Consumers' Forum & RTI

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ನಾವು ಪಾಠ ಕಲಿಯಬೇಕಾಗಿದೆ. ಡಿಸೆಂಬರ್ ೨೦೧೧ರಲ್ಲಿ ಮುಂಬೈಯ ಜುಹೂ ಬೀಚಿನಿಂದ ಕೇಂದ್ರ ಮೈದಾನಕ್ಕೆ ಮೆರವಣಿಗೆ ಸಾಗಿದಾಗ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ನಿಂತು, ಹೂವು ಹಾಕಿ, ಬೆಂಬಲ ಸೂಚಿಸಿದರು. ಆದರೆ, ಮೆರವಣಿಗೆ ಮೈದಾನ ತಲಪಿದಾಗ ಅಲ್ಲಿ ಇದ್ದದ್ದು ಕೆಲವೇ ಜನರು. ಯಾಕೆ ಹೀಗಾಯಿತೆಂದು ನಾವು ಅರ್ಥ ಮಾಡಿಕೊಳ್ಳಬೇಕು.
ಈ ದೇಶದ ಮಧ್ಯಮ ವರ್ಗದ ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರತಿಭಟನೆ ಈಗಲೂ ಇದೆ. ಅದನ್ನು ಭ್ರಷ್ಟಾಚಾರ ವಿರೋಧಿ ಸಂಘಟನೆಗಳು ಸಮರ್ಥವಾಗಿ ಬಳಸಿಕೊಳ್ಳಬೇಕು. ಮಧ್ಯಮ ವರ್ಗದವರಿಗೆ ಸಮಯವಿಲ್ಲ. ಪ್ರತಿ ತಿಂಗಳು ಪ್ರತಿಭಟನಾ ಸಭೆಗೆ ಬಂದು ಭಾಗವಹಿಸಲು ಅವರಿಂದ ಸಾಧ್ಯವಿಲ್ಲ. ಆದ್ದರಿಂದ ಅವರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಲು ಹೊಸ ದಾರಿಗಳನ್ನು ಸಂಘಟನೆಗಳು ಒದಗಿಸಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿರಂತರವಾಗಿ ಸಾಗಬೇಕು. ಇದು ದೊಡ್ಡ ಯುದ್ಧ. ಇದಕ್ಕೆ ಯೋಧರನ್ನು ತಯಾರು ಮಾಡಬೇಕಾಗಿದೆ.
ನಮ್ಮ ಯುವಜನರೇ ಆ ಯೋಧರು. ಅವರಲ್ಲಿ ಪರಿವರ್ತನೆ ತರಬೇಕಾಗಿದೆ. ಅವರ ಯೋಚನೆಗಳನ್ನು ಬದಲಾಯಿಸ ಬೇಕಾಗಿದೆ. ಅದು ಸಾಧ್ಯ. ನಾನು ಈಗಾಗಲೇ ೭೪೦ ವಿದ್ಯಾಲಯಗಳಲ್ಲಿ ಯುವಜನರೊಂದಿಗೆ ಮಾತನಾಡಿದ್ದೇನೆ. ನಮ್ಮ ಯುವಜನರ ಬಗ್ಗೆ ನನಗೆ “ಹೋಪ್” ಇದೆ.  
ಅವರಲ್ಲಿ ಮಾನವೀಯತೆ ಬೆಳೆಸುವ ಕೆಲಸ ಆಗಬೇಕಾಗಿದೆ. ನನಗೆ ೨೦೦೮ರ ಒಂದು ಘಟನೆ ಮತ್ತೆಮತ್ತೆ ನೆನಪಾಗುತ್ತದೆ. ಬಾಗಲಕೋಟೆಯಿಂದ ಒಬ್ಬ ವ್ಯಕ್ತಿ ತನ್ನ ಅಂಗವಿಕಲ ಮಗುವಿನೊಂದಿಗೆ ಬಂದಿದ್ದ. ಅವನು “ಈ ಮಗುವನ್ನು ನೀವೇ ನೋಡಿಕೊಳ್ಳಿ” ಎಂದಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಆ ಮಗುವಿಗೆ ವಿಚಿತ್ರ ಸಮಸ್ಯೆ – ಹುಟ್ಟುವಾಗಲೇ ಅದರ ಹೊಟ್ಟೆ ಸರಿಯಿಲ್ಲ. ಅದರಿಂದಾಗಿ ತಿಂದದ್ದು ಜೀರ್ಣವಾದ ನಂತರ, ಮಗುವಿನ ಬಾಯಿಯಿಂದಲೇ ಮಲ ಹೊರಗೆ ಬರುತ್ತಿತ್ತು. ಅದನ್ನು ಆಪರೇಷನ್ ಮಾಡಿ ಸರಿಪಡಿಸಬಹುದು; ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗು ಎಂದು ಅವನಿಗೆ ಸಲಹೆ ಕೊಟ್ಟರು.

ಮಂಗಳೂರಿನ ಪುರಭವನದಲ್ಲಿ ನೆರೆದಿರುವ ನಿಮ್ಮಲ್ಲಿ ಭ್ರಷ್ಟಾಚಾರದ ಬಗ್ಗೆ ಆಕ್ರೋಶವಿದೆ. ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಹಗರಣಗಳು ನಡೆಯುತ್ತಲೇ ಇವೆ. ೧೯೫೦ರ ದಶಕದಲ್ಲಿ ಜೀಪ್ ಹಗರಣ ಸುದ್ದಿಯಾಯಿತು. ಅನಂತರ ಸುದ್ದಿಯಾದದ್ದು ಮುಂದ್ರಾ ಹಗರಣ, ದಾಲ್ಮಿಯಾ ಹಗರಣ ಹಾಗೂ ನಗರ್ವಾಲಾ ಹಗರಣ. ಇವೆಲ್ಲದರ ಮೂಲ ಭ್ರಷ್ಟಾಚಾರ.
ಆದರೆ ಇವೆಲ್ಲ ಕೆಲವು ಲಕ್ಷ ರೂಪಾಯಿಗಳ ಹಗರಣ. ಅದಾದ ನಂತರ ೧೯೭೪ರಲ್ಲಿ ದೊಡ್ಡ ಸುದ್ದಿಯಾದ ಯುದ್ಧ ಸಾಮಗ್ರಿ ಹಗರಣದ ಮೊತ್ತ ೬೪ ಕೋಟಿ ರೂಪಾಯಿ.
ಇದಕ್ಕೆ ಹೋಲಿಸಿದಾಗ, ೨೦೧೦ರಲ್ಲಿ ಜಾಹೀರಾದ ಕಾಮನ್ವೆಲ್ತ್ ಗೇಮ್ಸ್ ಹಗರಣದ ಮೊತ್ತ ೭೦,೦೦೦ ಕೋಟಿ ರೂಪಾಯಿ, ಭಾರೀ ದೊಡ್ಡದು. ಇದಕ್ಕಿಂತಲೂ ದೊಡ್ಡದು ಅದೇ ಹೊತ್ತಿಗೆ ಬಹಿರಂಗವಾದ ೨-ಜಿ ಸ್ಪೆಕ್ಟ್ರಮ್ ಹಗರಣ; ಇದರ ಮೊತ್ತ ೧,೭೬,೦೦೦ ಕೋಟಿ ರೂಪಾಯಿ. ಅನಂತರ ಬೆಳಕಿಗೆ ಬಂದ ೨೦೧೨ರ ಕೋಲ್-ಗೇಟ್ ಹಗರಣದ ಮೊತ್ತ ಮತ್ತೂ ದೊಡ್ಡದು. ಅದು ೧,೮೬,೦೦೦ ಕೋಟಿ ರೂಪಾಯಿ.
ಒಂದು ಕಡೆ ಭ್ರಷ್ಟರು ಕೋಟಿಗಟ್ಟಲೆ ರೂಪಾಯಿ ಕೊಳ್ಳೆ ಹೊಡೆಯುತ್ತಿದ್ದರೆ, ಇನ್ನೊಂದು ಕಡೆ ಕಡುಬಡವರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಫೋಟೋ ನನಗೆ ಕಣ್ಣಿಗೆ ಕಟ್ಟಿದಂತಿದೆ; ಅದರಲ್ಲಿ ಬಡ ಮಹಿಳೆಯೊಬ್ಬಳು ನೀರಿಗಾಗಿ ಕೈಬೆರಳುಗಳಿಂದ ಮಣ್ಣನ್ನು ಬಗೆಯುತ್ತಿದ್ದಳು. ಅವಳು ಅಲ್ಲಿಗೆ ನಾಲ್ಕು ಕಿಲೋಮೀಟರ್ ನಡೆದು ಬಂದಿದ್ದಳು. ಐದು ಜನರಿರುವ ತನ್ನ ಕುಟುಂಬಕ್ಕೆ ಒಂದು ಕೊಡ ನೀರು ಒಯ್ಯಲಿಕ್ಕಾಗಿ ಅವಳು ಅಷ್ಟೆಲ್ಲ ಕಷ್ಟ ಪಡುತ್ತಿದ್ದಳು. ಕುಡಿಯುವ ನೀರಿಗೂ ಗತಿಯಿಲ್ಲದ ಸಾವಿರಾರು ಜನರು ನಮ್ಮ ದೇಶದಲ್ಲಿದ್ದಾರೆ.
ಅದೇ ವರುಷ ಲೆಕ್ಕ ಮಹಾಪರಿಶೋಧಕರ (ಸಿ.ಎ.ಜಿ.) ವರದಿ ಭ್ರಷ್ಟಾಚಾರದ ಕರಾಳ ಮುಖವೊಂದನ್ನು ದಾಖಲಿಸಿತ್ತು. ಈ ದೇಶದ ಬಡಜನರಿಗೆ ಕುಡಿಯುವ ನೀರು ಒದಗಿಸಲಿಕ್ಕಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹಣದಲ್ಲಿ ೫೬,೦೦೦ ಕೋಟಿ ರೂಪಾಯಿಗಳ ಲೆಕ್ಕವೇ ಸಿಗಲಿಲ್ಲ. ಬಡಜನರ ಕುಡಿಯುವ ನೀರಿನ ಕಾಮಗಾರಿಯ ಹಣವನ್ನೂ ನುಂಗಿದವರು ಇರುವ ಪುಣ್ಯವಂತ ದೇಶ ನಮ್ಮದು!

ಅವರ ಹೆಸರು ಜವಹರ್. ವಯಸ್ಸು ೧೯ ವರುಷ. ಬದುಕಿನ ಪರಮ ಗುರಿ ಪರಿಸರ ರಕ್ಷಣೆ. ಅದಕ್ಕಾಗಿ ಅವರು ಮಾಡಿದ ದಿಗ್ಭ್ರಮೆ ಹುಟ್ಟಿಸುವ ಕೆಲಸ: ಕಾಲುವೆಗೆ ಹಾರಿ ಬಲಿದಾನ. ಇದು ನಡೆದದ್ದು ತಮಿಳ್ನಾಡಿನ ತಂಜಾವೂರಿನಲ್ಲಿ, ಸಪ್ಟಂಬರ್ ೨೦೧೬ರಲ್ಲಿ.
ಜವಹರ್ ಬಿಟ್ಟುಹೋಗಿರುವ ಆತ್ಮಹತ್ಯಾ ಹೇಳಿಕೆಯ ವಿಡಿಯೋ ರೆಕಾರ್ಡಿಂಗಿನಲ್ಲಿರುವ ಮಾತು: “ನನ್ನ ಬಲಿದಾನ ಭಾರತದಲ್ಲಿ ಪ್ಲಾಸ್ಟಿಕಿನ ಬಳಕೆ ಬಗ್ಗೆ ಗಂಭೀರ ಚಿಂತನೆಯನ್ನು ಹುಟ್ಟು ಹಾಕುತ್ತದೆಂಬ ಆಶಯದಿಂದ ನನ್ನ ಪ್ರಾಣತ್ಯಾಗ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಶಾಂತಿಯುತ ಪ್ರತಿಭಟನೆಗಳೆಲ್ಲವೂ ವ್ಯರ್ಥವಾದ ಕಾರಣ, ನನಗೆ ಆತ್ಮಹತ್ಯೆಯ ಆಯ್ಕೆ ಅನಿವಾರ್ಯವಾಯಿತು.”
ಪ್ಲಾಸ್ಟಿಕಿನ ಅವಾಂತರ ಇಷ್ಟು ತೀವ್ರವಾಗಿದೆಯೇ? ಒಮ್ಮೆ ನಿಮ್ಮ ಮನೆಯಲ್ಲಿ ಇರುವುದನ್ನೆಲ್ಲ ಗಮನಿಸಿ. ನೀವು ಖರೀದಿ ಮಾಡುವುದನ್ನೆಲ್ಲ ಪರಿಶೀಲಿಸಿ. ಎಲ್ಲದರಲ್ಲಿಯೂ ಪ್ಲಾಸ್ಟಿಕ್ ಆವರಿಸಿಕೊಂಡಿದೆ, ಅಲ್ಲವೇ? ಹೌದು, ಪ್ಲಾಸ್ಟಿಕ್ ನಮ್ಮ ಬದುಕನ್ನೇ ಆವರಿಸಿಕೊಂಡಿದೆ. ಅದು ಅಗ್ಗ, ಅದರ ಬಾಳಿಕೆ ದೀರ್ಘ, ಅದು ಭಾರೀ ಅನುಕೂಲ ಎಂಬ ಸಬೂಬುಗಳನ್ನು ಹೇಳುತ್ತಾ, ಮತ್ತೆಮತ್ತೆ ದಿನದಿನವೂ ಪ್ಲಾಸ್ಟಿಕನ್ನು ಮನೆಯೊಳಗೆ ತರುತ್ತಿದ್ದೇವೆ, ಅಲ್ಲವೇ? ಅದರಿಂದಾಗಿಯೇ, ೫೦ ವರುಷಗಳ ಮುಂಚೆ ಉತ್ಪಾದನೆ ಮಾಡುತ್ತಿದ್ದ ಪರಿಮಾಣಕ್ಕಿಂತ ೨೦ ಪಟ್ಟು ಅಧಿಕ ಪ್ಲಾಸ್ಟಿಕನ್ನು ಈಗ ಉತ್ಪಾದಿಸುತ್ತಿದ್ದೇವೆ! ಮುಂದಿನ ೨೦ ವರುಷಗಳಲ್ಲಿ ಪ್ಲಾಸ್ಟಿಕಿನ ಉತ್ಪಾದನೆ ಇಮ್ಮಡಿಯಾಗಲಿದೆ!

ಅಬ್ಬ, ಎಲ್ಲಿ ಕಂಡರಲ್ಲಿ ಪ್ಲಾಸ್ಟಿಕ್! ಕೆರೆಗಳಲ್ಲಿ, ನದಿಗಳ ಬದಿಗಳಲ್ಲಿ, ಸಮುದ್ರ ತೀರಗಳಲ್ಲಿ, ಉದ್ಯಾನಗಳಲ್ಲಿ, ಕಾಡುಗಳ ಅಂಚಿನಲ್ಲಿ, ಗುಡ್ಡಗಳಲ್ಲಿ, ಪರ್ವತಗಳಲ್ಲಿ, ರಸ್ತೆಗಳ ಇಬ್ಬದಿಗಳಲ್ಲಿ, ರೈಲುಹಳಿಗಳ ಇಕ್ಕಡೆಗಳಲ್ಲಿ, ಸಮುದ್ರಗಳ ತಳಗಳಲ್ಲಿ – ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಲೋಟಗಳು, ಚೀಲಗಳು, ಬಾಟಲಿಗಳು, ಕವರುಗಳು, ಬ್ಯಾಗುಗಳು, ಕನ್-ಟೈನರುಗಳು ತುಂಬಿಕೊಂಡಿವೆ. “ಪ್ರಾಕೃತಿಕ ಪರಿಸರವನ್ನು ಶಾಶ್ವತವಾಗಿ ಮಾಲಿನ್ಯ ಮಾಡುವ” ಪ್ಲಾಸ್ಟಿಕಿನ ಅಪಾಯ ನಿಜವಾಗುತ್ತಿದೆ ಎನ್ನುತ್ತದೆ ಪ್ಲಾಸ್ಟಿಕಿನ ಬಗ್ಗೆ ೨೦೧೭ರಲ್ಲಿ ಪ್ರಕಟವಾಗಿರುವ ಜಾಗತಿಕ ವರದಿ.

ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಚುರುಕುತನ ಮತ್ತು ಹೊಸತನ ತರಲು ಕೇಂದ್ರ ಸರಕಾರ ಮುಂದಾಗಿದೆ. ಭಾರತೀಯರನ್ನು ಗುಲಾಮಿಗಳನ್ನಾಗಿಯೇ ಇರಿಸಿ ದಮನಿಸಲಿಕ್ಕಾಗಿ ಮತ್ತು ಈ ದೇಶದ ಸಂಪತ್ತನ್ನೆಲ್ಲ ದೋಚಲಿಕ್ಕಾಗಿ ಬ್ರಿಟಿಷರು ರೂಪಿಸಿದ್ದ ಆಡಳಿತ ವ್ಯವಸ್ಥೆಯಲ್ಲಿ “ನೇರ ನೇಮಕಾತಿ” ಎಂಬ ಬದಲಾವಣೆಗೆ ರಂಗ ಸಜ್ಜಾಗಿದೆ.

ಅದುವೇ “ಐ.ಎ.ಎಸ್.ಗೆ ಪರ್ಯಾಯ ವ್ಯವಸ್ಥೆ” ಎಂಬ ಚಾರಿತ್ರಿಕ ಬದಲಾವಣೆ. ಇದರಿಂದಾಗಿ ಕೇಂದ್ರ ಸರಕಾರದ ಉನ್ನತ ಹುದ್ದೆ ಪಡೆಯಲು ಐ.ಎ.ಎಸ್. ಅಧಿಕಾರಿಗಳಿಗೆ ಮಾತ್ರ ಸಾಧ್ಯ ಎಂಬ ಪರಿಸ್ಥಿತಿ ಬದಲಾಗಲಿದೆ. ದೇಶದ ಆಡಳಿತ ನಡೆಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ಉನ್ನತಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನು ಸ್ವಾತಂತ್ರ್ಯ ಗಳಿಸಿದ ೭೦ ವರುಷಗಳ ನಂತರವಾದರೂ ಕೇಂದ್ರ ಸರಕಾರ ಬದಲಾಯಿಸಿರುವುದು ಸ್ವಾಗತಾರ್ಹ. ಇನ್ನು ಮುಂದೆ ಐ.ಎ.ಎಸ್. ಅಧಿಕಾರಿಗಳಿಗೆ ಪರ್ಯಾಯವಾಗಿ ಖಾಸಗಿ ರಂಗದ ತಜ್ನರನ್ನು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ೧೦ ಜೂನ್ ೨೦೧೮ರಂದು ಕೇಂದ್ರ ಸರಕಾರ ಘೋಷಿಸಿದೆ.

ಮೊದಲ ಹಂತದಲ್ಲಿ ೧೦ ಇಲಾಖೆಗಳ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ವೃತ್ತಿಪರರಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆ ಇಲಾಖೆಗಳು: ಕಂದಾಯ, ಹಣಕಾಸು ಸೇವೆ, ಆರ್ಥಿಕ ವ್ಯವಹಾರ, ಕೃಷಿ, ಸಹಕಾರ, ರೈತಕಲ್ಯಾಣ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು, ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ, ಹೊಸ ಮತ್ತು ನವೀಕರಿಸಬಲ್ಲ ಇಂಧನ, ನಾಗರಿಕ ವಿಮಾನಯಾನ, ವಾಣಿಜ್ಯ.

ಕೇಂದ್ರ ನಾಗರಿಕ ಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದು, ಐ.ಎ.ಎಸ್. ಅಧಿಕಾರಿ ವರ್ಗಕ್ಕೆ ಆಯ್ಕೆಯಾಗಿ, ಒಂದು ದಶಕಕ್ಕಿಂತ ಅಧಿಕ ಸೇವಾ ಅನುಭವ ಗಳಿಸಿದ ಐ.ಎ.ಎಸ್. ಅಧಿಕಾರಿಗಳನ್ನು ಮಾತ್ರ ಜಂಟಿ-ಕಾರ್ಯದರ್ಶಿ ಹುದ್ದೆಗೆ ನೇಮಿಸುವುದು ಈಗಿನ ಪರಿಪಾಠ. ಆದರೆ ಇನ್ನು ಮುಂದೆ ಖಾಸಗಿ ರಂಗದ ತಜ್ನರಿಗೂ, ಅನುಭವಿಗಳಿಗೂ ಜಂಟಿ-ಕಾರ್ಯದರ್ಶಿ ಹುದ್ದೆಗೇರುವ ಅವಕಾಶ.

ಡೆಲ್ಲಿ ಮಾರುಕಟ್ಟೆಯಲ್ಲಿ ಮಾರುವ ಹಣ್ಣುತರಕಾರಿಗಳಲ್ಲಿ ಅಪಾಯಕಾರಿ ಮಟ್ಟದ ರಾಸಾಯನಿಕ ಪೀಡೆನಾಶಕ (ಪೆಸ್ಟಿಸೈಡ್)ಗಳ ಅಂಶಗಳಿವೆ ಎಂಬುದು ಪತ್ತೆಯಾದದ್ದು ೨೦೧೦ರಲ್ಲಿ. ಅದಾಗಿ ಎರಡು ವರುಷಗಳ ನಂತರ, ಈಗ ಕೇಂದ್ರ ಸರಕಾರವು ಪರಿಣತರ ಸಮಿತಿಯೊಂದನ್ನು ರಚಿಸಿದೆ - ಆಹಾರವಸ್ತುಗಳಲ್ಲಿ ಪೀಡೆನಾಶಕಗಳ ವಿಷಾಂಶ ನಿವಾರಣೆಗೆ ನೀತಿ ನಿರೂಪಣೆಗಾಗಿ.

ಡೆಲ್ಲಿ ಹೈಕೋರ್ಟಿನ ಆದೇಶದ ಅನುಸಾರ ಕೃಷಿ ಮಂತ್ರಾಲಯವು ೭ ಸದಸ್ಯರ ಸಮಿತಿಯೊಂದನ್ನು ಮಾರ್ಚ್ ೨೦೧೨ರಂದು ರಚಿಸಿದೆ. ಕೇಂದ್ರ ಪೀಡೆನಾಶಕ ಪ್ರಯೋಗಾಲಯದ ವೈದ್ಯಕೀಯ ವಿಷಶಾಸ್ತ್ರ ವಿಭಾಗದ ಸರಿತಾ ಭಲ್ಲಾ ಈ ಸಮಿತಿಯ ಮುಖ್ಯಸ್ಥರು. ಆಹಾರವಸ್ತುಗಳಲ್ಲಿ ನಿಗದಿತ ಅವಧಿಗೊಮ್ಮೆ ಪೀಡೆನಾಶಕಗಳ ವಿಷಾಂಶಗಳನ್ನು ಪತ್ತೆಮಾಡುವ ಬಗ್ಗೆ ನೀತಿ (ಪಾಲಿಸಿ) ನಿರೂಪಣೆ ಮಾಡಬೇಕೆಂದು ಸಮಿತಿಗೆ ಸೂಚಿಸಲಾಗಿದೆ. ಈ ನೀತಿಯು ಇಡೀ ದೇಶದಲ್ಲಿ ಜ್ಯಾರಿಯಾಗುತ್ತದೆ ಎಂದು ನಿರೀಕ್ಷೆ.

೨೦೧೦ರಲ್ಲಿ "ಕನ್ಸ್ಯೂಮರ್ ವಾಯ್ಸ್" ಎಂಬ ಡೆಲ್ಲಿಯ ಸರಕಾರೇತರ ಸಂಸ್ಥೆಯು ಪ್ರಕಟಿಸಿದ ವರದಿಯ ಆಧಾರದಿಂದ ಡೆಲ್ಲಿ ಹೈಕೋರ್ಟ್ ಈ ಪ್ರಕರಣವನ್ನು ತಾನಾಗಿಯೇ ಕೈಗೆತ್ತಿಕೊಂಡಿತ್ತು. ಆ ವರದಿಯ ಪ್ರಕಾರ, ಡೆಲ್ಲಿಯ ಮಾರುಕಟ್ಟೆಗಳಿಂದ ಖರೀದಿಸಿದ ೩೫ ಬಗೆಯ ಹಣ್ಣುತರಕಾರಿಗಳಲ್ಲಿ ನಿಷೇಧಿತ ಪೀಡೆನಾಶಕಗಳ ಅಂಶವು ಪ್ರಾಣಾಪಾಯದ ಮಟ್ಟದಲ್ಲಿತ್ತು. ಉದಾಹರಣೆಗೆ, ಹಣ್ಣುತರಕಾರಿಗಳಿಗೆ ರೈತರು ಸಿಂಪಡಿಸುವ ಪೀಡೆನಾಶಕಗಳ ಪ್ರಮಾಣವು, ಯುರೋಪಿನಲ್ಲಿ ಇದಕ್ಕಾಗಿ ನಿಗದಿಪಡಿಸಿದ ಪ್ರಮಾಣಗಳಿಗಿಂತ ೭೫೦ ಪಟ್ಟು ಅಧಿಕ! ಆ ಅಧ್ಯಯನದಲ್ಲಿ ಪತ್ತೆಯಾದ ಒಂದು ನಿಷೇಧಿತ ಪೀಡೆನಾಶಕ ಹೆಪ್ಟಾಕ್ಲೋರ್; ಇದು ಯಕೃತ್ತಿಗೆ ಹಾನಿಮಾಡಬಲ್ಲದು.

ಕನ್ಸೂಮರ್ ವಾಯ್ಸ್ ಸಂಸ್ಥೆಯ ಶಿಶಿರ್ ಘೋಷ್ ಹೀಗೆನ್ನುತ್ತಾರೆ, "ಪೀಡೆನಾಶಕಗಳನ್ನು ರೈತರು ಅಸಡ್ಡೆಯಿಂದ ಬಳಸುವುದನ್ನು ತಡೆಯಲು ಸರಕಾರಕ್ಕೆ ಇಷ್ಟವಿಲ್ಲ. ಇಲ್ಲವಾದರೆ, ಇದಕ್ಕಾಗಿ ನೀತಿ ನಿರೂಪಣೆ ಮಾಡಲಿಕ್ಕಾಗಿ ಸಮಿತಿ ರಚಿಸಲು ಎರಡು ವರುಷ ವಿಳಂಬ ಮಾಡಬೇಕಿತ್ತೇ?"

ಪುಣೆಯಲ್ಲಿ ಕೆಲವು ದಿನಸಿ ಅಂಗಡಿಗಳ ಮಾಲೀಕರು ಕಲಬೆರಕೆಯ ಆಹಾರವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಪಡಿತರ ಚೀಟಿದಾರರು ಈ ಕಾನೂನುಬಾಹಿರ ವ್ಯವಹಾರವನ್ನು ಪ್ರತಿಭಟಿಸಿದರು. ಆದರೆ ಮಾಲೀಕರು ತಮ್ಮ ತಪ್ಪು ತಿದ್ದಿಕೊಳ್ಳಲಿಲ್ಲ.
ಅನಂತರ ಒಂದು ದಿನ ಆ ಅಂಗಡಿಗಳ ಎದುರು ರೆಡ್ ಬ್ರಿಗೇಡ್ (ಕೆಂಪು ಸೈನ್ಯ) ಸದಸ್ಯರು ಜಮಾಯಿಸಿದರು. ಕೆಂಪು ಸೀರೆಗಳನ್ನುಟ್ಟ ಸುಮಾರು ನೂರು ಮಹಿಳೆಯರನ್ನು ಕಂಡು ಅಂಗಡಿ ಮಾಲೀಕರು ಅಧೀರರಾದರು. ಅವರ ಪ್ರತಿಭಟನೆ ಕಂಡು ಬೆಚ್ಚಿಬಿದ್ದರು. ಕೊನೆಗೆ ಆ ಮಾಲೀಕರು ಮಾತುಕತೆಗೆ ತಯಾರಾದರು. ಇನ್ನು ಮುಂದೆ ಕಲಬೆರಕೆ ಮಾಡಬಾರದೆಂದು ರೆಡ್ ಬ್ರಿಗೇಡ್ ಮುಂದಾಳುಗಳು ತಾಕೀತು ಮಾಡಿದರು. ಒಂದು ವೇಳೆ ಕಲಬೆರಕೆ ಮಾಡಿದರೆ, ಪುನಃ ರೆಡ್ ಬ್ರಿಗೇಡಿನ ಪ್ರತಿಭಟನೆ ಎದುರಿಸ ಬೇಕಾಗುತ್ತದೆಂದು ಎಚ್ಚರಿಸಿದರು.
ಪುಣೆಯ ರೆಡ್ ಬ್ರಿಗೇಡಿನ ಮುಖ್ಯಸ್ಥೆ ಅಪರ್ಣಾ ದರಾಡೆಗೆ ಈ ಅನುಭವ ಹೊಸತಲ್ಲ. ಔರಂಗಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಲ್ಯ ಕಳೆದ ಅಪರ್ಣಾ ಎಂ.ಎ. (ಚರಿತ್ರೆ) ಸ್ನಾತಕೋತ್ತರ ಪದವೀಧರೆ. ೩೫ ವರುಷ ವಯಸ್ಸಿನ ಅಪರ್ಣಾ ಎರಡು ಮಕ್ಕಳ ತಾಯಿ. ಇವರ ಪತಿ ಕಮ್ಯುನಿಸ್ಟ್ ಧೋರಣೆಗಳ ಬೆಂಬಲಿಗರು. ಇದರಿಂದ ಪ್ರಭಾವಿತರಾದ ಅಪರ್ಣಾರಿಗೂ ಸಮಾಜಕ್ಕಾಗಿ ತಾನೂ ಏನಾದರೂ ಮಾಡಬೇಕೆನಿಸಿತು. ಮಹಿಳೆಯರ ಮೇಲೆ ಎಲ್ಲ ರೀತಿಯ ದೌರ್ಜನ್ಯಗಳು ನಡೆಯುತ್ತಿದ್ದು, ಅವರನ್ನು ಬೆಂಬಲಿಸಲು ಯಾರೂ ಇಲ್ಲವೆಂಬುದನ್ನು ಅಪರ್ಣಾ ಗಮನಿಸಿದರು. “ಏಕಾಂಗಿ ಮಹಿಳೆ ತಾನೇ ಮುಂದಾಗಿ ಅನ್ಯಾಯಗಳನ್ನು ಪ್ರತಿಭಟಿಸುವುದು ಕಷ್ಟ. ಆದ್ದರಿಂದ ನಾವು ಸಂಘಟಿತರಾಗಿ ಹೋರಾಡಲು ನಿರ್ಧರಿಸಿದೆವು” ಎನ್ನುತ್ತಾರೆ ಅಪರ್ಣಾ.

ಭಾರತದಲ್ಲಿ ನಕಲು ಮಾಡುವುದು ಲಾಭಾದಾಯಕ. ಶಿಕ್ಷಣರಂಗದ ಪರಿಣತರು, ವೈಜ್ನಾನಿಕ ಸಂಸ್ಥೆಗಳ ತಜ್ನರು, ಪ್ರಕಾಶನ ಸಂಸ್ಥೆಯವರು, ಕಾನೂನು ತಜ್ನರು – ಇವರ್ಯಾರೂ ನಕಲು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಇತ್ತೀಚೆಗೆ ಕೆಲವು ವಿಶ್ವವಿದ್ಯಾಲಯಗಳ ಉಪಕುಲಪತಿಗಳೂ ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ ಎಂಬುದೇ ಸುದ್ದಿ.
ಪಾಂಡಿಚೇರಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಚಂದ್ರಾ ಕೃಷ್ಣಮೂರ್ತಿಯವರು ಹಗರಣ ಗಮನಿಸಿ. ಇವರ ಪುಸ್ತಕವೊಂದರ ಬಹುಪಾಲು ನಕಲು ಹೊಡೆದದ್ದು ಎಂಬುದು ಆಪಾದನೆ. ಇದರಿಂದಾಗಿ ಕೇಂದ್ರ ಮಾನವ ಸಂಪನ್ಮೂಲ ಮಂತ್ರಾಲಯದೊಂದಿಗೆ ಬಿಕ್ಕಟ್ಟು. ಅಂತಿಮವಾಗಿ ಮೇ ೨೦೧೬ರಲ್ಲಿ ಇವರಿಂದ ಹುದ್ದೆಗೆ ರಾಜೀನಾಮೆ. ಈ ಹಗರಣ ಅಲ್ಲಿಗೇ ಮುಗಿಯಲಿಲ್ಲ. ಕೇಂದ್ರ ಮಂತ್ರಾಲಯವು ಈ ಹಗರಣದ ಬೆಮ್ಬತ್ತಿ, ರಾಷ್ಟ್ರಪತಿಗಳ ಒಪ್ಪಿಗೆ ಪಡೆದು, ಆಕೆಯನ್ನು  ಹುದ್ದೆಯಿಂದ ವಜಾ ಮಾಡಿತು. ಇದು ಅಚ್ಚರಿ. ಯಾಕೆಂದರೆ ಇಂತಹದೇ ಬೇರೆ ಹಗರಣಗಳಲ್ಲಿ ಮಂತ್ರಾಲಯವು ಈ ರೀತಿಯ ಉತ್ಸಾಹ ತೋರಿಲ್ಲ.
ಇಂತಹ ಇನ್ನೊಂದು ಹಗರಣ ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾರಾವ್ ಪೊಡೈಲ್ ಅವರಿಗೆ ಸಂಬಂಧಿಸಿದ್ದು. (ರೋಹಿತ್ ವೇಮುಲನ ಆತ್ಮಹತ್ಯೆ ಬಳಿಕ ವಿದ್ಯಾರ್ಥಿ ಪ್ರತಿಭಟನೆ ನಿಯಂತ್ರಿಸಲು ಪೊಲೀಸರನ್ನು ಇವರು ಕರೆಸಿದ್ದು ದೊಡ್ಡ ಸುದ್ದಿಯಾಯಿತು.) ಆದರೆ ಮತ್ತೆಮತ್ತೆ ಇವರು ನಕಲು ಮಾಡಿದ್ದಾರೆಂಬ ಆಪಾದನೆ ಸುದ್ದಿಯಾಗಿಲ್ಲ. ಇತರ ಪ್ರಾಧ್ಯಾಪಕರೊಂದಿಗೆ ಇವರು ಪ್ರಕಟಿಸಿದ ಮೂರು ಸಂಶೋಧನಾ ಪ್ರಬಂಧಗಳಲ್ಲಿ ಬೇರೆಯವರ ಪ್ರಬಂಧಗಳಿಂದ ಪ್ಯಾರಾಪ್ಯಾರಾಗಳನ್ನೇ ನಕಲು ಮಾಡಿದ್ದರು ಎಂಬುದು ಆಪಾದನೆ. “ವೈರ್” ಎಂಬ ಪತ್ರಿಕೆಯ ಪ್ರತಿನಿಧಿ ಈ ಬಗ್ಗೆ ಅಪ್ಪಾರಾಯರನ್ನು ಮಾತನಾಡಿಸಿದಾಗ, ತಾನು ಆ ಪ್ರಬಂಧಗಳನ್ನು ಹಿಂತೆಗೆಯುವುದಾಗಿ ಹೇಳಿದರು. ಅದೇ ಉಸಿರಿನಲ್ಲಿ, ಈ ವಿಚಾರದಲ್ಲಿ ಏನು ಮಾಡಬೇಕೆಂದು ಆ ಪ್ರತಿನಿಧಿಯ ಸಲಹೆ ಕೇಳಿದರು! “ಇಂತಹ ಪ್ರಕರಣಗಳಲ್ಲಿ ಇತರ ಲೇಖಕರು ಏನು ಮಾಡಿದ್ದಾರೆಂದು ದಯವಿಟ್ಟು ಸಲಹೆ ನೀಡಿ. ನಾವೂ ಅದನ್ನೇ ಅನುಸರಿಸುತ್ತೇವೆ….” ಎಂಬುದು ಅಪ್ಪಾರಾಯರ ವಿನಂತಿ.

ವರ್ಷಾನುಗಟ್ಟಲೆ ಪತ್ರಿಕೆಗಳಲ್ಲಿ, ರೇಡಿಯೋದಲ್ಲಿ, ಟಿವಿಯಲ್ಲಿ ರಾಜಾರೋಷವಾಗಿ ಪ್ರಕಟವಾಗುತ್ತಿದ್ದ ಕೆಲವು ಔಷಧಿಗಳ ಜಾಹೀರಾತುಗಳನ್ನು ನೆನಪು ಮಾಡಿಕೊಳ್ಳಿ: (i) ವಿಕ್ಸ್-ಆಕ್ಷನ್ ೫೦೦-ಎಕ್ಸ್ ಟ್ರಾ, ಕ್ರೋಸಿನ್ –ಕೋಲ್ಡ್ ಆಂಡ್ ಫ್ಲೂ - ಇವು ಶೀತ ಮತ್ತು ಫ್ಲೂ (ಜ್ವರ) ಗುಣ ಪಡಿಸಲು ಪರಿಣಾಮಕಾರಿ (ii) ಸಾರಿಡಾನ್ – ತಲೆನೋವಿಗೆ ಪರಿಹಾರ (iii) ಗ್ಲೈಕೊಡಿನ್, ಕೊರೆಕ್ಸ್, ಅಲೆಕ್ಸ್, ಬೆನಡ್ರಿಲ್, ಫೆನ್ಸೆಡೈಲ್ – ಈ ಕಾಫ್ ಸಿರಪುಗಳು ಕೆಮ್ಮಿಗೆ ರಾಮಬಾಣ.
ಇನ್ನು ಈ ಜಾಹೀರಾತುಗಳೆಲ್ಲ ಬಂದ್! ಯಾಕೆಂದರೆ, ಕೇಂದ್ರ ಸರಕಾರದ ಆರೋಗ್ಯ ಮಂತ್ರಾಲಯ ಇವನ್ನೆಲ್ಲ ನಿಷೇಧಿಸಿದೆ. ಇಂತಹ ೩೪೪ ಫಿಕ್ಸೆಡ್ ಡೋಸ್ ಕಾಂಬಿನೇಷನ್ (ಎಫ್ ಡಿ ಸಿ) ಔಷಧಿಗಳ ಮೇಲೆ ನಿಷೇಧ ಹೇರಲಾಗಿದೆ
ಎಫ್ ಡಿ ಸಿ ಎಂದರೆ ಎರಡು ಅಥವಾ ಜಾಸ್ತಿ ಔಷಧಿಗಳು ನಿಶ್ಚಿತ ಅನುಪಾತದಲ್ಲಿರುವ ಸಂಯುಕ್ತ ಔಷಧಿ. ಉದಾಹರಣೆಗೆ ಪಿರಾಮಲ್ ಹೆಲ್ತ್ ಕೇರ್ ಕಂಪೆನಿಯ “ಸಾರಿಡಾನ್” ಎಂಬುದು ಪಾರಸಿಟಮೋಲ್, ಕೆಫೇನ್ ಮತ್ತು ಪ್ರೊಪಿಫಿನಜೋನ್ – ಈ ಮೂರು ಸೇರಿರುವ ಸಂಯುಕ್ತ ಔಷಧಿ. ಇಂತಹ ಎಫ್ ಡಿ ಸಿಗಳನ್ನು ತಮ್ಮ ಅನಾರೋಗ್ಯ ಗುಣಪಡಿಸಿಕೊಳ್ಳಲಿಕ್ಕಾಗಿ ಸೇವಿಸುತ್ತಿದ್ದವರು ಲಕ್ಷಗಟ್ಟಲೆ ಜನರು. ಅವರೆಲ್ಲರೂ ಈಗ ಬೆಚ್ಚಿ ಬಿದ್ದಿದ್ದಾರೆ.
ಹಾಗೆಯೇ ಕಾಫ್ ಸಿರಪುಗಳನ್ನು ನುಂಗುತ್ತಿದ್ದವರು ಸಾವಿರಾರು ಜನರು. ಅವರೆಲ್ಲರಿಗೂ ಕಾಫ್ ಸಿರಪ್ ಕುಡಿದ ನಂತರ ಅಮಲು ಅನಿಸುತ್ತಿತ್ತು. ಆದರೂ, ಗಂಟಲಿಗೆ ಸೋಂಕು ತಗಲಿದಾಗೆಲ್ಲ ಕಾಫ್ ಸಿರಪ್ ಸೇವಿಸುತ್ತಿದ್ದರು. ಈಗ ಇಂತವರು ಕೇಳುವ ಪ್ರಶ್ನೆ, “ಈ ಔಷಧಿಗಳು ಸುರಕ್ಷಿತವಲ್ಲ ಎಂದಾದರೆ ಅವನ್ನು ಮಾರಾಟ ಮಾಡಲು ಸರಕಾರ ಪರವಾನಗಿ ಕೊಟ್ಟದ್ದು ಯಾಕೆ?”
ಕೇಂದ್ರ ಸರಕಾರದ ಆರೋಗ್ಯ ಮಂತ್ರಾಲಯವು ಔಷಧಿಗಳಿಗೆ ಪರವಾನಗಿ ಕೊಡುವ ಪ್ರಕ್ರಿಯೆ, ಹಲವು ಹಂತಗಳ ಕ್ಲಿನಿಕಲ್ ಟ್ರಯಲು (ಪರೀಕ್ಷೆ)ಗಳಿರುವ ಕಠಿಣ ಪ್ರಕ್ರಿಯೆ. ಆದರೆ, ಕೆಲವು ಔಷಧಿ ಉತ್ಪಾದಕರು, ರಾಜ್ಯ ಸರಕಾರದ ಔಷಧಿ ನಿಯಂತ್ರಣ ಅಧಿಕಾರಿಗಳಿಂದ ಪರವಾನಗಿ ಪಡೆಯುವ ಮೂಲಕ, ಆ ಕಠಿಣ ಪ್ರಕ್ರಿಯೆಗಳಿಂದ ನುಣುಚಿಕೊಳ್ಳುತ್ತಿದ್ದಾರೆ.

ಹೆಸರುವಾಸಿ ಐಟಿ ಕಂಪೆನಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಂಪೆನಿ “ಹೆಡ್ ಹಂಟರ್ಸ್”ನ ಮುಖ್ಯಸ್ಥರಾದ ಕ್ರಿಸ್ ಲಕ್ಷ್ಮೀಕಾಂತರು ಪ್ರಸಂಗವೊಂದನ್ನು ತಿಳಿಸಿದ್ದಾರೆ. ಅಭ್ಯರ್ಥಿಯೊಬ್ಬನು ತನ್ನ “ವ್ಯಕ್ತಿ ಮಾಹಿತಿ”ಯಲ್ಲಿ ಪ್ರಸಿದ್ಧ ಇನ್ಫೋಸಿಸ್ ಕಂಪೆನಿಯಲ್ಲಿ ಕೆಲಸ ಮಾಡಿದ ಅನುಭವ ಇದೆಯೆಂದೂ, ತಾನು ಆ ಕಂಪೆನಿಯ ಯುಎಸ್ಎ ದೇಶದ ಕೆಲಸಕಾರ್ಯಗಳ ಮೇಲ್ವಿಚಾರಕನಾಗಿ ಇದ್ದುದಾಗಿಯೂ ಬರೆದುಕೊಂಡಿದ್ದ. ಈ ಬಗ್ಗೆ ಅವರು ತನಿಖೆ ಮಾಡಿದಾಗ ಸತ್ಯಸಂಗತಿ ಹೊರಬಿತ್ತು. ಆ ಅಭ್ಯರ್ಥಿ ಇನ್ಫೋಸಿಸ್ ಕಂಪೆನಿಯಲ್ಲಿ ಕೆಲಸ ಮಾಡಿರಲೇ ಇಲ್ಲ!
ಇದೇನೂ ಹೊಸತಲ್ಲ. ಬಹುಪಾಲು ಅಭ್ಯರ್ಥಿಗಳು ತಮ್ಮ “ವ್ಯಕ್ತಿ ಮಾಹಿತಿ”ಯಲ್ಲಿ ಶೇಕಡಾ ೧೫ರಷ್ಟು ಸುಳ್ಳು ಸಂಗತಿಗಳನ್ನು ಬರೆಯುತ್ತಾರೆ. ಅಂತಹ ಸುಳ್ಳು ಮಾಹಿತಿಯುಳ್ಳ ಉದ್ಯೋಗ ಅರ್ಜಿ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಉದ್ಯೋಗಾಕಾಂಕ್ಷಿಗಳ ಹಿನ್ನೆಲೆ ಪರಿಶೀಲನಾ ಕಂಪೆನಿ “ಫಸ್ಟ್ ಅಡ್ವಾಂಟೇಜ್” ನಡೆಸಿದ ಅಧ್ಯಯನದ ಪ್ರಕಾರ, ಅಂತಹ ಅರ್ಜಿಗಳ ಪ್ರಮಾಣ ೨೦೧೪ರಲ್ಲಿ ಶೇ.೧೦.೪ರಿಂದ ೨೦೧೫ರಲ್ಲಿ ಶೇ.೧೧.೬ಕ್ಕೆ ಏರಿದೆ. ಸಾಮಾನ್ಯವಾಗಿ ಉದ್ಯೋಗಾಕಾಂಕ್ಷಿಗಳು ತಮ್ಮ ಅರ್ಜಿಯಲ್ಲಿ ಬರೆಯುವ ಸುಳ್ಳು ಮಾಹಿತಿ: ಅಂತಿಮ ವೇತನವನ್ನು ಇದ್ದದ್ದಕ್ಕಿಂತ ಹೆಚ್ಚಾಗಿ ನಮೂದಿಸುವುದು; ಮುಂಚಿನ ಉದ್ಯೋಗದಾತ ಕಂಪೆನಿಯಲ್ಲಿ ಕೆಲಸ ಮಾಡಿದ ಅವಧಿಯನ್ನು ಇದ್ದದ್ದಕ್ಕಿಂತ ಅಧಿಕವೆಂದು ಬರೆಯುವುದು.

ಹತ್ತು ವರುಷಗಳಿಂದೀಚೆಗೆ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದೆಯೆಂದು ಹಲವರು ಮಾತಾಡುತ್ತಾರೆ. ಅಜ್ಜಿಯರಂತೂ ತಮ್ಮ ಕಾಲದಲ್ಲಿ ತಾಯಂದಿರು ಹತ್ತಾರು ಹೆತ್ತರೂ ಎಲ್ಲವೂ ಸಹಜ ಹೆರಿಗೆ; ಈಗಿನಂತೆ ಸಿಸೇರಿಯನ್ ಹೆರಿಗೆ ಆಗ ಇರಲಿಲ್ಲವೆಂದು ಹೇಳುತ್ತಲೇ ಇರುತ್ತಾರೆ.
ಅಜ್ಜಿಯರ ಮಾತನ್ನು ಅದೇನೋ ಭ್ರಮೆ ಎಂದು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಢೆಲ್ಲಿಯಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಸರಕಾರಿ ಆಸ್ಪತ್ರೆಗಳಲ್ಲಿ ಶೇಕಡಾ ೨೩ಕ್ಕಿಂತ ಜಾಸ್ತಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ ೫೪. ಇದು ಸೀತಾರಾಮ್ ಭಾರ್ತಿಯಾ ವಿಜ್ನಾನ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಯನ ವರದಿ ಬಹಿರಂಗ ಪಡಿಸಿರುವ ಸತ್ಯಾಂಶ. ಲಂಡನ್ ಸ್ಕೂಲ್ ಆಫ್ ಇಕೊನೊಮಿಕ್ಸಿನ ಸಾಮಾಜಿಕ ಧೋರಣೆ ವಿಭಾಗದ ಟಿಜಿಯಾನಾ ಲಿಯೋನ್ ನಡೆಸಿದ ಅಧ್ಯಯನವೂ ಇದೇ ಆತಂಕಕಾರಿ ವಿಷಯವನ್ನು ಬೆರಳೆತ್ತಿ ತೋರಿಸಿದೆ. ಜಾಗತಿಕ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಓ.) ಸಿಸೇರಿಯನ್ ಹೆರಿಗೆಗಳ ಪ್ರಮಾಣ ಶೇ.೧೦ರಿಂದ ೧೫ ಇರಬಹುದೆಂದು ಸೂಚಿಸಿದೆ; ಆದರೆ ಭಾರತದ ಕೆಲವು ಪ್ರದೇಶಗಳಲ್ಲಿ ಇದು ಶೇ.೩೦ಕ್ಕಿಂತ ಅಧಿಕವಾಗಿದೆ. ಚೆನ್ನೈಯ ರಾಷ್ಟ್ರೀಯ ಎಪಿಡಿಮಿಯೊಲಜಿ ಸಂಸ್ಥೆಯು, ಇದು ಕೇರಳದಲ್ಲಿ ಶೇ.೪೧ ಮತ್ತು ತಮಿಳ್ನಾಡಿನಲ್ಲಿ ಶೇ.೫೮ ಎಂದು ತಿಳಿಸಿದೆ. ಭಾರತದಲ್ಲಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿರುವುದಂತೂ ಖಂಡಿತ.
ಗರ್ಭಿಣಿಯರ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ಸಿಸೇರಿಯನ್ ಹೆರಿಗೆ ಅಗತ್ಯ. ಈ ಬಗ್ಗೆ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಎಸೋಸಿಯೇಷನ್ ಎಂಬ ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯೊಂದು ಹೀಗೆನ್ನುತ್ತದೆ: ಒಂದು ಸಮುದಾಯದಲ್ಲಿ ಸಿಸೇರಿಯನ್ ಹೆರಿಗೆಯ ಪ್ರಮಾಣ ಶೇ.೧೯ ತನಕ ಏರಿಕೆಯಾಗಬಹುದು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಸೇರಿಯನ್ ಹೆರಿಗೆ ಮಾಡಲಾಗುತ್ತಿದ್ದರೆ, ಅದು ಗರ್ಭಿಣಿಯರ ಅಥವಾ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡಲಿಕ್ಕಾಗಿ ಅಲ್ಲ.

Pages