ಸೆಣಬಿನ ಬಗ್ಗೆ ನಮಗೆ ಅಸಡ್ಡೆ. “ಅದರಿಂದೇನಾದೀತು? ಗೋಣಿಚೀಲ ಮಾಡಬಹುದು, ಅಷ್ಟೇ” ಎಂಬ ತಾತ್ಸಾರ. ಆದರೆ ಈಗ ಸೆಣಬಿಗೆ ಕಾಲ ಬಂದಿದೆ. ಅದರಿಂದ ಮಾಡಿದ ಆಭರಣಗಳಿಗೆ ಈಗ ಭಾರೀ ಬೇಡಿಕೆ.
ಸೆಣಬಿನ ಇನ್ನೊಂದು ಉಪಯೋಗವನ್ನೀಗ ಸಂಶೋಧಕರು ಪತ್ತೆ ಹಚ್ಚಿದ್ದಾರೆ: ಸೆಣಬನ್ನು ಸಿಮೆಂಟಿಗೆ ಬೆರೆಸಿದರೆ, ಅದರ “ಸೆಟ್ಟಿಂಗ್” ನಿಧಾನಗೊಳಿಸುವ ಮೂಲಕ, ಸಿಮೆಂಟನ್ನು ಬಲಗೊಳಿಸುತ್ತದೆ.
“ಕಟ್ಟಡಗಳ ನಿರ್ಮಾಣ ಮಾಡುವಾಗ, ಚಾವಣಿಗಳಲ್ಲಿ ೨೮ ದಿನಗಳ ಅವಧಿ ನೀರು ನಿಲ್ಲಿಸುತ್ತಾರೆ – ಚಾವಣಿಯನ್ನು ಇನ್ನಷ್ಟು ಬಲಗೊಳಿಸಲಿಕ್ಕಾಗಿ. ಇದೇ ಉದ್ದೇಶಕ್ಕಾಗಿ ಗೋಡೆಗಳ ಮೇಲೆಯೂ ನೀರು ಚಿಮುಕಿಸುತ್ತಾರೆ. ಇದರ ಜೊತೆಗೆ, ಸಿಮೆಂಟಿನೊಂದಿಗೆ ಸೆಣಬು ಬೆರೆಸಿದರೆ, ಕಟ್ಟಡವನ್ನು ಇನ್ನಷ್ಟು ಬಲಗೊಳಿಸುತ್ತದೆ” ಎನ್ನುತ್ತಾರೆ, ಖರಗ್-ಪುರದ ಐಐಟಿಯ ಸುಭಾಷಿಸ್ ಬಿ. ಮಜುಂದಾರ್.
ಸಿಮೆಂಟಿಗೆ ಸೆಣಬನ್ನು ಸೇರಿಸಿದರೆ ಆಗುವ ಪರಿಣಾಮಗಳ ಬಗ್ಗೆ ಮಜುಂದಾರ್ ಮತ್ತು ಅವರ ತಂಡದ ಸದಸ್ಯರು ನಡೆಸಿದ ಅಧ್ಯಯನದ ಅನುಸಾರ ಸಿಮೆಂಟ್ ಬಿರುಸಾಗುವುದನ್ನು ಇದು ತಡ ಮಾಡುತ್ತದೆ.

ಕೆರೆಸರೋವರಗಳನ್ನು ಆಕ್ರಮಿಸಿ, ಅವುಗಳ ನೀರನ್ನು ಕೆಡಿಸುವ ಕಳೆ ಅಂತರಗಂಗೆ (ವಾಟರ್ ಹೈಯಾಸಿಂಥ್). ತ್ಯಾಜ್ಯ ತುಂಬಿದ ನೀರು ಸಿಕ್ಕರೆ ಕೇವಲ ೮ – ೧೦ ದಿನಗಳಲ್ಲಿ ಇಮ್ಮಡಿ ವಿಸ್ತೀರ್ಣಕ್ಕೆ ಹರಡುವ ಭಯಾನಕ ಕಳೆ.

ಇದರ ಬಗ್ಗೆ ಈಗೊಂದು ಒಳ್ಳೆಯ ಸುದ್ದಿ. ಇದು ಕಾರ್ಬೊ ಹೈಡ್ರೇಟುಗಳ ಆಕರ ಮತ್ತು ಇದರಿಂದ ಜೈವಿಕವಾಗಿ ಶಿಥಿಲೀಕರಣವಾಗುವ (ಬಯೋ ಡಿಗ್ರೇಡಬಲ್) ಪ್ಲಾಸ್ಟಿಕನ್ನು ತಯಾರಿಸಬಹುದು.

ಕಳೆಗಳು ಮತ್ತು ಹುಲ್ಲುಗಳಿಂದ ಪಡೆದ ಕಾರ್ಬೊ ಹೈಡ್ರೇಟುಗಳಿಂದ ಪ್ಲಾಸ್ಟಿಕನ್ನು ತಯಾರಿಸಬಹುದು ಎಂದು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ಸುಳಿವನ್ನು ಬೆಂಬತ್ತಿದ ತಮಿಳುನಾಡಿನ ತಿರುನಲ್ವೇಲಿಯ ಎಂ.ಎಸ್. ವಿಶ್ವವಿದ್ಯಾಲಯದ ಸಂಶೋಧಕರು, ಅಂತರಗಂಗೆಯನ್ನು ಪರಿಶೀಲಿಸಿದರು. ಅವರಿಗೆ ತಿಳಿದುಬಂದ ವಿಷಯ: ಅಂತರಗಂಗೆಯಿಂದ ಪಡೆದ ಲಿಗ್ನಿನ್, ಸೆಲ್ಯುಲೋಸ್ ಮತ್ತು ಹೆಮಿ- ಸೆಲ್ಯುಲೋಸ್ ಇಂತಹ ಸಕ್ಕರೆ-ಅಣುಗಳನ್ನು ಪಿಎಚ್ಬಿ (ಪಾಲಿ ಹೈಡ್ರೊಕ್ಸಿ ಬ್ಯುಟೈರೇಟ್) ಆಗಿ ಪರಿವರ್ತಿಸಬಹುದು. ಈ ಪಾಲಿಮರ್ ಜೈವಿಕ ಶಿಥಿಲೀಕರಣವಾಗುವ ಪ್ಲಾಸ್ಟಿಕ್ ತಯಾರಿಸಲು ಕಚ್ಚಾವಸ್ತು.

ಡಿಸೆಂಬರ್ ೨೦೧೪ರ ಮೂರನೇ ವಾರದಲ್ಲಿ ಬೆಂಗಳೂರು ನಗರ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ನಾಲ್ಕು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಳ್ಳಸಾಗಾಟದ ೧೬ ಟನ್ ರಕ್ತಚಂದನದ ಬೆಲೆ ರೂ.೪೭ ಕೋಟಿ (ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ).
ಕಳ್ಳಸಾಗಣೆದಾರರ ಒಂದು ಗ್ಯಾಂಗ್ ತುಮಕೂರು ಜಿಲ್ಲೆಯ ಸಿರಾದಿಂದ, ಇನ್ನೊಂದು ಗ್ಯಾಂಗ್ ಹೊಸಕೋಟೆಯ ಕಟ್ಟಿಗೇನ ಹಳ್ಳಿಯಿಂದ ಈ ಕಳ್ಳವ್ಯವಹಾರ ನಡೆಸುತ್ತಿತ್ತು. ಪೊಲೀಸರು ಕಳ್ಳಸಾಗಣೆದಾರರ ಸೋಗು ಹಾಕಿ, ಗ್ಯಾಂಗ್ಗಳನ್ನು ಸಂಪರ್ಕಿಸಿದ್ದರಿಂದ ಭಾರೀ ಕಳ್ಳಮಾಲು ವಶಪಡಿಸಿಕೊಳ್ಳಲು ಸಾಧ್ಯವಾಯಿತು.

ಪಾರಂಪರಿಕ ಔಷಧಿಗಳಲ್ಲಿ ಹಾಗೂ ಪಾತ್ರೆ ತೊಳೆಯಲು ಅಂಟುವಾಳದ ಬಳಕೆ ನಮಗೆಲ್ಲ ತಿಳಿದಿದೆ. ಈಗ ಅದರ ಹೊಸತೊಂದು ಉಪಯೋಗ ಪತ್ತೆಯಾಗಿದೆ: ಏಡಿಸ್ ಈಜಿಪ್ಟಿ ಸೊಳ್ಳೆಯ ನಿಯಂತ್ರಣಕ್ಕೆ ಅಂಟುವಾಳದ ಸಾರ ಪರಿಣಾಮಕಾರಿ. ಇದರಿಂದಾಗಿ, ಸೊಳ್ಳೆಗಳ ನಿಯಂತ್ರಣಕ್ಕಾಗಿ ವಿಷಭರಿತ ಪೀಡೆನಾಶಕಗಳ ಬಳಕೆ ಕಡಿಮೆಯಾಗಬಹುದು.

ಏಡಿಸ್ ಈಜಿಪ್ತಿ ಸೊಳ್ಳೆಯಿಂದಾಗಿ ಹರಡುವ ವೈರಸ್ ರೋಗಗಳು ಹಳದಿ ಜ್ವರ, ಡೆಂಗು ಮತ್ತು ಚಿಕುನ್‍ಗುನ್ಯ. ಈ ರೋಗಗಳಿಂದ ಜಗತ್ತಿನಲ್ಲಿ ಪ್ರತಿ ವರುಷ ಬಾಧಿತರಾಗುವವರ ಸಂಖ್ಯೆ ೩೦ ಮಿಲಿಯ.

ಈ ಸೊಳ್ಳೆಯ ಲಾರ್ವಾ ಮತ್ತು ಕೋಶದ ಎನ್‍ಜೈಮುಗಳ ಚಟುವಟಿಕೆಗೆ ಅಡ್ಡಿಯಾಗಿ, ಬೆಳವಣಿಗೆ ಕುಗ್ಗಿಸುವ ಗುಣ ಅಂಟುವಾಳದ ಕಾಯಿಗಳ ಸಾರದಲ್ಲಿದೆ. ಅಕ್ಟಾ ಟ್ರೊಪಿಕಾ ಪತ್ರಿಕೆಯ ಆನ್-ಲೈನ್ ಆವೃತ್ತಿಯಲ್ಲಿ ಇದು ವರದಿಯಾಗಿದೆ.

ಈ ಮುಂಚೆ ನಡೆಸಿದ ಒಂದು ಅಧ್ಯಯನದ ಫಲಿತಾಂಶ ಹೀಗಿದೆ: ಏಡಿಸ್ ಈಜಿಪ್ಟಿಯ ಲಾರ್ವಾಗಳ ಮೇಲೆ ೪ ಮಿಗ್ರಾ ಅಂಟುವಾಳ ಸಾರಕ್ಕೆ ಒಂದು ಮಿಲೀ ನೀರು ಬೆರೆಸಿದ ಮಿಶ್ರಣ ಪ್ರಯೋಗಿಸಿದಾಗ, ೧೮ ಗಂಟೆಗಳಲ್ಲಿ ಅವು ಸತ್ತವು. ಅದರ ಕೋಶಗಳ ಮೇಲೆ ೫ ಮಿಗ್ರಾ ಅಂಟುವಾಳ ಸಾರಕ್ಕೆ ಒಂದು ಮಿಲೀ ನೀರು ಬೆರೆಸಿದ ಮಿಶ್ರಣ ಪ್ರಯೋಗಿಸಿದಾಗ ಅವೆಲ್ಲವೂ ೧೮ ಗಂಟೆಗಳಲ್ಲಿ ನಾಶವಾದವು.

ಮನಮೋಹಕ ಸೀರೆಗಳ ತಯಾರಿಗೆ ಬಳಕೆಯಾಗುವ ರೇಷ್ಮೆಯ ಹೊಸ ಉಪಯೋಗ : ಮುರಿದ ಎಲುಬುಗಳನ್ನು ಸರ್ಜರಿಯಿಂದ ಜೋಡಿಸಲಿಕ್ಕಾಗಿ!
ಗೌಹಾತಿಯ ಭಾರತೀಯ ತಂತ್ರಜ್ನಾನ ಸಂಸ್ಥೆಯ (ಐಐಟಿ) ಮತ್ತು ಯುಎಸ್ಎ ಹಾಗೂ ಮೆಕ್ಸಿಕೋ ದೇಶಗಳ ಸಂಶೋಧಕರು ಜಂಟಿಯಾಗಿ ಅಧಿಕ ಶಕ್ತಿಯ ಎಲುಬಿನಂಟನ್ನು ತಯಾರಿಸಿದ್ದಾರೆ – ಪ್ರೋಟೀನ್, ನಾರುಗಳು ಮತ್ತು ಪಾಲಿಮರುಗಳನ್ನು ಬಳಸಿ.
ಮುರಿದ ಎಲುಬುಗಳನ್ನು ಜೋಡಿಸಲಿಕ್ಕಾಗಿ ತಾತ್ಕಾಲಿಕವಾಗಿ ಈ ಅಂಟು ಸವರಬೇಕು.ಕ್ಯಾಲ್ಸಿಯಮ್ ಪೊರೆ ಮೂಡಿ ಬರುವ ತನಕ ಈ ಎಲುಬಿನಂಟು ಉಳಿದಿರಬೇಕು. ಇಲಿಗಳ ಮೇಲೆ ಮೂಳೆವೈದ್ಯರು ನಡೆಸಿದ ಪ್ರಯೋಗಗಳಲ್ಲಿ, ಈ ಎಲುಬಿನಂಟು ಉತ್ತಮ ಫಲಿತಾಂಶ (ಈಗ ಬಳಕೆಯಾಗುವ ಎಲುಬಿಬಂಟುಗಳಿಗಿಂತ) ನೀಡಿದೆ.
ಇದರ ಒಂದು ಅನುಕೂಲ ಗಮನಾರ್ಹ. ಈಗಿನ ವಿಧಾನದಲ್ಲಿ, ಮುರಿದ ಎಲುಬುಗಳು ಜೋಡಣೆಯಾದ ಬಳಿಕ ಅವಕ್ಕೆ ತಗಲಿಸಿದ ಇಂಪ್ಲಾಂಟುಗಳನ್ನು ತೆಗೆಯಲಿಕ್ಕಾಗಿ ಎರಡನೇ ಸರ್ಜರಿ ಮಾಡಬೇಕಾಗುತ್ತದೆ. ರೇಷ್ಮೆಯ ಎಲುಬಿನಂಟಿನಿಂದ ಎಲುಬುಗಳನ್ನು ಕೂಡಿಸಿದರೆ, ಎರಡನೇ ಸರ್ಜರಿ ಅಗತ್ಯವಿಲ್ಲ.
ಹಲವು ಸರ್ಜರಿಗಳಲ್ಲಿ ಟಿಟಾನಿಯಂ ಅಥವಾ ಸೆರಾಮಿಕಿನಿಂದ ರಚಿಸಿದ ಇಂಪ್ಲಾಂಟುಗಳನ್ನು ತುಂಡಾದ ಎಲುಬಿನ ಭಾಗಗಳನ್ನು ಬಿಗಿಯಾಗಿ ಜೋಡಿಸಿಡಲು ಮೂಳೆವೈದ್ಯರು ಬಳಸುತ್ತಾರೆ. ಎಲುಬುಭಾಗಗಳು ಕೂಡಿದ ಬಳಿದ ಪುನಃ ಸರ್ಜರಿ ಮಾಡಿ ಅವನ್ನು ತೆಗೆಯುತ್ತಾರೆ. ಯಾಕೆಂದರೆ, ದೀರ್ಘಾವಧಿಯಲ್ಲಿ ಈ ಇಂಪ್ಲಾಂಟುಗಳಿಂದ ತೊಂದರೆಯಾದೀತು.

“ಸಿಟಿ” ಸ್ಕಾನಿಗೂ ಆನೆದಂತಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಆನೆದಂತದ ಸಾಚಾತನ ಸಾಬೀತು ಪಡಿಸಲು “ಸಿಟಿ” ಸ್ಕಾನಿನ ಬಳಕೆಯೇ ಆ ಸಂಬಂಧ.
ಈ ಸಾಧನೆ ಮಾಡಿದವರು ಬೆಂಗಳೂರಿನ ಮೂವರು ವೈದ್ಯರು. ಆ ಮೂಲಕ ಇಬ್ಬರು ಆರೋಪಿಗಳಿಂದ ಪೊಲೀಸರು ವಶ ಪಡಿಸಿಕೊಂಡ ಆರು ಆನೆದಂತಗಳು ನಕಲಿ ಎಂಬುದನ್ನು ಖಚಿತ ಪಡಿಸಲು ಪೊಲೀಸರಿಗೆ ಈ ವೈದ್ಯರಿಂದ ಸಹಾಯ.
ಮಾರ್ಚ್ ೨೦೧೪ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನಿನ ಪೊಲೀಸರಿಂದ ಕೆಂಗೆಲ್ ಹನುಮಂತಯ್ಯ ರಸ್ತೆಯಲ್ಲಿ ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ. ವನ್ಯಜೀವಿ ರಕ್ಷಣಾ ಕಾಯಿದೆ ಪ್ರಕಾರ ಆ ವ್ಯಕ್ತಿಗಳ ವಿರುದ್ಧ ಆರೋಪ ಹೊರಿಸಬೇಕಾದರೆ ಆನೆದಂತಗಳ ಸಾಚಾತನ ಖಚಿತ ಪಡಿಸಿಕೊಳ್ಳುವುದು ಅಗತ್ಯ.
ಪೊಲೀಸರು ಈ ಕೆಲಸಕ್ಕಾಗಿ ಸಂಪರ್ಕಿಸಿದ್ದು ಬೆಂಗಳೂರಿನ ಭಾರತೀಯ ವಿಜ್ನಾನ ಸಂಸ್ಥೆಯನ್ನು. ಈ ಸಂಸ್ಥೆಗೆ ಸಹಕರಿಸಿದ ಬೆಂಗಳೂರಿನ ಮೂವರು ವೈದ್ಯರು, ಆ ಆನೆದಂತಗಳನ್ನು ಲೋಹ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸಿನಿಂದ ಮಾಡಲಾಗಿದೆ ಎಂದು ತೋರಿಸಿಕೊಟ್ಟರು.

ಇದು ಮಹಾನ್ “ಅಳಿಲು ಸೇವೆ”ಯ ಕತೆ. ಸೈಬೀರಿಯಾದ ಹಿಮಗಡ್ಡೆಯ ಆಳದಲ್ಲಿ ೩೦,೦೦೦ ವರುಷ ಮುಂಚೆ ಅಳಿಲುಗಳು ರಕ್ಷಿಸಿಟ್ಟಿದ್ದ ಹಣ್ಣಿನ ಬೀಜದಿಂದ ಹೂಬಿಡುವ ಸಸಿಗಳನ್ನು ರಷ್ಯಾದ ವಿಜ್ನಾನಿಗಳು ಪುನರುಜ್ಜೀವನಗೊಳಿಸಿದ್ದಾರೆ.
ಸಾವಿರಾರು ವರುಷ ಹಳೆಯ ಬೀಜದಿಂದ ಸಸಿ ಬೆಳೆಸಿದ ಈ ದೊಡ್ಡ ಸುದ್ದಿ ಪ್ರಕಟಿಸಿದವರು ರಷ್ಯಾದ ವಿಜ್ನಾನ ಅಕಾಡೆಮಿಯ ಸಂಶೋಧಕರಾದ ಸ್ಟೆಟ್ಲಾನಾ ಯಶಿನಾ ಮತ್ತು ಡೇವಿಡ್ ಗಿಲಿಚಿನಸ್ಕಿ.
ಪ್ರಾಚೀನ ಜೈವಿಕ ವಸ್ತುಗಳ ಸಂಶೋಧನೆಯಲ್ಲಿ ಇದೊಂದು ಮೈಲಿಗಲ್ಲು. ಯಾಕೆಂದರೆ ಸತ್ತೇ ಹೋಗಿದೆ ಎನ್ನಬಹುದಾದ ಜೈವಿಕ ವಸ್ತುವಿನಿಂದ ಜೀವ ಮೂಡಿಸುವುದು ಅಸಾಮಾನ್ಯ ಕೆಲಸ.
ಪುರಾತನ ಸಸ್ಯವನ್ನು ಪುನರುಜ್ಜೀವನಗೊಳಿಸಿದ ಈ ವರೆಗಿನ ದಾಖಲೆ ೨,೦೦೦ ವರುಷ ಹಳೆಯ ತಾಳೆಬೀಜಗಳಿಗೆ ಸಂಬಂಧಿಸಿದ್ದು – ಅವು ಪತ್ತೆಯಾದದ್ದು ಇಸ್ರೇಲಿನ ಮೃತಸಮುದ್ರದ ಹತ್ತಿರದ ಮಸಾಡಾ ಕೋಟೆಯಲ್ಲಿ.
ರೇಡಿಯೋ ಕಾರ್ಬನ್ ಪರೀಕ್ಷೆಯು ಸೈಬೀರಿಯಾದಲ್ಲಿ ಪತ್ತೆಯಾದ ಸೈಲೆನೆ ಸ್ಟೇನೋಫಿಲ್ಲಾ ಸಸ್ಯದ ಆ ಬೀಜಗಳು ಸುಮಾರು ೩೧,೮೦೦ ವರುಷ ಹಳೆಯವು ಎಂದು ಖಚಿತ ಪಡಿಸಿವೆ.

Pages