Consumers' Forum & RTI
ಇದು ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಇನ್ನೊಂದು ಪ್ರಕರಣ.
ಮಂಗಳೂರಿನ ಶ್ರೀ ಗೋಪಾಲಕೃಷ್ಣ ಎಂಬುವವರಿಂದ ಬಸ್ರೂರು ವೇದಿಕೆಗೆ ಒಂದು ಪತ್ರ ಬಂದಿತ್ತು. ಅದು ಜಿಲ್ಲಾ ಸಾರ್ವಜನಿಕ ದೂರು ಇತ್ಯರ್ಥ ಅಧಿಕಾರಿಗೆ ಬರೆದ ದೂರಿನ ಪ್ರತಿಯಾಗಿದ್ದು, ಅದರಲ್ಲಿ ಅವರು ತಾನು ರೂ. 325/- ಕೊಟ್ಟು ಖರೀದಿಸಿದ್ದ ಪ್ರಸಿದ್ಧ ಕಂಪೆನಿಯೊಂದರ ರೈನ್ ಕೋಟ್, ಖರೀದಿಸಿದ ಒಂದೇ ದಿನದಲ್ಲಿ ಹೊಲಿಗೆ ಬಿಚ್ಚಿ ಮಳೆ ನೀರು ಒಳಗೆ ಬರುತ್ತಿದ್ದುದಾಗಿ ದೂರಿದ್ದರು.
ಮಾರನೇ ದಿನ ಬೆಳಿಗ್ಗೆಯೇ ಅವರು ಅಂಗಡಿಗೆ ಹೋಗಿ, ಹೊಲಿಗೆ ಬಿಚ್ಚಿರುವುದನ್ನು ಅವರಿಗೆ ತೋರಿಸಿ, ಅದನ್ನು ಬದಲಾಯಿಸಿ ಕೊಡುವಂತೆ ಕೇಳಿದಾಗ ಅಂಗಡಿ ಮಾಲೀಕರು ಅದನ್ನು ಬದಲಾಯಿಸಲು ಅಥವಾ ಹಿಂದೆ ಪಡೆಯಲು ನಿರಾಕರಿಸಿದ್ದರು.
ದುಬಾರಿ ಬೆಲೆಯ ರೈನ್ ಕೋಟ್ ಕೂಡಾ ಒಂದೇ ದಿನದಲ್ಲಿ ಹೊಲಿಗೆ ಬಿಟ್ಟಿರುವುದರಿಂದ, ಗ್ರಾಹಕರಿಗೆ ತಾವುಪಡೆದ ವಸ್ತುವಿನ ಬಗ್ಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಆದುದರಿಂದ ತನಗೆ ಆಗಿರುವ ನಷ್ಟ ಭರಿಸಿ, ಅಂಗಡಿ ಮಾಲಿಕರಿಗೆ ಸೂಕ್ತ ಎಚ್ಚರಿಕೆ ನೀಡುವಂತೆ ಶ್ರೀಯುತರು ಅಧಿಕಾರಿಯನ್ನು ವಿನಂತಿಸಿದ್ದರು. ದೂರಿನ ಯಥಾ ಪ್ರತಿಗಳನ್ನು ಬಸ್ರೂರು ವೇದಿಕೆಗೂ, ಅಂಗಡಿ ಮಾಲೀಕರಿಗೂ ಕಳುಹಿಸಿಕೊಟ್ಟರು. ದೂರಿನ ಪ್ರತಿ ತಲುಪಿದ ಕೂಡಲೇ ಅಂಗಡಿ ಮಾಲೀಕರು ಎಚ್ಚೆತ್ತು, ರೈನ್ ಕೋಟನ್ನು ಹಿಂದಕ್ಕೆ ಪಡೆದು ಗ್ರಾಹಕರಿಗೆ ಅವರ ಹಣ ಹಿಂದಿರುಗಿಸಿದರು!
ಸಂಗ್ರಹ: ಬಳಕೆದಾರರ ಶಿಕ್ಷಣ, 20-7-1999
ಇದು ವೇದಿಕೆಯ ಹೆಸರು ನೋಡಿಯೇ ಇತ್ಯರ್ಥಗೊಂಡ ಪ್ರಕರಣ.
ರತ್ನಾಕರ ಬೈಂದೂರು ಎನ್ನುವವರ ವಾಸ ಸ್ಥಳ ಗಂಗೊಳ್ಳಿ. ಇವರು ಮಾಜಿ ಸೈನಿಕರು. ಗಂಗೊಳ್ಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಸೇವಿಂಗ್ಸ್ ಖಾತೆಗೆ ಇವರ ಪೆನ್ಶನ್ ಹಣ ಜಮೆಯಾಗುತ್ತಿತ್ತು.
ಭಾರತ ಸರಕಾರವು 98 ಜುಲೈಯಲ್ಲಿ ಹೊರಡಿಸಿದ ಆದೇಶದಂತೆ ತಾ. 1-1-96ರಿಂದ ಪೂರ್ವಾನ್ವಯವಾಗುವಂತೆ ಮಾಜಿ ಸೈನಿಕರ ತುಟ್ಟಿ ಭತ್ತೆಯಲ್ಲಿ ಹೆಚ್ಚಳವುಂಟಾಗಿತ್ತು. ಶ್ರೀ ರತ್ನಾಕರ ಇವರು ಹೆಚ್ಚಳದ ತುಟ್ಟಿ ಭತ್ತೆಯು ತನ್ನ ಖಾತೆಗೆ ಜಮಾ ಮಾಡಲಾಗಿದೆಯೇ ಎಂದು ಪ್ರತಿ ತಿಂಗಳಲ್ಲಿಯೂ ಬ್ಯಾಂಕಿನಲ್ಲಿ ವಿಚಾರಿಸುತ್ತಿದ್ದರು. ಹೀಗೆ ಐದಾರು ತಿಂಗಳ ತನಕ ವಿಚಾರಿಸಿದರೂ ಇವರ ಖಾತೆಗೆ ಹಣ ಜಮೆಯಾಗಿರಲೇ ಇಲ್ಲ.
1999 ರ ಮಾರ್ಚಿ ತಿಂಗಳಲ್ಲಿ ಮತ್ತು ಎಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಅಧಿಕಾರಿಗೆ ಪತ್ರ ಬರೆದರು. ಆದರೂ ಇವರ ಖಾತೆಗೆ ಜಮೆ ಮಾಡಲಿಲ್ಲ. ಆದ್ದರಿಂದ ತಾ.10-6-99ರಲ್ಲಿ ಬ್ಯಾಂಕ್ ಮೆನೇಜರರಿಗೆ ಇನ್ನೊಂದು ಪತ್ರ ಬರೆದು ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿದರು. ಈ ಪತ್ರವು ಮಾತ್ರ ಸರಿಯಾಗಿ ಕೆಲಸ ಮಾಡಿತು. ವೇದಿಕೆಯಿಂದ ಅನುಸರಣಾ ಪತ್ರ ಬರೆಯುವ ಮೊದಲೇ ಶ್ರೀ ರತ್ನಾಕರರು ವೇದಿಕೆಗೆ ಪತ್ರ ಬರೆದು ತನಗೆಬರಬೇಕಾಗಿರುವ ತುಟ್ಟಿ ಭತ್ತೆ ಬಾಕಿ ರೂ. 2,460/- ನಾಲ್ಕೇ ದಿನಗಳಲ್ಲಿ ತನ್ನ ಖಾತೆಗೆ ಜಮಾ ಮಾಡಿದ್ದಾರೆಂದು ತಿಳಿಸಿದ್ದಾರೆ.
ತನಗೆ ಬಹಳಷ್ಟು ಹಿಂದೆಯೇ ಕೊಡಬೇಕಾದ ಹಣವನ್ನು ತಡವಾಗಿ ಕೊಟ್ಟಿದ್ದರಿಂದ ವಿಳಂಬಿತ ಅವಧಿಗೆ ಬಡ್ಡಿ ಕೊಡಬೇಕೆಂದು ಕೇಳಿ ಶಾಖಾ ಮೆನೇಜರರಿಗೆ ಇದೀಗ ಇನ್ನೊಂದು ಪತ್ರ ಬರೆದು ಎರಡನೇ ಹೋರಾಟ ಪ್ರಾರಂಭಿಸಿದ್ದಾರೆ. ಸೈನಿಕನಾಗಿರುವಾಗ ವೈರಿಗಳ ವಿರುದ್ಧ ಹೋರಾಟ, ನಿವೃತ್ತನಾದ ಮೇಲೆ ನಮ್ಮವರ ವಿರುದ್ಧವೇ ಹೋರಾಟ!
ಇದು ಬಳಕೆದಾರರ ವೇದಿಕೆ ಪತ್ರ ಬರೆಯದಿದ್ದರೂ ಪರಿಹಾರವಾದ ಇನ್ನೊಂದು ಪ್ರಕರಣ.
ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶ್ರೀ. ಜಿ.ಎಸ್.ಅಬ್ದುಲ್ ಖಾದರ್ ಇವರು ತಾ. 30-5-98ರಂದು ವಯೋ ನಿವೃತ್ತಿ ಹೊಂದಿದರು. ತನ್ನ ಸಾಮಾನ್ಯ ಭವಿಷ್ಯ ನಿಧಿ (G.P.F.)ಯ ಹಣವನ್ನು ಹಿಂತಿರುಗಿಸಬೇಕೆಂದು ಕೋರಿ ನಿವೃತ್ತಿ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿಯೇ ಕರ್ನಾಟಕ ಸರಕಾರದ ವiಹಾಲೇಖಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹಣ ಬಂದದ್ದು ಮಾತ್ರ ಜೂನ್ ತಿಂಗಳಲ್ಲಿ.
ಹಣವಂತೂ ಬಂತು. ಆದರೆ ಪೂರ್ತಿ ಬರಲಿಲ್ಲ. ಭಾಗಶ: ಹಣ ಮಾತ್ರ ಕಳುಹಿಸಿದ್ದರು. ಮಹಾಲೇಖಪಾಲರ ಕಚೇರಿಯಿಂದಲೇ ಬಂದಿದ್ದ Account Statement ಪ್ರಕಾರ ಇವರಿಗೆ ಸಲ್ಲಬೇಕಾಗಿದ್ದ ಹಣ ರೂ. 1,02,614/-. ಆದರೆ ಕಳುಹಿಸಿದ್ದು
ರೂ. 76,489/- ಮಾತ್ರ. ರೂ. 26,125/- ಇನ್ನೂ ಬರಬೇಕಾಗಿತ್ತು. ಉಳಿದ ಹಣವನ್ನು ಕಳುಹಿಸಿಕೊಡಬೆಕೆಂದು ಇವರು ಮೂರು ಮನವಿ ಪತ್ರಗಳನ್ನು ಕಳುಹಿಸಿಕೊಟ್ಟರು. ಮಹಾಲೇಖಪಾಲರ ಮೇಲೆ ಏನೂ ಪರಿಣಾಮವಾಗಲಿಲ್ಲ. ನಾಲ್ಕನೇ ಮನವಿ ಪತ್ರದಲ್ಲಿ “ಯಥಾ ನಕಲನ್ನು ಸಂಚಾಲಕರು,ಬಳಕೆದಾರರ ವೇದಿಕೆ, ಬಸ್ರೂರು ಇವರಿಗೆ ಕಳುಹಿಸಲಾಗಿದೆ” ಎಂದು ಬರೆದರು.
ಕೂಡಲೇ ಎಚ್ಚರಗೊಂಡ ಮಹಾಲೇಖಪಾಲರು ಹಣ ಕಳುಹಿಸಿ ಕೊಟ್ಟಿದ್ದಾರೆಂದು ಶ್ರೀ ಅಬ್ದುಲ್ ಖಾದರ್ರವರು ವೇದಿಕೆಗೆ ಪತ್ರ ಬರೆದು ತಿಳಿಸಿದ್ದಾರೆ. ವೇದಿಕೆ ಒಂದೇ ಒಂದು ಪತ್ರವನ್ನೂ ಬರೆಯಲಿಲ್ಲವೆಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.
ಪ್ರಾತಿನಿಧಿಕ ಫೋಟೋ: ನಿವೃತ್ತಿ ನಂತರ ತನ್ನದೇ ಹಣಕ್ಕಾಗಿ ಕಾಯುವ ಪರಿಸ್ಥಿತಿ
ಇದು ಬಳಕೆದಾರರ ವೇದಿಕೆ ಪತ್ರ ಬರೆಯದಿದ್ದರೂ ಪರಿಹಾರವಾದ ಪ್ರಕರಣ.
ಕುಂದಾಪುರ ತಾಲೂಕು ಗೋಪಾಡಿಯ ಶ್ರೀ ಯು.ಕಾಂತರಾಜ್ ಇವರು ಮಿಟಾ ಮ್ಯಾನ್ ಪವರ್ ಕನ್ಸಲ್ಟೆಂಟ್ಗೆ ತಾ. 13-6-98ರಂದೇ ಪಾಸ್-ಪೋರ್ಟ್ ಕೊಟ್ಟಿದ್ದರು. ಆ ಬಗ್ಗೆ
ಸ್ವೀಕೃತ ರಶೀದಿಯನ್ನೂ ಪಡೆದಿದ್ದರು. ಅಸೌಖ್ಯದ ಕಾರಣ ಅವರು ವಿದೇಶಕ್ಕೆ ಹೋಗುವ ಆಲೋಚನೆಯನ್ನು ಕೈಬಿಟ್ಟರು. ತನ್ನ ಸ್ನೇಹಿತರೊಬ್ಬರೊಡನೆ ಒಂದು ಅಧಿಕಾರ ಪತ್ರ (Authorisation Letter) ನೀಡಿ, ಸ್ನೇಹಿತರ ಕೈಯಲ್ಲಿ ಪಾಸ್-ಪೋರ್ಟ್ ಕೊಟ್ಟು ಕಳುಹಿಸುವಂತೆ ತಿಳಿಸಿದರು. ಆದರೆ ಮೂರು ನಾಲ್ಕು ಬಾರಿ ಮಂಗಳೂರಿಗೆ ಹೋದರೂ ಸದ್ರಿ ಸಂಸ್ಥೆಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೊಮ್ಮೆ ಅವರನ್ನು ಭೇಟಿ ಮಾಡಿದ ಸ್ನೇಹಿತರೊಡನೆ ಸಂಸ್ಥೆಯವರು ಹೇಳಿದ್ದೇನು ಗೊತ್ತೆ? “ಕಾಂತರಾಜ್ಅವರು ತನ್ನ ಅಸೌಖ್ಯದ ಬಗ್ಗೆ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸಿದರೆ ಅವರ ಪಾಸ್-ಪೋರ್ಟ್ ಹಿಂತಿರುಗಿಸಲಾಗುವುದು” ಎಂದು. ಇದು ಯಾವ ಕಾನೂನು ಎಂದು ಶ್ರೀ ಕಾಂತರಾಜರಿಗೆ ತಿಳಿದುಕೊಳ್ಳಲಾಗದಿದ್ದರೂ ಪಾಸ್-ಪೋರ್ಟ್ ಹಿಂದಕ್ಕೆ ಪಡೆಯಬೇಕಾದುದರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನೂ ಮಾಡಿಸಿ ಕಳುಹಿಸಿ ಕೊಟ್ಟರು.
ಇಷ್ಟೆಲ್ಲ ಮಾಡಿದರೂ ಪಾಸ್-ಪೋರ್ಟ್ ಮಾತ್ರ ಬರಲೇ ಇಲ್ಲ. ನಿರುಪಾಯರಾದ ಶ್ರೀ ಕಾಂತರಾಜರು ತಾ. 11-6-99ರಲ್ಲಿ ಅವರಿಗೊಂದು ಪತ್ರ ಬರೆದು ಕೆಳಗಡೆಯಲ್ಲಿ ವೇದಿಕೆಯ ಹೆಸರನ್ನು ಹಾಕಿದರು. ಈ ಪತ್ರ ತಲುಪಿ ಕೇವಲ ಹತ್ತೇ ದಿನಗಳಲ್ಲಿ ನೋಂದಣಿ ಅಂಚೆಯಲ್ಲಿ ಪಾಸ್-ಪೋರ್ಟ್ ಕಾಂತರಾಜರ ಕೈಸೇರಿತು. ಆ ಸಂಸ್ಥೆಯು ಒಂದೇ ಒಂದು ಪತ್ರ ಬರೆಯಲೂ ವೇದಿಕೆಗೆ ಅವಕಾಶ ನೀಡಲಿಲ್ಲ
ಫೋಟೋ: ಭಾರತೀಯ ಪಾಸ್-ಪೋರ್ಟ್
ಗಿರಿಜಮ್ಮ ಶೆಡ್ತಿ,
D/o. ಸುಬ್ಬಕ್ಕ ಶೆಡ್ತಿ, ರಾಗಿಹಕ್ಲು - 576 224 - ಇವರಿಂದ,
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಮೆಸ್ಕಾಂ,
ಬೈಂದೂರು - ಇವರಿಗೆ
ಮಾನ್ಯರೇ,
ವಿಷಯ: ಬಿಲ್ ಪಾವತಿಸಿರುವ ಹೊರತಾಗಿಯೂ ವಿದ್ಯುತ್ ಸಂಪರ್ಕ ಕಡಿದಿರುವ ಬಗ್ಗೆ.
ಉಲ್ಲೇಖ: ಸ್ಥಾವರ ನಂಬ್ರ ಬಿಬಿವೈ 11557
ಸದರಿ ವಿದ್ಯುತ್ ಸಂಪರ್ಕಕ್ಕೆ ಫೆಬ್ರವರಿ 2002ರ ತನಕದ ಬಿಲ್ ಬಂದಿದ್ದು ಅಲ್ಲಿಯ ವರೆಗಿನ ಬಿಲ್ ಬಾಬ್ತನ್ನು ಪಾವತಿಸಿ ರಶೀದಿಯನ್ನು ಪಡೆದಿರುತ್ತೇನೆ. ನಂತರ ಯಾವುದೇ ಬಿಲ್ ನನಗೆ ಬಂದಿಲ್ಲ. ಆದರೆ 30-9-02 ರಂದು ಯಾವುದೇ
ಮುನ್ಸೂಚನೆಯಿಲ್ಲದೆ ಸದರಿ ವಿದ್ಯುತ್ ಸಂಪರ್ಕವನ್ನು ಕಡಿದಿರುವಿರಿ. ಈ ರೀತಿಯ ನಿಮ್ಮ ‘ಸೇವೆ’ಯಿಂದ ನನಗೆ ಸಹಸ್ರಾರು ರೂಪಾಯಿಗಳ ನಷ್ಟದ ಜತೆ ಮಾನಸಿಕ ಹಿಂಸೆಯುಂಟಾಗಿದೆ.
ನನ್ನ ಮಗ ರವಿ ವಿಚಾರಣೆಗಾಗಿ ನಿಮ್ಮ ಕಚೇರಿಯನ್ನು ಸಂದರ್ಶಿಸಿದಾಗ ನಮ್ಮ ಸ್ಥಾವರ ಸಂಖ್ಯೆಯುಬದಲಾಗಿರುವುದರಿಂದ ಈ ಪ್ರಮಾದ ಉಂಟಾಗಿರುವುದಾಗಿ ನಿಮ್ಮ ಕಚೇರಿಯ ಗುಮಾಸ್ತರು ತಿಳಿಸಿದ್ದಾರೆ. ನಾನು 3087/- ರೂ.ಗಳನ್ನು ಪಾವತಿಸಬೇಕಾಗಿಯೂ ನಮ್ಮ ಸ್ಥಾಪರ ಸಂಖ್ಯೆ 11558 ಎಂದೂ ತಿಳಿಸಿರುತ್ತಾರೆ. ಇಲಾಖೆಯ ಬೇಕಾಬಿಟ್ ಟಿಕಾರ್ಯಾಚರಣೆಗೆ ನಾನು ಹೊಣೆಗಾರಳಲ್ಲ.
ಮುಂದಿನ ವಿಳಂಬವಿಲ್ಲದೆ ಸದ್ರಿ ವಿದ್ಯುತ್ ಸಂಪರ್ಕವನ್ನು ಬೇಶರತ್ ಜೋಡಿಸಿ ಇಲಾಖೆಯ ಗೌರವವನ್ನು ನೀವೇಕೆ ಉಳಿಸಿಕೊಳ್ಳಬಾರದು?
ಇತೀ ನಿಮ್ಮ ವಿಶ್ವಾಸಿ,
ಗಿರಿಜಮ್ಮ ಶೆಡ್ತಿ
ದಿನಾಂಕ: 6-11-2002
ಯಥಾ ಪ್ರತಿ: ಬಳಕೆದಾರರ ವೇದಿಕೆ, ಬಸ್ರೂರು - 576 211.
ವಿವರಣೆ: ವಿದ್ಯುತ್ ಸಂಪರ್ಕ ಪುನರ್ ಜೋಡಣೆಯಾಯಿತು. ಗಿರಿಜಮ್ಮನವರಿಗೆ ‘ಮೆಸ್ಕಾಂ’ನಿಂದಾಗಿರುವ ಅನ್ಯಾಯವನ್ನು ವೇದಿಕೆ ಪ್ರಶ್ನಿಸಿತು. ಅಧಿಕಾರಿ ಉತ್ತರಿಸಲಿಲ್ಲ. ಆದರೆ ಕೊನೆಗೂ ಎಚ್ಚೆತ್ತ ಇಲಾಖೆ ತನ್ನ ಕಡಿದಿರುವ ವಿದ್ಯುತ್ ಸಂಪರ್ಕವನ್ನು ಮತ್ತೆ ಜೋಡಿಸಿರುವುದಾಗಿ ಗಿರಿಜಮ್ಮ ಶೆಡ್ತಿ ಇದೀಗ ವೇದಿಕೆಗೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ನಿಡ್ಲೆಯ ರಾಜ ಆಚಾರಿ ದೇಶ ಸೇವೆ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ ಸೈನ್ಯವನ್ನು ಸೇರಿದರು. ಸುಮಾರು ಹತ್ತು ವರ್ಷಗಳ ಸೇವೆ ಸಲ್ಲಿಸಿದ ನಂತರ ಅವರಿಗೆ ಅನಾರೋಗ್ಯ ಬಾಧಿಸಿತು. ಸೈನ್ಯದಲ್ಲಿ ಸೇವೆ ಸಲ್ಲಿಸಲು ಅನರ್ಹರಾದರು. ಹೀಗಾಗಿ ಅನಿವಾರ್ಯವಾಗಿ ನಿವೃತ್ತರಾಗಿ ಊರಿಗೆ ಮರಳಿದರು.
ನಿವೃತ್ತ ಸೈನಿಕ ರಾಜ ಅಚಾರಿಯವರಿಗೆ ಪಿಂಚಣಿ ಹಾಗೂ ಶಾರೀರಿಕ ನ್ಯೂನತೆಗಾಗಿ ವೈದ್ಯಕೀಯ ಭತ್ತೆ ಬರುತ್ತಿತ್ತು. ಆದರೆ ಈ ಭತ್ತೆ 8-11-96ರ ನಂತರ ಮುಂದುವರಿಸುವ ಬಗ್ಗೆ ಆದೇಶ ಬಾರದಿರುವುದರಿಂದ ರಾಜ ಆಚಾರಿಯವರಿಗೆ ಪಾವತಿ ದೊರೆಯುವುದು ನಿಂತಿತು. ಹೀಗಾಗಿ ತಾ. 31-8-99ರಂದು ಭತ್ತೆ ಪಾವತಿಯನ್ನು ಬ್ಯಾಂಕ್ ನಿಲ್ಲಿಸಿತು. ಅದಲ್ಲದೆ, 1996-99 ಅವಧಿಯ ಪಾವತಿಯನ್ನು ರಾಜ ಆಚಾರಿಯವರಿಂದ ವಸೂಲು ಮಾಡಿತು.
ಈ ಬಗ್ಗೆ ರಾಜ ಆಚಾರಿಯವರು ಕೇಳಿದ ವಿವರಣೆಗೆ ಜಿಲ್ಲಾ ಖಜಾನಾಧಿಕಾರಿಯವರು ಪಾವತಿಗೆ ಮುಂದುವರಿಕೆಯ ಪತ್ರ ಬಾರದಿರುವುದರಿಂದ ಪಾವತಿ ನಿಂತಿದೆ ಎಂದು ವಿವರಣೆ ನೀಡಿದರು. ಅಲಹಾಬಾದಿನಲ್ಲಿರುವ ಸೈನಿಕ ಕೇಂದ್ರ ಕಚೇರಿಗೆ ಈ ಬಗ್ಗೆ ಪತ್ರವನ್ನು ಬರೆದಾಗ ಅವರು ಈಗಾಗಲೇ ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ಆದರೆ ಜಿಲ್ಲಾಖಜಾನಾಧಿಕಾರಿ ಅವರಿಂದ ಈ ಕುರಿತು ಸಮರ್ಪಕ ಉತ್ತರ ದೊರಕದೆ ಇರುವುದರಿಂದ ರಾಜ ಆಚಾರಿಯವರು ನಿಡ್ಲೆ ಬಳಕೆದಾರರ ವೇದಿಕೆಗೆ ತನ್ನ ತೊಂದರೆಗಳನ್ನು ತಿಳಿಸಿ ಸಮಸ್ಯಾ ಪರಿಹಾರಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಬೆಂಬಲ ನೀಡುವಂತೆ ಕೋರಿದರು.
235
ನಿಡ್ಲೆ ವೇದಿಕೆಯು ವಿಳಂಬಿಸದೆ ರಾಜ ಆಚಾರಿಯವರ ಪ್ರಕರಣದ ಬಗ್ಗೆ ತನ್ನ ಮೊದಲ ಪತ್ರವನ್ನು ಅಲಹಾಬಾದಿನ ಸೈನಿಕ ಕೇಂದ್ರ ಕಚೇರಿಗೆ ಬರೆಯಿತು. ವೈದ್ಯಕೀಯ ಭತ್ತೆಯ ಮುಂದುವರಿಕೆಯ ಆದೇಶವನ್ನು ತಕ್ಷಣವೇ ಕಳುಹಿಸುವಂತೆ ವೇದಿಕೆಯು ಕಛೇರಿಯನ್ನು ಆಗ್ರಹಿಸಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1970ರ ದಶಕದಲ್ಲಿ ಶುರುವಾದ “ಬಳಕೆದಾರರ ಆಂದೋಲನ” ಕೆಲವೇ ವರುಷಗಳಲ್ಲಿ ಜಿಲ್ಲೆಯ ಉದ್ದಗಲದಲ್ಲಿ ವ್ಯಾಪಿಸಿತು. ಆಂದೋಲನದ ಮುಂಚೂಣಿಯಲ್ಲಿದ್ದ ಬಸ್ರೂರು “ಬಳಕೆದಾರರ ವೇದಿಕೆ”ಯ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಹಲವು ಬಳಕೆದಾರರ ವೇದಿಕೆಗಳು ರಚನೆಯಾಗಿ ಕಾರ್ಯಾಚರಿಸ ತೊಡಗಿದವು.
ಕ್ರಮೇಣ ಈ ಆಂದೋಲನವು ಕರ್ನಾಟಕದ ಇತರ ಜಿಲ್ಲೆಗಳಿಗೂ ವ್ಯಾಪಿಸಿತು. ಹಲವು ಜಿಲ್ಲೆಗಳಲ್ಲಿ ಬಳಕೆದಾರರ ವೇದಿಕೆಗಳು ಸ್ಥಾಪನೆಯಾಗಲು ಬಸ್ರೂರು ಬಳಕೆದಾರರ ವೇದಿಕೆ ಪ್ರೇರಣೆಯಾಯಿತು. ಇತರ ರಾಜ್ಯಗಳ ಬಳಕೆದಾರರೂ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಈ ವೇದಿಕೆಯನ್ನು ಸಂಪರ್ಕಿಸತೊಡಗಿದರು. ಕೇಂದ್ರ ಸರಕಾರವು ಬಸ್ರೂರು ಬಳಕೆದಾರರ ವೇದಿಕೆ (ರಿ.)ಗೆ ಮಾನ್ಯತೆ ನೀಡಿದಾಗಿನಿಂದ ಈ ವೇದಿಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು.
ಮಂಗಳೂರಿನಲ್ಲಿಯೂ “ಬಳಕೆದಾರರ ವೇದಿಕೆ (ರಿ.)” ಸ್ಥಾಪಿಸಿ, ಅದನ್ನು ನಾಲ್ಕು ದಶಕಗಳ ಅವಧಿ ನಾನು ಸಂಚಾಲಕನಾಗಿ ಮುನ್ನಡೆಸಿದೆ. ಸುಮಾರು ಇಪ್ಪತ್ತು ವರುಷಗಳ ಅವಧಿ ನಮ್ಮ ಬಳಕೆದಾರರ ವೇದಿಕೆ ಪ್ರತೀ ಶನಿವಾರ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಬಳಕೆದಾರರ ಸಮಸ್ಯೆಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಿತ್ತು. ಈ ದೀರ್ಘ ಅವಧಿಯಲ್ಲಿ ಸುಮಾರು 3,000 ಬಳಕೆದಾರರ ಸಮಸ್ಯೆಗಳನ್ನು ನ್ಯಾಯಬದ್ಧವಾಗಿ ಇತ್ಯರ್ಥಪಡಿಸಿದ ಸಾಧನೆ ನಮ್ಮ ವೇದಿಕೆಯದು.
ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ನಾವು ಪಾಠ ಕಲಿಯಬೇಕಾಗಿದೆ. ಡಿಸೆಂಬರ್ ೨೦೧೧ರಲ್ಲಿ ಮುಂಬೈಯ ಜುಹೂ ಬೀಚಿನಿಂದ ಕೇಂದ್ರ ಮೈದಾನಕ್ಕೆ ಮೆರವಣಿಗೆ ಸಾಗಿದಾಗ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ನಿಂತು, ಹೂವು ಹಾಕಿ, ಬೆಂಬಲ ಸೂಚಿಸಿದರು. ಆದರೆ, ಮೆರವಣಿಗೆ ಮೈದಾನ ತಲಪಿದಾಗ ಅಲ್ಲಿ ಇದ್ದದ್ದು ಕೆಲವೇ ಜನರು. ಯಾಕೆ ಹೀಗಾಯಿತೆಂದು ನಾವು ಅರ್ಥ ಮಾಡಿಕೊಳ್ಳಬೇಕು.
ಈ ದೇಶದ ಮಧ್ಯಮ ವರ್ಗದ ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರತಿಭಟನೆ ಈಗಲೂ ಇದೆ. ಅದನ್ನು ಭ್ರಷ್ಟಾಚಾರ ವಿರೋಧಿ ಸಂಘಟನೆಗಳು ಸಮರ್ಥವಾಗಿ ಬಳಸಿಕೊಳ್ಳಬೇಕು. ಮಧ್ಯಮ ವರ್ಗದವರಿಗೆ ಸಮಯವಿಲ್ಲ. ಪ್ರತಿ ತಿಂಗಳು ಪ್ರತಿಭಟನಾ ಸಭೆಗೆ ಬಂದು ಭಾಗವಹಿಸಲು ಅವರಿಂದ ಸಾಧ್ಯವಿಲ್ಲ. ಆದ್ದರಿಂದ ಅವರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಲು ಹೊಸ ದಾರಿಗಳನ್ನು ಸಂಘಟನೆಗಳು ಒದಗಿಸಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿರಂತರವಾಗಿ ಸಾಗಬೇಕು. ಇದು ದೊಡ್ಡ ಯುದ್ಧ. ಇದಕ್ಕೆ ಯೋಧರನ್ನು ತಯಾರು ಮಾಡಬೇಕಾಗಿದೆ.
ನಮ್ಮ ಯುವಜನರೇ ಆ ಯೋಧರು. ಅವರಲ್ಲಿ ಪರಿವರ್ತನೆ ತರಬೇಕಾಗಿದೆ. ಅವರ ಯೋಚನೆಗಳನ್ನು ಬದಲಾಯಿಸ ಬೇಕಾಗಿದೆ. ಅದು ಸಾಧ್ಯ. ನಾನು ಈಗಾಗಲೇ ೭೪೦ ವಿದ್ಯಾಲಯಗಳಲ್ಲಿ ಯುವಜನರೊಂದಿಗೆ ಮಾತನಾಡಿದ್ದೇನೆ. ನಮ್ಮ ಯುವಜನರ ಬಗ್ಗೆ ನನಗೆ “ಹೋಪ್” ಇದೆ.
ಅವರಲ್ಲಿ ಮಾನವೀಯತೆ ಬೆಳೆಸುವ ಕೆಲಸ ಆಗಬೇಕಾಗಿದೆ. ನನಗೆ ೨೦೦೮ರ ಒಂದು ಘಟನೆ ಮತ್ತೆಮತ್ತೆ ನೆನಪಾಗುತ್ತದೆ. ಬಾಗಲಕೋಟೆಯಿಂದ ಒಬ್ಬ ವ್ಯಕ್ತಿ ತನ್ನ ಅಂಗವಿಕಲ ಮಗುವಿನೊಂದಿಗೆ ಬಂದಿದ್ದ. ಅವನು “ಈ ಮಗುವನ್ನು ನೀವೇ ನೋಡಿಕೊಳ್ಳಿ” ಎಂದಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಆ ಮಗುವಿಗೆ ವಿಚಿತ್ರ ಸಮಸ್ಯೆ – ಹುಟ್ಟುವಾಗಲೇ ಅದರ ಹೊಟ್ಟೆ ಸರಿಯಿಲ್ಲ. ಅದರಿಂದಾಗಿ ತಿಂದದ್ದು ಜೀರ್ಣವಾದ ನಂತರ, ಮಗುವಿನ ಬಾಯಿಯಿಂದಲೇ ಮಲ ಹೊರಗೆ ಬರುತ್ತಿತ್ತು. ಅದನ್ನು ಆಪರೇಷನ್ ಮಾಡಿ ಸರಿಪಡಿಸಬಹುದು; ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗು ಎಂದು ಅವನಿಗೆ ಸಲಹೆ ಕೊಟ್ಟರು.
ಮಂಗಳೂರಿನ ಪುರಭವನದಲ್ಲಿ ನೆರೆದಿರುವ ನಿಮ್ಮಲ್ಲಿ ಭ್ರಷ್ಟಾಚಾರದ ಬಗ್ಗೆ ಆಕ್ರೋಶವಿದೆ. ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಹಗರಣಗಳು ನಡೆಯುತ್ತಲೇ ಇವೆ. ೧೯೫೦ರ ದಶಕದಲ್ಲಿ ಜೀಪ್ ಹಗರಣ ಸುದ್ದಿಯಾಯಿತು. ಅನಂತರ ಸುದ್ದಿಯಾದದ್ದು ಮುಂದ್ರಾ ಹಗರಣ, ದಾಲ್ಮಿಯಾ ಹಗರಣ ಹಾಗೂ ನಗರ್ವಾಲಾ ಹಗರಣ. ಇವೆಲ್ಲದರ ಮೂಲ ಭ್ರಷ್ಟಾಚಾರ.
ಆದರೆ ಇವೆಲ್ಲ ಕೆಲವು ಲಕ್ಷ ರೂಪಾಯಿಗಳ ಹಗರಣ. ಅದಾದ ನಂತರ ೧೯೭೪ರಲ್ಲಿ ದೊಡ್ಡ ಸುದ್ದಿಯಾದ ಯುದ್ಧ ಸಾಮಗ್ರಿ ಹಗರಣದ ಮೊತ್ತ ೬೪ ಕೋಟಿ ರೂಪಾಯಿ.
ಇದಕ್ಕೆ ಹೋಲಿಸಿದಾಗ, ೨೦೧೦ರಲ್ಲಿ ಜಾಹೀರಾದ ಕಾಮನ್ವೆಲ್ತ್ ಗೇಮ್ಸ್ ಹಗರಣದ ಮೊತ್ತ ೭೦,೦೦೦ ಕೋಟಿ ರೂಪಾಯಿ, ಭಾರೀ ದೊಡ್ಡದು. ಇದಕ್ಕಿಂತಲೂ ದೊಡ್ಡದು ಅದೇ ಹೊತ್ತಿಗೆ ಬಹಿರಂಗವಾದ ೨-ಜಿ ಸ್ಪೆಕ್ಟ್ರಮ್ ಹಗರಣ; ಇದರ ಮೊತ್ತ ೧,೭೬,೦೦೦ ಕೋಟಿ ರೂಪಾಯಿ. ಅನಂತರ ಬೆಳಕಿಗೆ ಬಂದ ೨೦೧೨ರ ಕೋಲ್-ಗೇಟ್ ಹಗರಣದ ಮೊತ್ತ ಮತ್ತೂ ದೊಡ್ಡದು. ಅದು ೧,೮೬,೦೦೦ ಕೋಟಿ ರೂಪಾಯಿ.
ಒಂದು ಕಡೆ ಭ್ರಷ್ಟರು ಕೋಟಿಗಟ್ಟಲೆ ರೂಪಾಯಿ ಕೊಳ್ಳೆ ಹೊಡೆಯುತ್ತಿದ್ದರೆ, ಇನ್ನೊಂದು ಕಡೆ ಕಡುಬಡವರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಫೋಟೋ ನನಗೆ ಕಣ್ಣಿಗೆ ಕಟ್ಟಿದಂತಿದೆ; ಅದರಲ್ಲಿ ಬಡ ಮಹಿಳೆಯೊಬ್ಬಳು ನೀರಿಗಾಗಿ ಕೈಬೆರಳುಗಳಿಂದ ಮಣ್ಣನ್ನು ಬಗೆಯುತ್ತಿದ್ದಳು. ಅವಳು ಅಲ್ಲಿಗೆ ನಾಲ್ಕು ಕಿಲೋಮೀಟರ್ ನಡೆದು ಬಂದಿದ್ದಳು. ಐದು ಜನರಿರುವ ತನ್ನ ಕುಟುಂಬಕ್ಕೆ ಒಂದು ಕೊಡ ನೀರು ಒಯ್ಯಲಿಕ್ಕಾಗಿ ಅವಳು ಅಷ್ಟೆಲ್ಲ ಕಷ್ಟ ಪಡುತ್ತಿದ್ದಳು. ಕುಡಿಯುವ ನೀರಿಗೂ ಗತಿಯಿಲ್ಲದ ಸಾವಿರಾರು ಜನರು ನಮ್ಮ ದೇಶದಲ್ಲಿದ್ದಾರೆ.
ಅದೇ ವರುಷ ಲೆಕ್ಕ ಮಹಾಪರಿಶೋಧಕರ (ಸಿ.ಎ.ಜಿ.) ವರದಿ ಭ್ರಷ್ಟಾಚಾರದ ಕರಾಳ ಮುಖವೊಂದನ್ನು ದಾಖಲಿಸಿತ್ತು. ಈ ದೇಶದ ಬಡಜನರಿಗೆ ಕುಡಿಯುವ ನೀರು ಒದಗಿಸಲಿಕ್ಕಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹಣದಲ್ಲಿ ೫೬,೦೦೦ ಕೋಟಿ ರೂಪಾಯಿಗಳ ಲೆಕ್ಕವೇ ಸಿಗಲಿಲ್ಲ. ಬಡಜನರ ಕುಡಿಯುವ ನೀರಿನ ಕಾಮಗಾರಿಯ ಹಣವನ್ನೂ ನುಂಗಿದವರು ಇರುವ ಪುಣ್ಯವಂತ ದೇಶ ನಮ್ಮದು!
ಅವರ ಹೆಸರು ಜವಹರ್. ವಯಸ್ಸು ೧೯ ವರುಷ. ಬದುಕಿನ ಪರಮ ಗುರಿ ಪರಿಸರ ರಕ್ಷಣೆ. ಅದಕ್ಕಾಗಿ ಅವರು ಮಾಡಿದ ದಿಗ್ಭ್ರಮೆ ಹುಟ್ಟಿಸುವ ಕೆಲಸ: ಕಾಲುವೆಗೆ ಹಾರಿ ಬಲಿದಾನ. ಇದು ನಡೆದದ್ದು ತಮಿಳ್ನಾಡಿನ ತಂಜಾವೂರಿನಲ್ಲಿ, ಸಪ್ಟಂಬರ್ ೨೦೧೬ರಲ್ಲಿ.
ಜವಹರ್ ಬಿಟ್ಟುಹೋಗಿರುವ ಆತ್ಮಹತ್ಯಾ ಹೇಳಿಕೆಯ ವಿಡಿಯೋ ರೆಕಾರ್ಡಿಂಗಿನಲ್ಲಿರುವ ಮಾತು: “ನನ್ನ ಬಲಿದಾನ ಭಾರತದಲ್ಲಿ ಪ್ಲಾಸ್ಟಿಕಿನ ಬಳಕೆ ಬಗ್ಗೆ ಗಂಭೀರ ಚಿಂತನೆಯನ್ನು ಹುಟ್ಟು ಹಾಕುತ್ತದೆಂಬ ಆಶಯದಿಂದ ನನ್ನ ಪ್ರಾಣತ್ಯಾಗ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಶಾಂತಿಯುತ ಪ್ರತಿಭಟನೆಗಳೆಲ್ಲವೂ ವ್ಯರ್ಥವಾದ ಕಾರಣ, ನನಗೆ ಆತ್ಮಹತ್ಯೆಯ ಆಯ್ಕೆ ಅನಿವಾರ್ಯವಾಯಿತು.”
ಪ್ಲಾಸ್ಟಿಕಿನ ಅವಾಂತರ ಇಷ್ಟು ತೀವ್ರವಾಗಿದೆಯೇ? ಒಮ್ಮೆ ನಿಮ್ಮ ಮನೆಯಲ್ಲಿ ಇರುವುದನ್ನೆಲ್ಲ ಗಮನಿಸಿ. ನೀವು ಖರೀದಿ ಮಾಡುವುದನ್ನೆಲ್ಲ ಪರಿಶೀಲಿಸಿ. ಎಲ್ಲದರಲ್ಲಿಯೂ ಪ್ಲಾಸ್ಟಿಕ್ ಆವರಿಸಿಕೊಂಡಿದೆ, ಅಲ್ಲವೇ? ಹೌದು, ಪ್ಲಾಸ್ಟಿಕ್ ನಮ್ಮ ಬದುಕನ್ನೇ ಆವರಿಸಿಕೊಂಡಿದೆ. ಅದು ಅಗ್ಗ, ಅದರ ಬಾಳಿಕೆ ದೀರ್ಘ, ಅದು ಭಾರೀ ಅನುಕೂಲ ಎಂಬ ಸಬೂಬುಗಳನ್ನು ಹೇಳುತ್ತಾ, ಮತ್ತೆಮತ್ತೆ ದಿನದಿನವೂ ಪ್ಲಾಸ್ಟಿಕನ್ನು ಮನೆಯೊಳಗೆ ತರುತ್ತಿದ್ದೇವೆ, ಅಲ್ಲವೇ? ಅದರಿಂದಾಗಿಯೇ, ೫೦ ವರುಷಗಳ ಮುಂಚೆ ಉತ್ಪಾದನೆ ಮಾಡುತ್ತಿದ್ದ ಪರಿಮಾಣಕ್ಕಿಂತ ೨೦ ಪಟ್ಟು ಅಧಿಕ ಪ್ಲಾಸ್ಟಿಕನ್ನು ಈಗ ಉತ್ಪಾದಿಸುತ್ತಿದ್ದೇವೆ! ಮುಂದಿನ ೨೦ ವರುಷಗಳಲ್ಲಿ ಪ್ಲಾಸ್ಟಿಕಿನ ಉತ್ಪಾದನೆ ಇಮ್ಮಡಿಯಾಗಲಿದೆ!
ಅಬ್ಬ, ಎಲ್ಲಿ ಕಂಡರಲ್ಲಿ ಪ್ಲಾಸ್ಟಿಕ್! ಕೆರೆಗಳಲ್ಲಿ, ನದಿಗಳ ಬದಿಗಳಲ್ಲಿ, ಸಮುದ್ರ ತೀರಗಳಲ್ಲಿ, ಉದ್ಯಾನಗಳಲ್ಲಿ, ಕಾಡುಗಳ ಅಂಚಿನಲ್ಲಿ, ಗುಡ್ಡಗಳಲ್ಲಿ, ಪರ್ವತಗಳಲ್ಲಿ, ರಸ್ತೆಗಳ ಇಬ್ಬದಿಗಳಲ್ಲಿ, ರೈಲುಹಳಿಗಳ ಇಕ್ಕಡೆಗಳಲ್ಲಿ, ಸಮುದ್ರಗಳ ತಳಗಳಲ್ಲಿ – ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಲೋಟಗಳು, ಚೀಲಗಳು, ಬಾಟಲಿಗಳು, ಕವರುಗಳು, ಬ್ಯಾಗುಗಳು, ಕನ್-ಟೈನರುಗಳು ತುಂಬಿಕೊಂಡಿವೆ. “ಪ್ರಾಕೃತಿಕ ಪರಿಸರವನ್ನು ಶಾಶ್ವತವಾಗಿ ಮಾಲಿನ್ಯ ಮಾಡುವ” ಪ್ಲಾಸ್ಟಿಕಿನ ಅಪಾಯ ನಿಜವಾಗುತ್ತಿದೆ ಎನ್ನುತ್ತದೆ ಪ್ಲಾಸ್ಟಿಕಿನ ಬಗ್ಗೆ ೨೦೧೭ರಲ್ಲಿ ಪ್ರಕಟವಾಗಿರುವ ಜಾಗತಿಕ ವರದಿ.










