ಲತಾ ಮಂಗೇಶ್ಕರ್ ನಮ್ಮನ್ನು ಅಗಲಿದ್ದಾರೆ ೬ ಫೆಬ್ರವರಿ ೨೦೨೨ರಂದು. ಆದರೆ ಅವರ ಅಮರ ಹಾಡುಗಳು ನಮ್ಮನ್ನೆಂದೂ ಅಗಲುವುದಿಲ್ಲ. ಅವು ದಿನದಿನವೂ ನಮ್ಮಲ್ಲಿ ಚೈತನ್ಯ ತುಂಬ ಬಲ್ಲ ಹಾಡುಗಳು - ಕಳೆದ ಏಳು ದಶಕಗಳಲ್ಲಿ ಮತ್ತೆಮತ್ತೆ ಮಾಡಿದಂತೆ.

೨೮ ಸಪ್ಟಂಬರ್ ೧೯೨೯ರಂದು ಜನಿಸಿದ ಲತಾ ಮಂಗೇಶ್ಕರ್ ಬದುಕಿದ್ದಾಗಲೇ ದಂತಕತೆಯಾದವರು. ಇಷ್ಟೆಂದರೆ ಸಾಕೇ? ಖಂಡಿತ ಸಾಲದು. ಮತ್ತೇನು ಹೇಳೋಣ? ಯಾವ ಪದಗಳೂ ಅವರ ಪರಿಪೂರ್ಣ ಚಿತ್ರ ಕಟ್ಟಿಕೊಡಲಾರವು. ಯಾಕೆಂದರೆ ಅವರ ಬದುಕು ಎಲ್ಲ ಪದಗಳನ್ನೂ ಮೀರಿದ್ದು.

“ಆಯೇಗಾ ಆನೇವಾಲಾ” ಎಂಬ ಅವರ ಹಾಡು ಭಾರತದ ಕೇಳುಗರನ್ನೆಲ್ಲ ಸಮ್ಮೋಹನಕ್ಕೆ ಒಳಪಡಿಸಿದಾಗ ಅವರ ವಯಸ್ಸು ೨೦. ಅನಂತರ ಲತಾ ಮಂಗೇಶ್ಕರ್ ಹಿಂತಿರುಗಿ ನೋಡಲೇ ಇಲ್ಲ. ಆದರೆ, ಆ ಕಾಲಘಟ್ಟದಲ್ಲಿ ಸಿನೆಮಾ ಹಾಡುಗಳಿದ್ದ ಡಿಸ್ಕುಗಳಲ್ಲಿ ಹಾಡಿದವರ ಹೆಸರು ಮುದ್ರಿಸಲಾಗುತ್ತಿರಲಿಲ್ಲ; ಬದಲಾಗಿ ಸಿನೇಮಾದಲ್ಲಿ ಹಾಡು ಹಾಡಿದ ಪಾತ್ರದ ಹೆಸರು ಮುದ್ರಿಸಲಾಗುತ್ತಿತ್ತು ಎಂಬುದು ಬೇರೆ ಮಾತು. ಈ “ಅನ್ಯಾಯ"ವನ್ನು ಸರಿ ಪಡಿಸಿ, ಹಿನ್ನೆಲೆ ಗಾಯಕ/ ಗಾಯಕಿಯರ ಹೆಸರು ಹಾಡಿನ ಜೊತೆಗೆ ಮುನ್ನೆಲೆಗೆ ಬರುವುದರಲ್ಲಿಯೂ ಲತಾ ಮಂಗೇಶ್ಕರ್ ಅವರ ಪ್ರಭಾವ ಮುಖ್ಯವಾಗಿತ್ತು ಅನ್ನೋದು ಅವರ ಬಹುಮುಖಿ ವ್ಯಕ್ತಿತ್ವದ ಮತ್ತೊಂದು ಮುಖ.

"ಪುಸ್ತಕ ಲೋಕದ ಪರಿಚಾರಕ” ಎಂದು ಕರೆದುಕೊಂಡಿದ್ದ “ಗಾಂಧಿ ಬಜಾರ್ ಪತ್ರಿಕೆ”ಯ ಕೊನೆಯ ಸಂಚಿಕೆ ಡಿಸೆಂಬರ್ ೨೦೧೬ರದ್ದು. ಅದರ ಮುಖಪುಟದಲ್ಲಿತ್ತು ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡದ ಐವರು ಸಾಹಿತಿಗಳ ಭಾವಚಿತ್ರ.

ಆ ಮಾಸಪತ್ರಿಕೆಯ ಸಂಪಾದಕರು ಬಾಕಿನ (ಬಾಲಕೃಷ್ಣ ಕೆ.ಎನ್.) ಬೆಂಗಳೂರಿನ ಬಸವನಗುಡಿಯ ಪ್ರಸಿದ್ಧ ಮುದ್ರಣಾಲಯ “ಲಿಪಿ ಮುದ್ರಣ”ದಲ್ಲಿ ಅಚ್ಚಾಗುತ್ತಿತ್ತು ಗಾಂಧಿ ಬಜಾರ್ ಪತ್ರಿಕೆ. ಪತ್ರಿಕೆ ಶುರು ಮಾಡಲು ಪ್ರಜಾವಾಣಿಯ ಪತ್ರಕರ್ತಮಿತ್ರ ವೈಎನ್ಕೆ (ವೈ. ಎನ್. ಕೃಷ್ಣಮೂರ್ತಿ) ಅವರು ಒತ್ತಾಯ ಹಾಗೂ ಪ್ರೋತ್ಸಾಹವೇ ಕಾರಣವೆಂದು ಕೊನೆಯ ಸಂಚಿಕೆಯಲ್ಲಿ ಸಂಪಾದಕ ಬಾಕಿನ ಹೇಳಿಕೊಂಡಿದ್ದಾರೆ. ಲಿಪಿ ಮುದ್ರಣಕ್ಕೆ ಹೆಚ್ಚು ಕಡಿಮೆ ಪ್ರತಿ ದಿನವೂ ಬೆಳಗ್ಗೆ ಅಥವಾ ಸಂಜೆ ಬಂದು ಬಾಕಿನ ಜೊತೆ ಸಾಹಿತಿಗಳ ಮತ್ತು ಸಾಹಿತ್ಯದ ಕುರಿತು ಮಾತುಕತೆ ನಡೆಸುತ್ತಿದ್ದ ವೈಎನ್ಕೆ ಪತ್ರಿಕೆಯೊಂದನ್ನು ಶುರು ಮಾಡುವ ಪ್ರಸ್ತಾಪ ಮಾಡಿದರಂತೆ. ಎಲ್ಲ ಸಲಹೆ-ಸಹಕಾರದ ಭರವಸೆಯನ್ನೂ ನೀಡಿದರಂತೆ.

ಸುದ್ದಿ ಲೋಕದಲ್ಲಿ ಟೊಂಗಾ ರಾಜ್ಯ ಸುದ್ದಿಯಾಗುವುದೇ ಇಲ್ಲ. ಆದರೆ ೧೪ ಜನವರಿ ೨೦೨೨ರಂದು ಅಲ್ಲಿಯ ಜ್ವಾಲಾಮುಖಿಯ ಮಹಾಸ್ಫೋಟ ಜಗತ್ತಿನಲ್ಲೆಲ್ಲ ಸುದ್ದಿಯ ಅಲೆಗಳನ್ನೆಬ್ಬಿಸಿದೆ!

ಹುಂಗಾ-ಟೊಂಗಾ-ಹುಂಗಾ-ಹಾಪೈ ಎಂಬ ಹೆಸರಿನ ಜ್ವಾಲಾಮುಖಿ ಇದೆಯೆಂಬುದೇ ಹಲವರಿಗೆ ತಿಳಿದಿಲ್ಲ. ಅದು ಟೊಂಗಾದ ರಾಜಧಾನಿ ನುಕುಅಲೊಫಾದಿಂದ ೬೫ ಕಿಮೀ ಉತ್ತರದಲ್ಲಿ ಸಮುದ್ರಮಟ್ಟದಿಂದ ಸುಮಾರು ೧೦೦ ಮೀಟರ್ ಮೇಲಕ್ಕೆ ಎದ್ದು ನಿಂತಿರುವ ದ್ವೀಪದಂತೆ ಕಾಣಿಸುತ್ತದೆ. ಆದರೆ ಸಾಗರದ ಅಲೆಗಳ ಕೆಳಗೆ ಅದೊಂದು ಬೃಹತ್ ಬೆಟ್ಟದಂತಿದೆ - ೧,೮೦೦ ಮೀ ಎತ್ತರ ಮತ್ತು ೨೦ ಕಿಮೀ ಅಗಲದ ಬೆಟ್ಟ.

ಕಳೆದ ಕೆಲವು ದಶಕಗಳಲ್ಲಿ ಈ ಜ್ವಾಲಾಮುಖಿ ಕೆಲವು ಸಲ ಸ್ಫೋಟಿಸಿದೆ. ೨೦೦೯ ಮತ್ತು ೨೦೧೪/೧೫ರಲ್ಲಿ ಅದು ಸ್ಫೋಟಿಸಿದಾಗ ಶಿಲಾಪಾಕ (ಮಾಗ್ಮಾ) ಮತ್ತು ಹಬೆಯ ಕಾರಂಜಿಗಳು ಸಾಗರದ ಅಲೆಗಳನ್ನು ಸೀಳಿಕೊಂಡು ಆಕಾಶದತ್ತ ಚಿಮ್ಮಿದ್ದವು. ಆದರೆ, ಜನವರಿ ೨೦೨೨ರ ಸ್ಫೋಟಕ್ಕೆ ಹೋಲಿಸಿದಾಗ, ಆ ಸ್ಫೋಟಗಳು ತೀರಾ ಸಣ್ಣವು.

“ಇತರರಿಗಾಗಿ ಬದುಕುವವರೇ ಜೀವಂತ ವ್ಯಕ್ತಿಗಳು, ಉಳಿದವರು ಜೀವಂತರಾಗಿದ್ದರೂ ಸತ್ತಿರುವವರಂತೆ”  - ಇದು ಸ್ವಾಮಿ ವಿವೇಕಾನಂದರು ಗುಡುಗಿದ ಮಾತು. ಅವರ ಇಂತಹ ಇನ್ನೂ ಕೆಲವು ಮಿಂಚಿನ ಮಾತುಗಳು ಇಲ್ಲಿವೆ:

"ಎದ್ದೇಳಿ! ಕಾರ್ಯೋನ್ಮುಖರಾಗಿ. ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ನಂತರ ಏನಾದರೂ ಒಂದು ಗುರುತನ್ನು ಬಿಟ್ಟು ಹೋಗಿ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ; ನಿನ್ನ ಕರ್ತವ್ಯ ನೀನು ಮಾಡಿಕೊಂಡು ಹೋಗು. ಜನರು ನಿನ್ನನ್ನು ಸ್ತುತಿಸಲಿ, ನಿಂದಿಸಲಿ. ಲಕ್ಷ್ಮಿಯ ಕೃಪೆ ನಿನ್ನ ಮೇಲಿರಲಿ, ಇಲ್ಲದೆ ಇರಲಿ; ಸಾವು ಯಾವಾಗಲಾದರೂ ಬರಲಿ. ಆದರೆ ನ್ಯಾಯದ ಮಾರ್ಗವನ್ನು ಮಾತ್ರ ಬಿಡಬೇಡ. ಹೇಡಿಯಾಗಿ ನೂರು ವರುಷ ಬದುಕುವುದಕ್ಕಿಂತ ಶೂರನಾಗಿ ಇಂದೇ ಸಾಯೋದು ಲೇಸು. ಭಯವೇ ಮೃತ್ಯು. ಭಯವೇ ಪಾಪ; ಭಯವೇ ಸರ್ವನಾಶ. ನಿಸ್ವಾರ್ಥಗುಣವೇ ಧರ್ಮದ ಪರೀಕ್ಷೆ. ಯಾರು ನಿಸ್ವಾರ್ಥಿಗಳೋ ಅವರು ದೇವರಿಗೆ ಹತ್ತಿರವಾಗಿರುತ್ತಾರೆ.

2021ನೆಯ ವರುಷದಲ್ಲಿ ಕೊನೆಯ ಸಲ ಸೂರ್ಯ ಮುಳುಗಿದ. ಆಗ, ಹಿಂತಿರುಗಿ ನೋಡಿದಾಗ ಪ್ರಧಾನವಾಗಿ ಕಂಡದ್ದೇನು?

ಕೊರೋನಾ ಎಂಬ ವೈರಸ್ (ಕೋವಿಡ್ 19)ನ ಅಟ್ಟಹಾಸ. ತಾನು ಭಾರೀ ಬುದ್ಧಿವಂತ ಎಂದು ಅಹಂಕಾರದಿಂದ ಬೀಗುತ್ತಿದ್ದ ಮನುಷ್ಯ ಜೀವಿಗಳನ್ನು 2020ರ ಶುರುವಿನಿಂದಲೂ ಆ ಕಣ್ಣಿಗೆ ಕಾಣದ ವೈರಸ್ ಅಟ್ಟಾಡಿಸುತ್ತಿದೆ. ಬೇರೆಬೇರೆ ವ್ಯಾಕ್ಸೀನುಗಳನ್ನು ಅಭಿವೃದ್ಧಿ ಪಡಿಸಿ, ಕೋಟಿಗಟ್ಟಲೆ ಮಾನವರಿಗೆ ಚುಚ್ಚಿದರೂ ಅದು ಕ್ಯಾರೇ ಅನ್ನುತ್ತಿಲ್ಲ. ಮಾನವನ ಪ್ರತಿಯೊಂದು ಯುಕ್ತಿಗೂ ಕೊರೋನಾ ವೈರಸ್ ರೂಪಾಂತರಗೊಂಡು ಪ್ರತಿಯುಕ್ತಿ ಹೂಡುತ್ತಿದೆ. ವರ್ಷಾಂತ್ಯದಲ್ಲಿ ಓಮಿಕ್ರಾನ್ ಎಂಬ ರೂಪಾಂತರಿಯ ಮೂಲಕ ಕೊರೋನಾ ವೈರಸ್ ದಾಂಧಲೆ ಎಬ್ಬಿಸಿದೆ.

ಕೊರೋನಾ ವೈರಸಿನ ಹೊಡೆತಕ್ಕೆ ಮಾನವ ಕುಲವೇ ತತ್ತರಿಸಿ ಹೋಗಿದೆ. 31ಡಿಸೆಂಬರ್ 2021ರ ಅಂಕೆಸಂಖ್ಯೆಗಳು ಅದು ಮಾಡಿದ ಅನಾಹುತವನ್ನು ಬಿಂಬಿಸುತ್ತಿವೆ:

ಎಲ್ಲಿ?        ಜನಸಂಖ್ಯೆ (ಕೋಟಿ)    ಒಟ್ಟು ಸೋಂಕಿತರು (ಕೋಟಿ)    ಒಟ್ಟು ಮೃತರು (ಲಕ್ಷ)
ಜಗತ್ತು           791.71                         28.69                  54.46
ಯು.ಎಸ್.ಎ.    33.39                            5.52                    8.45
ಭಾರತ          140.06                            3.48                    4.81

ಭಾರತದ ೨೧ ಅಕ್ಟೋಬರ್ ೨೦೨೧ರ ಸಾಧನೆಗೆ ಜಗತ್ತಿನಲ್ಲಿ ಸಾಟಿಯೇ ಇಲ್ಲ - ಕೇವಲ ಒಂಭತ್ತು ತಿಂಗಳುಗಳಲ್ಲಿ ಒಂದು ನೂರು ಕೋಟಿ ಕೊರೋನಾ ವ್ಯಾಕ್ಸೀನ್ ನೀಡಿದ್ದು. ಇಂತಹ ಅಗಾಧ ಕಾಯಕವನ್ನು ಯಾವುದೇ ದೇಶ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಅದಕ್ಕಾಗಿಯೇ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದು, “ಈ ಮಹಾನ್ ಸಾಧನೆ ಭಾರತದ ಸಂಘಟಿತ ಪ್ರಯತ್ನದ ತಾಕತ್ತನ್ನು ತೋರಿಸುತ್ತದೆ.”

ಇದರ ಇಮ್ಮಡಿ ಸಂಖ್ಯೆಯ ವ್ಯಾಕ್ಸೀನುಗಳನ್ನು ತನ್ನ ಪ್ರಜೆಗಳಿಗೆ ಚೀನಾ ನೀಡಿದೆ. ಆದರೆ, ಚೀನಾ ದೇಶ ೨೦೨೦ರ ಜೂನ್ ತಿಂಗಳಿನಲ್ಲೇ ವ್ಯಾಕ್ಸೀನ್ ನೀಡಲು ಆರಂಭಿಸಿತ್ತು (ಆ ವ್ಯಾಕ್ಸೀನುಗಳ ಮೂರನೆಯ ಹಂತದ ಪ್ರಯೋಗಗಳನ್ನು ನಡೆಸುವುದಕ್ಕಿಂತ ಮುಂಚೆಯೇ)

ಆದರೆ, ಭಾರತವು ಕೊರೋನಾ ವ್ಯಾಕ್ಸೀನ್ ನೀಡಲು ಆರಂಭಿಸಿದ್ದು, ಈ ವರುಷದ (೨೦೨೧) ಜನವರಿಯಲ್ಲಿ - ಕೆಲವೇ ಲಕ್ಷ ವ್ಯಾಕ್ಸೀನುಗಳ ದೈನಿಕ ಪೂರೈಕೆಯೊಂದಿಗೆ. ಆಗ, ಯುಎಸ್‌ಎ ದೇಶ, ವ್ಯಾಕ್ಸೀನುಗಳ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುವುದಕ್ಕೆ ನಿಷೇಧ ಹೇರಿದ್ದರಿಂದಾಗಿ ಪರಿಸ್ಥಿತಿ ಬಿಗಡಾಯಿಸಿತ್ತು.

ಡಿಸೆಂಬರ್ ೩, ೧೯೮೪ರ ಮಧ್ಯರಾತ್ರಿಯ ನಂತರ ಭೋಪಾಲ ಸ್ಮಶಾನವಾಯಿತು - ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕಾರ್ಖಾನೆಯಿಂದ ಸೋರಿದ ವಿಷಾನಿಲಕ್ಕೆ ಸಾವಿರಾರು ಜನ ಬಲಿಯಾದರು. ಅದಾಗಿ ಮೂವತ್ತೇಳು ವರುಷಗಳು ದಾಟಿದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ!

ಆ ಕರಾಳ ರಾತ್ರಿ ಅಲ್ಲಿ ಆದದ್ದೇನು? ಆ ರಾತ್ರಿಯ ಭಯಾನಕ ಮೃತ್ಯುಸರಣಿಯನ್ನು ವಿವರಿಸಲು ಶಬ್ದಗಳೇ ಇಲ್ಲ. ಅವತ್ತು ಅಮೇರಿಕದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಒಡೆತನದ ಕೀಟನಾಶಕ ಉತ್ಪಾದನಾ ಕಾರ್ಖಾನೆಯಿಂದ ೪೦ ಟನ್ ಮಿಥೈಲ್ ಐಸೊಸಯನೇಟ್ (ಎಂಐಸಿ) ಎಂಬ ಮಾರಕ ಅನಿಲ ಸೋರಿಕೆ. ವರದಿಗಳ ಅನುಸಾರ, ಆ ಕಾರ್ಖಾನೆಯ “ಸಿ" ಘಟಕದಲ್ಲಿ ೪೨ ಟನ್ ಎಂಐಸಿ ತುಂಬಿದ್ದ ಟ್ಯಾಂಕ್ ಸಂಖ್ಯೆ ೬೧೦ಕ್ಕೆ ನೀರು ಪ್ರವೇಶಿಸಿದ್ದು ಅನಿಲ ಸೋರಿಕೆಗೆ ಕಾರಣ.

ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮಹಾತ್ಮಾ ಗಾಂಧಿಯವರ ಬದುಕಿಗೆ ಹಲವು ಮುಖಗಳಿದ್ದವು. ಅವರ ಜನ್ಮದಿನದ ೧೫೨ನೇ ವರುಷದ ಇಂದಿನ ಸಂದರ್ಭದಲ್ಲಿ, ಅವುಗಳಲ್ಲಿ ಜನಜನಿತವಲ್ಲದ ಕೆಲವನ್ನು ತಿಳಿಯೋಣ.

ಕ್ರೀಡಾ ಸಂಘಟಕ: ದಕ್ಷಿಣ ಆಫ್ರಿಕಾದಲ್ಲಿದ್ದಾಗ, ದರ್ಬನ್, ಪ್ರಿಟೋರಿಯಾ ಮತ್ತು ಜೋಹಾನ್ಸ್-ಬರ್ಗಿನಲ್ಲಿ ಮೂರು ಫುಟ್‌ಬಾಲ್ ಕ್ಲಬ್‌ಗಳನ್ನು ಗಾಂಧಿ ಸ್ಥಾಪಿಸಿದ್ದರು ಎಂದು ಅಂತರರಾಷ್ಟ್ರೀಯ ಫುಟ್‌ಬಾಲ್ ಸಂಘಟನೆ (ಫಿಫಾ) ತಿಳಿಸಿದೆ. ಈ ಮೂರು ಫುಟ್‌ಬಾಲ್ ಕ್ಲಬ್‌ಗಳಿಗೆ  "ಪ್ಯಾಸಿವ್ ರೆಸಿಸ್ಟರ್ಸ್ ಸೂಕರ್ ಕ್ಲಬ್” ಎಂಬ ಒಂದೇ ಹೆಸರು.

ದತ್ತು ಮಕ್ಕಳ ತಂದೆ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗುವಾಗ ನೈಕರ್ ಎಂಬ ಅಸ್ಪೃಶ್ಯ ಹುಡುಗನನ್ನು ಗಾಂಧಿ ಕರೆದು ತಂದಿದ್ದರು. ಲಕ್ಷ್ಮಿ ಎಂಬ ಅಸ್ಪೃಶ್ಯ ಹುಡುಗಿಯನ್ನೂ ಗಾಂಧಿ ಮಗಳಾಗಿ ದತ್ತು ಪಡೆದಿದ್ದರು. ಅನಂತರ, ೧೯೩೩ರಲ್ಲಿ ಒಬ್ಬ ಬ್ರಾಹ್ಮಣ ಯುವಕನೊಂದಿಗೆ ಲಕ್ಷ್ಮಿಯ ಮದುವೆ ಮಾಡಿದರು.

ಮಹಾತ್ಮಾ ಗಾಂಧಿಯವರ ಬರಹಗಳಿಗೆ ಅವರ ನಿಧನವಾಗಿ ೬೦ ವರುಷಗಳ ನಂತರ, ೨೦೦೯ರ ಜನವರಿಯಲ್ಲಿ ಕಾಪಿರೈಟಿನಿಂದ ಮುಕ್ತಿ ಸಿಕ್ಕಿತು. ಯಾಕೆಂದರೆ, ಅವರ ಬರಹಗಳ ಕಾಪಿರೈಟ್ ಹೊಂದಿದ್ದ ಅಹ್ಮದಾಬಾದಿನ ನವಜೀವನ ಟ್ರಸ್ಟಿನ ಆ ಹಕ್ಕು ಅಂದಿಗೆ ಮುಕ್ತಾಯವಾಯಿತು. ಇದರಿಂದಾಗಿ, ಯಾವುದೇ ಪ್ರಕಾಶಕರು ಗಾಂಧೀಜಿಯವರ ಬರಹಗಳನ್ನೂ ಭಾಷಣಗಳನ್ನೂ ಮುಕ್ತವಾಗಿ ಪ್ರಕಟಿಸಬಹುದು. ಅವರ ಜನ್ಮದಿನವಾದ ಇವತ್ತು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

"ಮಹಾತ್ಮಾ ಗಾಂಧಿಯವರಿಗೆ ಕಾಪಿರೈಟಿನಲ್ಲಿ ನಂಬಿಕೆ ಇರಲಿಲ್ಲ. ಅವರ ಬರಹಗಳೂ ಭಾಷಣಗಳೂ ಅಧಿಕಾರಷಾಹಿಯ ಜಂಜಡಗಳಿಂದ ಮುಕ್ತವಾಗಿರಬೇಕು” ಎನ್ನುತ್ತಾರೆ ಗಾಂಧಿ ಸ್ಮೃತಿ ಮತ್ತು ದರ್ಶನದ ನಿರ್ದೇಶಕರಾದ ಸವಿತಾ ಸಿಂಗ್. ಮಹಾತ್ಮಾ ಗಾಂಧಿಯವರು ಕೊಲೆಯಾದ ಢೆಲ್ಲಿಯ  ಬಿರ್ಲಾ ಭವನದಲ್ಲಿ ಅಲ್ಲಲ್ಲಿ “ಫೋಟೋಗ್ರಫಿ ನಿಷೇಧಿಸಲಾಗಿದೆ” ಎಂಬ ಫಲಕಗಳನ್ನು ತೂಗು ಹಾಕಲಾಗಿತ್ತು. ಸವಿತಾ ಸಿಂಗ್ ಅವೆಲ್ಲವನ್ನೂ ತೆಗೆಸಿದರು. ಅಲ್ಲಿಗೆ ಭೇಟಿ ನೀಡುವವರು ಬೇಕಾದರೆ ಫೋಟೋ ತೆಗೆದು, ನೆನಪುಗಳನ್ನು ತಮ್ಮೊಂದಿಗೆ ಒಯ್ಯಲಿ ಎಂಬುದವರ ಅಭಿಪ್ರಾಯ. “ಇಲ್ಲಿಗೆ ಬರುವವರು ಇಲ್ಲಿಂದ ಬೇರೇನನ್ನು ತಾನೇ ಒಯ್ಯಲು ಸಾಧ್ಯ?” ಎಂದು ಪ್ರಶ್ನಿಸುತ್ತಾರೆ ಅವರು.

“ಶಿಕ್ಷಕರ ದಿನ”ವಾದ ಇಂದು ಸಮಾಜಮುಖಿ ಶಿಕ್ಷಕರೊಬ್ಬರ ಜೀವಮಾನದ ನಿಸ್ವಾರ್ಥ ಕಾಯಕ ನೆನಪಾಗುತ್ತಿದೆ.

ತನ್ನ ಶಾಲೆಯ ಆವರಣದಲ್ಲಿ ಆಲದ ಸಸಿಯೊಂದನ್ನು ನೆಟ್ಟಾಗ ಅಂತರ್ಯಾಮಿ ಸಾಹೂ ಅವರಿಗೆ ೧೧ ವರುಷ ವಯಸ್ಸು. ಆ ವಯಸ್ಸಿನಿಂದಲೇ ಗಿಡಮರಗಳೆಂದರೆ ಅವರಿಗೆ ಬಹಳ ಕಾಳಜಿ.

ಅಂದಿನಿಂದ ಪ್ರತಿ ವರುಷವೂ ಹಲವಾರು ಸಸಿಗಳನ್ನು ತನ್ನ ಹಳ್ಳಿಯ ಸುತ್ತಮುತ್ತಲು ನೆಡುತ್ತಾ ಬಂದರು ಅಂತರ್ಯಾಮಿ ಸಾಹೂ. ಮುಂದೆ ಸೈಲೆತ್‌ಪಾದ ಶಾಲೆಗೆ ಅವರು ಶಿಕ್ಷಕರಾಗಿ ನೇಮಕವಾದರು. ಆಗಿನಿಂದ ತನ್ನ ಕಾಯಕದಲ್ಲಿ ಶಾಲಾ ವಿದ್ಯಾರ್ಥಿಗಳನ್ನೂ ತೊಡಗಿಸಿಕೊಳ್ಳಲು ಶುರು ಮಾಡಿದರು.

ಇದೀಗ ಅವರಿಗೆ ೭೫ ವರುಷ ವಯಸ್ಸು. ಶಿಕ್ಷಕ ವೃತ್ತಿಯಿಂದ ನಿವೃತ್ತರಾದರೂ ಸಸಿ ನೆಡುವ ಅವರ ಉತ್ಸಾಹ ಕಿಂಚಿತ್ತೂ ಕುಂದಿಲ್ಲ. ಈಗಲೂ ಸೈಕಲಿನಲ್ಲಿ ಸಸಿಗಳನ್ನೂ, ಸಸಿ ನೆಡಲು ಬೇಕಾದ ಸಾಧನ-ಸಲಕರಣೆಗಳನ್ನು ಹೊತ್ತು ಅವರು ಸಸಿ ನೆಡುವ ಆಂದೋಲನವನ್ನು ಮುಂದುವರಿಸುವುದನ್ನು ನೋಡಿಯೇ ನಂಬಬೇಕು!

Pages