HRM

ಅದೊಂದು ದಿನ ಪುಟ್ಟಿ ಸುಜಾತಳ ಅಮ್ಮ ದಣಿದು ಬಂದಿದ್ದು, ಅವಸರದಲ್ಲಿ ಚಪಾತಿ ಮಾಡಿದಳು. ಕೆಲವು ಚಪಾತಿಗಳು ಕರಟಿ ಹೋದವು. ಅವನ್ನೇ ಅವಳು ಮಗಳು ಮತ್ತು ಗಂಡನಿಗೆ ತಿನ್ನಲು ಕೊಟ್ಟಳು. ಸುಜಾತಳ ಅಪ್ಪ ಚಪಾತಿ - ಪಲ್ಯ ತಿನ್ನುತ್ತಾ ಮಗಳ ಬಳಿ ಅವಳ ಶಾಲೆಯಲ್ಲಿ ಅವತ್ತು ಏನೇನು ಆಯಿತೆಂದು ಕೇಳಿದರು.

ಆಗ ಸುಜಾತಳ ಅಮ್ಮ ಚಪಾತಿ ಕರಟಿ ಹೋದದ್ದಕ್ಕಾಗಿ ಬೇಸರಿಸಬಾರದೆಂದು ಹೇಳಿದಳು. "ಛೇ, ಅದಕ್ಕೇನಂತೆ? ಚಪಾತಿ ರುಚಿಯಾಗಿತ್ತು” ಎಂದರು ಸುಜಾತಳ ಅಪ್ಪ.

ಆ ದಿನ ರಾತ್ರಿ ಮಲಗುವ ಮುನ್ನ ಸುಜಾತ ಅಪ್ಪನಿಗೆ ಶುಭರಾತ್ರಿ ಹೇಳಿದಳು. ಅನಂತರ ಮೆದುವಾದ ಧ್ವನಿಯಲ್ಲಿ ಅಪ್ಪನ ಬಳಿ ಕೇಳಿದಳು: “ಅಪ್ಪಾ, ಇವತ್ತಿನ ಚಪಾತಿ ನಿಜವಾಗಲೂ ರುಚಿಯಾಗಿತ್ತಾ?" ಅವಳ ಅಪ್ಪ ಕೆಲವು ಕ್ಷಣ ಯೋಚಿಸಿ, ಉತ್ತರಿಸಿದರು, “ನೋಡು ಸುಜಾತಾ, ನಿನ್ನ ಅಮ್ಮ ಇಡೀ ಕಷ್ಟ ಪಟ್ಟು ಕೆಲಸ ಮಾಡಿ, ಸುಸ್ತಾಗಿ ಮನೆಗೆ ಬರುತ್ತಾಳೆ. ಅನಂತರ ಅವಳು ನಮಗಾಗಿ ಅಡುಗೆ ಮಾಡುತ್ತಾಳೆ. ಅದ್ಯಾಕೋ ಏನೋ ಇವತ್ತು ಚಪಾತಿ ಸುಟ್ಟು ಹೋಯಿತು. ಅದಕ್ಕೇನಂತೆ? ಸುಟ್ಟ ಚಪಾತಿ ತಿಂದರೆ ಏನೂ ತೊಂದರೆ ಆಗೋದಿಲ್ಲ. ನಾವು ಇನ್ನೊಬ್ಬರ ಕಷ್ಟಗಳನ್ನು ತಿಳಿದುಕೊಂಡರೆ, ನಮ್ಮ ಸಂಬಂಧಗಳು ಚೆನ್ನಾಗಿ ಇರುತ್ತವೆ.”

ಜನಾರ್ಧನ ಹಳ್ಳಿರಸ್ತೆಯಲ್ಲಿ ಕುದುರೆಗಾಡಿಯಲ್ಲಿ ಸಾಗುತ್ತಿದ್ದ. ಮುಂಚಿನ ದಿನ ಮಳೆ ಬಂದು ರಸ್ತೆಯೆಲ್ಲ ಕೆಸರಾಗಿತ್ತು. ಕೆಲವು ಕಡೆ ದೊಡ್ಡದೊಡ್ಡ ಹೊಂಡಗಳಿದ್ದವು. ಒಂದು ಕಡೆ ಅವನ ಕುದುರೆಗಾಡಿಯ ಚಕ್ರಗಳು ದೊಡ್ಡ ಹೊಂಡದಲ್ಲಿ ಸಿಲುಕಿಕೊಂಡವು. ಅವನು ಕುದುರೆಗೆ ಎಷ್ಟು ಹೊಡೆದರೂ ಗಾಡಿ ಮುಂದಕ್ಕೆ ಹೋಗಲಿಲ್ಲ; ಚಕ್ರಗಳು ಹೊಂಡದಿಂದ ಮೇಲಕ್ಕೆ ಬರಲಿಲ್ಲ.

ಆಗ ಅವನು ಕುದುರೆಗಾಡಿಯಿಂದ ಕೆಳಕ್ಕೆ ಇಳಿದು ಸಹಾಯಕ್ಕೆ ಯಾರಾದರೂ ಸಿಗಬಹುದೇ ಎಂದು ಸುತ್ತಲೂ ನೋಡಿದ. ಯಾರೂ ಕಾಣಿಸಲಿಲ್ಲ. ಅನಂತರ, ಮೇಲಕ್ಕೆ ನೋಡುತ್ತಾ ಅವನು ದೇವರಿಗೆ ಮೊರೆ ಇಡಲು ಶುರುವಿಟ್ಟ, “ಓ ದೇವರೇ, ನನಗೆ ಇದ್ಯಾಕೆ ಇಷ್ಟು ಕಷ್ಟ ಕೊಡುತ್ತಾ ಇದ್ದೀರಿ? ನೀವೇ ಕೆಳಕ್ಕೆ ಇಳಿದು ಬಂದು ಈ ಗಾಡಿಯ ಚಕ್ರ ಮೇಲೆತ್ತಲು ಸಹಾಯ ಮಾಡಿ."

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬಳು ಇವನ ಮಾತುಗಳನ್ನು ಕೇಳಿಸಿಕೊಂಡಳು. ಅವಳು ಅವನಿಗೆ ಬುದ್ಧಿವಾದ ಹೇಳಿದಳು, “ಏನಪ್ಪಾ ಇದು? ನೀನು ಗಾಡಿಯನ್ನು ನೋಡುತ್ತಾ ನಿಂತುಕೊಂಡು ಕಿರಿಚಿದರೆ ಅದು ಮುಂದಕ್ಕೆ ಹೋಗುತ್ತದೇನು? ಯಾರು ತಮಗೆ ತಾವೇ ಸಹಾಯ ಮಾಡಿಕೊಳ್ಳುತ್ತಾರೆಯೋ ಅವರಿಗೆ ದೇವರೂ ಸಹಾಯ ಮಾಡುತ್ತಾರೆ. ಹೊಂಡದಲ್ಲಿ ಸಿಲುಕಿರುವ ಚಕ್ರವನ್ನು ಈಗ ನೀನೇ ಮೇಲೆತ್ತಬೇಕು.”

ಇದನ್ನು ಕೇಳಿ ಜನಾರ್ಧನನಿಗೆ ನಾಚಿಕೆಯಾಯಿತು. ಅವನು ಗಾಡಿಯ ಪಕ್ಕಕ್ಕೆ ಹೆಗಲು ಕೊಟ್ಟು, ಬಲವಾಗಿ ಎತ್ತಿದಾಗ ಹೊಂಡದಲ್ಲಿ ಸಿಲುಕಿದ್ದ ಚಕ್ರ ಹೊರಗೆ ಬಂತು; ಕುದುರೆಯೂ ಗಾಡಿಯನ್ನು ಮುಂದಕ್ಕೆ ಎಳೆಯಿತು.

ಆನಂದರಾಯರು ಮನೆಯ ಮಕ್ಕಳನ್ನು ಕರೆದು ತಾವು ತಂದಿದ್ದ ಮೂರು ಗೊಂಬೆಗಳನ್ನು ತೋರಿಸಿದರು. ಅವು ನೋಡಲು ಒಂದೇ ತರಹ ಇದ್ದವು. ಆದರೆ ಅವುಗಳ ಮುಖದಲ್ಲಿ ತೂತುಗಳು ಇದ್ದವು. ಮೊದಲ ಗೊಂಬೆಯ ಎರಡೂ ಕಿವಿಗಳಲ್ಲಿ ತೂತುಗಳು ಇದ್ದವು. ಎರಡನೆಯ ಗೊಂಬೆಯ ಒಂದು ಕಿವಿ ಮತ್ತು ಬಾಯಿಯಲ್ಲಿ ತೂತುಗಳಿದ್ದರೆ, ಮೂರನೆಯ ಗೊಂಬೆಯ ಬಲಗಿವಿಯಲ್ಲಿ ಮಾತ್ರ ತೂತು ಇತ್ತು.

ಅನಂತರ, ಆನಂದರಾಯರು ಸೂಜಿ-ನೂಲು ತಂದರು. ಮೊದಲ ಗೊಂಬೆಯ ಬಲಗಿವಿಯಲ್ಲಿ ತೂರಿಸಿದ ನೂಲು ಅದರ ಎಡಗಿವಿಯಲ್ಲಿ ಹೊರಗೆ ಬಂತು. “ನೋಡಿ ಮಕ್ಕಳೇ, ಈ ಗೊಂಬೆ ಏನನ್ನು ಪ್ರತಿನಿಧಿಸುತ್ತದೆ? ಕೆಲವು ಜನರಿರುತ್ತಾರೆ. ನೀವು ಹೇಳಿದ್ದನ್ನು ಗಮನವಿಟ್ಟು ಕೇಳುವಂತೆ ನಟನೆ ಮಾಡುತ್ತಾರೆ. ಆದರೆ ಅವರು ನಿಮ್ಮ ಮಾತಿ ಬೆಲೆ ಕೊಡುವುದೇ ಇಲ್ಲ; ಈ ಕಿವಿಯಲ್ಲಿ ಕೇಳಿದ್ದನ್ನು ಆ ಕಿವಿಯಿಂದ ಹೊರಗೆ ಬಿಡುತ್ತಾರೆ, ತಿಳಿಯಿತಾ? ಎಂದು ಕೇಳಿದರು.

ಬಳಿಕ, ಎರಡನೆಯ ಗೊಂಬೆಯ ಕಿವಿಯಿಂದ ನೂಲನ್ನು ತೂರಿಸಿದಾಗ ನೂಲು ಅದರೆ ಬಾಯಿಯಿಂದ ಹೊರಗೆ ಬಂತು. “ಇದು ಇನ್ನೊಂದು ತರದ ಜನರನ್ನು ಪ್ರತಿನಿಧಿಸುತ್ತದೆ. ಇವರು ನಿಮ್ಮ ಮಾತನ್ನೆಲ್ಲ ಕೇಳಿ, ನಂತರ ಅದನ್ನು ನಿಮ್ಮ ವಿರುದ್ಧವೇ ಬಳಸುತ್ತಾರೆ - ಚಾಡಿ ಹೇಳಲಿಕ್ಕೆ, ನಿಮ್ಮ ಬಗ್ಗೆ ವದಂತಿ ಹರಡಲಿಕ್ಕೆ” ಎಂದು ಆನಂದರಾಯರು ವಿವರಿಸಿದರು.

ತದನಂತರ, ಮೂರನೆಯ ಗೊಂಬೆಯ ಮುಖದ ತೂತಿನಲ್ಲಿ ಅವರು ನೂಲು ತೂರಿಸಿದಾಗ, ಅದು ಹೊರಗೆ ಬರಲೇ ಇಲ್ಲ. ಆನಂದರಾಯರು ಅದನ್ನು ಹೀಗೆ ವಿವರಿಸಿದರು: ‘ಇದನ್ನು ಗಮನಿಸಿ. ಇದು ಮೂರನೆಯ ತರದ ಜನರನ್ನು ಪ್ರತಿನಿಧಿಸುತ್ತದೆ. ಇವರ ಬಳಿ ನೀವು ಏನು ಹೇಳಿದರೂ ಅವರು ಅದನ್ನು ಬೇರೆ ಯಾರಿಗೂ ತಿಳಿಸುವುದಿಲ್ಲ. ಆದ್ದರಿಂದ, ಇಂತಹ ಜನರು ವಿಶ್ವಾಸಾರ್ಹರು; ನೀವು ಅವರನ್ನು ನಂಬಬಹುದು.”

ವೃದ್ಧರೊಬ್ಬರು ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ವೃದ್ಧರ ಕೈಗಳು ನಡುಗುತ್ತಿದ್ದವು ಮತ್ತು ಅವರ ದೃಷ್ಟಿ ಮಂದವಾಗಿತ್ತು. ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಆ ಮನೆಯ ಪರಿಪಾಠ. ವೃದ್ಧರ ಕೈಯಿಂದ ಅನ್ನದ ಅಗುಳು ಇತ್ಯಾದಿ ಆಹಾರದ ತುಣುಕು ನೆಲಕ್ಕೆ ಬೀಳುತ್ತಿತ್ತು. ಈ ಕಾರಣಕ್ಕಾಗಿ ಮಗನಿಗೂ ಸೊಸೆಗೂ ಅಸಮಾಧಾನ.

ಒಂದು ದಿನ ಅಪ್ಪನನ್ನು ಉದ್ದೇಶಿಸಿ ಮಗ ಹೀಗೆಂದ: "ಊಟ ಮಾಡುವಾಗ ನೀವು ಮಾಡುವ ರಂಪ ನೋಡಿ ನಮಗೆ ಸಾಕಾಗಿ ಹೋಗಿದೆ. ಹಲವಾರು ಪಿಂಗಾಣಿ ಪಾತ್ರೆಗಳನ್ನು ನೀವು ಒಡೆದು ಹಾಕಿದ್ದೀರಿ. ನೀವಿನ್ನು ಬೇರೆಯೇ ಜಾಗದಲ್ಲಿ ಊಟ ಮಾಡಿ.” ಆ ದಿನವೇ ಅವರು ಕೋಣೆಯ ಮೂಲೆಯಲ್ಲಿ ಒಂದು ಸಣ್ಣ ಮೇಜನ್ನು ತಂದಿಟ್ಟರು. ಅವತ್ತಿನಿಂದ, ಆ ವೃದ್ಧರು ಮೂಲೆಯಲ್ಲಿ ಒಬ್ಬರೇ ಕುಳಿತು, ಮರದ ತಟ್ಟೆಯಲ್ಲಿ ಊಟ ಮಾಡಬೇಕಾಯಿತು. ಮೊಮ್ಮಗ ಇದನ್ನೆಲ್ಲ ನೋಡುತ್ತಿದ್ದ.

ಮುಂದೊಂದು ದಿನ ಸಂಜೆ ಪುಟ್ಟ ಮಗ ಕೆಲವು ಮರದ ತುಂಡುಗಳನ್ನು ತಂದಿಟ್ಟು ಜೋಡಿಸುತ್ತಿದ್ದುದನ್ನು ಅಪ್ಪ ನೋಡಿದ. “ಮರದ ತುಂಡುಗಳಲ್ಲಿ ಅದೇನು ಮಾಡುತ್ತಿದ್ದಿ?” ಎಂದು ಪುಟ್ಟ ಮಗನನ್ನು ಅಪ್ಪ ಕೇಳಿದ. ತಟಕ್ಕನೆ ಪುಟ್ಟ ಮಗ “ಅಪ್ಪಾ, ನಾನು ದೊಡ್ಡವನಾದಾಗ ನೀವು ಮತ್ತು ಅಮ್ಮ ಊಟ ಮಾಡಲಿಕ್ಕೆ ಮರದ ತಟ್ಟೆಗಳು ಬೇಕಲ್ಲಾ … ಅದಕ್ಕಾಗಿ ಈಗಲೇ ಮರದ ತಟ್ಟೆ ಮಾಡುತ್ತಿದ್ದೇನೆ” ಎಂದು ಉತ್ತರಿಸಿದ. ಇದನ್ನು ಕೇಳಿ ಅವನ ಅಪ್ಪ ಮತ್ತು ಅಮ್ಮ ಅವಾಕ್ಕಾದರು. ಅನಂತರ, ಆ ವೃದ್ಧರು ಪುನಃ ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ಜೊತೆಯಾಗಿ ಊಟ ಮಾಡುವಂತಾಯಿತು.

ಅರ್ಪಿತಾ ಮತ್ತು ದೀಪಿಕಾ ಅಕ್ಕತಂಗಿಯರು. ಅರ್ಪಿತಾ ಚೆನ್ನಾಗಿ ಹಾಡುತ್ತಿದ್ದಳು. ಅವಳು ಹಾಡುವಾಗ ಸಭಾಭವನದಲ್ಲಿ ಸೂಜಿ ಬಿದ್ದರೂ ಕೇಳುವಂತಹ ಮೌನ. ಎಲ್ಲರೂ ತದೇಕಚಿತ್ತದಿಂದ ಅವಳು ಮಧುರ ಧ್ವನಿಯಿಂದ ಹಾಡುವುದನ್ನು ಕೇಳುತ್ತಿದ್ದರು.

ಆದರೆ, ತಂಗಿ ದೀಪಿಕಾಳಿಗೆ ಚೆನ್ನಾಗಿ ಹಾಡಲು ಆಗುತ್ತಿರಲಿಲ್ಲ. "ನಾನೂ ಅಕ್ಕನಂತೆ ಹಾಡಲು ಸಾಧ್ಯವಿದ್ದರೆ …" ಎಂದು ದೀಪಿಕಾ ಆಗಾಗ ಚಿಂತಿಸುತ್ತಿದ್ದಳು. ಅದೊಂದು ದಿನ ಅಕ್ಕ ಅರ್ಪಿತಾ ತಂಗಿಯ ಬಳಿ ಬಂದು ಹೇಳಿದರು, “ಇನ್ನು ಮುಂದೆ ನಾವಿಬ್ಬರೂ ಜೊತೆಯಾಗಿ ಹಾಡೋಣ. ಹಾಗೆ ಮಾಡಿದರೆ ನೀನು ಬೇಗನೇ ಚೆನ್ನಾಗಿ ಹಾಡಲು ಕಲಿಯಬಹುದು.”

ಮೊದಲ ಕೆಲವು ದಿನಗಳಲ್ಲಿ ದೀಪಿಕಾಳಿಗೆ ಚೆನ್ನಾಗಿ ಹಾಡಲು ಸಾಧ್ಯವಾಗಲಿಲ್ಲ. ಆದರೆ ಅಕ್ಕನಾಗಲೀ ತಂಗಿಯಾಗಲೀ ವಿಚಲಿತರಾಗಲಿಲ್ಲ. ಅರ್ಪಿತಾ ತಾಳ್ಮೆಯಿಂದ ತಂಗಿಗೆ ಕಲಿಸುತ್ತಿದ್ದಳು ಮತ್ತು ದೀಪಿಕಾ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದಳು.

ಅವರ ಶಾಲೆಯ ವಾರ್ಷಿಕೋತ್ಸವದ ದಿನ ಅವರಿಬ್ಬರೂ ಹಾಡಬೇಕೆಂದು ಅವರನ್ನು ಆಹ್ವಾನಿಸಿದರು. ದೀಪಿಕಾಳಿಗೆ ಆತಂಕವಾಯಿತು. ಆದರೆ ಅವಳು ಛಲದಿಂದ ದಿನದಿನವೂ ಹಾಡುತ್ತಾ ಅಭ್ಯಾಸ ಮಾಡಿದಳು. ವಾರ್ಷಿಕೋತ್ಸವದ ದಿನ ಅರ್ಪಿತಾಳ ಆರೋಗ್ಯ ಹದಗೆಟ್ಟಿತು; ಅವಳು ಹಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ದೀಪಿಕಾ ಒಬ್ಬಳೇ ಹಾಡಬೇಕಾಯಿತು. ಅವಳು ಆತ್ಮವಿಶ್ವಾಸದಿಂದ ವೇದಿಕೆಯನ್ನೇರಿ ಹಾಡಲು ಶುರುವಿಟ್ಟಳು. ಯಾಕೆಂದರೆ ಅವಳು ಸತತ ಸಾಧನೆ ಮಾಡಿದ್ದಳು. ಆ ದಿನ ದೀಪಿಕಾ ಅಮೋಘವಾಗಿ ಹಾಡಿದಳು. ಕೊನೆಗೆ ಸಭಿಕರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಅದು ಅವಳ ಜೀವನದ ಅತ್ಯಂತ ಅಭಿಮಾನದ ದಿನವಾಯಿತು.

ಐದನೆಯ ಕ್ಲಾಸಿನಲ್ಲಿ ಕಲಿಯುತ್ತಿದ್ದ ಅನ್ನಪೂರ್ಣ ಅಮ್ಮನ ಬಳಿ ಅಳುತ್ತಾ ಹೇಳಿದಳು, “ಅಮ್ಮಾ, ನನಗೆ ಸಾಕಾಗಿ ಹೋಗಿದೆ. ನನ್ನ ಸಮಸ್ಯೆಗಳು ಮುಗಿಯೋದೇ ಇಲ್ಲ. ನಾನು ಮನೆ ಬಿಟ್ಟು ಎಲ್ಲಿಗಾದರೂ ಓಡಿ ಹೋಗುತ್ತೇನೆ.”

ಮಗಳ ಆತಂಕ ಕಂಡು ಅವಳ ಅಮ್ಮನಿಗೆ ಚಿಂತೆಯಾಯಿತು. ಮಗಳಿಗೆ ಮರೆಯಲಾಗದ ಪಾಠ ಕಲಿಸಲು ಅಮ್ಮ ನಿರ್ಧರಿಸಿದಳು. ಅವಳು ಎರಡು ಪಾತ್ರೆಗಳಿಗೆ ನೀರು ಹಾಕಿ, ಅವನ್ನು ಕುದಿಯಲು ಇಟ್ಟಳು. ಒಂದು ಪಾತ್ರೆಯಲ್ಲಿ ಕ್ಯಾರೆಟ್‌ಗಳನ್ನು ಮತ್ತು ಇನ್ನೊಂದು ಪಾತ್ರೆಯಲ್ಲಿ ಕೆಲವು ಕಾಫಿ ಬೀಜಗಳನ್ನು ಹಾಕಿದಳು. ಇಪ್ಪತ್ತು ನಿಮಿಷಗಳ ನಂತರ ಆ ಪಾತ್ರೆಗಳನ್ನು ಒಲೆಯಿಂದ ಇಳಿಸಿ, ಮೇಜಿನಲ್ಲಿಟ್ಟಳು.

ಅನ್ನಪೂರ್ಣಳನ್ನು ಕರೆದು, ಆ ಪಾತ್ರೆಗಳಿಗೆ ಹಾಕಿದ್ದ ಕ್ಯಾರೆಟ್ ಮತ್ತು ಕಾಫಿ ಬೀಜಗಳು ಏನಾಗಿವೆ ಎಂಬುದನ್ನು ನೋಡಲು ಅಮ್ಮ ಹೇಳಿದಳು. ಕ್ಯಾರೆಟ್‌ಗಳು ಬೆಂದು ಮೆತ್ತಗಾಗಿದ್ದವು ಮತ್ತು ಕಾಫಿ ಬೀಜಗಳು ಬೆಂದು, ನೀರಿನ ಬಣ್ಣವನ್ನೇ ಕಂದು ಬಣ್ಣವಾಗಿ ಬದಲಾಯಿಸಿ, ಕಾಫಿಯ ಘಮವನ್ನು ಹೊರಸೂಸುತ್ತಿದ್ದವು. ಅವನ್ನು ನೋಡಿದ ಅನ್ನಪೂರ್ಣಳಿಗೆ ಏನೂ ಅರ್ಥವಾಗಲಿಲ್ಲ.

ಆಗ ಅಮ್ಮ ವಿವರಿಸಿದಳು, “ಇಲ್ಲಿ ನೋಡು. ನಿನ್ನ ಸಮಸ್ಯೆಗಳು ಈ ಪಾತ್ರೆಗಳ ನೀರಿನಂತೆ. ನೀನು ಕ್ಯಾರೆಟಿನಂತೆ ಸ್ವಲ್ಪವೂ ಬಾಗದೆ ಗಟ್ಟಿಯಾಗಿದ್ದರೆ, ನಿನ್ನ ಅವಸ್ಥೆ ಕ್ಯಾರೆಟಿನಂತೆಯೇ ಆಗುತ್ತದೆ; ಅಂದರೆ, ನಿನ್ನ ಸಮಸ್ಯೆಗಳು ನಿನ್ನನ್ನು ಹೈರಾಣಾಗಿಸುತ್ತವೆ. ಬದಲಾಗಿ, ನೀನು ಕಾಫಿ ಬೀಜಗಳ ಹಾಗಿದ್ದರೆ, ನೀನು ಪರಿಸ್ಥಿತಿಗೆ ಹೊಂದಿಕೊಂಡು, ನಿನ್ನ ಸಮಸ್ಯೆಗಳನ್ನು ನಿಭಾಯಿಸುತ್ತಿ. ನೀನು ಕಾಫಿ ಬೀಜಗಳ ಹಾಗೆ ಸಮಸ್ಯೆಗಳನ್ನೇ ನಿನ್ನ ಪರವಾಗಿ ಬದಲಾಯಿಸುತ್ತೀಯೋ ಅಥವಾ ಕ್ಯಾರೆಟಿನಂತೆ ಸಮಸ್ಯೆಗಳಿಂದಾಗಿ ಹೈರಾಣಾಗುತ್ತೀಯೋ ಎಂಬ ಆಯ್ಕೆ ನಿನ್ನದೇ.” ಅನ್ನಪೂರ್ಣಳಿಗೆ ಅಮ್ಮನ ಪಾಠ ಚೆನ್ನಾಗಿ ಅರ್ಥವಾಯಿತು; ಅವಳು ತನ್ನ ಸಮಸ್ಯೆಗಳ ಬಗ್ಗೆ ಅಳುವುದರ ಬದಲಾಗಿ, ಅವನ್ನು ಎದುರಿಸಿ ಪರಿಹರಿಸಿಕೊಳ್ಳಲು ನಿರ್ಧರಿಸಿದಳು.

ಅನೂಪನಿಗೆ ಎಲ್ಲ ಆಟಗಳಲ್ಲಿಯೂ ತಾನೇ ಗೆಲ್ಲಬೇಕೆಂಬ ಹಠ - ಫುಟ್‌ಬಾಲ್, ಇಸ್ಪೀಟ್, ವಿಡಿಯೋ ಆಟಗಳು ಎಲ್ಲದರಲ್ಲಿಯೂ. ಆಟಗಳಲ್ಲಿ ಸೋಲುವುದನ್ನು ಅವನಿಗೆ ಸಹಿಸಲು ಆಗುತ್ತಿರಲಿಲ್ಲ. ಅದಕ್ಕಾಗಿ ಆತ ಎಲ್ಲ ಆಟಗಳಲ್ಲಿಯೂ ಏನೇನೋ ತಂತ್ರ ಮಾಡಿ ಗೆಲ್ಲುತ್ತಿದ್ದ. ತನ್ನ ಮೋಸದಾಟಗಳು ಇತರರಿಗೆ ತಿಳಿಯೋದಿಲ್ಲ ಎಂಬುದವನ ಯೋಚನೆ.

 ಆದರೆ, ಒಂದು ಪಂದ್ಯಾಟದಲ್ಲಿ ಅವನ ಯಾವ ತಂತ್ರವೂ ನಡೆಯಲಿಲ್ಲ. ಯಾಕೆಂದರೆ, ಆ ಪಂದ್ಯಾಟದ ತೀರ್ಪುಗಾರರು ಇವನಂತಹ ಮೋಸಗಾರರಿಗೆ ಮೋಸ ಮಾಡಲು ಅವಕಾಶವೇ ನೀಡಬಾರದೆಂದು ನಿರ್ಧರಿಸಿದ್ದರು. ಅದಕ್ಕಾಗಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಪ್ರತಿಯೊಬ್ಬ ಆಟಗಾರನ ಪ್ರತಿಯೊಂದು ನಡೆಯನ್ನೂ ಎಚ್ಚರಿಕೆಯಿಂದ ಗಮನಿಸುತ್ತಿದ್ದರು.

ಅನೂಪನಿಗೆ ಆ ಪಂದ್ಯಾಟದಲ್ಲಿ ಉಸಿರು ಕಟ್ಟಿದಂತಾಯಿತು. ಅವನು ಉತ್ತಮ ಆಟಗಾರನೇನೋ ಹೌದು. ಆದರೆ ಅವನಿಗೆ ಯಾವುದರಲ್ಲಿಯೂ ಗೆಲ್ಲಲು ಸಾಧ್ಯವಾಗಲಿಲ್ಲ. ಎಲ್ಲ ಸ್ಪರ್ಧೆಗಳಲ್ಲಿಯೂ ಮೊದಲ ಅಥವಾ ಎರಡನೆಯ ಸುತ್ತಿನಲ್ಲಿಯೇ ಅವನು ಸೋತು ಹೋದ. ಆ ದಿನ, ಪಂದ್ಯಾಟ ಮುಗಿದ ನಂತರ ಅವನು ಆಟದ ಬಯಲಿನಲ್ಲಿಯೇ ಒಂದು ಗಂಟೆ ಸುಮ್ಮನೆ ಕುಳಿತು ಚಿಂತಿಸಿದ. ಎಲ್ಲ ಆಟಗಳಲ್ಲಿಯೂ ತಾನೇ ಗೆಲ್ಲಬೇಕೆಂಬ ಅವನ ಹಠ ಮೊದಲ ಬಾರಿ ಮಣ್ಣು ಮುಕ್ಕಿತ್ತು. ಅವನು ಅವತ್ತೇ ನಿರ್ಧರಿಸಿದ: ಎಲ್ಲದರಲ್ಲಿಯೂ ತಾನೇ ಗೆಲ್ಲಬೇಕೆಂಬ ದುರಾಶೆ ಬೇಡವೆಂದು. ಕೆಲವೊಮ್ಮೆ ಸೋಲುವುದು ಒಳ್ಳೆಯದೇ ಎಂದು ಅವನಿಗೆ ಅರ್ಥವಾಯಿತು. ಯಾಕೆಂದರೆ ಆಗ ಅವನು ಇನ್ನೂ ಚೆನ್ನಾಗಿ ಆಟವಾಡಲು ಕಲಿಯಲೇ ಬೇಕಾಗುತ್ತದೆ.

ಇಬ್ಬರು ಅಣ್ಣತಮ್ಮಂದಿರು ಒಂದು ಸಣ್ಣ ವಿಷಯಕ್ಕಾಗಿ ಜಗಳ ಮಾಡಿಕೊಂಡು ಮಾತು ಬಿಟ್ಟರು. ಒಂದು ದಿನ ಹಿರಿಯರೊಬ್ಬರು ಅಣ್ಣನ ಬಳಿ ಬಂದರು; ನಿಮಗೆ ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡಲೇ? ಎಂದು ಕೇಳಿದರು. ಅಣ್ಣ ಹೇಳಿದ, “ಖಂಡಿತವಾಗಿ ಸಹಾಯ ಮಾಡಿ. ನನ್ನ ತಮ್ಮ ಜೆಸಿಬಿ ತಂದು ನನ್ನ ಮತ್ತು ಅವನ ಹೊಲಗಳ ನಡುವೆ ಅಗಲವಾದ ಕಾಲುವೆ ತೋಡಿದ್ದಾನೆ. ಈಗ ನೀವು ನನ್ನ ಹೊಲದ ಗಡಿಯಲ್ಲಿ ಎತ್ತರದ ಗೋಡೆ ಕಟ್ಟಿಸಿ. ನನಗೆ ಅವರ ಮುಖ ಕಾಣಿಸಬಾರದು.”

ಆ ದಿನ ಹೊಲದ ಬಳಿ ಅಣ್ಣ ಬಂದಾಗ ಅವನಿಗೆ ಆಘಾತವಾಯಿತು. ಆ ಹಿರಿಯ ವ್ಯಕ್ತಿ ಅಲ್ಲಿ ಗೋಡೆ ಕಟ್ಟುವ ಬದಲು ಅಣ್ಣನ ಹೊಲದಿಂದ ತಮ್ಮನ ಹೊಲಕ್ಕೆ ಕಾಲುವೆ ದಾಟಿ ಹೋಗಲಿಕ್ಕಾಗಿ ಸೇತುವೆ ಕಟ್ಟಿಸಿದ್ದರು!

ಆಗ ಅವನ ತಮ್ಮ ಅಲ್ಲಿಗೆ ಓಡೋಡಿ ಬಂದ. “ಅಣ್ಣಾ, ನಾನು ನಿನಗೆ ಬಯ್ದು ನೋಯಿಸಿದ್ದೆ. ಆದರೂ ನೀನು ಇಲ್ಲಿ ಸೇತುವೆ ಕಟ್ಟಿಸಿದ್ದಿ. ನನ್ನನ್ನು ಕ್ಷಮಿಸು" ಎನ್ನುತ್ತಾ ಅಣ್ಣನನ್ನು ಅಪ್ಪಿಕೊಂಡ. ಆಗ ಅಣ್ಣನ ಉದ್ಗಾರ, "ನಮ್ಮೊಳಗೆ ಏನೆಲ್ಲ ಆಯಿತೋ ಅದಕ್ಕಾಗಿ ನನ್ನನ್ನೂ ಕ್ಷಮಿಸು." ತಮ್ಮೊಳಗಿನ ಮನಸ್ತಾಪವನ್ನು ಸೇತುವೆ ಕಟ್ಟುವ ಮೂಲಕ ನಿವಾರಿಸಿದ್ದಕ್ಕಾಗಿ ಅಣ್ಣತಮ್ಮ ಇಬ್ಬರೂ ಹಿರಿಯ ವ್ಯಕ್ತಿಗೆ ಧನ್ಯವಾದ ಅರ್ಪಿಸಿದರು.

ನಿಹಾರಿಕಾ ತನ್ನ ಅಮ್ಮನೊಂದಿಗೆ ಸೆಕೆಂಡ್-ಹ್ಯಾಂಡ್ ಪೀಠೋಪಕರಣಗಳ ಮಳಿಗೆಗೆ ಹೋದಳು - ಓದಲಿಕ್ಕಾಗಿ ಮೇಜೊಂದನ್ನು ಖರೀದಿಸಬೇಕೆಂದು. ಅಲ್ಲಿ ಹಳೆಯ ಮೇಜಿನ ಡ್ರಾವರ್ ಎಳೆದಾಗ ಅದರಲ್ಲೊಂದು ಕವರ್ ಕಾಣಿಸಿತು. ಕುತೂಹಲದಿಂದ ಅದನ್ನು ತೆರೆದಾಗ ಅವಳಿಗೆ ಅದರಲ್ಲಿ ಹತ್ತು ಸಾವಿರ ರೂಪಾಯಿ ಹಣ ಸಿಕ್ಕಿತು.

ಅವಳು ಅದೇ ಮೇಜನ್ನು ಖರೀದಿಸಿ ಮನೆಗೆ ತಂದಳು. ಹಾದಿಯಲ್ಲಿ ಅವಳು ಯೋಚಿಸುತ್ತಿದ್ದಳು: ನನಗೆ ಸಿಕ್ಕಿದ ಆ ಹಣದಿಂದ ನಾನು ಸೈಕಲ್, ಹೊಸಹೊಸ ಉಡುಪು ಇತ್ಯಾದಿ ಖರೀದಿಸಬಹುದು. ಬಹಳ ಒಳ್ಳೆಯದಾಯಿತು. ಮನೆಯಲ್ಲಿ ಅವಳು ಆ ಕವರನ್ನು ಪುನಃ ತೆರೆದಾಗ, ಅದರೊಳಗೆ ಹಣದ ಜೊತೆಗೆ ಒಂದು ಕೈಬರಹದ ಹಾಳೆ ನಿಹಾರಿಕಾಳಿಗೆ ಕಾಣಿಸಿತು. ಅದರಲ್ಲಿ ಬರೆದದ್ದನ್ನು ಓದಿದಾಗ ಅವಳಿಗೆ ತಿಳಿಯಿತು: ಅದು ಯಾರೋ ವೃದ್ಧೆ ತನ್ನ ಕುಟುಂಬಕ್ಕಾಗಿ ಕಷ್ಟದಿಂದ ಉಳಿಸಿದ್ದ ಹಣ.

ಈಗ ನಿಹಾರಿಕಾಳಿಗೆ ಪಶ್ಚಾತ್ತಾಪವಾಯಿತು. “ಈ ಹಣ ನನ್ನದಲ್ಲ. ಇದು ಆ ವೃದ್ಧೆ ತನ್ನ ಕುಟುಂಬದವರಿಗಾಗಿ ಉಳಿಸಿದ ಹಣ. ಅವಳು ತೀರಿಕೊಂಡಿರಬೇಕು. ಅನಂತರ ಅವಳ ಕುಟುಂಬದವರು ಈ ಮೇಜನ್ನು ಆ ಮಳಿಗೆಗೆ ಮಾರಾಟ ಮಾಡಿರಬೇಕು. ಇದನ್ನು ಆ ಕುಟುಂಬದವರಿಗೆ ಹಿಂತಿರುಗಿಸಬೇಕು" ಎಂದು ಅವಳು ನಿರ್ಧರಿಸಿದಳು.

ತನ್ನ ನಿರ್ಧಾರವನ್ನು ನಿಹಾರಿಕಾ ಅಮ್ಮನಿಗೆ ತಿಳಿಸಿದಾಗ, ಮಗಳ ಪ್ರಾಮಾಣಿಕತೆಯನ್ನು ಅಮ್ಮ ಮನಸಾರೆ ಮೆಚ್ಚಿದಳು.

ತೇಜಸ್ ದೊಡ್ಡ ಬಂಗಲೆಯ ಕಂಪೌಂಡಿನೊಳಗೆ ವಾಸ ಮಾಡುತ್ತಿದ್ದ - ಮೂರು ಕೋಣೆಗಳ ಪುಟ್ಟ ಮನೆಯಲ್ಲಿ. ಅವನ ತಂದೆತಾಯಿ ಆ ಬಂಗಲೆಯ ಧನಿಕನ ಬಳಿ ಕೆಲಸ ಮಾಡುತ್ತಿದ್ದರು. ಅವನ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಅವಳಿಗೆ ಹಾಸಿಗೆಯಿಂದ ಎದ್ದೇಳಲಿಕ್ಕೂ ಕಷ್ಟವಾಗುತ್ತಿತ್ತು. ಅವಳ ಮುಖದಲ್ಲಿ ಯಾತನೆ ಎದ್ದು ಕಾಣುತ್ತಿತ್ತು.

ಅದೊಂದು ದಿನ ಧನಿಕನ ಬಂಗಲೆಯ ಉದ್ಯಾನದಲ್ಲಿ ಗುಲಾಬಿ ಗಿಡವೊಂದರಲ್ಲಿ ಹಲವು ಹೂಗಳು ಅರಳಿದ್ದನ್ನು ಕಂಡ ತೇಜಸ್‌ನ ಮುಖ ಅರಳಿತು. ಅವನು ಗುಲಾಬಿ ಹೂವೊಂದನ್ನು ಕಿತ್ತುಕೊಂಡ - ತನ್ನ ಅಜ್ಜಿಗೆ ಕೊಡಲಿಕ್ಕಾಗಿ. ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದವನು ಅಂದುಕೊಂಡ. ಅವನು ಆ ಚಂದದ ಗುಲಾಬಿ ಹೂ ಕೊಟ್ಟಾಗ ಅವನ ಅಜ್ಜಿಯ ಮುಖವೂ ಅರಳಿತು. ಎಷ್ಟೋ ದಿನಗಳ ನಂತರ ಅಜ್ಜಿಯ ಮುಖದಲ್ಲೊಂದು ಮುಗುಳ್ನಗು ಕಂಡ ತೇಜಸ್ ಮರುದಿನವೂ ಗುಲಾಬಿ ಹೂ ಕಿತ್ತು ತಂದು ಅಜ್ಜಿಗಿತ್ತ. ಹೀಗೆ ಅಜ್ಜಿಗೆ ದಿನದಿನವೂ ಗುಲಾಬಿ ಹೂ ತಂದು ಕೊಡುತ್ತಿದ್ದ ತೇಜಸ್.

ಕೆಲವು ದಿನಗಳ ನಂತರ ಉದ್ಯಾನದಿಂದ ಯಾರೋ ಗುಲಾಬಿ ಹೂ ಕೀಳುತ್ತಿರುವುದನ್ನು ಧನಿಕ ಗಮನಿಸಿದ. ಕೋಪಿಸಿಕೊಂಡ ಆತ ಎಲ್ಲ ಕೆಲಸಗಾರರನ್ನೂ ಕರೆಸಿ, ಒಬ್ಬೊಬ್ಬರನ್ನೇ ಗುಲಾಬಿ ಹೂ ಕಿತ್ತಿದ್ದೀರಾ? ಎಂದು ಕೇಳಿದ. ತೇಜಸ್‌ನನ್ನು ಪ್ರಶ್ನಿಸಿದಾಗ ಅವನು ತಾನು ದಿನಕ್ಕೊಂದು ಗುಲಾಬಿ ಹೂ ಕಿತ್ತದ್ದನ್ನು ಒಪ್ಪಿಕೊಂಡ. ಧನಿಕನಿಗೆ ಬಹಳ ಸಿಟ್ಟು ಬಂತು. ಆದರೆ, ತನ್ನ ಅಜ್ಜಿಯನ್ನು ಗೆಲುವಾಗಿಸಲಿಕ್ಕಾಗಿ ಆಕೆಗೆ ಆ ಗುಲಾಬಿ ಹೂವನ್ನು ಕೊಡುತ್ತಿದ್ದೆ ಎಂದು ತೇಜಸ್ ಹೇಳಿದಾಗ ಧನಿಕನ ಸಿಟ್ಟು ತಣ್ಣಗಾಯಿತು. ಅವನು ತೇಜಸ್‌ನ ಬೆನ್ನು ತಟ್ಟಿ ಹೇಳಿದ, "ನನ್ನ ಉದ್ಯಾನದ ಗುಲಾಬಿ ಹೂಗಳನ್ನು ಇದಕ್ಕಿಂತ ಒಳ್ಳೆಯ ರೀತಿಯಲ್ಲಿ ಉಪಯೋಗಿಸುವ ಯಾವ ದಾರಿಯೂ ನನಗೆ ಕಾಣಿಸುತ್ತಿಲ್ಲ.”

Pages