ಇದೀಗ ನಮ್ಮ ಭವ್ಯ ಭಾರತ ಜಗತ್ತಿನ ಬೇರೆಲ್ಲ ದೇಶಗಳಿಗೂ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ: ಕೊಚ್ಚಿ ನೌಕಾ ನೆಲೆಯಲ್ಲಿ (ಕೊಚಿನ್ ಷಿಪ್‌ಯಾರ್ಡ್ ಲಿಮಿಟೆಡ್) ನಿರ್ಮಿಸಲಾದ ಮೊದಲ ವಿಮಾನವಾಹಕ ಯುದ್ಧ ನೌಕೆ, ಆಗಸ್ಟ್ ೨೦೨೧ರ ಆರಂಭದಲ್ಲಿ ಐದು ದಿನಗಳ ಮೊದಲ ಪ್ರಾಯೋಗಿಕ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

೪ ಆಗಸ್ಟ್ ೨೦೨೧ರಂದು ಈ ಪ್ರಾಯೋಗಿಕ ಯಾನ ಆರಂಭವಾಯಿತು. "ಯಾನದಲ್ಲಿ ಈ ಬೃಹತ್ ಯುದ್ಧನೌಕೆಯ ಕಾರ್ಯಕ್ಷಮತೆ ಅತ್ಯುತ್ತಮವಾಗಿತ್ತು” ಎಂದು ಭಾರತೀಯ ನೌಕಾ ಪಡೆಯ ವಕ್ತಾರರಾದ ವಿವೇಕ್ ಮಧ್ವಾಲ್ ತಿಳಿಸಿದ್ದಾರೆ.

ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಮಾದಿತ್ಯದ ನಂತರ ಭಾರತೀಯ ನೌಕಾ ಪಡೆಯ ಆ ವರ್ಗದ ಅತ್ಯಂತ ದೊಡ್ಡ
ನೌಕೆ ಇದು. ಇದರ ಅಳತೆಗಳು: ಉದ್ದ ೨೬೨ ಮೀ. ಅತ್ಯಂತ ಅಗಲದ ಭಾಗದಲ್ಲಿ ಅಗಲ ೬೨ ಮೀ. ಮತ್ತು ಎತ್ತರ ೫೯ ಮೀ.  

ಇದರಲ್ಲಿರುವ ಡೆಕ್‌(ಅಂತಸ್ತು)ಗಳ ಸಂಖ್ಯೆ ೧೪ ಮತ್ತು ವಿಭಾಗಗಳ ಸಂಖ್ಯೆ ೨,೩೦೦. ಇದರ ಪ್ರಯಾಣ ವೇಗ ೧೮ ನಾಟ್. ಇದು ಸಾಗಬಲ್ಲ ಗರಿಷ್ಠ ವೇಗ ೨೮ ನಾಟ್. ಇದು ಹೊರನೂಕುವ ನೀರಿನ ಪರಿಮಾಣ (ಡಿಸ್‌ಪ್ಲೇಸ್‌ಮೆಂಟ್) ೪೦,೦೦೦ ಟನ್.

ಮುಂಬೈಯ ವಿಟಿ (ವಿಕ್ಟೋರಿಯಾ ಟರ್ಮಿನಸ್) ರೈಲು ನಿಲ್ದಾಣ ಜಗತ್ ಪ್ರಸಿದ್ಧ. ಅಲ್ಲಿ “ಪೋಸ್ಟ್ ಆಫೀಸ್ ಎಲ್ಲಿದೆ?” ಎಂದು ನೀವು ಯಾರನ್ನಾದರೂ ಕೇಳಿದರೆ ಅವರು ನಿಮ್ಮನ್ನು ಕಣ್ಣರಳಿಸಿ ನೋಡಿಯಾರು. ಆದರೆ “ಜಿಪಿಓ ಎಲ್ಲಿದೆ?” ಎಂದು ಕೇಳಿದರೆ, ಖಂಡಿತವಾಗಿ ನಿಮಗೆ ದಾರಿ ತೋರಿಸುತ್ತಾರೆ.

ಆ ಮಹಾನಗರದ ಮಹಾ ಅಂಚೆ ಕಚೇರಿಯೇ ಜಿಪಿಓ ಅಂದರೆ ಜನರಲ್ ಪೋಸ್ಟ್ ಆಫೀಸ್. ಹಲವು ಬಾರಿ ಅಲ್ಲೇ ಹತ್ತಿರದ ಹೋಟೆಲೊಂದರಲ್ಲಿ ಉಳಿದಿದ್ದೆ - ವಿಟಿ ರೈಲು ನಿಲ್ದಾಣ ಅಲ್ಲಿಗೆ ಹತ್ತಿರ, (ರೈಲುಗಳ ಪ್ರಯಾಣ ಆರಂಭ ಮತ್ತು ಮುಕ್ತಾಯವಾಗುವ ಬೃಹತ್ ನಿಲ್ದಾಣ ಅದು.) ದೂರದೂರ ಹೋಗಬೇಕಾದಾಗ ರೈಲು ಹಿಡಿಯಲು ಸುಲಭ ಎಂಬ ಕಾರಣಕ್ಕಾಗಿ. ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಮುಂಬೈಗೆ ಹೋದಾಗ ಒಂದು ಅಥವಾ ಎರಡು ವಾರ ಹೋಟೆಲಿನಲ್ಲಿ ವಾಸ್ತವ್ಯ. ಆಗ ಅಂಚೆಡಬ್ಬಿಗೆ ಪತ್ರ ಹಾಕಲಿಕ್ಕಾಗಿ ಹಲವು ಬಾರಿ ಜಿಪಿಓಗೆ ಭೇಟಿ ನೀಡಿದ್ದಿದೆ.

ಜಿಪಿಓದ ಪಕ್ಕದಲ್ಲೇ ದೊಡ್ಡ ಬಸ್ ನಿಲ್ದಾಣ. ಆ ಮಹಾ ಗದ್ದಲದ ಹಾಗೂ ಬಿರುಸಿನ ಚಟುವಟಿಕೆಯ ಪ್ರದೇಶದಲ್ಲಿ, ಜಿಪಿಓ ಎಂಬ ಜಗತ್ತು ನಮ್ಮ ಗಮನಕ್ಕೆ ಬಾರದಿರುವ ಸಂಭವ ಜಾಸ್ತಿ.  ಅದನ್ನು ಕಣ್ತುಂಬಿಸಿಕೊಳ್ಳಬೇಕಾದರೆ ಜಿಪಿಓದ ಒಳಗೆ ಹೋಗಬೇಕು.

“ರಕ್ಷಾಬಂಧನ" ಮತ್ತೆ ಬರುತ್ತಿದೆ - ೨೨ ಆಗಸ್ಟ್ ೨೦೨೧ ಸೋದರಿಯರು ಸೋದರರ ಕೈಗಳ ಮಣಿಕಟ್ಟುಗಳಿಗೆ “ರಾಖಿ" ಕಟ್ಟಿ ಸಂಭ್ರಮಿಸುವ ಪಾವನ ದಿನ.

ಈ ಹಬ್ಬ ಮುಗಿದ ನಂತರ ಎದುರಾಗುವ ಪ್ರಶ್ನೆ: ರಾಖಿಗಳನ್ನು ಏನು ಮಾಡುವುದು? ಅವನ್ನು ಸಿಕ್ಕಸಿಕ್ಕಲ್ಲಿ ಎಸೆದರೆ ಪರಿಸರದಲ್ಲಿ ಕಸವಾಗಿ ಸಮಸ್ಯೆ. ರಾಖಿಗಳನ್ನು ಪ್ಲಾಸ್ಟಿಕಿನಿಂದ ತಯಾರಿಸಿದರಂತೂ ಅವು ಕರಗದ ಕಸವಾಗಿ ಹಲವಾರು ವರುಷ ಉಳಿದು, ಸಮಸ್ಯೆಯನ್ನು ಬಿಗಡಾಯಿಸುತ್ತವೆ.

ಇದಕ್ಕೊಂದು ಪರಿಹಾರ: ಪ್ರಕೃತಿಯಲ್ಲಿ ತಾನಾಗಿಯೇ ನಾಶವಾಗುವ (ಬಯೋ-ಡಿಗ್ರೇಡಬಲ್) ವಸ್ತುಗಳಿಂದ ರಾಖಿ ತಯಾರಿಸುವುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಖಿಯಲ್ಲೊಂದು ಬೀಜ ಇಡುವುದು; ಹಬ್ಬದ ನಂತರ ಆ ರಾಖಿಯನ್ನು ಮಣ್ಣಿನಲ್ಲಿ ಊರಿ, ವಾರಕ್ಕೊಮ್ಮೆ ನೀರೆರೆದರೆ, ಅದರಿಂದೊಂದು ಸಸಿ ಹುಟ್ಟಿ, ಮುಂದೆ ಹೆಮ್ಮರವಾಗಿ ಬೆಳೆದೀತು.

ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ - ಒರಿಸ್ಸಾದ “ಓರ್-ಮಾಸ್" ಎಂಬ ಸ್ವಸಹಾಯ ಗುಂಪು. ಒಂದು ತಿಂಗಳಿಂದೀಚೆಗೆ  ಈ ಗುಂಪಿನ ೨,೦೦೦ ಮಹಿಳೆಯರು ಪರಿಸರಸ್ನೇಹಿ ರಾಖಿಗಳ ತಯಾರಿಯಲ್ಲಿ ನಿರತರು. ಇವರು ಖೋರ್ಡಾ, ಜೈಪುರ್, ಜಗತ್ ಸಿಂಗ್ ಪುರ, ಮಯೂರ್-ಭಂಜ್ ಮತ್ತು ಕಿಯೋನ್‌ಜಾರ್ ಜಿಲ್ಲೆಗಳ ಮಹಿಳೆಯರು.

“ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇವಾಲಯಗಳಲ್ಲಲ್ಲ. ಇತರ ಆನೆಗಳ ಜೊತೆ ಕಾಡಿನಲ್ಲಿ ಜೀವಿಸಬೇಕಾದ ಆನೆಯೊಂದನ್ನು ಪೂಜಾ ವಿಧಿಗಳಿಗೆ ಬಳಸಿಕೊಳ್ಳುವುದೂ ಕ್ರೌರ್ಯ ಎನಿಸಿಕೊಳ್ಳುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಕಾಳಿಕಾದುರ್ಗ ಪರಮೇಶ್ವರಿ ದೇವಾಲಯ ಟ್ರಸ್ಟ್ ಸಲ್ಲಿಸಿದ ಅರ್ಜಿಯನ್ನು ೧೯ ಆಗಸ್ಟ್ ೨೦೨೧ರಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ವ್ಯಕ್ತಪಡಿಸಿದ ಅಭಿಪ್ರಾಯ ಇದು. (ವಾರ್ತಾ ಪತ್ರಿಕೆ ವರದಿ: ೨೦ ಆಗಸ್ಟ್ ೨೦೨೧)

ಪ್ರಕರಣದ ಹಿನ್ನೆಲೆ: ಕಾಳಿಕಾದುರ್ಗ ಪರಮೇಶ್ವರಿ ದೇವಾಲಯ ಖಾಸಗಿ ಪೂಜಾಸ್ಥಳವಾಗಿತ್ತು. ಅಲ್ಲಿ ಆನೆಯೊಂದನ್ನು ಸಾಕಲಾಗುತ್ತಿದೆ. ಇತ್ತೀಚೆಗೆ ಈ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದಿದೆ. ಅಲ್ಲಿನ ಆನೆಯನ್ನು ಸ್ಥಳಾಂತರಿಸಬಾರದೆಂದು ಸರಕಾರಕ್ಕೆ ನಿರ್ದೇಶಿಸಬೇಕೆಂಬುದು ಹೈಕೋರ್ಟಿಗೆ ಅರ್ಜಿದಾರರ ವಿನಂತಿ.

"ಗುಲಾಬಿ ರಂಗ್ ಕಾ ಹೈ ಅಗ್ನಿಪಂಖ್, ದೇಖ್ ಉಸೆ ಸಬ್ ರಹ್ ಜಾಯೇಗೆ ದಂಗ್”
(ಬೆಂಕಿ ಹಕ್ಕಿಯ ಗುಲಾಬಿ ರಂಗು, ಅದನ್ನು ನೋಡುತ್ತ ಎಲ್ಲರೂ ದಂಗು)
-ಮುಂಬಯಿಯ ಪಕ್ಷಿ ವೀಕ್ಷಕ ಸೂರಜ್ ಬಿಷ್ಣೋಯಿ, ೧೩ನೇ ವಯಸ್ಸಿನಲ್ಲೊಮ್ಮೆ, ಮುಂಬಯಿಯ “ವಾರ್ಷಿಕ ಅತಿಥಿ”ಗಳಾದ ಫ್ಲೆಮಿಂಗೋಗಳನ್ನು ಪ್ರಾಸಬದ್ಧವಾಗಿ ಬಣ್ಣಿಸಿದ ಪರಿ ಇದು.

"ನಾನು ಬಾಲಕನಾಗಿದ್ದಾಗ, ಮುಂಬಯಿ ಸಮುದ್ರ ತೀರದಲ್ಲಿ ಫ್ಲೆಮಿಂಗೋಗಳನ್ನು ನೋಡಲು ಹೋಗಿದ್ದೆ. ಆಗ ನನಗೆ ಕಾಣಿಸಿದ್ದು ಮೈಲುಮೈಲುದ್ದದ ಗುಲಾಬಿ ಬಣ್ಣದ ರತ್ನಗಂಬಳಿ ಮಾತ್ರ; ಅದರ ಹೊರತಾಗಿ ಬೇರೇನೂ ಕಾಣಿಸಲಿಲ್ಲ. ನಾನು ನೋಡುತ್ತಿದ್ದಂತೆಯೇ ಆ ರತ್ನಗಂಬಳಿ ಮೇಲಕ್ಕೆದ್ದು ಗಾಳಿಯಲ್ಲಿ ಹಾರಾಡಿತು. ಅಗ್ನಿರೆಕ್ಕೆಯ ಪಕ್ಷಿಗಳ ಆ ಮೊಟ್ಟಮೊದಲ ನೋಟ ನಾನು ಮರೆಯುವಂತಿಲ್ಲ. ನನ್ನ ಮಟ್ಟಿಗೆ ಅದು ಫ್ಲೆಮಿಂಗೋ ಮ್ಯಾಜಿಕ್ ರತ್ನಗಂಬಳಿ” ಎಂದು ಸೂರಜ್ ಬಿಷ್ಣೋಯಿ ನೆನಪು ಮಾಡಿಕೊಳ್ಳುತ್ತಾರೆ.

ರಾಮ್ ಸಿಂಗ್ ಮುಂಡ ಒರಿಸ್ಸಾದ ಕಿಯೊನ್‌ಜಾರ್ ಜಿಲ್ಲೆಯ ರುತಿಸಿಲ ಹಳ್ಳಿಯ ಬುಡಕಟ್ಟು ಜನಾಂಗದವನು.
(ರಾಜಧಾನಿ ಭುವನೇಶ್ವರದಿಂದ ೧೫೦ ಕಿಮೀ ದೂರದಲ್ಲಿರುವ ಹಳ್ಳಿ.) ಅದೊಂದು ದಿನ ಕಟ್ಟಿಗೆ ತರಲಿಕ್ಕಾಗಿ ಹಳ್ಳಿಯ ಅಂಚಿನಲ್ಲಿದ್ದ ಕಾಡಿಗೆ ಹೋಗಿದ್ದ. ಅಲ್ಲೊಂದು ಕರಡಿ ಮರಿ ಬಿದ್ದಿತ್ತು - ತಾಯಿ ಕರಡಿ ತೊರೆದು ಹೋಗಿದ್ದ ಮರಿ. ಅದು ನಿತ್ರಾಣದಿಂದ ಸಾಯುವಂತಿತ್ತು.

ಅಯ್ಯೋ ಪಾಪ ಎನಿಸಿತು ರಾಮ್ ಸಿಂಗ್ ಮುಂಡನಿಗೆ. ಅದನ್ನು ಮನೆಗೆ ಹೊತ್ತು ತಂದ. ಅದಕ್ಕೆ ಆಹಾರ ನೀಡಿ, ಆರೈಕೆ ಮಾಡಿದ. ನಿಧಾನವಾಗಿ ಕರಡಿ ಮರಿ ಚೇತರಿಸಿಕೊಂಡಿತು. ಆತ ಅದನ್ನು ತನ್ನ ಮಗುವಿನಂತೆಯೇ ಜತನದಿಂದ ಬೆಳೆಸಿದ. ರಾಮ್ ಸಿಂಗನ ಮಡದಿ ತೀರಿಕೊಂಡಿದ್ದರಿಂದ ಅವನ ಮಗಳು ಗುಲ್ಕಿ ಒಂಟಿ ಬಾಲಕಿಯಾಗಿದ್ದಳು. ಅವಳ ಸಂಗಾತಿಯಾಗಿ ಬೆಳೆಯಿತು ಕರಡಿ ಮರಿ. ಅದಕ್ಕೆ "ರಾಣಿ" ಎಂದು ಚಂದದ ಹೆಸರಿಟ್ಟಳು ಗುಲ್ಕಿ.

ರಾಮ್ ಸಿಂಗ್ ಎಲ್ಲಿಗೆ ಹೋದರೂ ಕರಡಿ ಮರಿ "ರಾಣಿ" ಅವನನ್ನು ಹಿಂಬಾಲಿಸುತ್ತಿತ್ತು. ಅವನು ಹಳ್ಳಿಯ ಮಾರುಕಟ್ಟೆಗೆ ಸೈಕಲಿನಲ್ಲಿ ಹೋಗುವಾಗಲೂ ಅವನ ಹಿಂದೆ ಸೈಕಲಿನ ಕ್ಯಾರಿಯರಿನಲ್ಲಿ ಕುಳಿತು ಸವಾರಿ ಮಾಡುತ್ತಿತ್ತು! (ಫೋಟೋ ೧ ನೋಡಿ) ಹೀಗೆಯೇ ಒಂದೂವರೆ ವರುಷ ದಾಟಿತು.

ನಿನ್ನೆ ರಾತ್ರಿ ಮಂಗಳೂರಿನ ಬಿಜೈಯ ನಮ್ಮ ಮನೆಯ ಕೈತೋಟದಲ್ಲಿ ಬ್ರಹ್ಮಕಮಲ ಅರಳಿತು - ಇದು ಒಂದು ರಾತ್ರಿಯ ವಿಸ್ಮಯ. ಯಾಕೆಂದರೆ ವರುಷಕ್ಕೊಮ್ಮೆ ಅರಳುವ ಅದ್ಭುತ ಹೂ ಬ್ರಹ್ಮಕಮಲ. ರಾತ್ರಿಯ ಗಾಢ ಕತ್ತಲಿನಲ್ಲಿ ಬೆಳಗುವ ಈ ಅಪ್ಪಟ ಬಿಳಿ ಬಣ್ಣದ, ನಕ್ಷತ್ರ ದಳಗಳ ಹೂ ಮನಮೋಹಕ. ರಾತ್ರಿ ಸುಮಾರು ೮ ಗಂಟೆಯ ನಂತರ ಹಂತಹಂತವಾಗಿ ೮ ಇಂಚು ವ್ಯಾಸದ ಹೂವಾಗಿ ಅರಳುವುದನ್ನು ನೋಡುವುದೇ ಸಂಭ್ರಮ.

ಸೃಷ್ಟಿಕರ್ತ ದೇವರಾದ ಬ್ರಹ್ಮನ ಕಮಲವೆಂದೇ ಇದು ಭಾರತೀಯರಿಗೆ ಪರಿಚಿತ. ಅರಳಿದ ಈ ಹೂವನ್ನು ನೋಡುವವರು ಅದೃಷ್ಟವಂತರು ಎಂಬ ನಂಬಿಕೆ. ಹಿಮಾಲಯದ ಕಣಿವೆಗಳಲ್ಲಿ ಹಲವೆಡೆಗಳಲ್ಲಿ ಬೆಳೆಯುವ ಹೂ ಇದು. ಅಲ್ಲಿನ ಪ್ರಸಿದ್ಧ ಕೇದಾರನಾಥ, ಬದರಿನಾಥ ಮತ್ತು ತುಂಗನಾಥ ದೇವಾಲಯಗಳಲ್ಲಿ ದೇವರ ಪೂಜೆಯಲ್ಲಿ ಇದರ ಅರ್ಪಣೆ.

ಬ್ರಹ್ಮಕಮಲದ ಸಸ್ಯಶಾಸ್ತ್ರೀಯ ಹೆಸರು ಸಾಸುರಿಯಾ ಒಬ್ವಾಲಟಾ. ಈ ಹೂ ಅರಳುವಾಗ ಗಾಢ ವಾಸನೆ ಹೊರಹೊಮ್ಮುತ್ತದೆ. ಈ ತೀವ್ರ ವಾಸನೆ ಕೆಲವರಿಗೆ ಇಷ್ಟವಾಗದು. ಇದರ ಗಿಡ ಕಳ್ಳಿ ಗಿಡದಂತಿದೆ ಮತ್ತು ಹೂ ಆರ್ಕಿಡ್ ಹೂವಿನಂತಿದೆ. ಆದ್ದರಿಂದ ಇದಕ್ಕೆ “ಆರ್ಕಿಡ್ ಕಳ್ಳಿ ಗಿಡ" ಎಂಬ ಹೆಸರೂ ಇದೆ. ಇದು “ದೇವಭೂಮಿ" ಉತ್ತರಖಂಡದ “ರಾಜ್ಯದ ಹೂ” ಎಂದು ಘೋಷಿತವಾಗಿದೆ. ಭಾರತೀಯ ಅಂಚೆ ಇಲಾಖೆ ಈ ಹೂವಿನ ಚಿತ್ರವಿರುವ ಅಂಚೆಚೀಟಿ ಬಿಡುಗಡೆಗೊಳಿಸಿದೆ.

ಬ್ರಹ್ಮಕಮಲದ ಔಷಧೀಯ ಉಪಯೋಗಗಳು ಹಲವು:

Bharata Natya Dancer, India

೧೦೦.ಭಾರತೀಯ ನೃತ್ಯ - ಸಾವಿರಾರು ವರುಷಗಳ ಸಾಂಸ್ಕೃತಿಕ ಸಂಪತ್ತು
ಭಾರತೀಯ ನೃತ್ಯದಲ್ಲಿ ಎರಡು ಶೈಲಿಗಳು: ಶಾಸ್ತ್ರೀಯ ಮತ್ತು ಜಾನಪದ. ಭಾರತ ಸರಕಾರದ ಸಂಗೀತ ನಾಟಕ ಅಕಾಡೆಮಿ ಎಂಟು ಪಾರಂಪರಿಕ ನೃತ್ಯ ಶೈಲಿಗಳನ್ನು ಭಾರತೀಯ ಶಾಸ್ತ್ರೀಯ ನೃತ್ಯಗಳೆಂದು ಮಾನ್ಯ ಮಾಡುತ್ತದೆ. ಅವು: ಭರತನಾಟ್ಯ, ಕಥಕಳಿ, ಕಥಕ್, ಕುಚಿಪುಡಿ, ಒಡಿಸ್ಸಿ, ಸತ್ತ್ರಿಯ, ಮಣಿಪುರಿ ಮತ್ತು ಮೋಹಿನಿಯಾಟ್ಟಮ್.(ಫೋಟೋ: ಭರತನಾಟ್ಯ ಕಲಾವಿದೆ)

ಭರತನಾಟ್ಯ ಮತ್ತು ಇತರ ಶಾಸ್ತ್ರೀಯ ನೃತ್ಯಶೈಲಿಗಳ ಮೂಲ "ನಾಟ್ಯ ಶಾಸ್ತ್ರ" ಎಂಬ ಪುರಾತನ ಸಂಸ್ಕೃತ ಪಠ್ಯದಲ್ಲಿದೆ. ಶಾಸ್ತ್ರೀಯ ನಾಟ್ಯಶೈಲಿಗಳ ಮೇಲೆ ಹಿಂದೂ ಧರ್ಮದ ಪ್ರಭಾವ ಎದ್ದು ಕಾಣಿಸುತ್ತದೆ. ಮಹಾಶಿವನನ್ನು ನೃತ್ಯದ ಮಹಾಗುರುವೆಂದೇ ನಂಬಲಾಗಿದೆ. ಅದಕ್ಕೇ ಆತನಿಗೆ ನಟರಾಜನೆಂಬ ಹೆಸರು. ನಟರಾಜನ ಪ್ರಾಚೀನ ವಿಗ್ರಹಗಳು (ಶಿಲೆ ಮತ್ತು ತಾಮ್ರದ) ನಟರಾಜ ನರ್ತಿಸುವ ವಿವಿಧ ಭಂಗಿಗಳಲ್ಲಿವೆ. ದೇವಸ್ಥಾನಗಳಲ್ಲಿ ದೇವರ ಆರಾಧನೆಗಾಗಿ ಮತ್ತು ಅರಮನೆಗಳಲ್ಲಿ ರಾಜ ಹಾಗೂ ರಾಜಪರಿವಾರದವರ ಆಸ್ವಾದನೆಗಾಗಿ ನರ್ತಕರೂ ನರ್ತಕಿಯರೂ ನರ್ತಿಸುತ್ತಿದ್ದರು.

M. S. Subbulakshmi, Great Karnatak Musician, India

೯೯.ಭಾರತೀಯ ಸಂಗೀತ - ಶತಮಾನಗಳ ಸಾಂಸ್ಕೃತಿಕ ಸಂಪತ್ತು
ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತೀಯ ಸಂಗೀತವು ಇಲ್ಲಿನ ಭೌಗೋಲಿಕ ವಿಸ್ತಾರ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿ ಈ ದೇಶದ ಬೆಲೆ ಕಟ್ಟಲಾಗದ ಸಾಂಸ್ಕೃತಿಕ ಸಂಪತ್ತಾಗಿದೆ.

ಭಾರತದ ಸಂಗೀತ ಸಾಮ್ರಾಜ್ಯದ ಎರಡು ಪ್ರಧಾನ ಕವಲುಗಳು: ದಕ್ಷಿಣ ಭಾರತ ಮೂಲದ ಕರ್ನಾಟಕ ಸಂಗಿತ ಮತ್ತು ಉತ್ತರ ಭಾರತ ಮೂಲದ ಹಿಂದುಸ್ಥಾನಿ ಸಂಗೀತ.

ಭಾರತೀಯ ಸಂಗೀತದ ಶುದ್ಧ ಸ್ವರಗಳು: ಸ, ರಿ, ಗ, ಮ, ಪ, ದ, ನಿ. ಈ ಸಪ್ತಸ್ವರಗಳೇ “ರಾಗ"ಗಳ ಬುನಾದಿ. ಈ ಸ್ವರಗಳ ವಿಭಿನ್ನ ರೂಪಗಳು ಅವನ್ನು “ಕೋಮಲ" ಅಥವಾ “ತೀವ್ರ" ಸ್ವರಗಳಾಗಿ ಬದಲಾಯಿಸುತ್ತವೆ. ಆದರೆ. "ಸ" ಮತ್ತು "ಪ" ಯಾವತ್ತೂ ಶುದ್ಧ ಸ್ವರಗಳಾಗಿರುತ್ತವೆ. ಆದ್ದರಿಂದ ಅವೆರಡಕ್ಕೆ “ಅಚಲ ಸ್ವರ”ಗಳೆಂಬ ಹೆಸರು; ಉಳಿದ ಐದು ಸ್ವರಗಳಿಗೆ “ಚಲ ಸ್ವರ”ಗಳೆಂಬ ಹೆಸರು.

Warli painting by Jivya Soma Mashe, Thane, India

೯೮.ಭಾರತೀಯ ಚಿತ್ರಕಲೆ - ವಿವಿಧತೆಯಲ್ಲಿ ಏಕತೆ ಸಾರುವ ಸಾಂಸ್ಕೃತಿಕ ಸಂಪತ್ತು
             
ಸೂಕ್ಷ್ಮತೆ ಮತ್ತು ವಿವಿಧತೆಗೆ ಹೆಸರಾದ ಭಾರತೀಯ ಚಿತ್ರಕಲೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಹಲವಾರು ಸ್ಥಳಗಳಲ್ಲಿ ಪ್ರಾಚೀನ ಜನರು ಗವಿಗಳಲ್ಲಿ ಬರೆದ ಚಿತ್ರಗಳನ್ನು ಪತ್ತೆ ಮಾಡಲಾಗಿದೆ. ಭಾರತದ ಅತ್ಯಂತ ಪುರಾತನ ಚಿತ್ರಗಳು ಮಧ್ಯಪ್ರದೇಶದ ವಿಂಧ್ಯಾ ಪರ್ವತ ಶ್ರೇಣಿಯ ಭೀಮ್ ಬೇಟ್ಕಾದಲ್ಲಿ ಪತ್ತೆಯಾಗಿವೆ. ಇವು ೧೦,೦೦೦ ವರುಷ ಹಳೆಯ ಚಿತ್ರಗಳೆಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಮನುಷ್ಯರು, ಪ್ರಾಣಿಗಳು ಮತ್ತು ಬೇಟೆಯ ಚಿತ್ರಗಳನ್ನು ಕಾಣಬಹುದು.

ಪ್ರಾಚೀನ ಭಾರತೀಯ ಚಿತ್ರಗಳಿಗೆ ರಾಮಾಯಣ, ಮಹಾಭಾರತದ ಪ್ರಸಂಗಗಳೂ, ಪುರಾಣದ ಕತೆಗಳೂ ಸ್ಫೂರ್ತಿ ಎಂಬುದನ್ನು ಕಾಣಬಹುದು. ಜೊತೆಗೆ, ಭಾರತೀಯ ಚಿತ್ರಕಲೆಯಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳ ಗಾಢ ಪ್ರಭಾವವನ್ನು ಗುರುತಿಸಬಹುದು.

೧೯ನೇ ಶತಮಾನದಿಂದ ಭಾರತದಲ್ಲಿ ಆಧುನಿಕ ಚಿತ್ರಕಲೆಯ ಬೆಳವಣಿಗೆಯನ್ನು ಗುರುತಿಸಬಹುದು. ೨೦ನೇ ಶತಮಾನದ ಭಾರತದ ಚಿತ್ರಕಾರರಲ್ಲಿ ಕೇರಳದ ರಾಜಾ ರವಿವರ್ಮ ಅವರನ್ನು ಉಲ್ಲೇಖಿಸಲೇ ಬೇಕು. ಅವರು ಚಿತ್ರಿಸಿದ ಅದ್ಭುತ ಚಿತ್ರಗಳು ಇಂದಿಗೂ ಭಾರತದಲ್ಲಿ ಭಾರೀ ಜನಪ್ರಿಯ.

ಭಾರತೀಯ ಚಿತ್ರಕಲೆಯಲ್ಲಿ ಮುಖ್ಯವಾಗಿ ಹತ್ತು ಶೈಲಿಗಳನ್ನು ಗುರುತಿಸಲಾಗಿದೆ.

Pages