಃಖದ ಹೊರೆ ಕಡಿಮೆಯಾಯಿತು. ನೆರೆಕರೆಯ ಮಕ್ಕಳಲ್ಲೇ ತನ್ನ ಮಗನನ್ನು ಕಾಣುತ್ತಾ ಅವರಿಗೆ ಉಪಕಾರಿಯಾಗಿ, ಅವರ ಅಚ್ಚುಮೆಚ್ಚಿನವನಾಗಿ ಬಾಳ ತೊಡಗಿದ.
ಬದುಕಿನ ಒಳಿತಿಗಾಗಿ ಎಲ್ಲದರಲ್ಲಿಯೂ ಒಳಿತನ್ನು ಕಾಣುವುದೆಂದರೆ ಇದೇ ಅಲ್ಲವೇ?
(ಜುಲಾಯಿ 2019)

ನಮ್ಮೆಲ್ಲರ ದೊಡ್ಡ ಆಶೆ: ಬದುಕಿನಲ್ಲಿ ಒಳ್ಳೆಯದಾಗಬೇಕು ಎಂಬುದು. ಆದರೆ ಒಳ್ಳೆಯದಾಗಲಿಕ್ಕೆ ಏನು ಮಾಡಬೇಕು? ಎಂಬುದು ಗೊತ್ತಿಲ್ಲ ಅಥವಾ ಒಳಿತಿನ ದಾರಿಗಳ ಬಗ್ಗೆ ಗೊಂದಲವಿದೆ. ಯಾರನ್ನಾದರೂ ಕೇಳಿದರೆ ಹತ್ತಾರು ಸಲಹೆಸೂಚನೆಗಳು. ಸರಳವಾದ ದಾರಿಗಳನ್ನು ತೋರುವವರು ವಿರಳ.


ಚೆನ್ನಾಗಿ ಬದುಕಿದವರನ್ನು ಗಮನಿಸಿದರೆ ಸರಳವಾದ ಮೂರು ದಾರಿಗಳು ಕಾಣಿಸುತ್ತವೆ. ಮೊದಲನೆಯದು ಬದುಕಿನಲ್ಲಿ ಸಮಭಾವದ ಸಾಧನೆ.
ಯಾರ ಬದುಕೂ ಸರಳರೇಖೆಯಂತೆ ಸಾಗುವುದಿಲ್ಲ. ಬದುಕಿನಲ್ಲಿ ಏರಿಳಿತ ಸಹಜ. ಕೆಲವೊಮ್ಮೆ ಸಂತೋಷ, ಕೆಲವೊಮ್ಮೆ ದುಃಖ. ಆಗೆಲ್ಲ ಅತಿರೇಕವಲ್ಲದ ಪ್ರತಿಕ್ರಿಯೆ ತೋರುವುದೇ ಸಮಭಾವ. ಈ ವರ್ತನೆಯನ್ನು ಕಲಿಯುವುದು ಬದುಕಿನ ಒಳಿತಿಗೆ ತೀರಾ ಅಗತ್ಯ.


ಇದನ್ನು ಮಾನ್ಯ ಡಿ.ವಿ. ಗುಂಡಪ್ಪನವರು “ಮಂಕುತಿಮ್ಮನ ಕಗ್ಗ”ದ ಮುಕ್ತಕದಲ್ಲಿ ಮನಮುಟ್ಟುವಂತೆ ತಿಳಿಸಿದ್ದಾರೆ:
ನಗುವೊಂದು ರಸಪಾಕವಳುವೊಂದು ರಸಪಾಕ
ನಗುವಾತ್ಮ ಪರಿಮಳವ ಪಸರಿಸುವ ಕುಸುಮ
ದುಗುಡವಾತ್ಮವ ಕಡೆದು ಸತ್ತ್ವವೆತ್ತುವ ಮಂತು
ಬಗೆದೆರಡನುಂ ಭುಜಿಸು – ಮಂಕುತಿಮ್ಮ


ಬದುಕಿನಲ್ಲಿ ನಗು ಮತ್ತು ಅಳು ಎರಡೂ ರಸಪಾಕಗಳೇ. ನಗು ಎಂಬುದು ಆತ್ಮದ ಪರಿಮಳವನ್ನೇ ಪಸರಿಸುವ ಹೂವು. “ಮುಖದಲ್ಲಿ ನಗು ಅರಳಿತು” ಎನ್ನುತ್ತೇವೆ. ಇನ್ನೊಂದು ತುತ್ತತುದಿಯ ಭಾವ ದುಃಖದುಗುಡ. ಇದು, ಆತ್ಮವನ್ನೇ ಕಡೆಯುವ ಮಂತು. ಈ ಮಥನದಿಂದ, ಮಜ್ಜಿಗೆ ಕಡೆದಾಗ ಬೆಣ್ಣೆ ಮೂಡಿ ಬರುವಂತೆ, ಆತ್ಮದ ಸತ್ತ್ವ ಮೇಲೆದ್ದು ಬರುತ್ತದೆ. ಬದುಕಿಗೆ ಇವೆರಡೂ ಬೇಕು ಎಂಬುದನ್ನು ತಿಳಿದು ಇವೆರಡನ್ನೂ ಅನುಭವಿಸಬೇಕು.
ಶಾಲಾಕಾಲೇಜಿನ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಕೆ, ಆಟೋಟ ಸ್ಪರ್ಧೆಗಳಲ್ಲಿ ಗೆಲುವು, ಹಾಡುಗಾರಿಕೆ ಹಾಗೂ ನೃತ್ಯಗಳ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಕೆ, ಯಾರೂ ಮಾಡಿರದ ಸಾಧನೆ ಮಾಡುವುದು, ಮದುವೆ ಆಗುವುದು, ಚುನಾವಣೆಗಳಲ್ಲಿ ಜಯ ಗಳಿಸುವುದು – ಇವೆಲ್ಲವೂ ಸಂತೋಷದ ಸಂಗತಿಗಳೇ.


ಆದರೆ ಆ ಸಂತೋಷದ ಸಂಭ್ರಮಾಚರಣೆಗೆ ಮಿತಿ ಇರಬೇಡವೇ? ಕೆಲವರ ಸಂಭ್ರಮಾಚರಣೆಗಳು ಅಸಹ್ಯ ಎನಿಸುವಷ್ಟು ಅತಿರೇಕ. ಉದಾಹರಣೆಗೆ ತಮ್ಮ ಸಾಧನೆಯ ಬಗ್ಗೆ ಬೀದಿಬೀದಿಗಳಲ್ಲಿ ಬ್ಯಾನರುಗಳನ್ನು ಪ್ರದರ್ಶಿಸುವುದು, ಸಾವಿರಾರು ರೂಪಾಯಿ ವೆಚ್ಚ ಮಾಡಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವುದು. ಹಾಗೆಯೇ ಇನ್ನು ಕೆಲವರ ಸಂಭ್ರಮಾಚರಣೆಯಿಂದ ಇತರರಿಗೆ ಬಹಳ ತೊಂದರೆ. ಉದಾಹರಣೆಗೆ, ಮದುವೆಯ ಅಥವಾ ಗೆಲುವಿನ ಸಂದರ್ಭದಲ್ಲಿ ಸಂಜೆಯಿಂದ ನಡುರಾತ್ರಿಯ ವರೆಗೆ ಊರಿಗೆಲ್ಲ ಕೇಳುವಷ್ಟು ಜೋರಾಗಿ ಹಾಡು ಹಾಕುವುದು, ರಸ್ತೆಯಲ್ಲಿ ಕುಣಿಯುತ್ತಾ ಸಂಚಾರಕ್ಕೆ ಅಡಚಣೆ ಮಾಡುವುದು.


23 ಮೇ 2019ರಂದು ಲೋಕಸಭಾ ಚುನಾವಣೆಯ ಫಲಿತಾಂಶ. ಬಿಜೆಪಿಗೆ ಚಾರಿತ್ರಿಕ ಜಯ. ಲೋಕಸಭೆಯ 525 ಸ್ಥಾನಗಳಲ್ಲಿ 300ಕ್ಕಿಂತ ಅಧಿಕ ಸ್ಥಾನ ಗೆದ್ದ ಸಂಭ್ರಮ. ಈ ಮಹಾನ್ ಸಂತೋಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರದು ಸಮಭಾವದ ನಡೆ. ದೇಶದ ಸಮಸ್ತ ಜನರಿಗೆ ಜಯವನ್ನು ಸಮರ್ಪಿಸುತ್ತ, ಅವರು ಹೇಳಿದ ಮಾತು, “ಇದು ಭಾರತದ ನವನಿರ್ಮಾಣಕ್ಕೆ ಜನಾದೇಶ.”


ಅತ್ಯಂತ ಆತ್ಮೀಯರ ಸಾವು, ಶಾಲಾಕಾಲೇಜು ಪರೀಕ್ಷೆಗಳಲ್ಲಿ ನಪಾಸು, ಶಕ್ತಿ ಮೀರಿ ತಯಾರಿ ನಡೆಸಿದ್ದರೂ ಆಟೋಟ ಸ್ಫರ್ಧೆಗಳಲ್ಲಿ ಸೋಲು, ಪಕ್ಷಪಾತದಿಂದಾಗಿ ಪ್ರತಿಭಾ ಸ್ಪರ್ಧೆಗಳಲ್ಲಿ ಪ್ರಶಸ್ತಿ ಕೈತಪ್ಪುವುದು, ನೆರೆ, ಬಿರುಗಾಳಿ, ಭೂಕಂಪ ಇಂತಹ ಪ್ರಾಕೃತಿಕ ವಿಕೋಪಗಳಿಂದ ಸಾವುನೋವು ಹಾಗೂ ಸೊತ್ತು ಹಾನಿ – ಇವೆಲ್ಲವೂ ಅತಿ ದುಃಖದ ಸಂಗತಿಗಳೇ.


ಆದರೆ, ಇಂತಹ ಸಂಕಟದ ಸಂದರ್ಭಗಳಲ್ಲಿ ನಾವು ಅವನ್ನು ಹೇಗೆ ಎದುರಿಸುತ್ತೇವೆ ಎಂಬುದೇ ನಮ್ಮ ಸತ್ತ್ವಪರೀಕ್ಷೆ. ಆಗ ನಾಪತ್ತೆಯಾಗುವುದು, ಅಳುತ್ತಾ ಕೂರುವುದು, ಮತ್ತೆಮತ್ತೆ ಸಂಕಟದ ಬಗ್ಗೆಯೇ ಮಾತಾಡುವುದು, ಇತರರು ಅಥವಾ ದೇವರು ತಮ್ಮ ಸಂಕಟಕ್ಕೆ ಕಾರಣವೆಂದು ದೂಷಿಸುವುದು, ಜೀವನದಲ್ಲೇ ಆಸಕ್ತಿ ಕಳೆದುಕೊಳ್ಳುವುದು – ಇವೆಲ್ಲ ಅತಿರೇಕದ ಪ್ರತಿಕ್ರಿಯೆಗಳು.


ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ತೀರಿಕೊಂಡಾಗ “ಮುಂದೇನು ಗತಿ” ಎಂದು ಕಂಗಾಲಾದವರು ಹಲವರು. ಆ ಬಿಕ್ಕಟ್ಟಿನ ಸಮಯದಲ್ಲಿ, ಸರಕಾರದ ಚುಕ್ಕಾಣಿ ಹಿಡಿದು, ಪ್ರಧಾನ ಮಂತ್ರಿಯ ಜವಾಬ್ದಾರಿ ಒಪ್ಪಿಕೊಂಡು, ದೇಶಕ್ಕೆ ಸಮರ್ಥ ನಾಯಕತ್ವ ಒದಗಿಸಿದವರು ಲಾಲ್ ಬಹದ್ದೂರ್ ಶಾಸ್ತ್ರಿ. ಇದೂ ಸಮಭಾವದ ಅತ್ಯುನ್ನತ ನಿದರ್ಶನ.


ಬದುಕಿನಲ್ಲಿ ಸಮಭಾವದ ಪಾಲನೆಗೆ ದೊಡ್ಡ ಅಡ್ಡಿ ಎಲ್ಲದರಲ್ಲಿಯೂ ತಪ್ಪು ಹುಡುಕುವ ಸ್ವಭಾವ. ಇದನ್ನು ಡಿವಿಜಿಯವರು ಇನ್ನೊಂದು ಮುಕ್ತಕದಲ್ಲಿ ಮನಕ್ಕೆ ನಾಟುವಂತೆ ಚಿತ್ರಿಸಿದ್ದಾರೆ:
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ
ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ
ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು
ಒರಟು ಕೆಲಸವೋ ಬದುಕು – ಮಂಕುತಿಮ್ಮ


ಪುಟ್ಟ ಮಗು ಆಟಿಕೆಗಳನ್ನು ಒಪ್ಪಓರಣವಾಗಿ ಇಡದಿದ್ದರೆ…. ಪತ್ರಿಕೆ ಓದಿದ ಮಗ/ ಮಗಳು ಅದನ್ನು ಅಚ್ಚುಕಟ್ಟಾಗಿ ಮಡಚಿ ಇಡದಿದ್ದರೆ… ಸಾರಿಗೆ ಉಪ್ಪು ಕಡಿಮೆಯಾದರ ಅಥವಾ ಹೆಚ್ಚಾದರೆ…. ಸಮಾರಂಭಕ್ಕೆ ಬರುತ್ತೇನೆಂದಿದ್ದ ಗೆಳೆಯ ಬಾರದಿದ್ದರೆ… ಎಲ್ಲಿಗೋ ಹೊರಡುವಾಗ ಮಳೆ ಬಂದರೆ ಏನಾಯಿತು? ಅದರಿಂದಾಗಿ ಭೂಲೋಕ ಮುಳುಗೋದಿಲ್ಲ ಅಥವಾ ಬದುಕು ಮುಗಿಯೋದಿಲ್ಲ. ಇಂತಹ ಸಂದರ್ಭಗಳಲ್ಲಿ ರೇಗಾಡುವ ವ್ಯಕ್ತಿಗಳೇ ತಮ್ಮ ಹಾಸಿಗೆಯಲ್ಲಿ ತಾವೇ ಮುಳ್ಳು ಹರಡಿ, ನಂತರ ಆ ಮುಳ್ಳು ಚುಚ್ಚುತ್ತದೆಂದು ಎಗರಾಡುವವರು.


ಬದುಕಿನಲ್ಲಿ ಎಲ್ಲವೂ ನಾವೆಣಿಸಿದಂತೆ ಆಗಬೇಕೆಂದಿಲ್ಲ. ಹೆಚ್ಚುಕಡಿಮೆ ಆಗೋದು ಸಹಜ. ನಮ್ಮಲ್ಲಿ ಸಮಭಾವ ಇದ್ದರೆ, ಅವನ್ನೆಲ್ಲ ನಿಭಾಯಿಸಿ, ಬದುಕಿನಲ್ಲಿ ಒಳಿತು ಸಾಧಿಸಲು ಸಾಧ್ಯ, ಅಲ್ಲವೇ?
(ಜೂನ್ 2019)

 

ಬದುಕಿನಲ್ಲಿ ಗಳಿಸಬೇಕು ಮತ್ತು ಉಳಿಸಬೇಕು ಎಂಬ ಮಾತನ್ನು ನಾವೆಲ್ಲರೂ ಆಗಾಗ ಕೇಳುತ್ತೇವೆ. ಆದರೆ ಏನನ್ನು ಗಳಿಸಬೇಕು ಮತ್ತು ಎಷ್ಟು ಉಳಿಸಬೇಕು ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ, ಅಲ್ಲವೇ?


ಗಳಿಸುವುದು ಎಂಬ ಮಾತೆತ್ತಿದರೆ ನಮಗೆ ಕಾಣಿಸುವುದು ಹಣ. ಈ ಹಣ ಗಳಿಸುವುದು ಯಾಕೆಂದರೆ ಸಂಪತ್ತು ಕೂಡಿ ಹಾಕಲಿಕ್ಕೆ ಎಂದೇ ಬಹಳ ಜನ ನಂಬಿದ್ದಾರೆ. ಕೋಟಿಕೋಟಿ ಬೆಲೆಯ ಚಿನ್ನ, ಬೆಳ್ಳಿ, ಮನೆ, ಬಂಗಲೆ, ಸೈಟು, ಫ್ಲಾಟು, ಜಮೀನು, ಬ್ಯಾಂಕ್ ಠೇವಣಿ, ಕಂಪೆನಿ ಷೇರು, ವಾಹನಗಳು ಇತ್ಯಾದಿ ಖರೀದಿಸಿ ಶೇಖರಿಸುವುದೇ ಹಲವರ ಜೀವನದ ಗುರಿಯಾಗಿದೆ. ಅಷ್ಟೆಲ್ಲ ಸಂಪತ್ತು ರಾಶಿ ಹಾಕಿದರೆ, ಅದನ್ನೆಲ್ಲ ದಕ್ಕಿಸಿಕೊಳ್ಳಲು ಸಾಧ್ಯವೇ?


ಈ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದ್ದಾರೆ, ಮಾನ್ಯ ಡಿ.ವಿ. ಗುಂಡಪ್ಪನವರು, ಈ ಮುಕ್ತಕದಲ್ಲಿ:
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿ ಪಿಷ್ಟವು ತಾನೆ? – ಮಂಕುತಿಮ್ಮ


ನೀನು ಎಷ್ಟೇ ಉಂಡರೂ, ನಿನ್ನ ಮೈಗೆ ಪುಷ್ಟಿ ಆಗುವುದೆಷ್ಟು? ನಿನ್ನ ಹೊಟ್ಟೆ ಜೀರ್ಣಿಸುವಷ್ಟೇ. ಅದಕ್ಕಿಂತ ಹೆಚ್ಚಿಗೆ ತಿಂದ ಆಹಾರವೆಲ್ಲ ಕಸವಾಗಿ ಹೊರ ಹೋಗುತ್ತದೆ. ಹಾಗೆಯೇ, ನೀನು ಎಷ್ಟೇ ಸಂಪತ್ತು ಗಳಿಸಿದರೂ, ನಿನಗೆ ದಕ್ಕುವುದು ಮುಷ್ಟಿ ಪಿಷ್ಟ ಅಂದರೆ ಒಂದು ಹಿಡಿ ಹಿಟ್ಟು ಎನ್ನುತ್ತಾರೆ ಡಿವಿಜಿಯವರು. ನಿಮ್ಮ ಬಳಗದಲ್ಲಿ ಯಾರಾದರೂ ತೀರಿಕೊಂಡಾಗ, ಅವರ ಶವಸಂಸ್ಕಾರದಲ್ಲಿ ನೀವು ಭಾಗವಹಿಸಿದ್ದರೆ, ನಿಮಗೆ ಡಿವಿಜಿಯವರ ಮಾತು ಮನಸ್ಸಿಗೆ ತಟ್ಟುತ್ತದೆ. ಯಾಕೆಂದರೆ, ಪ್ರಾಣ ಬಿಟ್ಟು ಹೋಗುವಾಗ ಯಾರೊಬ್ಬರೂ ಏನನ್ನೂ ಒಯ್ಯುವುದಿಲ್ಲ; ತಾವು ಗಳಿಸಿದ್ದನ್ನೆಲ್ಲ ಈ ಲೋಕದಲ್ಲೇ ಬಿಟ್ಟು ಹೋಗುತ್ತಾರೆ, ಅಲ್ಲವೇ? ಅದಕ್ಕಾಗಿಯೇ, ಬದುಕಿನಲ್ಲಿ ಗಳಿಸಿ, ಉಳಿಸುವ ಬಗ್ಗೆ ನಮ್ಮ ಧೋರಣೆ ಹೇಗಿರಬೇಕೆಂದು ಮಾನ್ಯ ಗುಂಡಪ್ಪನವರು ಇನ್ನೊಂದು ಮುಕ್ತಕದಲ್ಲಿ ದಾರಿ ತೋರಿಸುತ್ತಾರೆ:


ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ
ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ
ಚಟ್ಟಕೆ ನಿನ್ನನೇರಿಪ ಮುನ್ನ ನೀನಾಗಿ
ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ


ಈ ಭೂಮಿಗೆ ನೀನು ಬಂದದ್ದು ಬೆತ್ತಲಾಗಿ, ಇಲ್ಲಿಂದ ಹೋಗುವುದೂ ಬೆತ್ತಲಾಗಿ ಎಂಬ ದೊಡ್ಡ ಸತ್ಯವನ್ನು ಈ ಮುಕ್ತಕದಲ್ಲಿ ಜ್ನಾಪಿಸುತ್ತಾರೆ ಡಿವಿಜಿಯವರು. ಹುಟ್ಟು-ಸಾವುಗಳ ನಡುವಿನ ನಾಲ್ಕು ದಿನ ಮಾತ್ರ ನಿನ್ನ ವಸ್ತ್ರವೇಷಗಳ ಸಡಗರ. ಕೊನೆಗೊಂದು ದಿನ ಬಂದೇ ಬರುತ್ತದೆ – ಸಾವಿನ ಮನೆಗೆ ಕಾಲಿಟ್ಟ ನಿನ್ನನ್ನು ಚಟ್ಟಕ್ಕೆ ಏರಿಸುವ ದಿನ. ಅದಕ್ಕಿಂತ ಮುಂಚೆ, ನೀನಾಗಿಯೇ ನಿನ್ನ ಬದುಕಿನ ಕಂತೆಗಳನ್ನೆಲ್ಲ ಕಿತ್ತೆಸೆದು ಬಿಡು ಎಂಬುದು ಡಿವಿಜಿಯವರ ನೇರನುಡಿ.


ಹಾಗೆ, ಬದುಕಿನ ಕಂತೆಗಳನ್ನೆಲ್ಲ ಕಿತ್ತೆಸದವರಿಗೆ ಮಾತ್ರ ತಮ್ಮ ಬದುಕಿನಿಂದ ನಿಜವಾಗಿ “ಗಳಿಸಲು” ಸಾಧ್ಯವಾಗುತ್ತದೆ. ನಮ್ಮ ದೇಶದ ಎರಡನೆಯ ಪ್ರಧಾನಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನವನ್ನು ಗಮನಿಸೋಣ. ತಾಷ್ಕೆಂಟಿನಲ್ಲಿ 10 ಜನವರಿ 1966ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವಣ ಚಾರಿತ್ರಿಕ ಒಪ್ಪಂದಕ್ಕೆ ಅವರು ಸಹಿ ಹಾಕಿದರು. ಮರುದಿನ ಮುಂಜಾನೆ ಅವರು ಅಲ್ಲೇ ವಿಧಿವಶರಾದರು. ನಮ್ಮ ದೇಶದ ಮಹಾನ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾದಾಗ, ಯಾವುದೇ ಆಸ್ತಿ ಉಳಿಸಿರಲಿಲ್ಲ! ತಮ್ಮ ಹೆಂಡತಿ, ಮಕ್ಕಳಿಗಾಗಿ ಕಿಂಚಿತ್ ಹಣವನ್ನೂ ಕೂಡಿಟ್ಟಿರಲಿಲ್ಲ. ಅವರಿಗೆ ಒಂದು ಸ್ವಂತ ಮನೆಯೂ ಇರಲಿಲ್ಲ!


ಆದರೆ, ಶಾಸ್ತ್ರಿಯವರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು. ಉತ್ತರ ಪ್ರದೇಶದ ಮೊಗಲ್ ಸರಾಯಿಯಲ್ಲಿ ತೀರಾ ಬಡ ಕುಟುಂಬದಲ್ಲಿ ಹುಟ್ಟಿ, ಭಾರತದಂತಹ ಮಹಾನ್ ದೇಶದ ಪ್ರಧಾನಮಂತ್ರಿಯಾಗಿ, ವಿಶ್ವದ ಅಗ್ರಗಣ್ಯ ನಾಯಕರಲ್ಲಿ ಒಬ್ಬರೆನಿಸಿದ ಶಾಸ್ತ್ರಿಯವರ ಸಾಧನೆ ಬಹು ದೊಡ್ಡದು. ತಮ್ಮ ಧೀಮಂತಿಕೆ, ಪ್ರಾಮಾಣಿಕತೆ, ಕಾರ್ಯನಿಷ್ಠೆ, ಆಡಳಿತ ಸಾಮರ್ಥ್ಯಗಳ ಬಲದಿಂದ ಆ ಎತ್ತರಕ್ಕೆ ಏರಿದ ಶಾಸ್ತ್ರಿಯವರು ನುಡಿದಂತೆ ನಡೆದವರು.


ಆದ್ದರಿಂದಲೇ, “ಶಾಸ್ತ್ರಿ ವ್ರತ” ಅಂದರೆ ಸೋಮವಾರ ರಾತ್ರಿ ಉಪವಾಸಕ್ಕಾಗಿ ಅವರು ಕರೆ ನೀಡಿದಾಗ, ಕೋಟಿಗಟ್ಟಲೆ ಜನರು ಆ ಕರೆಗೆ ಓಗೊಟ್ಟು ಆಹಾರ ಉಳಿಸಲು ಸಹಕರಿಸಿದರು. ಭಾರತೀಯರು ತೀರಾ ಸಂಕಟದ ಪರಿಸ್ಥಿತಿಯಲ್ಲಿ ಇದ್ದಾಗ, ಶಾಸ್ತ್ರಿಯವರು ನೀಡಿದ “ಜೈ ಜವಾನ್! ಜೈ ಕಿಸಾನ್!” ಎಂಬ ಘೋಷವಾಕ್ಯ ಭಾರತದ ಮೂಲೆಮೂಲೆಯಲ್ಲಿಯೂ ಜನರಲ್ಲಿ ಧೈರ್ಯ, ಸ್ಥೈರ್ಯ ತುಂಬಿತು. ಇಂದಿನ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉದ್ಯಮಪತಿಗಳ ಬದುಕಿಗೆ ಹೋಲಿಸಿದಾಗ, ಲಾಲ್ ಬಹದ್ದೂರ್ ಶಾಸ್ತ್ರಿಯವರದು ನಂಬಲಿಕ್ಕಾಗದ ಸರಳ ಬದುಕು. ಮಹಾತ್ಮಾ ಗಾಂಧಿಯವರ ಸರಳ ಜೀವನವನ್ನೇ ತಮ್ಮ ಆದರ್ಶವಾಗಿ ಇಟ್ಟುಕೊಂಡು ಬಾಳಿದವರು ಶಾಸ್ತ್ರಿ. ಆದ್ದರಿಂದಲೇ, ಢೆಲ್ಲಿಯಲ್ಲಿರುವ ಅವರ ಸ್ಮಾರಕ “ವಿಜಯ ಘಾಟ್”ಗೆ ಪ್ರತಿ ದಿನವೂ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಂದ ಅವರಿಗೆ ಶ್ರದ್ಧಾಂಜಲಿ ಅರ್ಪಣೆ. ಶಾಸ್ತ್ರಿಯವರು ಭಾರತ ಹಾಗೂ ವಿಶ್ವದ ಜನರಿಂದ ಗಳಿಸಿದ್ದು ಅಪಾರ ಗೌರವ.


ಬದುಕಿನಲ್ಲಿ ಏನನ್ನು ಗಳಿಸಬೇಕು? ಎಷ್ಟು ಉಳಿಸಬೇಕು? ಎಂಬುದಕ್ಕೆ ಕೋಟಿಗಟ್ಟಲೆ ಜನರ ಗೌರವಾದರ ಗಳಿಸಿ, ಶಾಶ್ವತ ನೆನಪು ಉಳಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬದುಕು ಮಹಾನ್ ನಿದರ್ಶನ.
(ನವಂಬರ್ 2018)

ಗುರುವಿನ ಬಳಿ ಬಂದ ಶಿಷ್ಯನೊಬ್ಬ ಆರ್ತನಾಗಿ ಬೇಡುತ್ತಾನೆ: “ಗುರುಗಳೇ, ನನಗೆ ಸಾಕಾಗಿ ಹೋಗಿದೆ. ನನ್ನ ಬದುಕು ಗೊಂದಲದ ಗೂಡಾಗಿದೆ. ನನಗೆ ನೆಮ್ಮದಿ ಬೇಕು, ದಾರಿ ತೋರಿಸಿ.” ಆತನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಗುರುಗಳು ಕೇಳುತ್ತಾರೆ, “ಯಾಕೆ ನಿನ್ನ ಬದುಕು ಗೊಂದಲದ ಗೂಡಾಗಿದೆ?”

ಆಗ ಶಿಷ್ಯ ತನ್ನ ಅವಸ್ಥೆಯನ್ನು ವಿವರಿಸುತ್ತಾನೆ: “ಗುರುಗಳೇ, ಮನೆತುಂಬ ಸಣ್ಣ ಮಕ್ಕಳು – ನಾಲ್ವರಿದ್ದಾರೆ. ಒಂದು ಕ್ಷಣವೂ ಸುಮ್ಮನಿರಲ್ಲ. ಏನನ್ನಾದರೂ ಬೀಳಿಸಿ ಸದ್ದು ಮಾಡ್ತಾರೆ; ಒಡೆದು ಹಾಕ್ತಾರೆ; ಅಳುತ್ತಲೇ ಇರ್ತಾರೆ. ಕೆಲವೊಮ್ಮೆ ಎಲ್ಲರೂ ಒಟ್ಟಾಗಿ ಕಿರಿಚುತ್ತಾರೆ. ಥೈಯ್ಯಥೈಯ್ಯ ಕುಣಿಯುತ್ತಾರೆ. ಹೆಂಡತಿಯಂತೂ ಮಕ್ಕಳಿಗೆ ಬಯ್ಯುತ್ತಲೇ ಇರ್ತಾಳೆ. ನನಗೆ ಪಿರಿಪಿರಿ ಮಾಡುತ್ತಲೇ ಇರ್ತಾಳೆ. ಅದಲ್ಲದೆ, ಎರಡು ನಾಯಿ ಮತ್ತು ನಾಲ್ಕು ಬೆಕ್ಕು ಸಾಕಿದ್ದೇವೆ. ಮಕ್ಕಳಿಗೆ ಅವು ಬೇಕೇ ಬೇಕಂತೆ. ಅವುಗಳ ರಂಪಾಟ ಹೇಳಿ ಮುಗಿಯದು. ಅವು ಸಾಲದೆಂದು, ಹತ್ತು ಕೋಳಿಗಳನ್ನೂ ಸಾಕಿದ್ದೇವೆ. ಅವು ಮನೆಯೊಳಗೂ ಬಂದು ಜಗಳಾಡುತ್ತವೆ. ಜೊತೆಗೆ ಹಾಲಿಗಾಗಿ ಎರಡು ಆಡು ಕೂಡ ಸಾಕಿದ್ದೇವೆ. ಇವು ಅಕ್ಕಪಕ್ಕದವರ ಅಡುಗೆ-ಮನೆಗೆ ಹೋಗಿ, ಅವರು ಬೇಯಿಸಿಟ್ಟ ಅನ್ನದ ಪಾತ್ರೆಗೆ ಬಾಯಿ ಹಾಕಿ ಜಗಳ ತಂದಿಡುತ್ತವೆ. ನನಗೆ ಜೀವನವೇ ಸಾಕಾಗಿ ಹೋಗಿದೆ. ನೆಮ್ಮದಿಯ ದಾರಿ ತೋರಿಸಿ.”

ಗುರುಗಳು ಗಂಭೀರ ಸ್ವರದಲ್ಲಿ ಆತನಿಗೆ ಹೇಳುತ್ತಾರೆ, “ನಿನಗೆ ನೆಮ್ಮದಿ ಬೇಕಾದರೆ ಸುಲಭದ ದಾರಿಯಿದೆ. ನೀನು ಇವತ್ತಿನಿಂದಲೇ ಆ ಎಲ್ಲ ಪ್ರಾಣಿಗಳನ್ನು ನಿನ್ನ ಮನೆಯೊಳಗೇ ಸಾಕಿಕೊಳ್ಳಬೇಕು. ಒಂದು ತಿಂಗಳ ನಂತರ ಬಂದು ನನ್ನನ್ನು ಕಾಣು.” ಆ ಶಿಷ್ಯ ಗುರುಗಳ ಮಾತನ್ನು ಭಕ್ತಿಯಿಂದ ಪಾಲಿಸುತ್ತಾನೆ.

ಸರಿಯಾಗಿ ಒಂದು ತಿಂಗಳ ನಂತರ ಪುನಃ ಗುರುಗಳ ಬಳಿ ಬಂದ ಆ ಶಿಷ್ಯ, ಅವರಿಗೆ ಅಡ್ಡಬಿದ್ದು ಅಳುದನಿಯಿಂದ ಮೊರೆಯಿಡುತ್ತಾನೆ, “ಗುರುಗಳೇ, ಒಂದು ತಿಂಗಳಿನಿಂದ ನೀವು ಹೇಳಿದಂತೆಯೇ ಮಾಡಿದ್ದೇನೆ. ನನಗೀಗ ಹುಚ್ಚು ಹಿಡಿಯುವುದೊಂದು ಬಾಕಿ. ಯಾವಾಗಲೂ ಮನೆ ತುಂಬ ಗದ್ದಲ, ಗಲಾಟೆ. ನನ್ನನ್ನು ಹೇಗಾದರೂ ಈ ಸಂಕಟದಿಂದ ಪಾರು ಮಾಡಿ.” ಗುರುಗಳು ಮುಗುಳ್ನಕ್ಕು ಆದೇಶಿಸುತ್ತಾರೆ, “ನೀನೇನೂ ಚಿಂತೆ ಮಾಡಬೇಡ. ಈಗಲೇ ಮನೆಗೆ ಹೋಗಿ, ಆ ಪ್ರಾಣಿಗಳನ್ನೆಲ್ಲ ನಿನ್ನ ಮನೆಯಿಂದ ಹೊರಕ್ಕೆ ಹಾಕು. ಎರಡು ವಾರಗಳ ನಂತರ ಬಂದು ಏನಾಯಿತೆಂದು ಹೇಳು.” ಗುರುಗಳಿಗೆ ವಂದಿಸಿ ಮನೆಗೆ ಹೋದ ಶಿಷ್ಯ, ಆ ಪ್ರಾಣಿಗಳನ್ನು ಮನೆಯಿಂದ ಹೊರಕ್ಕೆ ಓಡಿಸಿ, ನಿಟ್ಟುಸಿರು ಬಿಡುತ್ತಾನೆ. ಎರಡು ವಾರಗಳ ನಂತರ, ಮತ್ತೊಮ್ಮೆ ಗುರುಗಳ ಬಳಿಗೆ ಬರುತ್ತಾನೆ. “ಈಗ ಹೇಗಿದೆ ಬದುಕು?” ಎಂಬ ಗುರುಗಳ ಪ್ರಶ್ನೆಗೆ ಅವನ ಉತ್ತರ: “ಗುರುಗಳೇ, ಈಗ ನನ್ನ ಮನೆಯಲ್ಲಿ ಶಾಂತಿ, ನೆಮ್ಮದಿ ತುಂಬಿದೆ.”

ಹೀಗೆ, ಬಹಳ ಜನರು ತಮ್ಮ ಬದುಕನ್ನು ತಾವೇ ಗೊಂದಲದ ಗೂಡಾಗಿ ಮಾಡಿಕೊಂಡಿದ್ದಾರೆ, ಅಲ್ಲವೇ? ಅದನ್ನು ನೆಮ್ಮದಿಯ ನಾಡಾಗಿ ಪರಿವರ್ತಿಸುವುದು ಅವರ ಕೈಯಲ್ಲೇ ಇದೆ.
ಅದಕ್ಕೆ ಮಾಡಬೇಕಾದದ್ದು ಇಷ್ಟೇ: ದಿನಕ್ಕೊಮ್ಮೆ, ಮೌನದ ಲೋಕಕ್ಕೆ ಹೋಗಬೇಕು. ಅದಕ್ಕೇನು ಮಾಡಬೇಕು? ಏನೂ ಮಾಡಬಾರದು ಅಂದರೆ ಸುಮ್ಮನೆ ಕೂರಬೇಕು. ಅದುವೇ ಧ್ಯಾನ. ಪ್ರತಿದಿನ ಹದಿನೈದು ನಿಮಿಷ ಧ್ಯಾನ ಮಾಡಿದರೆ ಸಾಕು. ಇದಕ್ಕೆ ಸಮಯವಿಲ್ಲ ಎನ್ನುವವರು ತಮಗೆ ತಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ: ಹಾಗಾದರೆ ದಿನದ ೨೪ ಗಂಟೆಗಳಲ್ಲಿ ನಾನೇನು ಮಾಡುತ್ತಿದ್ದೇನೆ? ದಿನವಿಡೀ ಬೇರೆಯವರಿಗಾಗಿ ಹೆಣಗುತ್ತಿರುವಾಗ, ನನಗಾಗಿ ಹದಿನೈದು ನಿಮಿಷ ಪುರುಸೊತ್ತು ಮಾಡಿಕೊಳ್ಳಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ.

ಆರಾಮವಾಗಿ ಸುಮ್ಮನೆ ಕುಳಿತು, ಕಣ್ಣು ಮುಚ್ಚಿಕೊಂಡು ನಿಮ್ಮ ಉಸಿರಾಟವನ್ನು ಗಮನಿಸುತ್ತಾ ಹೋಗಿ. ಅದುವೇ ಧ್ಯಾನ. ಆ ಸ್ಥಿತಿಯಲ್ಲಿ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಹಿಂದಿನ ಚಿಂತೆಗಳನ್ನೂ, ಮುಂದಿನ ಆತಂಕಗಳನ್ನೂ ಬಿಟ್ಟು, ಈ ಕ್ಷಣದ ಬದುಕನ್ನು ಅನುಭವಿಸಿ. ನಿಮ್ಮ ಒಳಗೂ ಹೊರಗೂ ಎಲ್ಲವೂ ಚೆನ್ನಾಗಿದೆ ಎಂಬ ಭಾವನೆಯಿಂದ ಕುಳಿತುಕೊಳ್ಳಿ. ನಿಮ್ಮ ಹೊರಗಿನ “ಆಕಾಶ” ಅನಂತ. ಹಾಗೆಯೇ ಒಳಗಿನ “ಆಕಾಶ”ವೂ ಅನಂತ – ಆ ಎರಡೂ ಆಕಾಶಗಳಲ್ಲಿ ನಿಮ್ಮ ಮನಸ್ಸು-ಬುದ್ಧಿ-ಭಾವ ಲೀನವಾಗಲಿ. ಆಗ ಕ್ಷಣಕ್ಷಣವೂ ನಿರಾಳ-ಶಾಂತ-ಪ್ರಶಾಂತ.

ಇಂತಹ ಧ್ಯಾನ, ಅದೆಷ್ಟು ಸರಳವೆಂಬುದನ್ನು ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ ತಿಳಿಸಿದ್ದಾರೆ:
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗಸೂತ್ರವಿದು – ಮಂಕುತಿಮ್ಮ

ಮನಸ್ಸಿನ ಆಲಯದಲ್ಲಿ ಎರಡು ಕೋಣೆಗಳನ್ನು ಮಾಡಿಕೊಳ್ಳಬೇಕು. (ಗಮನಿಸಿ: ಈ ಸಾಧನೆಯ ಮೊದಲ ಹೆಜ್ಜೆ ಮನಸ್ಸನ್ನು ದೇವಾಲಯದಂತೆ ಪವಿತ್ರವಾಗಿ ಇರಿಸುವುದು.) ಹೊರಕೋಣೆಯಲ್ಲಿ ಜನರೊಂದಿಗಿನ ಆಟ(ಒಡನಾಟ) ಆಡುತ್ತಾ, ಮೌನ ತುಂಬಿರುವ ಒಳಕೋಣೆಯ ಶಾಂತಿಯಲ್ಲಿ ಒಬ್ಬನೇ ವಿರಮಿಸುವುದು – ಇದುವೇ ಬದುಕಿನ ಅತ್ಯುನ್ನತ ಸಾಧನೆಗಳಿಗೆ ವರಯೋಗ ಸೂತ್ರ (ಇದಕ್ಕಿಂತ ಮಿಗಿಲಾದ ಸೂತ್ರವಿಲ್ಲ) ಎಂಬುದು ಇದರ ತಾತ್ಪರ್ಯ.

ಬಹಳ ಜನರು ಈ ಮೌನಸಾಧನೆಯ ಮೊದಲ ಹೆಜ್ಜೆಯಲ್ಲೇ ಎಡವಿ ಬೀಳುತ್ತಾರೆ. ಯಾಕೆಂದರೆ, ಕಣ್ಣು ಮುಚ್ಚಿದೊಡನೆ ನಮ್ಮೆಲ್ಲ ತಪ್ಪುಗಳು ಧುತ್ತೆಂದು ಎದುರಾಗುತ್ತವೆ. ಅವನ್ನೆಲ್ಲ ಒಪ್ಪಿಕೊಳ್ಳಬೇಕು, ತಿದ್ದಿಕೊಳ್ಳಬೇಕು. ಇದು ಸಾಧ್ಯವಾದರೆ ಮಾತ್ರ ಮೌನಸಾಧನೆಯ ಮುಂದಿನ ಮೆಟ್ಟಲೇರಲು ಸಾಧ್ಯ. ಆ ಮೆಟ್ಟಲಿನಲ್ಲಿ ನಮ್ಮೆಲ್ಲ ದುಃಖ, ಸಂಕಟ, ಆತಂಕ, ನಿರಾಶೆ, ಹತಾಶೆ, ಭಯ, ಕೋಪ, ದ್ವೇಷ, ಸೇಡು ಇತ್ಯಾದಿ ನುಗ್ಗಿ ಬರುತ್ತವೆ. ಇವನ್ನು ನಿವಾರಿಸಿಕೊಂಡರೆ ಮಾತ್ರ, ಮೌನಸಾಧನೆಯಲ್ಲಿ ಮುಂದೆ ಸಾಗಲು ಸಾಧ್ಯ. ಹೀಗೆ ಹಂತಹಂತವಾಗಿ ಮೌನಸಾಧನೆಯಲ್ಲಿ ಮೇಲೇರುತ್ತ, ನಮ್ಮ ತಾಕತ್ತುಗಳನ್ನು ಬಡಿದೆಬ್ಬಿಸುತ್ತ, ನಮ್ಮೊಳಗೆ ಚೈತನ್ಯ ತುಂಬಿಕೊಳ್ಳುತ್ತ, ಬದುಕಿನ ಗುರಿಸಾಧನೆಗೆ ಸನ್ನದ್ಧರಾಗೋಣ.

(ಅಕ್ಟೋಬರ್ 2018)

ಬದುಕಿನ ಗುರಿಸಾಧನೆಗಾಗಿ ನಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳ ಬೇಕಾಗುತ್ತದೆ. ಆದರೆ, ಹುಟ್ಟುಗುಣ ಘಟ್ಟ ಹತ್ತಿದರೂ ಬಿಟ್ಟು ಹೋಗದು ಎನ್ನುತ್ತಾರಲ್ಲ….

ಮಹಾಭಾರತ ಯುದ್ಧದ ಮುಂಚೆ, ಭಗವಾನ್ ಶ್ರೀಕೃಷ್ಣ ಸಂಧಾನಕ್ಕಾಗಿ ದುರ್ಯೋಧನನ ಬಳಿಗೆ ಬರುತ್ತಾನೆ. ರಾಜ್ಯಕ್ಕಾಗಿ ಪಾಂಡವರ ಪರವಾಗಿ ವಿನಂತಿಸುತ್ತಾನೆ. “ದುರ್ಯೊಧನಾ, ಅವರು ಪರಕೀಯರಲ್ಲ, ನಿನ್ನ ದಾಯಾದಿಗಳು. ಅವರೀಗ ಕೇಳುತ್ತಿರುವುದು ಒಂದು ತುಂಡು ನೆಲವನ್ನು; ಕೊಟ್ಟು ಬಿಡು” ಎನ್ನುತ್ತಾನೆ. ಅದಕ್ಕೆ ದುರ್ಯೋಧನನ ಪ್ರತಿಕ್ರಿಯೆ: “ಇಲ್ಲ, ಸಾಧ್ಯವೇ ಇಲ್ಲ. ಪಾಂಡವರಿಗೆ ಒಂದಿಂಚು ನೆಲವನ್ನೂ ಕೊಡುವುದಿಲ್ಲ.” ಆಗ ಭಗವಾನ್ ಶ್ರೀಕೃಷ್ಣ ಕೊನೆಯ ಮಾತನ್ನು ಹೇಳುತ್ತಾನೆ, “ದುರ್ಯೋಧನಾ, ಸರಿಯಾಗಿ ಯೋಚನೆ ಮಾಡು. ನೀನು ಮಾಡುತ್ತಿರುವುದು ತಪ್ಪು.” ಈ ಮಾತಿಗೆ ತಕ್ಷಣವೇ ದುರ್ಯೋಧನನ ಉತ್ತರ, “ಶ್ರೀಕೃಷ್ಣಾ, ಅದು ತಪ್ಪು ಅನ್ನೋದು ನನಗೂ ಗೊತ್ತಿದೆ. ಆದರೆ ಸರಿಯಾದ್ದನ್ನು ಮಾಡಲು ಮನಸ್ಸು ಬರುತ್ತಿಲ್ಲ.”

ನಮ್ಮ ಬದುಕಿನಲ್ಲಿ ಅನೇಕ ಬಾರಿ ನಾವೂ ಹೀಗೆಯೇ ವಾದಿಸಿದ್ದೇವೆ, ಅಲ್ಲವೇ? ನಮ್ಮ ಬದುಕಿನ ಗುರಿ ಸಾಧನೆಗೆ ಅಡ್ಡವಾಗಿರುವ ದುರ್ಗುಣಗಳನ್ನು ಬಿಡದಿರಲು ಮನಸ್ಸೇ ಕಾರಣ ಎನ್ನುತ್ತೇವೆ. ಸ್ವತಃ ಜವಾಬ್ದಾರಿ ವಹಿಸುವ ಬದಲಾಗಿ ನಮ್ಮ ಮನಸ್ಸಿನ ಮೇಲೆ ಜವಾಬ್ದಾರಿ ಹೊರಿಸುತ್ತೇವೆ. ಇದನ್ನು ಪರೀಕ್ಷಿಸಲಿಕ್ಕಾಗಿ, ಹಲವರು ಒಟ್ಟು ಸೇರಿದಾಗ ಒಂದು ಪ್ರಶ್ನೆ ಕೇಳಿ: “ನಿಮ್ಮಲ್ಲಿ ಎಷ್ಟು ಜನರಿಗೆ ಕೋಪ ಬರುತ್ತದೆ? ಕೈಯೆತ್ತಿ.” ಅಲ್ಲಿರುವ ಶೇಕಡಾ ೮೦ ಜನರು ಕೈಯೆತ್ತುತ್ತಾರೆ!

ಈ ಸನ್ನಿವೇಶವನ್ನು ವಿಶ್ಲೇಷಣೆ ಮಾಡೋಣ. ಅಲ್ಲಿ ಎರಡು ವರ್ಗದ ವ್ಯಕ್ತಿಗಳಿದ್ದಾರೆ: ಕೋಪ ಬರುವುದಿಲ್ಲ ಎನ್ನುವವರು ಮತ್ತು ಕೋಪ ಬರುತ್ತದೆ ಎನ್ನುವವರು. ಎರಡೂ ವರ್ಗಗಳ ವ್ಯಕ್ತಿಗಳು ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದಾರೆ.
ಯಾಕೆಂದರೆ, ಮನುಷ್ಯನಾದವನಿಗೆ ಕೋಪ ಸಹಜ; ಅದೇನೂ ಅವಮಾನದ ವಿಷಯವಲ್ಲ. ಆದ್ದರಿಂದ, ಕೋಪ ಬರುವುದಿಲ್ಲ ಎನ್ನುವವರು ಆತ್ಮಾವಲೋಕನ ಮಾಡಿಕೊಳ್ಳಲಿ.

ಇನ್ನು ಎರಡನೆಯ ವರ್ಗದ ವ್ಯಕ್ತಿಗಳು: ಕೋಪ ಬರುತ್ತದೆ ಎನ್ನುವವರು. ಇವರು ಜಾಣರು. ಇವರು ಹೇಗೆ ಯೋಚಿಸುತ್ತಾರೆ ಗೊತ್ತೇ? “ನಾನು ಬಹಳ ಒಳ್ಳೆಯ ಮನುಷ್ಯ. ಆದರೆ ಈ ಕೋಪ ಅನ್ನೋದು ಕೆಲವೊಮ್ಮೆ ಬರುತ್ತದೆ; ಮತ್ತೆ ಹೋಗುತ್ತದೆ” ಎಂದು ತಮ್ಮ ವರ್ತನೆಯ ತಪ್ಪನ್ನೆಲ್ಲ ಕೋಪದ ಮೇಲೆ ಹೊರಿಸುತ್ತಾರೆ. ಅವರು ಎಲ್ಲಿಯ ವರೆಗೆ ಈ ರೀತಿ ಯೋಚಿಸುತ್ತಾ ಇರುತ್ತಾರೋ, ಅಲ್ಲಿಯ ವರೆಗೆ ಅವರಿಗೆ ತಮ್ಮ ವರ್ತನೆಯನ್ನು ಬದಲಾಯಿಸಲು ಸಾಧ್ಯವಾಗೋದಿಲ್ಲ. ಯಾಕೆಂದರೆ, ಕೋಪ ಅನ್ನೋದು ಒಳಗೆ ಬಂದು, ಹೊರಗೆ ಹೋಗುವ ವಸ್ತುವಲ್ಲ. ಅದು ನಮ್ಮೊಳಗೆ ಹುಟ್ಟುವ ಒಂದು ಭಾವನೆ. “ನಮ್ಮ ಮನೆಯ ಮುಂದಿನ ಕೋಣೆಯೊಳಗೆ ಒಂದು ನಾಯಿ ಮರಿ ಬಂತು. ಓಡಿಸಿದಾಗ ಅದು ಹೊರಗೆ ಹೋಯಿತು” ಎನ್ನುವುದು ಸರಿ. ಆದರೆ, ಕೋಪದ ಬಗ್ಗೆಯೂ ಹಾಗೆ ಹೇಳಬಾರದು; ಯಾಕೆಂದರೆ ಅದು ನಾಯಿ ಮರಿಯಲ್ಲ. ಆದ್ದರಿಂದ, “ನಾನು ಕೋಪ ಮಾಡಿಕೊಳ್ಳುತ್ತೇನೆ” ಎಂಬುದು ಸರಿಯಾದ ಹೇಳಿಕೆ. ಹೀಗೆಂದಾಗ, ನಮ್ಮ ವರ್ತನೆಗೆ ನಾವೇ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಆಗ ಅದನ್ನು ಬದಲಾಯಿಸಿಕೊಳ್ಳುವ ದಾರಿ ಸ್ಪಷ್ಟವಾಗುತ್ತದೆ.

ಹಾಗಾದರೆ, ಆ ವರ್ತನೆಯ ಬದಲಾವಣೆಗೆ ಏನು ಮಾಡಬೇಕು? ನಾನು ಕೋಪ ಮಾಡಿಕೊಳ್ಳಬಾರದು, ಅಷ್ಟೇ. ಅಂದರೆ, ಕೋಪ ಮಾಡಿಕೊಂಡಾಗ, ಅಗ್ನಿಪರ್ವತದಂತೆ ಉಕ್ಕುವ ಆ ಭಾವನೆ ನನ್ನ ಅರಿವಿಗೆ ಬಂದೊಡನೆ, “ಒಂದರಿಂದ ನೂರರ ವರೆಗೆ” ಎಣಿಕೆ ಮಾಡಿ. ಅಥವಾ 108 ಸಲ ಹಿತವೆನಿಸುವ ಮಂತ್ರ ಜಪಿಸಿ. ಅಥವಾ ಐದು ನಿಮಿಷ ಪ್ರಾರ್ಥನೆ ಮಾಡಿ. ಅಥವಾ ನಿಮಗೆ ಅತ್ಯಂತ ಪ್ರೀತಿಯ ವ್ಯಕ್ತಿಯನ್ನು ಹತ್ತು ಸಲ ನೆನಪು ಮಾಡಿಕೊಳ್ಳಿ. ಅಥವಾ ಒಂದು ಲೋಟ ನೀರು ನಿಧಾನವಾಗಿ ಕುಡಿಯಿರಿ. ಅಥವಾ ಒಂದು ಕಾಳು ಏಲಕ್ಕಿ ಬಾಯಿಗೆ ಹಾಕಿಕೊಂಡು ನಿಧಾನವಾಗಿ ಜಗಿಯಿರಿ. ಹೀಗೆ ಮಾಡುತ್ತಿರುವಾಗ ಕೋಪದ ಭಾವನೆ ಕರಗಿ ಹೋಗುವುದನ್ನು ಗಮನಿಸಿ. ಕೊನೆಗೆ, ನಿಮ್ಮ ವರ್ತನೆಯನ್ನು ಬದಲಾಯಿಸಿಕೊಂಡ ಖುಷಿಯಲ್ಲಿ ನಕ್ಕು ಬಿಡಿ.

ನಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳಲು ದಾರಿದೀಪದಂತಿರುವ ಮೂರು ಪುಸ್ತಕಗಳನ್ನು ದಿವಂಗತ ಡಾ. ಮೀನಗುಂಡಿ ಸುಬ್ರಹ್ಮಣ್ಯ ಬರೆದಿದ್ದಾರೆ. ಅವರ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಮತ್ತು ಅದರ ಮುಂದುವರಿದ ಭಾಗವಾದ “ಮಡದಿ ಮತ್ತೊಬ್ಬ ಚೆಲುವಗೆ” ಪುಸ್ತಕಗಳಲ್ಲಿ ನಮ್ಮ ವರ್ತನೆಗಳ ಬದಲಾವಣೆಗೆ ಸಹಕರಿಸುವ ಹಲವು ತಂತ್ರಗಳು ಸತ್ಯಘಟನೆಗಳ ರೂಪದಲ್ಲಿವೆ. ಕೀಳರಿಮೆಯಿಂದ ಹೊರ ಬರುವುದು ಹೇಗೆ? ಪ್ರಿಯತಮ ಅಥವಾ ಪ್ರಿಯತಮೆ ಕೈಕೊಟ್ಟಾಗ ಆ ನೋವಿನಿಂದ ಪಾರಾಗುವುದು ಹೇಗೆ? ಇವನ್ನೆಲ್ಲ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಹಾಗೆಯೇ, ನಮ್ಮೆಲ್ಲ ಸಮಸ್ಯೆಗಳಿಗೆ ಮೂಲವಾದ “ಮನಸ್ಸು” ಎಂಬ ಗೊಂದಲದಿಂದ ಹೊರಬರಲಿಕ್ಕಾಗಿ “ಮನಸ್ಸು ಇಲ್ಲದ ಮಾರ್ಗ”ವನ್ನು ತೋರಿಸಿದ್ದಾರೆ ಅದೇ ಹೆಸರಿನ ಪುಸ್ತಕದಲ್ಲಿ. ಇದರಲ್ಲಿವೆ ಗೆಸ್ಟಾಲ್ಟ್ ಥೆರಪಿ ಮತ್ತು ಮನೋವಿಶ್ಲೇಷಣೆಯ ಅದ್ಭುತ ವಿವರಣೆ. (ಆ ಮೂರು ಪುಸ್ತಕಗಳ ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು)

ನಮ್ಮ ಬದುಕಿನ ಗುರಿ ಸಾಧನೆಗೆ ವರ್ತನೆ ಬದಲಾವಣೆಯೇ ಚಿಮ್ಮುಹಲಗೆ. ಆ ಸಾಧನೆಗೆ ನಮ್ಮ ವರ್ತನೆಗಳೇ ಅಡ್ಡಿಯಾಗಿದ್ದರೆ, ಅವನ್ನು ನಿವಾರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಅದಕ್ಕೆ ದಾರಿಗಳು ನೂರಾರಲ್ಲ, ಸಾವಿರಾರು. ಮಾನ್ಯ ಡಿ.ವಿ. ಗುಂಡಪ್ಪನವರ “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ”ದ ಪ್ರತಿಯೊಂದು ಮುಕ್ತಕವೂ ಬದುಕಿನ ಗಮ್ಯದೆಡೆಗೆ ಸಾಗುವ ದಾರಿಗಳನ್ನು ತೆರೆದಿಡುತ್ತದೆ. ಭಗವದ್ಗೀತೆಯಂತೂ ಬದುಕಿನ ಪರಿಪೂರ್ಣತೆಯತ್ತ ನಮ್ಮನ್ನು ಮುನ್ನಡೆಸಬಲ್ಲ ಬೆಳಕಿನ ಪುಂಜ. ನೆವನಗಳನ್ನು ಕಿತ್ತೊಗೆದು, ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ ಬನ್ನಿ.

(ಸಪ್ಟಂಬರ್ 2018)

ನಮಗೆ ನಾವೇ ಕೇಳಿಕೊಳ್ಳಲೇ ಬೇಕಾದ ಪ್ರಶ್ನೆ: “ನಾನು ಯಾಕೆ ಉಳಿದಿದ್ದೇನೆ?” ಬದುಕಿನಲ್ಲಿ ಈ ಪ್ರಶ್ನೆಯನ್ನು ಎಷ್ಟು ಬೇಗನೇ ಕೇಳಿಕೊಳ್ಳುತ್ತೇವೆಯೋ ಅಷ್ಟು ಬೇಗನೇ ನಮ್ಮ ಬದುಕಿನ ಗುರಿ ನಮಗೆ ಸ್ಪಷ್ಟವಾಗುತ್ತದೆ, ಅಲ್ಲವೇ?
ನಮ್ಮ ಓರಗೆಯವರು ಎಷ್ಟೋ ಜನರು ತಮ್ಮ ಬದುಕು ಮುಗಿಸಿದ್ದಾರೆ. ನಮ್ಮಿಂದ ಕಿರಿಯರು ಎಷ್ಟೋ ಜನರು ನಮ್ಮನ್ನು ಅಗಲಿದ್ದಾರೆ. ಹಾಗಾದರೆ, ನನ್ನನ್ನು ವಿಶ್ವಚೇತನ ಯಾಕೆ ಉಳಿಸಿದೆ? ನನ್ನಿಂದ ಈ ಜಗತ್ತಿಗೆ ಏನಾಗ ಬೇಕಾಗಿದೆ? ಇದನ್ನು ಚಿಂತಿಸುತ್ತ ಹೋದಂತೆ, ಉತ್ತರ ಸಿಗುತ್ತದೆ. ನಾವು ಸಾಗಬೇಕಾದ ದಾರಿ ನಿಚ್ಚಳವಾಗುತ್ತದೆ.


ಧರೆಯ ಬದುಕೇನದರ ಗುರಿಯೇನು ಫಲವೇನು?
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ
ನರನು ಸಾಧಿಪುದೇನು? – ಮಂಕುತಿಮ್ಮ


ಈ ಭೂಮಿಯಲ್ಲಿ ನನ್ನ ಬದುಕಿನ ಗುರಿ ಏನು? ಅದರ ಪ್ರಯೋಜನಗಳೇನು? ಇದು ನಿಷ್ಪಲವಾದ ಓಡಾಟ, ಬಡಿದಾಟ ಮತ್ತು ತೊಳಲಾಟ ಮಾತ್ರವೇ? ಪ್ರಾಣಿಗಳು, ಪಕ್ಷಿಗಳು ತಿರುತಿರುಗಿ ಹೊಟ್ಟೆ ತುಂಬಿಸಿಕೊಂಡು ಬದುಕು ಮುಗಿಸುತ್ತವೆ. ಅದೇ ರೀತಿಯಲ್ಲಿ ಮನುಷ್ಯನೂ ಬದುಕಿದರೆ ಸಾಕೇ? ಅದಕ್ಕಿಂತ ಹೆಚ್ಚಿನದು ಏನನ್ನಾದರೂ ಮನುಷ್ಯನು ಸಾಧಿಸುತ್ತಾನೆಯೇ? ಎಂಬ ಮಾರ್ಮಿಕ ಪ್ರಶ್ನೆಗಳ ಮೂಲಕ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು ನಮ್ಮನ್ನು ಬೆಚ್ಚಿ ಬೀಳಿಸುತ್ತಾರೆ.
ಪ್ರಾಣಿಪಕ್ಷಿಗಳಿಗೆ ತಮ್ಮ ಜೀವನದಲ್ಲಿ ಒಂದೇ ಒಂದು ಗುರಿ: ತಮ್ಮ ಸಂತಾನವನ್ನು ಮುಂದುವರಿಸಬೇಕು ಎಂಬುದು. ಅದಕ್ಕಿಂತ ಹೆಚ್ಚಿನದನ್ನು ಸಾಧಿಸದಿದ್ದರೆ, ಮನುಷ್ಯನಿಗೂ ಪ್ರಾಣಿಪಕ್ಷಿಗಳಿಗೂ ವ್ಯತ್ಯಾಸವೇನಿದೆ, ಅಲ್ಲವೇ?


ಆದ್ದರಿಂದ, ಈಗಲಾದರೂ ಕೇಳಿಕೊಳ್ಳೋಣ: “ನಾನು ಬದುಕಿನಲ್ಲಿ ಏನನ್ನು ಸಾಧಿಸಬೇಕಾಗಿದೆ? ನನ್ನಿಂದ ಈ ಭೂಮಿಗೆ ಯಾವ ಕೊಡುಗೆ ಸಲ್ಲಬೇಕಾಗಿದೆ?” ನಮ್ಮ ದೌರ್ಬಲ್ಯಗಳನ್ನು ಬದಿಗಿಡೋಣ. ನಮ್ಮ ತಾಕತ್ತುಗಳನ್ನು ಬಳಸೋಣ – ನಮ್ಮ ಬದುಕಿನ ಗುರಿಸಾಧನೆಗಾಗಿ.


ಮತ್ತೆಮತ್ತೆ ಆ ಪ್ರಶ್ನೆಯನ್ನು ಕೇಳಿಕೊಂಡರೂ, ಸ್ಪಷ್ಟ ಉತ್ತರ ಸಿಗದಿದ್ದರೆ, ಉತ್ತರದ ಹುಡುಕಾಟಕ್ಕೆ ಸುಲಭದ ದಾರಿಯೊಂದಿದೆ. ಹತ್ತು ಆತ್ಮಕತೆಗಳು ಅಥವಾ ಜೀವನಕತೆಗಳನ್ನು ತಂದಿಟ್ಟುಕೊಳ್ಳೋಣ. ಅವನ್ನು ತಿಂಗಳಿಗೆ ಒಂದರಂತೆ ಓದುತ್ತಾ ಬರೋಣ. ಉದಾಹರಣೆಗೆ, ಮಹಾತ್ಮ ಗಾಂಧಿಯವರ “ನನ್ನ ಸತ್ಯಶೋಧನೆಯ ಕಥೆ”, ಎ.ಪಿ.ಜೆ. ಅಬ್ದುಲ್ ಕಲಾಂ ಅವರ “ಅಗ್ನಿಯ ರೆಕ್ಕೆಗಳು”, ಬೀಚಿ ಅವರ “ಭಯಾಗ್ರಫಿ”, ಡಾ. ಸಲೀಂ ಅಲಿ ಅವರ “ನೆಲ ಕಚ್ಚಿದ ಗುಬ್ಬಚ್ಚಿ”, ಶಿವರಾಮ ಕಾರಂತರ “ಹುಚ್ಚು ಮನಸ್ಸಿನ ಹತ್ತು ಮುಖಗಳು”, ನವರತ್ನ ರಾಮರಾವ್ ಅವರ “ಕೆಲವು ನೆನಪುಗಳು”, “ಭುವನದ ಭಾಗ್ಯ ಎಂ.ಎಸ್.ಸುಬ್ಬುಲಕ್ಷ್ಮಿ”, “ಗಂಗಾವತರಣ”(ಗಂಗೂಬಾಯಿ ಹಾನಗಲ್ ಜೀವನಚರಿತ್ರೆ), ಪಾರ್ವತಿ ಮೆನನ್ ಬರೆದ “ಅಡ್ಡಗೋಡೆಗಳನ್ನೊಡೆದು” (ಮುನ್ನಡೆದ ಹನ್ನೆರಡು ಮಹಿಳೆಯರ ಕಥೆಗಳು). ಬೇರೊಬ್ಬರ ಜೀವನಕತೆ ಓದುತ್ತಿದ್ದಂತೆ, ನಮ್ಮ ಬದುಕಿನ ಗುರಿಯ ಬಗ್ಗೆ ಹೊಳಹುಗಳು ಸಿಗುತ್ತವೆ.


ಒಮ್ಮೆ ನಮ್ಮ ಜೀವನದ ಗುರಿ ಸ್ಪಷ್ಟವಾದರೆ, ಮತ್ತೆ ಅದನ್ನು ಹಂತಹಂತವಾಗಿ ಸಾಧಿಸಲು ಸುಲಭ. ಆ ಗುರಿಯನ್ನು 25 ವರುಷಗಳಲ್ಲಿ ಸಾಧಿಸಬೇಕೆಂದು ಯೋಜಿಸಿ. ಅದಕ್ಕಾಗಿ, ಮುಂದಿನ 15 ವರುಷಗಳಲ್ಲಿ ಹಾಗೂ 10 ವರುಷಗಳಲ್ಲಿ ಮಾಡಬೇಕಾದ್ದೇನು ಎಂದು ಗುರುತಿಸಿ. ಹಾಗೆಯೇ, ಇಂದಿನಿಂದ 10 ವರುಷಗಳಲ್ಲಿ ತಲಪಬೇಕಾದಲ್ಲಿಗೆ ಮುಂದೊತ್ತಲು ಇನ್ನು ಐದು ವರುಷಗಳಲ್ಲಿ ಮಾಡಬೇಕಾದ್ದೇನೆಂದು ಕಾರ್ಯಸೂಚಿ ರೂಪಿಸಿ. ಆ ಗುರಿ ಮುಟ್ಟಲು, ಇಂದಿನಿಂದ ಪ್ರತಿ ವರುಷವೂ ಸಾಧಿಸಬೇಕಾದ್ದನ್ನು ಖಚಿತ ಪಡಿಸಿಕೊಳ್ಳಿ. ಇಷ್ಟಾದ ನಂತರ, ಪ್ರತಿ ದಿನ ಬೆಳಗ್ಗೆ “ಇಂದು ಸಾಧಿಸಬೇಕಾದ್ದೇನು” ಎಂದು ಯೋಚಿಸಿ, ರಾತ್ರಿ ಮಲಗುವ ಮುಂಚೆ “ಇಂದು ನಾನು ಸಾಧಿಸಿದ್ದೇನು” ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ಪರಿಪಾಠ ಬೆಳೆಸಿಕೊಂಡರಾಯಿತು – ಮುಂದಿನ 25 ವರುಷಗಳಲ್ಲಿ (ಅಥವಾ ಅದಕ್ಕಿಂತ ಮುಂಚೆ) ನಮ್ಮ ಬದುಕಿನ ಗುರಿ ಖಂಡಿತವಾಗಿ ಸಾಧಿಸಬಹುದು.


ನೆನಪಿರಲಿ, ಪ್ರತಿಯೊಬ್ಬ ವ್ಯಕ್ತಿಯೂ ತಾಕತ್ತುಗಳ ಖಜಾನೆ. ಅವನ್ನು ನಮ್ಮೊಳಗಿನಿಂದ ಚಿಮ್ಮಿಸಲು ಬೇಕಾಗಿರೋದು ಒಂದು ಚಿಮ್ಮುಹಲಗೆ. ಅದಕ್ಕಾಗಿ, ಕೊನೆಯ ವರೆಗೆ ಕಾದು ಕೂರಬೇಡಿ. ನಿಮಗೆ ನೀವೇ ಚಿಮ್ಮುಹಲಗೆಯಾಗಿ.
ಈ ದಂತಕತೆ ಗಮನಿಸಿ. ಒಬ್ಬಾತ ಗಿಡುಗನ ಮರಿಯನ್ನು ಅದರ ಗೂಡಿನಿಂದ ಎತ್ತಿ ತಂದ. ಅದರ ಕಾಲಿಗೆ ಹಗ್ಗ ಬಿಗಿದು, ನೆಲದ ಗೂಟವೊಂದಕ್ಕೆ ಕಟ್ಟಿದ. ದಿನದಿನವೂ ತಿನ್ನಲು ಕೊಟ್ಟು, ನೀರು ಕುಡಿಸಿ, ಅದನ್ನು ಬೆಳೆಸಿದ. ಆ ಗಿಡುಗನ ಮರಿ ಒಂದು ದಿನವೂ ರೆಕ್ಕೆ ಬಿಚ್ಚಿ ಹಾರಲಿಲ್ಲ. ಹಗ್ಗದ ಬಂಧನವೇ ತನ್ನ ಬದುಕೆಂದು ಭಾವಿಸಿ ಬೆಳೆಯುತ್ತಿತ್ತು. ಅದೊಂದು ದಿನ ನೀಲಾಕಾಶದಲ್ಲಿ ದೊಡ್ಡ ಗಿಡುಗವೊಂದು ಕಾಣಿಸಿತು – ಚಿಕ್ಕ ಚುಕ್ಕಿಯಂತೆ. ಅನಂತರ ಪ್ರತಿ ದಿನವೂ ಆ ದೊಡ್ಡ ಗಿಡುಗದ ದರ್ಶನ. ಮರಿಗಿಡುಗದ ನೆತ್ತಿಯ ಮೇಲೆಯೇ ಐದಾರು ಬಾರಿ ಸುತ್ತಿ ಕಣ್ಮರೆಯಾಗುವ ವಿಚಿತ್ರ ಆಟ. ದಿನದಿಂದ ದಿನಕ್ಕೆ ಅದರ ಹಾರಾಟ ಮರಿಗಿಡುಗಕ್ಕೆ ಹತ್ತಿರಹತ್ತಿರ. ಕೊನೆಗೊಂದು ದಿನ, ಆ ದೊಡ್ಡ ಗಿಡುಗ ತೀರಾ ಕೆಳಕ್ಕಿಳಿದು, ಮರಿಗಿಡುಗಕ್ಕೆ ತನ್ನ ರೆಕ್ಕೆ ಚಕ್ಕನೆ ತಗಲಿಸಿತು. ತಕ್ಷಣ ಅದು ಗಗನಕ್ಕೇರಿ ಮಾಯವಾಯಿತು. ಆ ಕ್ಷಣದಲ್ಲಿ ಮರಿಗಿಡುಗದ ಮೈಯಲ್ಲಿ ವಿದ್ಯುತ್ ಸಂಚಾರ. ಒಮ್ಮೆಲೇ ಅದು ತನ್ನ ರೆಕ್ಕೆಗಳನ್ನು ಹರಡಿ, ರಪರಪನೆ ಬಡಿಯುತ್ತ ನೆಲದಿಂದ ಮೇಲಕ್ಕೆ ಚಿಮ್ಮಿತು. ಆ ರಭಸಕ್ಕೆ ಕಿತ್ತು ಬಂತು ನೆಲದ ಗೂಟ. ಆಕಾಶಕ್ಕೇರಿದ ಮರಿಗಿಡುಗ ಹೊಸ ಬದುಕಿನತ್ತ ಹಾರಿತು.
ನಮ್ಮನ್ನು ನೆಲದ ಗೂಟಕ್ಕೆ ಬಿಗಿದವರು ಯಾರು? ಯಾರೇ ಬಿಗಿದಿರಲಿ, ಆ ಗೂಟ ಕಿತ್ತೊಗೆದು ಆಕಾಶಕ್ಕೆ ಚಿಮ್ಮಬಲ್ಲ ಚೇತನ ನಮ್ಮಲ್ಲಿದೆ, ಅಲ್ಲವೇ?
(ಆಗಸ್ಟ್ 2018)

ಒಂದು ದಿನ ವಾರಣಾಸಿಯ ರಾಜ ಬ್ರಹ್ಮದತ್ತ ಮತ್ತು ಆತನ ಯುವರಾಜ ರಾಜ್ಯದ ಆಗುಹೋಗು ಮತ್ತು ರಕ್ಷಣೆ ಬಗ್ಗೆ ಚರ್ಚಿಸುತ್ತಿದ್ದರು. ಹೆಚ್ಚು ಸೈನಿಕರನ್ನು ನೇಮಿಸಿಕೊಂಡು ತಮ್ಮ ಸೈನ್ಯ ಬಲಪಡಿಸಬೇಕೆಂದು ನಿರ್ಧರಿಸಿದರು.

ಅಷ್ಟರಲ್ಲಿ ತಿರಿತವಚಚ್ಚ (Tiritavachchha) ಎಂಬ ಸನ್ಯಾಸಿ ಅರಮನೆಯನ್ನು ಪ್ರವೇಶಿಸಿದ್ದು ಕಾಣಿಸಿತು. ಅವರನ್ನು ಸ್ವಾಗತಿಸಲಿಕ್ಕಾಗಿ ರಾಜ ಸಿಂಹಾಸನದಿಂದ ಏಳುತ್ತಿದ್ದಂತೆ ಯುವರಾಜ ಹೇಳಿದ, “ತಂದೆಯವರೇ, ಸನ್ಯಾಸಿಗಳನ್ನು ಸ್ವಾಗತಿಸಲು ನೀವು ಹೋಗಬೇಕಾಗಿಲ್ಲ. ಇತರ ಸನ್ಯಾಸಿಗಳಿಗೆ ಕೊಡುವಂತೆ ಅವರಿಗೂ ಭಿಕ್ಷೆ ಕೊಟ್ಟು ಕಳಿಸಲಾಗುವುದು.”

ಆದರೆ ರಾಜ ಧಾವಿಸಿ ಹೋಗಿ, ಸನ್ಯಾಸಿಗಳನ್ನು ಗೌರವದಿಂದ ಕರೆತಂದ. ಅವರನ್ನು ತನ್ನ ಸಿಂಹಾಸನದಲ್ಲಿಯೇ ಕುಳ್ಳಿರಿಸಿದ. ಇದೇನಿದು? ಎಂದು ಯುವರಾಜ ಅಚ್ಚರಿಪಟ್ಟ. ಆಗ ರಾಜಸೇವಕ ಬಂದು ಅತಿಥಿಗಳಿಗೆ ಭೋಜನ ತಯಾರಾಗಿದೆ ಎಂದು ತಿಳಿಸಿದ. ಮಾನ್ಯ ಸನ್ಯಾಸಿ ತನ್ನ ಜೊತೆಯೇ ತನ್ನ ಕೊಠಡಿಯಲ್ಲಿ ಭೋಜನ ಸ್ವೀಕರಿಸುವರೆಂದು ರಾಜ ಹೇಳಿದ.

ಭೋಜನವಾದ ನಂತರ ರಾಜ ತನ್ನ ಆಸ್ಥಾನದ ವಾಸ್ತುಶಿಲ್ಪಿಯನ್ನು ಕರೆಯಿಸಿದ. ಅರಮನೆಯ ಸಮೀಪದಲ್ಲಿಯೇ ಮಾನ್ಯ ಸನ್ಯಾಸಿಗಳ ವಾಸಕ್ಕಾಗಿ ಸೂಕ್ತ ಭವನವನ್ನು ಕಟ್ಟಬೇಕೆಂದು ರಾಜ ಆದೇಶಿಸಿದ. ಇದನ್ನೆಲ್ಲ ಗಮನಿಸಿದ ಆಸ್ಥಾನಿಕರು ಸನ್ಯಾಸಿಗೆ ನೀಡುತ್ತಿರುವ ವಿಶೇಷ ಉಪಚಾರದ ಬಗ್ಗೆ ಗುಸುಗುಸು ಮಾತನಾಡಲು ಶುರು ಮಾಡಿದರು.

ಇದು ಯುವರಾಜನ ಕಿವಿಗೂ ಬಿತ್ತು. ಆತ ರಾಜನ ಬಳಿ ಕೇಳಿದ, “ತಂದೆಯವರೇ, ಆ ಸನ್ಯಾಸಿಗೆ ಅಷ್ಟೊಂದು ಪ್ರಾಮುಖ್ಯತೆ ಯಾಕೆ ಕೊಡುತ್ತಿದ್ದೀರಿ? ಅವರು ಯಾವುದೇ ಕಲೆಯಲ್ಲಿ ಪರಿಣತರಲ್ಲ. ನಿಮ್ಮ ಗೆಳೆಯರೂ ಅಲ್ಲ, ಸಂಬಂಧಿಕರೂ ಅಲ್ಲ.”

ಆಗ ರಾಜ ಬ್ರಹ್ಮದತ್ತ ಉತ್ತರಿಸಿದ: “ಯುವರಾಜಾ, ನಿನಗೆ ನೆನಪಿದೆಯಾ? ಎರಡು ತಿಂಗಳ ಹಿಂದೆ, ದೂರದ ಪ್ರಾಂತ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಾಗ ನಾನು ಸೈನ್ಯದೊಂದಿಗೆ ಅಲ್ಲಿಗೆ ಹೊರಟಿದ್ದೆ. ಆಗ ನನ್ನ ಆನೆ ಹುಚ್ಚೆದ್ದು, ಕಾಡಿನೊಳಗೆ ನುಗ್ಗಿತು. ನನಗೆ ಗಾಯವಾಯಿತು. ನಾನು ಬಾಯಾರಿಕೆಯಿಂದ ಬಸವಳಿದಿದ್ದೆ. ಪುಣ್ಯವಶಾತ್, ನನ್ನ ಆನೆ ಒಂದು ಆಶ್ರಮವನ್ನು ಪ್ರವೇಶಿಸಿತು. ಅಲ್ಲೊಂದು ಬಾವಿ ಕಂಡು ನನಗೆ ಜೀವ ಬಂದಂತಾಯಿತು. ಆ ಬಾವಿಯಿಂದ ನೀರೆತ್ತಲು ಅಲ್ಲಿ ರಾಟೆ ಮತ್ತು ಕೊಡ ಇರಲಿಲ್ಲ. ಹಾಗಾಗಿ ನಾನು ಆನೆಯ ಕಾಲಿಗೆ ಹಗ್ಗ ಬಿಗಿದು, ಅದರ ಆಧಾರದಿಂದ ಬಾವಿಗಿಳಿದು ನೀರು ಕುಡಿದೆ. ಆದರೆ ನನಗೆ ಬಾವಿಯಿಂದ ಮೇಲೆ ಹತ್ತಲು ಸಾಧ್ಯವಾಗಲಿಲ್ಲ. ನಾನು ಬಾವಿಯ ತಳದಲ್ಲೇ ಹತಾಶನಾಗಿ ನಿಂತಿದ್ದೆ.

ಆ ದಿನ ಸಂಜೆ ತಿರಿತವಚಚ್ಚ ಅವರು ತಮ್ಮ ಆಶ್ರಮಕ್ಕೆ ಮರಳಿದರು. ಬಾವಿಯ ಹತ್ತಿರ ನಿಂತಿದ್ದ ಆನೆಯನ್ನೂ ಅಂಬಾರಿಯನ್ನೂ ಕಂಡು ಅವರಿಗೆ ಅಚ್ಚರಿಯಾಯಿತು. ಅವರು ಬಾವಿಯೊಳಗೆ ಇಣುಕಿದಾಗ ನಾನು ಕಾಣಿಸಿದೆ. ಅವರು ನನ್ನನ್ನು ಬಾವಿಯಿಂದ ಮೇಲೆತ್ತಿದರು. ಅನಂತರ ನನ್ನನ್ನು ಆಶ್ರಮದೊಳಕ್ಕೆ ಕರೆದೊಯ್ದರು. ನನಗೆ ತಿನ್ನಲು ಹಣ್ಣುಗಳನ್ನು ಕೊಟ್ಟರು. ಎರಡು ದಿನ ಅವರು ನನ್ನ ಆರೈಕೆ ಮಾಡಿದರು. ನನ್ನ ಗಾಯಗಳಿಗೆ ಗಿಡಮೂಲಿಕೆಗಳ ಔಷಧಿ ಹಚ್ಚಿದರು. ಕಾಡಿನಿಂದ ಹಣ್ಣುಹಂಪಲು ತಂದಿತ್ತರು. ಶ್ರದ್ಧೆಯಿಂದ ನನ್ನ ಆರೈಕೆ ಮಾಡಿ ಅವರು ನನ್ನ ಜೀವ ಉಳಿಸಿದರು. ಅವರು ನನ್ನ ಸೇವೆ ಮಾಡಿರದಿದ್ದರೆ ನಾನು ಜೀವಂತವಾಗಿ ಅರಮನೆಗೆ ಹಿಂತಿರುಗಿ ಬರುತ್ತಿರಲಿಲ್ಲ. ವಾರಣಾಸಿಯ ನನ್ನ ಅರಮನೆಗೆ ಬರಲೇ ಬೇಕೆಂದು ಅವರಿಗೆ ಆಮಂತ್ರಣವಿತ್ತು ನಾನು ಮರಳಿ ಬಂದೆ.”

ಇದನ್ನೆಲ್ಲ ಕೇಳಿದ ಯುವರಾಜ ಉದ್ಗರಿಸಿದ, “ತಂದೆಯವರೇ, ಅವರು ನಿಮ್ಮ ಪ್ರಾಣ ಉಳಿಸಿದವರೆಂದು ನನಗೆ ಈಗ ಅರ್ಥವಾಯಿತು.” ಸನ್ಯಾಸಿಗಳು ಮಾಡಿದ ಉಪಕಾರಕ್ಕೆ ಬೆಲೆ ಕಟ್ಟಲಾಗದೆಂದು ರಾಜ ಬ್ರಹ್ಮದತ್ತ ಹೇಳುತ್ತಿದ್ದಂತೆ, ಅವರಿಗೆ ತಮ್ಮಿಂದಾದ ಎಲ್ಲ ಸೇವೆ ಸಲ್ಲಿಸಬೇಕೆಂದು ಯುವರಾಜನೂ ನಿರ್ಧರಿಸಿದ.  

ಪ್ರೇರಣೆ: “ಟ್ರೂ ಫ್ರೆಂಡ್ಸ್” - ಉತ್ತಮ ನಡತೆಯ ಜಾತಕ ಕತೆಗಳು
ಫೋಟೋ ಕೃಪೆ: ಅದೇ ಪುಸ್ತಕ

ವಾರಣಾಸಿಯನ್ನು ರಾಜ ಬ್ರಹ್ಮದತ್ತ ಆಳುತ್ತಿದ್ದಾಗ ಅನಂತಪಿಂಡಿಕ ಎಂಬ ಶ್ರೀಮಂತ ವ್ಯಾಪಾರಿ ಅಲ್ಲಿ ವಾಸ ಮಾಡುತ್ತಿದ್ದ. ಅದೊಂದು ದಿನ ಅವನನ್ನು ಭೇಟಿಯಾಗಲು ಅವನ ಬಾಲ್ಯಕಾಲದ ಗೆಳೆಯ ಕಲಾಕನ್ನಿ ಎಂಬಾತ ಬಂದ.

ಕಲಾಕನ್ನಿ ತೀರಾ ಕೃಶನಾಗಿದ್ದ; ಹರಿದ ಉಡುಪು ಧರಿಸಿದ್ದ. ಅವನು ಹಿಂಜರಿಯುತ್ತಲೇ ತನ್ನ ಗೆಳೆಯನ ಬಳಿಗೆ ಬಂದ. ಅವನನ್ನು ಕಂಡೊಡನೆ ಅನಂತಪಿಂಡಿಕ ಉತ್ಸಾಹದಿಂದ ಸ್ವಾಗತಿಸುತ್ತಾ, "ಬಾ, ಬಾ, ಇಷ್ಟು ವರುಷಗಳ ನಂತರ ನಿನ್ನನ್ನು ಕಂಡು ಬಹಳ ಸಂತೋಷವಾಯಿತು” ಎಂದ. ಅವನ ಹೆಗಲಿಗೆ ಕೈಹಾಕಿ, ಅವನನ್ನು ತನ್ನ ಪಕ್ಕದಲ್ಲೇ ಕೂರಿಸಿಕೊಂಡ ಅನಂತಪಿಂಡಿಕ. ಕಾಳಜಿಯಿಂದ ಕೇಳಿದ, “ಕಲಾಕನ್ನಿ, ಯಾಕೆ ಸಪ್ಪಗಿದ್ದಿ?”

ಕಲಾಕನ್ನಿ ವಿಷಾದದಿಂದ ಉತ್ತರಿಸಿದ, “ಎಲ್ಲ ನನ್ನ ದುರಾದೃಷ್ಟ. ನನಗೆ ಸರಿಯಾದ ಹೆಸರನ್ನೇ ಇಟ್ಟಿದ್ದಾರೆ. ನಾನು ತೀರಾ ದುರಾದೃಷ್ಟದವನು.” ಇದನ್ನು ಕೇಳಿದ ಅನಂತಪಿಂಡಿಕ ಹೇಳಿದ, "ಛೇ, ಎಂದಿಗೂ ಹಾಗೆನ್ನಬೇಡ. ಅದೆಲ್ಲ ಬದಲಾಯಿತೆಂದು ತಿಳಿದುಕೋ. ಇನ್ನು ಮೇಲೆ ನೀನು ನನ್ನೊಂದಿಗೆ ವಾಸ ಮಾಡುತ್ತಿ ಮತ್ತು ನನ್ನ ಜೊತೆಗಾರನಾಗಿ ಇರುತ್ತಿ.”

ಕಲಾಕನ್ನಿ “ಆದರೆ …" ಎನ್ನುವಷ್ಟರಲ್ಲಿ ಅನಂತಪಿಂಡಿಕ ಆತ್ಮೀಯವಾಗಿ ನುಡಿದ, “ಆದರೆಗೀದರೆ ಏನೂ ಇಲ್ಲ. ನೀನು ಇಲ್ಲಿಂದ ಹೋಗಲು ನಾನು ಬಿಡೋದಿಲ್ಲ. ನಿನ್ನಂತಹ ಗೆಳೆಯನನ್ನು ನಾನು ಹೇಗೆ ಮರೆಯಲು ಸಾಧ್ಯ?” ಆಗ ಕಲಾಕನ್ನಿಯೂ ಗುರುಕುಲದಲ್ಲಿ ತಮ್ಮ ಬಾಲ್ಯದ ಸಂತೋಷದ ದಿನಗಳನ್ನು ನೆನಪು ಮಾಡಿಕೊಂಡ. "ನನಗಿಲ್ಲಿ ದೊಡ್ಡ ವ್ಯಾಪಾರ ವಹಿವಾಟು ಇದೆ. ಅದನ್ನು ನಿಭಾಯಿಸಲು ಸಹಾಯ ಮಾಡಲಿಕ್ಕಾಗಿ ನನಗೆ ನಿನ್ನಂತಹ ವಿಶ್ವಸಾರ್ಹ ಗೆಳೆಯನೊಬ್ಬ ಬೇಕಾಗಿದ್ದಾನೆ" ಎಂದು ವಿನಂತಿಸಿದ ಅನಂತಪಿಂಡಿಕ. ಕಲಾಕನ್ನಿ ತನ್ನ ಸ್ನೇಹಿತನ ವಿನಂತಿಗೆ ಸಮ್ಮತಿಸಿ, ಅವನ ವಹಿವಾಟಿನಲ್ಲಿ ಅವನಿಗೆ ಸಹಾಯ ಮಾಡತೊಡಗಿದ.

ಕಲಾಕನ್ನಿಯನ್ನು ಅನಂತಪಿಂಡಿಕ ತನ್ನ ಕುಟುಂಬದ ಒಬ್ಬ ಸದಸ್ಯನಂತೆಯೇ ಕಾಣುತ್ತಿದ್ದ. ಅವನ ಜೊತೆಯೇ ಕುಳಿತು ಊಟ ಮಾಡುತ್ತಿದ್ದ. ಹಣಕಾಸನ್ನು ಜೋಪಾನವಾಗಿ ತೆಗೆದಿರಿಸಲು ಕಲಾಕನ್ನಿಯ ಕೈಗೊಪ್ಪಿಸುತ್ತಿದ್ದ.

ಇದನ್ನೆಲ್ಲ ಕಂಡು ಅನಂತಪಿಂಡಿಕನ ವಹಿವಾಟಿನ ಜೊತೆಗಾರರಿಗೆ ಅಸೂಯೆ ಉಂಟಾಯಿತು. “ಒಬ್ಬ ಅಪರಿಚಿತನನ್ನು ನೀನು ಅಷ್ಟರ ಮಟ್ಟಿಗೆ ನಂಬಲು ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದಾಗ ಅನಂತಪಿಂಡಿಕ "ಅವನೇನೂ ಅಪರಿಚಿತನಲ್ಲ. ಅವನು ನನ್ನ ಬಾಲ್ಯದ ಸ್ನೇಹಿತ” ಎಂದು ಉತ್ತರಿಸಿದ. “ಇರಬಹುದು, ಆದರೆ ನೀನು ಅವನನ್ನು ಹಲವು ವರುಷಗಳಿಂದ ಕಂಡಿಲ್ಲ" ಎಂದು ಎಚ್ಚರಿಸಿದರು ಜೊತೆಗಾರರು. ಅದಲ್ಲದೆ, “ಅವನ ಹೆಸರೇ ದುರದೃಷ್ಟದ್ದು. ಅದನ್ನು ಪುನಃ ಪುನಃ ಉಚ್ಚರಿಸಿದರೆ ನಿನಗೆ ದುರದೃಷ್ಟ ಬಂದೀತು" ಎಂಬುದು ಅವರ ಅಂಬೋಣ. "ನಾನು ಅದನ್ನೆಲ್ಲ ನಂಬೋದಿಲ್ಲ. ನಾನು ಗುರುಕುಲದಲ್ಲಿ ಹಲವು ವರುಷ ಅವನ ಜೊತೆಗಿದ್ದೆ. ಅವನ ಹೆಸರು ಏನೇ ಆಗಿರಲಿ, ಅವನೊಬ್ಬ ನಿಜವಾದ ಸಜ್ಜನ" ಎಂದು ಅನಂತಪಿಂಡಿಕ ಆ ಮಾತುಗಳನ್ನೆಲ್ಲ ನಿರಾಕರಿಸಿದ. ಕಲಾಕನ್ನಿ ತನ್ನೊಂದಿಗೇ ಇರುತ್ತಾನೆಂದು ಆತ ಸ್ಪಷ್ಟ ಪಡಿಸಿದ.

ಕೆಲವು ತಿಂಗಳ ನಂತರ, ತಾನು ಒಂದೆರಡು ದಿನ ಇರೋದಿಲ್ಲವೆಂದೂ ತನ್ನ ಊರಿಗೆ ಹೋಗುತ್ತೇನೆಂದೂ ಕಲಾಕನ್ನಿಗೆ ಅನಂತಪಿಂಡಿಕ ತಿಳಿಸಿದ. ತನ್ನ ತಿಜೋರಿಯ ಬೀಗದಕೈಗಳನ್ನು ಕಲಾಕನ್ನಿಕನ ಕೈಗಿತ್ತು ಅನಂತಪೀಡಿಕ ಊರಿಗೆ ಹೊರಟ. ಅನಂತಪಿಂಡಿಕನ ಮನೆಯನ್ನು ಹಗಲೂ ರಾತ್ರಿ ರಕ್ಷಿಸುತ್ತೇನೆಂದು ಕಲಾಕನ್ನಿ ಭರವಸೆಯಿತ್ತ.

ಆ ಊರಿನ ಕೆಲವು ಕಳ್ಳರು ಅನಂತಪಿಂಡಿಕ ಪ್ರಯಾಣ ಹೊರಟದ್ದನ್ನು ಕಂಡರು. ಅವತ್ತು ರಾತ್ರಿ ಅವನ ಮನೆಗೆ ಕನ್ನ ಹಾಕಬೇಕೆಂದು ಅವರು ತಮ್ಮೊಳಗೆ ಮಾತಾಡಿಕೊಂಡರು. ಅಲ್ಲೇ ಹಾದು ಹೋಗುತ್ತಿದ್ದ ಕಲಾಕನ್ನಿ ಅವರ ಮಾತುಗಳನ್ನು ಕೇಳಿಸಿಕೊಂಡ. ಆ ದುರುಳರಿಂದ ಅನಂತಪಿಂಡಿಕನ ಮನೆಯನ್ನೂ ಸಂಪತ್ತನ್ನೂ ರಕ್ಷಿಸಬೇಕೆಂದು ನಿರ್ಧರಿಸಿದ.

ಆದರೆ ಅನಂತಪಿಂಡಿಕನ ಮನೆಯ ಸೇವಕರು ವೃದ್ಧರೂ ದುರ್ಬಲರೂ ಆಗಿದ್ದರು. ಹಾಗಾಗಿ ಕಲಾಕನ್ನಿ ಒಂದು ಉಪಾಯ ಮಾಡಿದ. ಆ ದಿನ ಕತ್ತಲಾಗುತ್ತಲೇ ಅವನು ಒಬ್ಬೊಬ್ಬ ಸೇವಕನಿಗೆ ಒಂದೊಂದು ಕೆಲಸ ಕೊಟ್ಟ: ಡೋಲು ಬಡಿಯುವುದು, ಜಾಗಟೆ ಬಡಿಯುವುದು, ತುತ್ತೂರಿ ಊದುವುದು, ಜೋರಾಗಿ ಹಾಡುವುದು ಇತ್ಯಾದಿ. ಇನ್ನೂ ಕೆಲವರಿಗೆ ತಾಳಬದ್ಧವಾಗಿ ಚಪ್ಪಾಳೆ ತಟ್ಟಲು ಹೇಳಿದ. ಅಂತೂ ಎಲ್ಲರೂ ಸೇರಿ ಅನಂತಪಿಂಡಿಕನ ಮನೆಯಲ್ಲಿ ಜೋರಾಗಿ ಗದ್ದಲ ಮಾಡತೊಡಗಿದರು.

ಆ ದಿನ ನಡುರಾತ್ರಿಯ ಹೊತ್ತಿಗೆ ಆ ಕಳ್ಳರು ಅನಂತಪಿಂಡಿಕನ ಮನೆಯ ಹತ್ತಿರ ಬಂದರು. ಅಲ್ಲಿಂದ ಕೇಳಿಬರುತ್ತಿದ್ದ ಸದ್ದುಗದ್ದಲ ಕೇಳಿ ಅವರಿಗೆ ಅಚ್ಚರಿ. ಅಲ್ಲಿ ಯಾವುದೋ ಸಮಾರಂಭ ನಡೆಯುತ್ತಿರಬೇಕೆಂದು ಅವರು ಭಾವಿಸಿದರು. ಮನೆಯೊಳಗೆ ಬಹಳ ಜನರು ಜಮಾಯಿಸಿರಬೇಕೆಂದು ಯೋಚಿಸಿದ ಅವರು ಭಯಪಟ್ಟು, ಅಲ್ಲಿಂದ ಓಡಿ ಹೋದರು.

ಮರುದಿನ ಮುಂಜಾನೆ ಅನಂತಪಿಂಡಿಕನ ಮನೆಯ ಹತ್ತಿರ ಬಂದ ಆತನ ವಹಿವಾಟಿನ ಜೊತೆಗಾರರು ಕಳ್ಳರು ಬಿಟ್ಟುಹೋದ ಸನಿಕೆ, ಚೂರಿ, ಗುದ್ದಲಿ ಇತ್ಯಾದಿ ಸಲಕರಣೆಗಳನ್ನು ಕಂಡರು. ಮನೆಯ ಹಿಂಭಾಗದಲ್ಲಿ ಕೆಲವು ಹೆಜ್ಜೆ ಗುರುತುಗಳನ್ನೂ ಕಂಡರು.   ಅಷ್ಟರಲ್ಲಿ ಅಲ್ಲಿಗೆ ಬಂದ ಕಲಾಕನ್ನಿಗೆ ಅವರು ಈ ಸಂಗತಿ ತಿಳಿಸಿದರು. ಕಳ್ಳರು ಕನ್ನ ಹಾಕುವ ಸಂಭವ ಇದ್ದದ್ದರಿಂದ ರಾತ್ರಿ ತಾವು ಸದ್ದುಗದ್ದಲ ಮಾಡಿದ್ದಾಗಿ ಕಲಾಕನ್ನಿ ಅವರಿಗೆ ಹೇಳಿದ.

ಆ ದಿನ ಸಂಜೆ ಊರಿಗೆ ಹಿಂತಿರುಗಿದ ಅನಂತಪಿಂಡಿಕನಿಗೆ ಆತನ ಜೊತೆಗಾರರು ಎಲ್ಲ ಸಂಗತಿ ತಿಳಿಸಿದರು. “ನಿಮ್ಮ ಮಿತ್ರ ಕಲಾಕನ್ನಿ ನಿಜಕ್ಕೂ ಬುದ್ಧಿವಂತ” ಎಂದವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. “ಕಲಾಕನ್ನಿ ನಂಬಿಕಸ್ಥನೂ ಹೌದು. ಅವನನ್ನು ನಾನ್ಯಾಕೆ ಗೌರವಿಸುತ್ತೇನೆ ಎಂಬುದು ನಿಮಗೆ ಈಗ ಅರ್ಥವಾಗಿರಬೇಕು” ಎಂದ ಅನಂತಪಿಂಡಿಕ.

ಪ್ರೇರಣೆ: “ಟ್ರೂ ಫ್ರೆಂಡ್ಸ್” - ಉತ್ತಮ ಗುಣನಡತೆಯ ಜಾತಕ ಕತೆಗಳು
ಫೋಟೋ ಕೃಪೆ: ಅದೇ ಪುಸ್ತಕ

ಸಂತ ಔಷಧಕುಮಾರ ಯೌವನದಲ್ಲೇ ತನ್ನ ವಿವೇಕ ಮತ್ತು ಜಾಣ್ಮೆಯಿಂದ ಪ್ರಸಿದ್ಧನಾಗಿದ್ದ. ಒಮ್ಮೆ ಇಬ್ಬರು ಮಹಿಳೆಯರು ಒಂದು ಮಗುವಿನ ಬಗ್ಗೆ ಕಿತ್ತಾಡತೊಡಗಿದರು - ತಾನೇ ಆ ಮಗುವಿನ ತಾಯಿ ಎಂಬುದಾಗಿ. ತಮ್ಮ ವಿವಾದದ ಇತ್ಯರ್ಥಕ್ಕಾಗಿ ಅವರು ಮಗುವಿನೊಂದಿಗೆ ಸಂತ ಔಷಧಕುಮಾರನ ಬಳಿಗೆ ಬಂದರು.

ಔಷಧಕುಮಾರ ಅವರ ವಿವಾದವನ್ನು ತಾಳ್ಮೆಯಿಂದ ಕೇಳಿದ. ಅನಂತರ ಅವನು ಕಡ್ಡಿಯಿಂದ ನೆಲದಲ್ಲಿ ಗೆರೆಯೊಂದನ್ನು ಎಳೆದ. ಆ ಗೆರೆಯ ಮೇಲೆ ಮಗುವನ್ನು ಮಲಗಿಸಿದ. ಅನಂತರ ಇಬ್ಬರು ಮಹಿಳೆಯರನ್ನು ಆ ಗೆರೆಯ ಇಬ್ಬದಿಗಳಲ್ಲಿ ನಿಲ್ಲಿಸಿದ. ಬಳಿಕ ಆ ಮಹಿಳೆಯರಿಗೆ ಹೇಳಿದ: "ಈಗ ಮಗುವನ್ನು ನೆಲದಿಂದೆತ್ತಿ ನೀವಿಬ್ಬರೂ ಅದನ್ನು ನಿಮ್ಮನಿಮ್ಮ ಕಡೆಗೆ ಎಳೆಯಿರಿ. ಯಾರು ಮಗುವನ್ನು ತನ್ನ ಕಡೆಗೆ ಎಳೆದುಕೊಳ್ಳುತ್ತಾಳೋ ಅವಳೇ ಈ ಮಗುವಿನ ತಾಯಿ.”

ಇಬ್ಬರು ಮಹಿಳೆಯರು ಮಗುವನ್ನು ಎತ್ತಿಕೊಂಡರು. ಒಬ್ಬಾಕೆ ಮಗುವಿನ ಕೈಗಳನ್ನೂ ಇನ್ನೊಬ್ಬಾಕೆ ಕಾಲುಗಳನ್ನೂ ಹಿಡಿದುಕೊಂಡು, ತಮ್ಮ ಕಡೆಗೆ ಎಳೆಯತೊಡಗಿದರು. ಈ ಎಳೆದಾಟದ ನೋವನ್ನು ಸಹಿಸಲಾಗದೆ ಮಗು ಕಿಟಾರನೆ ಕಿರುಚಿ ಅಳತೊಡಗಿತು. ಆಗ ಮಗುವಿನ ಕಾಲುಗಳನ್ನು ಹಿಡಿದು ಎಳೆಯುತ್ತಿದ್ದ ಮಹಿಳೆ ತನ್ನ ಹಿಡಿತ ಸಡಿಲಿಸಿ ಮಗುವನ್ನು ಬಿಟ್ಟುಬಿಟ್ಟು ಅಳತೊಡಗಿದಳು.

ಆಗ ಮಗುವಿನ ಕೈಗಳನ್ನು ಹಿಡಿದಿದ್ದ ಮಹಿಳೆ ವಿಜಯದ ನಗೆ ಬೀರುತ್ತಾ "ನೋಡಿದಿರಾ, ಈ ಮಗು ನನ್ನದೇ" ಎಂದಳು. ತಕ್ಷಣವೇ ಸಂತ ಔಷಧಕುಮಾರ ಹೇಳಿದ, “ಅಲ್ಲ, ಈ ಮಗು ನಿನ್ನದಲ್ಲ. ಅದನ್ನು ಅವಳಿಗೆ ಕೊಡು.” ಆಗ ಮಗುವನ್ನು ಹಿಡಿದಿದ್ದ ಮಹಿಳೆ ಪ್ರತಿಭಟಿಸಿದಳು, “ಅದು ಹೇಗಾಗುತ್ತದೆ? ನಾನೇ ಮಗುವನ್ನು ನನ್ನತ್ತ ಎಳೆದು ಗೆದ್ದಿದ್ದೇನೆ. ಈ ಮಗು ನನ್ನದೇ”.

ಆಗ ಔಷಧಕುಮಾರ ತನ್ನ ತೀರ್ಪನ್ನಿತ್ತ: “ಅಲ್ಲ. ಈ ಮಗು ಇನ್ನೊಬ್ಬಳದೇ. ಅವಳು ಮಗುವಿನ ಕಾಲುಗಳ ಹಿಡಿತ ಬಿಟ್ಟುಬಿಟ್ಟಳು ಯಾಕೆಂದರೆ ಅವಳಿಗೆ ಮಗುವಿನ ನೋವನ್ನು ನೋಡಲಾಗಲಿಲ್ಲ. ಆದರೆ ನಿನಗೆ ಸ್ವಲ್ಪವೂ ಕರುಣೆಯಿಲ್ಲ. ನೀನು ಈ ಮಗುವಿನ ತಾಯಿಯಾಗಿರಲು ಹೇಗೆ ಸಾಧ್ಯ?” ಔಷಧಕುಮಾರನ ತರ್ಕ ಮತ್ತು ಜಾಣ್ಮೆಯನ್ನು ಅಲ್ಲಿ ನೆರೆದಿದ್ದವರೆಲ್ಲರೂ ಮೆಚ್ಚಿಕೊಂಡರು.

ಪ್ರೇರಣೆ: “ಸ್ಟೋರೀಸ್ ಆಫ್ ವಿಸ್‌ಡಮ್” - ವಿವೇಕದ ಜಾತಕ ಕತೆಗಳು

Pages