Consumers' Forum & RTI

ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ರಾಜೀವಿ ಬಿ.ಶೆಟ್ಟಿಯವರ ಮೇಲೆ ಅರಣ್ಯ ತಕ್ಷೀರೊಂದು 1997ರಲ್ಲಿ ದಾಖಲಾಗಿತ್ತು. ಸದ್ರಿ ತಕ್ಷೀರಿಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ದಂಡನೆ ವಿಧಿಸಿದ್ದರು. ಶ್ರೀಮತಿ ಶೆಟ್ಟಿಯವರು ದಂಡನಾ ಶುಲ್ಕವನ್ನು ಪೂರ್ತಿಯಾಗಿ ಕಟ್ಟಿದ್ದರೂ ಕಡಿದ ಮರವನ್ನು ಸಾಗಿಸಲು ಈ ತನಕ ರಹದಾರಿ ನೀಡಿರಲಿಲ್ಲ.

ಕಾರ್ಕಳ ವಲಯ ಅರಣ್ಯಾಧಿಕಾರಿಗಳ ಕಚೇರಿಯನ್ನು ಈ ಬಗ್ಗೆ ಅನೇಕ ಸಲ ಸಂಪರ್ಕಿಸಿದರು. ಇವರ ಕಡತವು ಕಾರ್ಕಳ ಕಚೇರಿಯಿಂದ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಗೆ ಮತ್ತು ಕುಂದಾಪುರದಿಂದ ಕಾರ್ಕಳಕ್ಕೆ ಓಡಾಡುತ್ತಿತ್ತೇ ವಿನಹ ಶ್ರೀಮತಿ ಶೆಡ್ತಿಯವರಿಗೆ ಸಾಗಾಟ ಪರ್ಮಿಟು ಸಿಕ್ಕಿರಲಿಲ್ಲ. ತಾ. 2-1-99ರಂದು ಶ್ರೀಮತಿ. ರಾಜೀವಿ ಬಿ.ಶೆಟ್ಟಿಯವರು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಒಂದು ಪತ್ರ ಬರೆದು ಅದರ ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿಕೊಟ್ಟರು.

ಇವರ ಪತ್ರವನ್ನು ಅನುಸರಿಸಿ ವೇದಿಕೆಯು ತಾ. 25-2-99ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಒಂದು ಪತ್ರ ಬರೆಯಿತು. ಪರಿಣಾಮವಾಗಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಇದೀಗ ವೇದಿಕೆಗೆ ಪತ್ರ ಬರೆದಿದ್ದು ಶ್ರೀಮತಿ ರಾಜೀವಿ ಬಿ.ಶೆಟ್ಟಿಯವರಿಗೆ ರಹದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.


ಪ್ರಾತಿನಿಧಿಕ ಫೋಟೋ: ಸಾಗಾಟಕ್ಕೆ ತಯಾರಾದ ಮರದ ದಿಮ್ಮಿಗಳು

ಬಂಟ್ವಾಳ ಬಳಕೆದಾರರ ವೇದಿಕೆಯಿಂದ ಪರಿಹಾರಗೊಂಡ ಪ್ರಕರಣ
ಬಂಟ್ವಾಳ ತಾಲೂಕಿನ ಅಮ್ಟಾಡಿಯ ಶ್ರೀನಿವಾಸ ಭಂಡಾರಿಯವರು ಈಗ ದುಬೈಯಲ್ಲಿ ಉದ್ಯೋಗದಲ್ಲಿದ್ದಾರೆ. ಕಳೆದ ವರ್ಷ ಆಕ್ಟೋಬರಿನಲ್ಲಿ ಅವರು ರಜೆಗೆಂದು ಊರಿಗೆ ಬಂದರು. ಹಾಗೆ ಬರುವಾಗ ಊರಿನಲ್ಲಿದ್ದ ತನ್ನ ತಂದೆ-ತಾಯಿಯರಿಗೆ, ಅಣ್ಣತಮ್ಮಂದಿರಿಗೆ, ಅಕ್ಕ-ತಂಗಿಯರಿಗೆ ಹಲವು ವಸ್ತುಗಳನ್ನು ತರಲು ಬಯಸಿದರು. ತನ್ನ ವೃತ್ತಿಗೆ ಸಂಬಂಧಿಸಿದ ಹಲವು ಉಪಕರಣಗಳನ್ನೂ ಹಿಡಿದುಕೊಂಡರು. ತಮ್ಮ ಮಿತ್ರನೊಬ್ಬ ಊರಿಗೆ ಹೋಗುತ್ತಿದ್ದಾನೆ ಎಂದು ಶ್ರೀನಿವಾಸರ ಹಲವು ಗೆಳೆಯರು ತಮ್ಮ ತಮ್ಮ ಮನೆಗಳಿಗೆ ಮುಟ್ಟಿಸಲೆಂದು ಅವರ ಕೈಗೆ ಹಲವು ವಸ್ತುಗಳನ್ನು ಕೊಟ್ಟರು. ಹೀಗೆ ಶ್ರೀನಿವಾಸರ ಲಗ್ಗೇಜು ಎರಡು ದೊಡ್ಡ ಸೂಟುಕೇಸುಗಳಷ್ಟಾಯಿತು.

ದುಬೈಯಿಂದ ಮುಂಬಯಿಗೆ ಬಂದಿಳಿದ ಶ್ರೀನಿವಾಸರು ಅಲ್ಲಿಂದ ಮಂಗಳೂರಿಗೆ ಕೆನರಾ-ಪಿಂಟೊ ಟ್ರಾವೆಲ್ಸಿನ ಬಸ್ಸಿನಲ್ಲಿ ಹೊರಟರು. ಬಸ್ಸಿಗೆ ಹತ್ತುವಾಗಲೇ ತನ್ನ ಸೂಟುಕೇಸುಗಳನ್ನು ಕ್ಷೇಮವಾಗಿಡುವ ಬಗ್ಗೆ ಅವರು ಗಮನ ಹರಿಸಿದರು. ಆದರೆ “ಡಿಕ್ಕಿಯಲ್ಲಿ ಜಾಗ ಇಲ್ಲ” ಎಂಬ ಕಾರಣ ನೀಡಿ ಶ್ರೀನಿವಾಸರ ಲಗ್ಗೇಜುಗಳನ್ನು ಬಸ್ಸಿನ ಟಾಪಿನ ಮೇಲೆಹಾಕಲಾಯಿತು. ತನ್ನ ಕೈಯಲ್ಲಿ ಹೇಗೋ ಬಸ್ಸಿನ ಸಿಬ್ಬಂದಿ ಲಗೇಜಿನ ಬಗ್ಗೆ ಕೊಟ್ಟ ಟ್ಯಾಗು ಇದೆಯಲ್ಲ ಎಂದು ಶ್ರೀನಿವಾಸರು ಸಮಾಧಾನ ಮಾಡಿಕೊಂಡರು.

ರಾತ್ರಿ ಬೆಳಗಾದಾಗ ಸೂಟ್ ಕೇಸ್ ಮಾಯ!
ಬಸ್ಸು ಬೆಳಿಗ್ಗೆ ಭಟ್ಕಳ ತಲುಪಿದಾಗ ಬಸ್ಸಿನ ಸಿಬ್ಬಂದಿ ಟಾಪಿನ ಮೇಲೆ ಹತ್ತಿ ಲಗ್ಗೇಜುಗಳನ್ನು ಪರೀಕ್ಷಿಸಿ ಶ್ರೀನಿವಾಸರ ಸೂಟ್‍ಕೇಸುಗಳು ಮಾಯವಾಗಿರುವುದನ್ನು ಅವರಿಗೆ ತಿಳಿಸಿದರು! ರಾತ್ರಿ ಪ್ರಯಾಣದಲ್ಲಿ ಬಸ್ ಒಂದೆರಡು ಕಡೆ ನಿಂತು
ಹೊರಟಿದ್ದು ಶ್ರೀನಿವಾಸರ ಗಮನಕ್ಕೆ ಬಂದಿತ್ತು. ಆದರೆ ಅರೆ ನಿದ್ದೆಯಲ್ಲಿದ್ದ ಅವರು ಬಸ್ ಎಲ್ಲಿ ನಿಂತಿತ್ತು ಎಂಬುದನ್ನಾಗಲೀ, ಬಸ್ ನಿಂತಾಗ ಏನು ನಡೆಯಿತು ಎಂಬುದನ್ನಾಗಲೀ ಗಮನಿಸಿರಲಿಲ್ಲ.

ಪ್ರಕರಣದ ವಿವರ
ಮಂಗಳೂರಿನ ಶ್ರೀ. ದಿವಾಕರ ಆಚಾರ್ಯ ಎಂಬುವವರು ಚಿನ್ನದ ಕೆಲಸ ಮಾಡುವವರು, ಅವರು ತಮ್ಮ ವೃತ್ತಿ ಜೀವನದ ಅವಶ್ಯಕತೆಗಾಗಿ ವೈಬ್ರೇಟರ್ ಪಾಲಿಶಿಂಗ್ ಯಂತ್ರವೊಂದನ್ನು ಖರೀದಿಸಲು ಬಯಸಿ ಸ್ವತ: ಮಂಬೈಗೆ ಹೋಗಿ, “ಮಾಸ್ಟರ್”
ಕಂಪೆನಿಯ ಉತ್ತಮ ದರ್ಜೆಯ ಯಂತ್ರವನ್ನು ಆಯ್ಕೆ ಮಾಡಿದರು. ಊರಿಗೆ ಮರಳಿದ ಮೇಲೆ ಸಹಕಾರಿ ಬ್ಯಾಂಕೊಂದರ ಸಾಲ ಸೌಲಭ್ಯ ಪಡೆದು, ತಾ. 15-10-98ರಂದು ರೂ. 34,350/- ಮೌಲ್ಯದ ಡಿಡಿಯನ್ನು ಸದರಿ ಕಂಪೆನಿಗೆ ಕಳುಹಿಸಿದರು. ಇದಕ್ಕೆ ಪ್ರತಿಯಾಗಿ ಶ್ರೀ. ದಿವಾಕರ ಆಚಾರ್ಯರಿಗೆ ತಾ. 9-11-98ರಂದು ಪಾರ್ಸೆಲ್ ಮೂಲಕ ಪಾಲಿಶಿಂಗ್ ಯಂತ್ರ ಬಂತು.

ದಿಗ್ಭ್ರಮೆ
ಯಂತ್ರವನ್ನು ನೋಡಿದ ಶ್ರೀ. ದಿವಾಕರ ಆಚಾರ್ಯರು ದಿಗ್ಭ್ರಮೆ ಹೊಂದಿದರು. ಯಾಕೆಂದರೆ ಅವರು ಆಯ್ಕೆ ಮಾಡಿಖರೀದಿಸಿದ ಯಂತ್ರ ಅದಾಗಿರಲ್ಲಿಲ್ಲ. ಯಂತ್ರದ ಮೇಲೆ ತಯಾರಕರ ಹೆಸರು (Brand Name) ನಮೂನೆ ಸಂಖ್ಯೆ (Model No.), ಕ್ರಮ ಸಂಖ್ಯೆ (Serial No.) ಉತ್ಪಾದನೆಯ ದಿನಾಂಕ (Manufacturing Date) ಯಾವುದೂ ಇರಲಿಲ್ಲ! ಅಷ್ಟೇಕೆ? ಯಾವುದೇ ವಿದ್ಯುತ್-ಚಾಲಿತ ಯಂತ್ರದಲ್ಲಿ ಇರಬೇಕಾದ “ಆನ್-ಆಫ್” ಸ್ವಿಚ್ ಕೂಡಾ ಈ ಯಂತ್ರದಲ್ಲಿ ಇರಲಿಲ್ಲ!! ಅಷ್ಟೇ ಅಲ್ಲ, ಯಂತ್ರದ ಜೊತೆಗೆ ಗ್ಯಾರಂಟಿ ಕಾರ್ಡ್ ಹಾಗೂ ಉಪಯೋಗಿಸುವ ಕ್ರಮ, ವಿವರಿಸುವ ಕೈಪಿಡಿಯೂ (Instruction Manual) ಬಂದಿರಲಿಲ್ಲ.
ಆದರೂ ಯಂತ್ರದ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಶ್ರೀ ಆಚಾರ್ಯರುಯಂತ್ರವನ್ನು ತಮ್ಮ ಕೆಲಸಕ್ಕೆ ಉಪಯೋಗಿಸಲು ಪ್ರಾರಂಭಿಸಿದರು. ಆದರೆ ಸ್ವಲ್ಪ ಸಮಯದಲ್ಲೇ ಅವರಿಗೆ ಯಂತ್ರದ ಕಳಪೆ ಗುಣಮಟ್ಟದ ಅರಿವಾಯಿತು. “ಆನ್” ಮಾಡಿದ
ತಕ್ಷಣ ಯಂತ್ರ ನಿಂತಲ್ಲಿ ನಿಲ್ಲದೇ ಎರಡು ಅಡಿ ಆಚೆಗೂ ಈಚೆಗೂ ತೆವಳಲು ಪ್ರಾರಂಭಿಸುತ್ತಿತ್ತು!

ಪೂರೈಕೆದಾರರಿಗೆ ದೂರು
ತಾನು ಮೋಸ ಹೋದುದನ್ನು ಅರಿತ ಶ್ರೀ. ಆಚಾರ್ಯರು ದಿನಾಂಕ: 23-11-98ರಂದು ಪೂರೈಕೆದಾರರಿಗೆ ಪತ್ರ ಬರೆದು ಯಂತ್ರದಲ್ಲಿರುವ ದೋಷವನ್ನು ವಿವರಿಸಿದರು. ಯ:ಕಶ್ಚಿತ್ ಒಂದು ಪೆನ್ನಿನ ರಿಫೀಲ್ ಮೇಲೆಯೂ ಉತ್ಪಾದಕರ ಹೆಸರು

ಇದು ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಇನ್ನೊಂದು ಪ್ರಕರಣ.

ಮಂಗಳೂರಿನ ಶ್ರೀ ಗೋಪಾಲಕೃಷ್ಣ ಎಂಬುವವರಿಂದ ಬಸ್ರೂರು ವೇದಿಕೆಗೆ ಒಂದು ಪತ್ರ ಬಂದಿತ್ತು. ಅದು ಜಿಲ್ಲಾ ಸಾರ್ವಜನಿಕ ದೂರು ಇತ್ಯರ್ಥ ಅಧಿಕಾರಿಗೆ ಬರೆದ ದೂರಿನ ಪ್ರತಿಯಾಗಿದ್ದು, ಅದರಲ್ಲಿ ಅವರು ತಾನು ರೂ. 325/- ಕೊಟ್ಟು ಖರೀದಿಸಿದ್ದ ಪ್ರಸಿದ್ಧ ಕಂಪೆನಿಯೊಂದರ ರೈನ್ ಕೋಟ್, ಖರೀದಿಸಿದ ಒಂದೇ ದಿನದಲ್ಲಿ ಹೊಲಿಗೆ ಬಿಚ್ಚಿ ಮಳೆ ನೀರು ಒಳಗೆ ಬರುತ್ತಿದ್ದುದಾಗಿ ದೂರಿದ್ದರು.

ಮಾರನೇ ದಿನ ಬೆಳಿಗ್ಗೆಯೇ ಅವರು ಅಂಗಡಿಗೆ ಹೋಗಿ, ಹೊಲಿಗೆ ಬಿಚ್ಚಿರುವುದನ್ನು ಅವರಿಗೆ ತೋರಿಸಿ, ಅದನ್ನು ಬದಲಾಯಿಸಿ ಕೊಡುವಂತೆ ಕೇಳಿದಾಗ ಅಂಗಡಿ ಮಾಲೀಕರು ಅದನ್ನು ಬದಲಾಯಿಸಲು ಅಥವಾ ಹಿಂದೆ ಪಡೆಯಲು ನಿರಾಕರಿಸಿದ್ದರು.

ದುಬಾರಿ ಬೆಲೆಯ ರೈನ್ ಕೋಟ್ ಕೂಡಾ ಒಂದೇ ದಿನದಲ್ಲಿ ಹೊಲಿಗೆ ಬಿಟ್ಟಿರುವುದರಿಂದ, ಗ್ರಾಹಕರಿಗೆ ತಾವುಪಡೆದ ವಸ್ತುವಿನ ಬಗ್ಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಆದುದರಿಂದ ತನಗೆ ಆಗಿರುವ ನಷ್ಟ ಭರಿಸಿ, ಅಂಗಡಿ ಮಾಲಿಕರಿಗೆ ಸೂಕ್ತ ಎಚ್ಚರಿಕೆ ನೀಡುವಂತೆ ಶ್ರೀಯುತರು ಅಧಿಕಾರಿಯನ್ನು ವಿನಂತಿಸಿದ್ದರು. ದೂರಿನ ಯಥಾ ಪ್ರತಿಗಳನ್ನು ಬಸ್ರೂರು ವೇದಿಕೆಗೂ, ಅಂಗಡಿ ಮಾಲೀಕರಿಗೂ ಕಳುಹಿಸಿಕೊಟ್ಟರು. ದೂರಿನ ಪ್ರತಿ ತಲುಪಿದ ಕೂಡಲೇ ಅಂಗಡಿ ಮಾಲೀಕರು ಎಚ್ಚೆತ್ತು, ರೈನ್ ಕೋಟನ್ನು ಹಿಂದಕ್ಕೆ ಪಡೆದು ಗ್ರಾಹಕರಿಗೆ ಅವರ ಹಣ ಹಿಂದಿರುಗಿಸಿದರು!

ಸಂಗ್ರಹ: ಬಳಕೆದಾರರ ಶಿಕ್ಷಣ, 20-7-1999

ಇದು ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಪ್ರಕರಣ.

ರತ್ನಾಕರ ಬೈಂದೂರು ಎನ್ನುವವರ ವಾಸ ಸ್ಥಳ ಗಂಗೊಳ್ಳಿ. ಇವರು ಮಾಜಿ ಸೈನಿಕರು. ಗಂಗೊಳ್ಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಸೇವಿಂಗ್ಸ್ ಖಾತೆಗೆ ಇವರ ಪೆನ್ಶನ್ ಹಣ ಜಮೆಯಾಗುತ್ತಿತ್ತು.

ಭಾರತ ಸರಕಾರವು 98 ಜುಲೈಯಲ್ಲಿ ಹೊರಡಿಸಿದ ಆದೇಶದಂತೆ ತಾ. 1-1-96ರಿಂದ ಪೂರ್ವಾನ್ವಯವಾಗುವಂತೆ ಮಾಜಿ ಸೈನಿಕರ ತುಟ್ಟಿ ಭತ್ತೆಯಲ್ಲಿ ಹೆಚ್ಚಳವುಂಟಾಗಿತ್ತು. ಶ್ರೀ ರತ್ನಾಕರ ಇವರು ಹೆಚ್ಚಳದ ತುಟ್ಟಿ ಭತ್ತೆಯು ತನ್ನ ಖಾತೆಗೆ ಜಮಾ ಮಾಡಲಾಗಿದೆಯೇ ಎಂದು ಪ್ರತಿ ತಿಂಗಳಲ್ಲಿಯೂ ಬ್ಯಾಂಕಿನಲ್ಲಿ ವಿಚಾರಿಸುತ್ತಿದ್ದರು. ಹೀಗೆ ಐದಾರು ತಿಂಗಳ ತನಕ ವಿಚಾರಿಸಿದರೂ ಇವರ ಖಾತೆಗೆ ಹಣ ಜಮೆಯಾಗಿರಲೇ ಇಲ್ಲ.

1999 ರ ಮಾರ್ಚಿ ತಿಂಗಳಲ್ಲಿ ಮತ್ತು ಎಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಅಧಿಕಾರಿಗೆ ಪತ್ರ ಬರೆದರು. ಆದರೂ ಇವರ ಖಾತೆಗೆ ಜಮೆ ಮಾಡಲಿಲ್ಲ. ಆದ್ದರಿಂದ ತಾ.10-6-99ರಲ್ಲಿ ಬ್ಯಾಂಕ್ ಮೆನೇಜರರಿಗೆ ಇನ್ನೊಂದು ಪತ್ರ ಬರೆದು ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿದರು. ಈ ಪತ್ರವು ಮಾತ್ರ ಸರಿಯಾಗಿ ಕೆಲಸ ಮಾಡಿತು. ವೇದಿಕೆಯಿಂದ ಅನುಸರಣಾ ಪತ್ರ ಬರೆಯುವ ಮೊದಲೇ ಶ್ರೀ ರತ್ನಾಕರರು ವೇದಿಕೆಗೆ ಪತ್ರ ಬರೆದು ತನಗೆಬರಬೇಕಾಗಿರುವ ತುಟ್ಟಿ ಭತ್ತೆ ಬಾಕಿ ರೂ. 2,460/- ನಾಲ್ಕೇ ದಿನಗಳಲ್ಲಿ ತನ್ನ ಖಾತೆಗೆ ಜಮಾ ಮಾಡಿದ್ದಾರೆಂದು ತಿಳಿಸಿದ್ದಾರೆ.

ತನಗೆ ಬಹಳಷ್ಟು ಹಿಂದೆಯೇ ಕೊಡಬೇಕಾದ ಹಣವನ್ನು ತಡವಾಗಿ ಕೊಟ್ಟಿದ್ದರಿಂದ ವಿಳಂಬಿತ ಅವಧಿಗೆ ಬಡ್ಡಿ ಕೊಡಬೇಕೆಂದು ಕೇಳಿ ಶಾಖಾ ಮೆನೇಜರರಿಗೆ ಇದೀಗ ಇನ್ನೊಂದು ಪತ್ರ ಬರೆದು ಎರಡನೇ ಹೋರಾಟ ಪ್ರಾರಂಭಿಸಿದ್ದಾರೆ. ಸೈನಿಕನಾಗಿರುವಾಗ ವೈರಿಗಳ ವಿರುದ್ಧ ಹೋರಾಟ, ನಿವೃತ್ತನಾದ ಮೇಲೆ ನಮ್ಮವರ ವಿರುದ್ಧವೇ ಹೋರಾಟ!

ಇದು ಬಳಕೆದಾರರ ವೇದಿಕೆ ಪತ್ರ ಬರೆಯದಿದ್ದರೂ ಪರಿಹಾರವಾದ ಇನ್ನೊಂದು ಪ್ರಕರಣ.

ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶ್ರೀ. ಜಿ.ಎಸ್.ಅಬ್ದುಲ್ ಖಾದರ್ ಇವರು ತಾ. 30-5-98ರಂದು ವಯೋ ನಿವೃತ್ತಿ ಹೊಂದಿದರು. ತನ್ನ ಸಾಮಾನ್ಯ ಭವಿಷ್ಯ ನಿಧಿ (G.P.F.)ಯ ಹಣವನ್ನು ಹಿಂತಿರುಗಿಸಬೇಕೆಂದು ಕೋರಿ ನಿವೃತ್ತಿ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿಯೇ ಕರ್ನಾಟಕ ಸರಕಾರದ ವiಹಾಲೇಖಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹಣ ಬಂದದ್ದು ಮಾತ್ರ ಜೂನ್ ತಿಂಗಳಲ್ಲಿ.

ಹಣವಂತೂ ಬಂತು. ಆದರೆ ಪೂರ್ತಿ ಬರಲಿಲ್ಲ. ಭಾಗಶ: ಹಣ ಮಾತ್ರ ಕಳುಹಿಸಿದ್ದರು. ಮಹಾಲೇಖಪಾಲರ ಕಚೇರಿಯಿಂದಲೇ ಬಂದಿದ್ದ Account Statement ಪ್ರಕಾರ ಇವರಿಗೆ ಸಲ್ಲಬೇಕಾಗಿದ್ದ ಹಣ ರೂ. 1,02,614/-. ಆದರೆ ಕಳುಹಿಸಿದ್ದು
ರೂ. 76,489/- ಮಾತ್ರ. ರೂ. 26,125/- ಇನ್ನೂ ಬರಬೇಕಾಗಿತ್ತು. ಉಳಿದ ಹಣವನ್ನು ಕಳುಹಿಸಿಕೊಡಬೆಕೆಂದು ಇವರು ಮೂರು ಮನವಿ ಪತ್ರಗಳನ್ನು ಕಳುಹಿಸಿಕೊಟ್ಟರು. ಮಹಾಲೇಖಪಾಲರ ಮೇಲೆ ಏನೂ ಪರಿಣಾಮವಾಗಲಿಲ್ಲ. ನಾಲ್ಕನೇ ಮನವಿ ಪತ್ರದಲ್ಲಿ “ಯಥಾ ನಕಲನ್ನು ಸಂಚಾಲಕರು,ಬಳಕೆದಾರರ ವೇದಿಕೆ, ಬಸ್ರೂರು ಇವರಿಗೆ ಕಳುಹಿಸಲಾಗಿದೆ” ಎಂದು ಬರೆದರು.


ಕೂಡಲೇ ಎಚ್ಚರಗೊಂಡ ಮಹಾಲೇಖಪಾಲರು ಹಣ ಕಳುಹಿಸಿ ಕೊಟ್ಟಿದ್ದಾರೆಂದು ಶ್ರೀ ಅಬ್ದುಲ್ ಖಾದರ್‍ರವರು ವೇದಿಕೆಗೆ ಪತ್ರ ಬರೆದು ತಿಳಿಸಿದ್ದಾರೆ. ವೇದಿಕೆ ಒಂದೇ ಒಂದು ಪತ್ರವನ್ನೂ ಬರೆಯಲಿಲ್ಲವೆಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

ಪ್ರಾತಿನಿಧಿಕ ಫೋಟೋ: ನಿವೃತ್ತಿ ನಂತರ ತನ್ನದೇ ಹಣಕ್ಕಾಗಿ ಕಾಯುವ ಪರಿಸ್ಥಿತಿ

ಇದು ಬಳಕೆದಾರರ ವೇದಿಕೆ ಪತ್ರ ಬರೆಯದಿದ್ದರೂ ಪರಿಹಾರವಾದ ಪ್ರಕರಣ.

ಕುಂದಾಪುರ ತಾಲೂಕು ಗೋಪಾಡಿಯ ಶ್ರೀ ಯು.ಕಾಂತರಾಜ್ ಇವರು ಮಿಟಾ ಮ್ಯಾನ್ ಪವರ್ ಕನ್ಸಲ್ಟೆಂಟ್‌ಗೆ ತಾ. 13-6-98ರಂದೇ ಪಾಸ್-ಪೋರ್ಟ್ ಕೊಟ್ಟಿದ್ದರು. ಆ ಬಗ್ಗೆ

ಸ್ವೀಕೃತ ರಶೀದಿಯನ್ನೂ ಪಡೆದಿದ್ದರು. ಅಸೌಖ್ಯದ ಕಾರಣ ಅವರು ವಿದೇಶಕ್ಕೆ ಹೋಗುವ ಆಲೋಚನೆಯನ್ನು ಕೈಬಿಟ್ಟರು. ತನ್ನ ಸ್ನೇಹಿತರೊಬ್ಬರೊಡನೆ ಒಂದು ಅಧಿಕಾರ ಪತ್ರ (Authorisation Letter) ನೀಡಿ, ಸ್ನೇಹಿತರ ಕೈಯಲ್ಲಿ ಪಾಸ್-ಪೋರ್ಟ್ ಕೊಟ್ಟು ಕಳುಹಿಸುವಂತೆ ತಿಳಿಸಿದರು. ಆದರೆ ಮೂರು ನಾಲ್ಕು ಬಾರಿ ಮಂಗಳೂರಿಗೆ ಹೋದರೂ ಸದ್ರಿ ಸಂಸ್ಥೆಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೊಮ್ಮೆ ಅವರನ್ನು ಭೇಟಿ ಮಾಡಿದ ಸ್ನೇಹಿತರೊಡನೆ ಸಂಸ್ಥೆಯವರು ಹೇಳಿದ್ದೇನು ಗೊತ್ತೆ? “ಕಾಂತರಾಜ್ಅವರು ತನ್ನ ಅಸೌಖ್ಯದ ಬಗ್ಗೆ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸಿದರೆ ಅವರ ಪಾಸ್-ಪೋರ್ಟ್ ಹಿಂತಿರುಗಿಸಲಾಗುವುದು” ಎಂದು. ಇದು ಯಾವ ಕಾನೂನು ಎಂದು ಶ್ರೀ ಕಾಂತರಾಜರಿಗೆ ತಿಳಿದುಕೊಳ್ಳಲಾಗದಿದ್ದರೂ ಪಾಸ್-ಪೋರ್ಟ್ ಹಿಂದಕ್ಕೆ ಪಡೆಯಬೇಕಾದುದರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನೂ ಮಾಡಿಸಿ ಕಳುಹಿಸಿ ಕೊಟ್ಟರು.


ಇಷ್ಟೆಲ್ಲ ಮಾಡಿದರೂ ಪಾಸ್-ಪೋರ್ಟ್ ಮಾತ್ರ ಬರಲೇ ಇಲ್ಲ. ನಿರುಪಾಯರಾದ ಶ್ರೀ ಕಾಂತರಾಜರು ತಾ. 11-6-99ರಲ್ಲಿ ಅವರಿಗೊಂದು ಪತ್ರ ಬರೆದು ಕೆಳಗಡೆಯಲ್ಲಿ ವೇದಿಕೆಯ ಹೆಸರನ್ನು ಹಾಕಿದರು. ಈ ಪತ್ರ ತಲುಪಿ ಕೇವಲ ಹತ್ತೇ ದಿನಗಳಲ್ಲಿ ನೋಂದಣಿ ಅಂಚೆಯಲ್ಲಿ ಪಾಸ್-ಪೋರ್ಟ್ ಕಾಂತರಾಜರ ಕೈಸೇರಿತು. ಆ ಸಂಸ್ಥೆಯು ಒಂದೇ ಒಂದು ಪತ್ರ ಬರೆಯಲೂ ವೇದಿಕೆಗೆ ಅವಕಾಶ ನೀಡಲಿಲ್ಲ

ಫೋಟೋ: ಭಾರತೀಯ ಪಾಸ್-ಪೋರ್ಟ್

ಗಿರಿಜಮ್ಮ ಶೆಡ್ತಿ,
D/o. ಸುಬ್ಬಕ್ಕ ಶೆಡ್ತಿ, ರಾಗಿಹಕ್ಲು - 576 224 - ಇವರಿಂದ,

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ,
ಬೈಂದೂರು - ಇವರಿಗೆ

ಮಾನ್ಯರೇ,
ವಿಷಯ: ಬಿಲ್ ಪಾವತಿಸಿರುವ ಹೊರತಾಗಿಯೂ ವಿದ್ಯುತ್ ಸಂಪರ್ಕ ಕಡಿದಿರುವ ಬಗ್ಗೆ.
ಉಲ್ಲೇಖ: ಸ್ಥಾವರ ನಂಬ್ರ ಬಿಬಿವೈ 11557

ಸದರಿ ವಿದ್ಯುತ್ ಸಂಪರ್ಕಕ್ಕೆ ಫೆಬ್ರವರಿ 2002ರ ತನಕದ ಬಿಲ್ ಬಂದಿದ್ದು ಅಲ್ಲಿಯ ವರೆಗಿನ ಬಿಲ್ ಬಾಬ್ತನ್ನು ಪಾವತಿಸಿ ರಶೀದಿಯನ್ನು ಪಡೆದಿರುತ್ತೇನೆ. ನಂತರ ಯಾವುದೇ ಬಿಲ್ ನನಗೆ ಬಂದಿಲ್ಲ. ಆದರೆ 30-9-02 ರಂದು ಯಾವುದೇ
ಮುನ್ಸೂಚನೆಯಿಲ್ಲದೆ ಸದರಿ ವಿದ್ಯುತ್ ಸಂಪರ್ಕವನ್ನು ಕಡಿದಿರುವಿರಿ. ಈ ರೀತಿಯ ನಿಮ್ಮ ‘ಸೇವೆ’ಯಿಂದ ನನಗೆ ಸಹಸ್ರಾರು ರೂಪಾಯಿಗಳ ನಷ್ಟದ ಜತೆ ಮಾನಸಿಕ ಹಿಂಸೆಯುಂಟಾಗಿದೆ.

ನನ್ನ ಮಗ ರವಿ ವಿಚಾರಣೆಗಾಗಿ ನಿಮ್ಮ ಕಚೇರಿಯನ್ನು ಸಂದರ್ಶಿಸಿದಾಗ ನಮ್ಮ ಸ್ಥಾವರ ಸಂಖ್ಯೆಯುಬದಲಾಗಿರುವುದರಿಂದ ಈ ಪ್ರಮಾದ ಉಂಟಾಗಿರುವುದಾಗಿ ನಿಮ್ಮ ಕಚೇರಿಯ ಗುಮಾಸ್ತರು ತಿಳಿಸಿದ್ದಾರೆ. ನಾನು 3087/- ರೂ.ಗಳನ್ನು ಪಾವತಿಸಬೇಕಾಗಿಯೂ ನಮ್ಮ ಸ್ಥಾಪರ ಸಂಖ್ಯೆ 11558 ಎಂದೂ ತಿಳಿಸಿರುತ್ತಾರೆ. ಇಲಾಖೆಯ ಬೇಕಾಬಿಟ್ ಟಿಕಾರ್ಯಾಚರಣೆಗೆ ನಾನು ಹೊಣೆಗಾರಳಲ್ಲ.

ಮುಂದಿನ ವಿಳಂಬವಿಲ್ಲದೆ ಸದ್ರಿ ವಿದ್ಯುತ್ ಸಂಪರ್ಕವನ್ನು ಬೇಶರತ್ ಜೋಡಿಸಿ ಇಲಾಖೆಯ ಗೌರವವನ್ನು ನೀವೇಕೆ ಉಳಿಸಿಕೊಳ್ಳಬಾರದು?
ಇತೀ ನಿಮ್ಮ ವಿಶ್ವಾಸಿ,
ಗಿರಿಜಮ್ಮ ಶೆಡ್ತಿ
ದಿನಾಂಕ: 6-11-2002

ಯಥಾ ಪ್ರತಿ: ಬಳಕೆದಾರರ ವೇದಿಕೆ, ಬಸ್ರೂರು - 576 211.
ವಿವರಣೆ: ವಿದ್ಯುತ್ ಸಂಪರ್ಕ ಪುನರ್ ಜೋಡಣೆಯಾಯಿತು. ಗಿರಿಜಮ್ಮನವರಿಗೆ ‘ಮೆಸ್ಕಾಂ’ನಿಂದಾಗಿರುವ ಅನ್ಯಾಯವನ್ನು ವೇದಿಕೆ ಪ್ರಶ್ನಿಸಿತು. ಅಧಿಕಾರಿ ಉತ್ತರಿಸಲಿಲ್ಲ. ಆದರೆ ಕೊನೆಗೂ ಎಚ್ಚೆತ್ತ ಇಲಾಖೆ ತನ್ನ ಕಡಿದಿರುವ ವಿದ್ಯುತ್ ಸಂಪರ್ಕವನ್ನು ಮತ್ತೆ ಜೋಡಿಸಿರುವುದಾಗಿ ಗಿರಿಜಮ್ಮ ಶೆಡ್ತಿ ಇದೀಗ ವೇದಿಕೆಗೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡದ ನಿಡ್ಲೆಯ ರಾಜ ಆಚಾರಿ ದೇಶ ಸೇವೆ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ ಸೈನ್ಯವನ್ನು ಸೇರಿದರು. ಸುಮಾರು ಹತ್ತು ವರ್ಷಗಳ ಸೇವೆ ಸಲ್ಲಿಸಿದ ನಂತರ ಅವರಿಗೆ ಅನಾರೋಗ್ಯ ಬಾಧಿಸಿತು. ಸೈನ್ಯದಲ್ಲಿ ಸೇವೆ ಸಲ್ಲಿಸಲು ಅನರ್ಹರಾದರು. ಹೀಗಾಗಿ ಅನಿವಾರ್ಯವಾಗಿ ನಿವೃತ್ತರಾಗಿ ಊರಿಗೆ ಮರಳಿದರು.

ನಿವೃತ್ತ ಸೈನಿಕ ರಾಜ ಅಚಾರಿಯವರಿಗೆ ಪಿಂಚಣಿ ಹಾಗೂ ಶಾರೀರಿಕ ನ್ಯೂನತೆಗಾಗಿ ವೈದ್ಯಕೀಯ ಭತ್ತೆ ಬರುತ್ತಿತ್ತು. ಆದರೆ ಈ ಭತ್ತೆ 8-11-96ರ ನಂತರ ಮುಂದುವರಿಸುವ ಬಗ್ಗೆ ಆದೇಶ ಬಾರದಿರುವುದರಿಂದ ರಾಜ ಆಚಾರಿಯವರಿಗೆ ಪಾವತಿ ದೊರೆಯುವುದು ನಿಂತಿತು. ಹೀಗಾಗಿ ತಾ. 31-8-99ರಂದು ಭತ್ತೆ ಪಾವತಿಯನ್ನು ಬ್ಯಾಂಕ್ ನಿಲ್ಲಿಸಿತು. ಅದಲ್ಲದೆ, 1996-99 ಅವಧಿಯ ಪಾವತಿಯನ್ನು ರಾಜ ಆಚಾರಿಯವರಿಂದ ವಸೂಲು ಮಾಡಿತು.

ಈ ಬಗ್ಗೆ ರಾಜ ಆಚಾರಿಯವರು ಕೇಳಿದ ವಿವರಣೆಗೆ ಜಿಲ್ಲಾ ಖಜಾನಾಧಿಕಾರಿಯವರು ಪಾವತಿಗೆ ಮುಂದುವರಿಕೆಯ ಪತ್ರ ಬಾರದಿರುವುದರಿಂದ ಪಾವತಿ ನಿಂತಿದೆ ಎಂದು ವಿವರಣೆ ನೀಡಿದರು. ಅಲಹಾಬಾದಿನಲ್ಲಿರುವ ಸೈನಿಕ ಕೇಂದ್ರ ಕಚೇರಿಗೆ ಈ ಬಗ್ಗೆ ಪತ್ರವನ್ನು ಬರೆದಾಗ ಅವರು ಈಗಾಗಲೇ ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ಆದರೆ ಜಿಲ್ಲಾಖಜಾನಾಧಿಕಾರಿ ಅವರಿಂದ ಈ ಕುರಿತು ಸಮರ್ಪಕ ಉತ್ತರ ದೊರಕದೆ ಇರುವುದರಿಂದ ರಾಜ ಆಚಾರಿಯವರು ನಿಡ್ಲೆ ಬಳಕೆದಾರರ ವೇದಿಕೆಗೆ ತನ್ನ ತೊಂದರೆಗಳನ್ನು ತಿಳಿಸಿ ಸಮಸ್ಯಾ ಪರಿಹಾರಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಬೆಂಬಲ ನೀಡುವಂತೆ ಕೋರಿದರು.

235
ನಿಡ್ಲೆ ವೇದಿಕೆಯು ವಿಳಂಬಿಸದೆ ರಾಜ ಆಚಾರಿಯವರ ಪ್ರಕರಣದ ಬಗ್ಗೆ ತನ್ನ ಮೊದಲ ಪತ್ರವನ್ನು ಅಲಹಾಬಾದಿನ ಸೈನಿಕ ಕೇಂದ್ರ ಕಚೇರಿಗೆ ಬರೆಯಿತು. ವೈದ್ಯಕೀಯ ಭತ್ತೆಯ ಮುಂದುವರಿಕೆಯ ಆದೇಶವನ್ನು ತಕ್ಷಣವೇ ಕಳುಹಿಸುವಂತೆ ವೇದಿಕೆಯು ಕಛೇರಿಯನ್ನು ಆಗ್ರಹಿಸಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1970ರ ದಶಕದಲ್ಲಿ ಶುರುವಾದ “ಬಳಕೆದಾರರ ಆಂದೋಲನ” ಕೆಲವೇ ವರುಷಗಳಲ್ಲಿ ಜಿಲ್ಲೆಯ ಉದ್ದಗಲದಲ್ಲಿ ವ್ಯಾಪಿಸಿತು. ಆಂದೋಲನದ ಮುಂಚೂಣಿಯಲ್ಲಿದ್ದ ಬಸ್ರೂರು “ಬಳಕೆದಾರರ ವೇದಿಕೆ”ಯ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಹಲವು ಬಳಕೆದಾರರ ವೇದಿಕೆಗಳು ರಚನೆಯಾಗಿ ಕಾರ್ಯಾಚರಿಸ ತೊಡಗಿದವು.

ಕ್ರಮೇಣ ಈ ಆಂದೋಲನವು ಕರ್ನಾಟಕದ ಇತರ ಜಿಲ್ಲೆಗಳಿಗೂ ವ್ಯಾಪಿಸಿತು. ಹಲವು ಜಿಲ್ಲೆಗಳಲ್ಲಿ ಬಳಕೆದಾರರ ವೇದಿಕೆಗಳು ಸ್ಥಾಪನೆಯಾಗಲು ಬಸ್ರೂರು ಬಳಕೆದಾರರ ವೇದಿಕೆ ಪ್ರೇರಣೆಯಾಯಿತು. ಇತರ ರಾಜ್ಯಗಳ ಬಳಕೆದಾರರೂ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಈ ವೇದಿಕೆಯನ್ನು ಸಂಪರ್ಕಿಸತೊಡಗಿದರು. ಕೇಂದ್ರ ಸರಕಾರವು ಬಸ್ರೂರು ಬಳಕೆದಾರರ ವೇದಿಕೆ (ರಿ.)ಗೆ ಮಾನ್ಯತೆ ನೀಡಿದಾಗಿನಿಂದ ಈ ವೇದಿಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು.

ಮಂಗಳೂರಿನಲ್ಲಿಯೂ “ಬಳಕೆದಾರರ ವೇದಿಕೆ (ರಿ.)” ಸ್ಥಾಪಿಸಿ, ಅದನ್ನು ನಾಲ್ಕು ದಶಕಗಳ ಅವಧಿ ನಾನು ಸಂಚಾಲಕನಾಗಿ ಮುನ್ನಡೆಸಿದೆ. ಸುಮಾರು ಇಪ್ಪತ್ತು ವರುಷಗಳ ಅವಧಿ ನಮ್ಮ ಬಳಕೆದಾರರ ವೇದಿಕೆ ಪ್ರತೀ ಶನಿವಾರ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಬಳಕೆದಾರರ ಸಮಸ್ಯೆಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಿತ್ತು. ಈ ದೀರ್ಘ ಅವಧಿಯಲ್ಲಿ ಸುಮಾರು 3,000 ಬಳಕೆದಾರರ ಸಮಸ್ಯೆಗಳನ್ನು ನ್ಯಾಯಬದ್ಧವಾಗಿ ಇತ್ಯರ್ಥಪಡಿಸಿದ ಸಾಧನೆ ನಮ್ಮ ವೇದಿಕೆಯದು.

Pages