ನಿನ್ನೆ, 19 ಮೇ 2022ರಂದು ಕರ್ನಾಟಕದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟ. ಇವತ್ತಿನ ದಿನ ಪತ್ರಿಕೆಗಳಲ್ಲಿ ಅದುವೇ ಮುಖಪುಟ ಸುದ್ದಿ. ಈ ಸಲದ ಫಲಿತಾಂಶದ ಕೆಲವು ವಿಶೇಷತೆಗಳು:
-ಪರೀಕ್ಷೆಗೆ ಹಾಜರಾದ ಸುಮಾರು 8.53 ಲಕ್ಷ ವಿದ್ಯಾರ್ಥಿಗಳಲ್ಲಿ ಪಾಸಾದವರು ಶೇಕಡಾ 85.63. ಇದು ದಶಕದ ದಾಖಲೆ. ಕೊರೋನಾ ವೈರಸಿನ ಎರಡನೇ ಸುತ್ತಿನ ದಾಳಿಯಿಂದಾಗಿ, 2021-22 ಶೈಕ್ಷಣಿಕ ವರುಷದಲ್ಲಿ ಜೂನ್‌ನಿಂದ ಮಾರ್ಚ್ ಅವಧಿಯಲ್ಲಿ ದೀರ್ಘಾವಧಿ ಶಾಲೆಗಳು ಮುಚ್ಚಿದ್ದವು. ಅಂದರೆ, ವಿದ್ಯಾರ್ಥಿಗಳು ಹಿಂದಿನ ವರುಷಗಳಷ್ಟು ಅವಧಿ ಶಾಲೆಗೆ ಹಾಜರಾಗದಿದ್ದ ವರುಷದಲ್ಲಿ ದಾಖಲೆ ಸಂಖ್ಯೆಯಲ್ಲಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ!

-ಶೇಕಡಾ 100 (ಒಟ್ಟು ಅಂಕ 625) ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 145. ಇದೂ ಒಂದು ದಾಖಲೆ. ಅಂದರೆ, ವಿದ್ಯಾರ್ಥಿಗಳು ಬಹುಪಾಲು ತಮ್ಮ ಪಾಡಿಗೆ ತಾವು ಕಲಿತಾಗ, ಶೇ.100 ಅಂಕ ಗಳಿಸಿದವರ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ!

-ಶೇಕಡಾ 100 ಅಂಕಕ್ಕೆ ತೀರಾ ಹತ್ತಿರದ ಅಂಕ ಗಳಿಸಿದವರ ಸಂಖ್ಯೆ 3,000 ದಾಟಿರುವುದೂ ದಾಖಲೆ:
ಅಂಕ 624 ಗಳಿಸಿದವರು 309; ಅಂಕ 623 ಗಳಿಸಿದವರು 472; ಅಂಕ 622 ಗಳಿಸಿದವರು 615;
ಅಂಕ 621 ಗಳಿಸಿದವರು 706 ಮತ್ತು ಅಂಕ 620 ಗಳಿಸಿದವರು 773.
ಅಂದರೆ, ಶಾಲಾ ಪಾಠಗಳು ಸರಿಯಾಗಿ ನಡೆಯದಿದ್ದರೂ ಇಂತಹ ಸಾಧನೆ ಸಾಧ್ಯ.

ಈ ವಾರ ಕರ್ನಾಟಕ ಸರಕಾರದ ಆದೇಶದಂತೆ ಬೇಗನೇ ಶಾಲೆಗಳು ಶುರುವಾಗಿವೆ (ಜೂನ್ ಒಂದರ ಬದಲಾಗಿ ಮೇ 16ರಂದು). ಎಸ್.ಎಸ್.ಎಲ್.ಸಿ.ಯ ಫಲಿತಾಂಶ ಇವತ್ತು ಪ್ರಕಟವಾಗಿದ್ದು, ಇನ್ನು ಜೂನಿಯರ್ ಕಾಲೇಜುಗಳೂ ಶುರುವಾಗಲಿವೆ. ಹೆತ್ತವರಿಗೂ ವಿದ್ಯಾರ್ಥಿಗಳಿಗೂ ಶಾಲೆಕಾಲೇಜುಗಳ ಪ್ರವೇಶದ ಆತಂಕ. ಜೊತೆಗೆ ಅತ್ಯಧಿಕ ಅಂಕ ಗಳಿಸುವ ಆತಂಕ. ಯಾಕೆಂದರೆ, ಈ ವರುಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹಲವಾರು ವಿದ್ಯಾರ್ಥಿಗಳು ಶೇಕಡಾ 100 (ಅಂದರೆ 625) ಅಂಕ ಗಳಿಸಿದ್ದಾರೆ.

ಈ ಆತಂಕವೇ ಆನ್-ಲೈನ್ ಶಿಕ್ಷಣ ಕಂಪೆನಿಗಳ ಆಮಿಷ ಜಾಲಕ್ಕೆ ಆಧಾರ. ಭಾರತದ ಈ ಕಂಪೆನಿಗಳ ವ್ಯವಹಾರ ಜಗತ್ತಿನಲ್ಲಿ ಅತ್ಯಧಿಕ ವೇಗವಾಗಿ ಬೆಳೆಯುತ್ತಿರುವ ವ್ಯವಹಾರ ಎಂದರೆ ನಂಬುತ್ತೀರಾ? ಆನ್-ಲೈನ್ ವಿಡಿಯೋ ಪಾಠಗಳು ಮತ್ತು ಇಂಟರ್ ಆಕ್ಟಿವ್ ಪಾಠಗಳ ಅಬ್ಬರದಲ್ಲಿ ವಿದ್ಯಾರ್ಥಿಗಳು ಮತ್ತು ಹೆತ್ತವರು ಮುಳುಗಿ ಹೋಗುತ್ತಿದ್ದಾರೆ. ಬೈಜುಸ್, ಅನ್-ಅಕಾಡೆಮಿ, ವೇದಾಂತು ಮುಂಚೂಣಿಯಲ್ಲಿರುವ ಈ ವಾಣಿಜ್ಯರಂಗದ ಮೌಲ್ಯ 750 ಮಿಲಿಯನ್ ಡಾಲರುಗಳು ಎಂದು 2020ರಲ್ಲಿ ಅಂದಾಜಿಸಲಾಗಿತ್ತು. ಇನ್ನು ಮೂರು ವರುಷಗಳಲ್ಲಿ, 2025ರ ಹೊತ್ತಿಗೆ ಇದರ ಮೌಲ್ಯ ನಾಲ್ಕು ಬಿಲಿಯನ್ ಡಾಲರುಗಳಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ. 2021ರಲ್ಲಿ ಬೈಜುಸ್ ಒಂದರಲ್ಲೇ 115 ಮಿಲಿಯನ್ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆಂದು ವರದಿ.

ಬಾಹ್ಯಾಕಾಶದಲ್ಲಿ ಕೋಟಿಗಟ್ಟಲೆ ಮಾನವ ನಿರ್ಮಿತ ಆಕಾಶಕಾಯಗಳು ಭೂಮಿಯನ್ನು ಸುತ್ತುತ್ತಿವೆ. ಕೆಲವು ತಿಂಗಳ ಹಿಂದೆ, ಚೀನಾದ ಕೃತಕ ಉಪಗ್ರಹವೊಂದರ ಭಾಗಗಳು ಯು.ಎಸ್.ಎ. ದೇಶದ ಮೇಲೆ ಬೀಳಬಹುದೆಂದು ಸುದ್ದಿಯಾಗಿತ್ತು. ಇದೀಗ ಮೇ 2022ರ ಎರಡನೇ ವಾರದಲ್ಲಿ ಗುಜರಾತಿನ ಕೆಲವು ಸ್ಥಳಗಳಲ್ಲಿ ಆಕಾಶದಿಂದ ಫುಟಬಾಲ್ ಗಾತ್ರದ ಗೋಲಾಕಾರದ (ಕಪ್ಪು ಮತ್ತು ಬೆಳ್ಳಿ ಬಣ್ಣದ) ಲೋಹದ ವಸ್ತುಗಳು ಜಮೀನಿಗೆ ಬಿದ್ದಿವೆ. ಸುರೇಂದ್ರನಗರ ಜಿಲ್ಲೆಯ ಸಯ್ಲಾ ಗ್ರಾಮ, ಖೇಡಾ ಜಿಲ್ಲೆಯ ನಡಿಯಾಡ್ ಪಟ್ಟಣ ಮತ್ತು ಆನಂದ್ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ಈ ವಿದ್ಯಮಾನ ವರದಿಯಾಗಿದೆ. ಇದರಿಂದಾಗಿ ಅಲ್ಲಿನ ಜನರಲ್ಲಿ ಆತಂಕ ಮೂಡಿದೆ.

ಇದೆಲ್ಲ ಶುರುವಾದದ್ದು ಎಪ್ರಿಲ್ 21, 1961ರಂದು. ಆ ದಿನ, ಅಂದಿನ ಸೋವಿಯೆತ್ ಯೂನಿಯನಿನ ಬೈಕನೂರ್ ಕೊಸ್ಮೊಡ್ರೋಮ್‌ ಉಡ್ಡಯನ ಕೇಂದ್ರವು ಮಾನವ ಚರಿತ್ರೆಯ ಅಪೂರ್ವ ಸಾಧನೆಗೆ ಸಜ್ಜಾಗಿ ನಿಂತಿತ್ತು. ನೋಡನೋಡುತ್ತಿದ್ದಂತೆಯೇ ಯೂರಿ ಗಗಾರಿನ್ ಎಂಬಾತನಿದ್ದ ವೊಸ್ಟೊಕ್ 3ಕೆ.ಎ. ಎಂಬ ಹೆಸರಿನ ಬಾಹ್ಯಾಕಾಶ ವಾಹಕ ಆಕಾಶಕ್ಕೇರಿತು. ಆ ಮೂಲಕ ಯೂರಿ ಗಗಾರಿನ್ ಭೂಮಿಯಿಂದ ಬಾಹ್ಯಾಕಾಶಕ್ಕೆ ಚಿಮ್ಮಿದ ಮೊತ್ತಮೊದಲ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.

ಇವತ್ತು ಬುದ್ಧ ಪೂರ್ಣಿಮೆ. "ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂಬ ಕವನದ ಸಾಲು ನೆನಪಾಯಿತು. ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ ಹುಟ್ಟಿದ ಮತ್ತು ಆತನಿಗೆ ಜ್ನಾನೋದಯವಾದ ಪವಿತ್ರ ದಿನವಿದು. ವೈಶಾಖ ತಿಂಗಳ ಹುಣ್ಣಿಮೆಯ ದಿನ. (16-5-2022)

ಬುದ್ಧ ಪೂರ್ಣಿಮೆಯ ದಿನ ಆತನ ಅನುಯಾಯಿಗಳು ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ಮಂದಿರಕ್ಕೆ ಭೇಟಿ ನೀಡುತ್ತಾರೆ. ಇದು ಯುನೆಸ್ಕೋದ ಜಾಗತಿಕ ಪಾರಂಪರಿಕ ತಾಣಗಳಲ್ಲೊಂದು. ಬೌದ್ಧ ಧರ್ಮವು ಭಾರತದ ಗಡಿಗಳನ್ನು ದಾಟಿ, ಶ್ರೀಲಂಕಾ ಹಾಗೂ ಪೂರ್ವ ಏಷ್ಯಾದ ದೇಶಗಳಲ್ಲೆಲ್ಲ ಹಬ್ಬಿ, ಚೀನಾ ಮತ್ತು ಜಪಾನಿನ ವರೆಗೂ ವ್ಯಾಪಿಸಿದ್ದೇ ಬುದ್ಧನ ಉಪದೇಶಗಳು ಜನಸಾಮಾನ್ಯರ ಮನತಟ್ಟುತ್ತವೆ ಎಂಬುದರ ಪುರಾವೆ.

ಮಹಾಬೋಧಿ ಮಂದಿರದ ಆವರಣದಲ್ಲಿರುವ ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಜ್ನಾನೋದಯವಾಗಿ 2,500 ವರುಷಗಳು ದಾಟಿವೆ. ಇಂದಿಗೂ ಜನರನ್ನು ಜಾಗೃತಗೊಳಿಸಿ, ಅಧ್ಯಾತ್ಮದ ಬದುಕಿನತ್ತ ಸೆಳೆಯುವ ಬುದ್ಧನ ಉಪದೇಶಗಳು ಸಾರ್ವಕಾಲಿಕ. ನಮ್ಮಲ್ಲಿ ಚಿಂತನೆಯ ಕಿಡಿ ಹಚ್ಚಿ, ಅರಿವಿನ ದೀಪ ಬೆಳಗಿಸಬಲ್ಲ ಬುದ್ಧನ ಕೆಲವು ಚಿಂತನೆಗಳು ಇಲ್ಲಿವೆ:

-ಪ್ರತಿದಿನ ಮುಂಜಾನೆ ನಮಗೆ ಮರುಹುಟ್ಟು. ಆದ್ದರಿಂದ, ಇವತ್ತು ನಾವು ಏನು ಮಾಡುತ್ತೇವೆ ಅನ್ನೋದೇ ಎಲ್ಲದಕ್ಕಿಂತ ಮುಖ್ಯ.

-ಈ ಮೂರನ್ನು ದೀರ್ಘ ಕಾಲ ಮುಚ್ಚಿಡಲು ಸಾಧ್ಯವಿಲ್ಲ: ಸೂರ್ಯ, ಚಂದ್ರ ಮತ್ತು ಸತ್ಯ.

ನಾಳೆ, 16 ಮೇ 2022ರಿಂದ ಕರ್ನಾಟಕದಲ್ಲಿ ಶಾಲೆಗಳು ಶುರು. ಕಳೆದ ವರುಷ ಕೊರೋನಾ ವೈರಸ್ ದಾಳಿಯ ಎರಡನೆ ವರುಷವೂ ಶಾಲಾ ಅವಧಿ ಕಡಿಮೆ ಮಾಡಬೇಕಾಯಿತು. ಆ ಹಿನ್ನೆಲೆಯಲ್ಲಿ, ಜೂನ್ ಮೊದಲ ದಿನದ ಬದಲಾಗಿ ಈ ವರುಷ ಬೇಗನೇ ಶಾಲೆಗಳ ಪುನರಾರಂಭ.

ಶಾಲೆಗಳಲ್ಲಿ ಕಲಿಯುವ ತಮ್ಮ ಮಕ್ಕಳು ಉತ್ತಮ ಅಂಕ ಗಳಿಸಬೇಕೆಂದು ಹೆತ್ತವರು ಹತ್ತುಹಲವು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾರೆ. ಆದರೆ ಹಲವು ಹೆತ್ತವರಿಗೆ ಉತ್ತಮ ಅಂಕ ಗಳಿಕೆಯಲ್ಲಿ ಚಂದದ ಕೈಬರಹದ ಪಾತ್ರದ ಅರಿವಿಲ್ಲ. ಅವರು ಒಪ್ಪಿಕೊಳ್ಳಬೇಕಾದ ಸೂತ್ರ: ಕೇವಲ ಕೈಬರಹವನ್ನು ಚಂದ ಮಾಡಿದರೆ, ಶೇಕಡಾ 25ರಷ್ಟು ಹೆಚ್ಚು ಅಂಕ ಗಳಿಸಲು ಸಾಧ್ಯ!

ಯಾಕೆಂದರೆ, ಕೈಬರಹ ಚಂದವಿಲ್ಲದಿದ್ದರೆ ಬರೆದದ್ದನ್ನು ಓದುವ ಎಲ್ಲರಿಗೂ ಕಿರಿಕಿರಿಯಾಗುತ್ತದೆ. ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡುವ ಶಿಕ್ಷಕರು ದಿನದಿನವೂ ನೂರಾರು ಉತ್ತರಪತ್ರಿಕೆಗಳನ್ನು ನೋಡಿನೋಡಿ ಹೈರಾಣಾಗಿರುತ್ತಾರೆ. ಚಂದವಿಲ್ಲದ, ಸುಲಭವಾಗಿ ಓದಲಾಗದ ಕೈಬರಹ ಕಂಡಾಗ ಸಹಜವಾಗಿಯೇ ಅವರಿಗೆ ಕಿರಿಕಿರಿಯಾಗುತ್ತದೆ, ಇದರಿಂದಾಗಿ ಅವರು ವಕ್ರವಕ್ರ ಕೈಬರಹದಲ್ಲಿ ಬರೆದ ಉತ್ತರಗಳಿಗೆ ನೀಡುವ ಅಂಕ ಕಡಿಮೆಯಾಗುತ್ತದೆ, ಅಲ್ಲವೇ?

ಬೇಸಗೆ ಮುಗಿಯುತ್ತಿದೆ, ಮಾವಿನ ಹಣ್ಣಿನ ಹಂಗಾಮೂ ಮುಗಿಯುತ್ತಿದೆ. ಈ ವರುಷ (2022) ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಕಡಿಮೆ. ಯಾಕೆಂದರೆ ಫಸಲು ಕಡಿಮೆ. ಹಾಗಾಗಿ ಬೆಲೆಯೂ ದುಬಾರಿ. ಅಲ್ಪಾನ್ಸೋ ಮಾವಿನ ಇವತ್ತಿನ (11-5-2022) ಒಂದು ಕಿಲೋದ ಬೆಲೆ (ಆನ್-ಲೈನ್ ಮಾರುಕಟ್ಟೆಯಲ್ಲಿ) ಹೀಗಿದೆ (ರೂ.):
ದ ಸ್ಟೇಟ್‌ಪ್ಲೇಟ್       - 1,800
ಆಮ್‌ವಾಲಾ          - 1,200
ಅಮೆಜಾನ್            - 800
ಟ್ರೇಡಿ ಫುಡ್            - 700
ಬ್ಲಿಂಕ್ ಇಟ್           - 280
ಇಂಡಿಯಾ ಮಾರ್ಟ್ - 250

ಒಂದು ಕಿಲೋ ತೂಕದಲ್ಲಿ ಐದು ಅಲ್ಪಾನ್ಸೋ ಹಣ್ಣು ಇರಬಹುದು. ಅದು ಎಷ್ಟು ದುಬಾರಿ ಎಂಬುದನ್ನು ಗಮನಿಸಿ. ಜೊತೆಗೆ, ಒಂದು ಕಿಲೋದ ಮಾರಾಟ ಬೆಲೆಯ ವ್ಯಾಪ್ತಿ ರೂ.250ರಿಂದ ರೂ.1,800 ಎಂಬುದನ್ನೂ ಗಮನಿಸಿ. ಕೃಷಿ ಉತ್ಪನ್ನಗಳ ಮಾರಾಟದದಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳು, ರಖಂ ಮತ್ತು ಚಿಲ್ಲರೆ ಮಾರಾಟಗಾರರು ಎಷ್ಟರ ಮಟ್ಟಿಗೆ “ಸುಲಿಗೆ" ಮಾಡುತ್ತಾರೆ ಅನ್ನೋದು ಈ ಮೇಲಿನ ಬೆಲೆ ಪಟ್ಟಿಯಿಂದ ಕಣ್ಣಿಗೆ ರಾಚುತ್ತದೆ ಅಲ್ಲವೇ? ಬೆಳೆಗಾರನಿಗೆ ಅಂತಿಮ ಬೆಲೆಯಲ್ಲಿ ಪ್ರತಿ ನೂರು ರೂಪಾಯಿಗೆ 25 ರೂಪಾಯಿಯೂ ದಕ್ಕುವುದಿಲ್ಲ ಎಂಬುದು ಶೋಷಣೆಯ ಇನ್ನೊಂದು ಮುಖ.

ಹತ್ತು ವರುಷಗಳ ಮುಂಚೆ, ವಾಣಿಜ್ಯ ಅಡುಗೆ-ಅನಿಲ ಸಂಪರ್ಕ ಪಡೆದಿದ್ದೆ - ಮಂಗಳೂರಿನ “ಭಾರತ್ ಗ್ಯಾಸ್” ವಿತರಕರಲ್ಲಿ ಒಬ್ಬರಾದ ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಅವರಿಂದ. ಆಗ, ಅವರ ಕಚೇರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರಿತ್ತು. ಈಗ ಅವರ ಕಚೇರಿ ಬಿಜೈಯ ವಿವೇಕಾನಂದ ಉದ್ಯಾನದ ಎದುರಿದೆ.

ಆಗ ನಾನು ಪಾವತಿಸಿದ್ದ ಹಣ: ಭದ್ರತಾ ಠೇವಣಿ ರೂ.1,700; ರಿಫಿಲ್ ಸಿಲಿಂಡರ್ ರೂ.1,500; ಡೊಕುಮೆಂಟೇಷನ್ ರೂ.75 ಮತ್ತು ಸಾಬೂನುಗಳು ರೂ.300. ಒಟ್ಟು ರೂ.3,575. (ರಶೀದಿ ನಂಬ್ರ 408 ದಿನಾಂಕ 8-6-2012) “ನನಗೆ ಸಾಬೂನುಗಳು ಬೇಡ" ಎಂದಾಗ, “ಗ್ಯಾಸ್ ಸಂಪರ್ಕ ಬೇಕಾದರೆ ಸಾಬೂನು ಖರೀದಿ ಕಡ್ಡಾಯ” ಎ೦ದಿದ್ದರು.

ಅದಾಗಿ ಒಂದು ವರುಷದ ನಂತರ, ಅವರ ಕಚೇರಿಯಿಂದ ನನಗೊಂದು ಫೋನ್ ಕರೆ: “ನಿಮ್ಮ ಗ್ಯಾಸ್ ಕನೆಕ್ಷನ್ ರದ್ದು ಮಾಡುತ್ತೇವೆ.” ಯಾಕೆಂದು ಕೇಳಿದರೆ ಉತ್ತರವಿಲ್ಲ. ಗ್ಯಾಸ್ ಸಂಪರ್ಕ ಪಡೆಯುವಾಗಲೇ ನಾನು ಅವರಿಗೆ ಸ್ಪಷ್ಟ ಪಡಿಸಿದ್ದೆ, "ನಾನು ಸ್ನಾನಕ್ಕೆ ಬಿಸಿನೀರಿಗಾಗಿ ಈ ಗ್ಯಾಸ್ ಸಂಪರ್ಕ ಖರೀದಿಸುತ್ತಿದ್ದೇನೆ. ಹಾಗಾಗಿ ಗ್ಯಾಸ್ ಬಳಕೆ ಬಹಳ ಕಡಿಮೆ ಇರುತ್ತದೆ.”

ಮಾರ್ಚ್ 2022ರಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಹೋಗಿದ್ದ ಸಂದರ್ಭ. ಮಾರ್ಚ್ 24ರ ಗುರುವಾರ ಏರುಹಗಲು ಅಘನಾಶಿನಿ ನದಿದಡಕ್ಕೆ ಹೋಗಿದ್ದೆವು. ಸುಮಾರು ಎರಡು ತಾಸು ಅಲ್ಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ಎಲ್ಲವನ್ನೂ ಧ್ಯಾನ ಸ್ಥಿತಿಯಲ್ಲಿ ಗಮನಿಸಿದೆ. ಆಗ ಪ್ರಶಾಂತ ಪ್ರಕೃತಿಯಲ್ಲಿ ನನಗೆ ಕಂಡ ಕೆಲವು ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ನದಿದಡದಲ್ಲಿ ನಿಬ್ಬೆರಗಾಗಿಸುವ ಜೀವವೈವಿಧ್ಯ. ಮಾವು, ಕುಂಟಲ, ಉಪ್ಪಳಿಗೆ, ಪೇರಳೆ, ನೇರಳೆ; ಕೆಂಪುಕೇಪಳೆ, ಬಿಳಿಗಂಟೆ ಹೂ, ಗುಲಾಲಿ ಕಾಡು ಹೂ ಇತ್ಯಾದಿ ಹೂವಿನ ಗಿಡಗಳು; ವಿವಿಧ ಜಾತಿಯ ಹುಲ್ಲುಗಳು; ಬೆತ್ತದ ಬಳ್ಳಿ, ಮುಳ್ಳು ಬಳ್ಳಿ ಇನ್ನಿತರ ಬಳ್ಳಿಗಳು; ವಿವಿಧ ಬಿದಿರುಗಳು; ನಾಚಿಕೆಮುಳ್ಳು (ಮುಟ್ಟಿದರೆ ಮುನಿ) ಮುಂತಾದ ಮುಳ್ಳಿನ ಗಿಡಗಳು; ಸುರಹೊನ್ನೆ, ಹುನುಗಲು, ರಂಜಲು, ಬನಾಟೆ, ಬೊಟ್ಟಿ ಮೋಪಿನ ಮರಗಳು. ಅಂತೂ ಹತ್ತು ಚದರ ಮೀಟರ್ ಜಾಗದಲ್ಲಿ ಒಂದು ನೂರಕ್ಕಿಂತ ಅಧಿಕ ಜಾತಿಯ ಸಸ್ಯ ಸಂಪತ್ತು.

ಒಂದೆಡೆ ಮರವೊಂದು ಸತ್ತು, ಅದರ ಕಾಂಡವು ಮರದ ಸಮೃದ್ಧ ಬದುಕಿನ ಸ್ಮಾರಕವೆಂಬಂತೆ ನಿಂತಿತ್ತು. ಇನ್ನೊಂದೆಡೆ ಬಳ್ಳಿಯೊಂದು ಬಂಡೆಯಲ್ಲಿ ಬೆಳೆಯುತ್ತಾ  ಮುಂದಕ್ಕೆ ನದಿ ನೀರಿನೆಡೆಗೆ ಸಾಗಿತ್ತು. ಕಲ್ಲುಗಳ ಸಂದಿಗಳಲ್ಲಿ ಹಲವು ವಿಧದ ಹುಲ್ಲುಗಳು ಬೆಳೆದಿದ್ದವು. ಕೆಲವು ಹೂ ಬಿಟ್ಟು, ಬೀಜ ಕಟ್ಟಿದ್ದವು.

ಕೃಷಿಗೆ ನೀರಿಗಾಗಿ ಮತ್ತೆಮತ್ತೆ ಸುರಂಗ ತೋಡಿದಾಗಲೂ ನೀರು ಸಿಗಲಿಲ್ಲ. ಸುತ್ತಮುತ್ತಲಿನವರೆಲ್ಲ ಗುಡ್ಡದೊಳಗೆ ಅಡ್ಡಸುರಂಗ ಕೊರೆದು ನೀರು ದಕ್ಕಿಸಿಕೊಳ್ಳುವ ಅವರ ಪ್ರಯತ್ನ ಕಂಡು ನಗುತ್ತಿದ್ದರು. ಆದರೆ ಅಮೈ ಮಹಾಲಿಂಗ ನಾಯ್ಕರು ಇದರಿಂದೆಲ್ಲ ಎದೆಗುಂದಲಿಲ್ಲ. ಅವರಿಗೆ ಅಡ್ಡಸುರಂಗದಲ್ಲಿ ನೀರು ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ.

ಕೊನೆಗೂ ಅವರಿಗೆ ಗುಡ್ಡದಲ್ಲಿ ಕೊರೆದ ಏಳನೆಯ ಅಡ್ಡಸುರಂಗ (ಅಡ್ಡಬೋರ್)ದಲ್ಲಿ ನೀರು ಸಿಕ್ಕಿತು. ಅವರ ತೋಟ ಹಸುರಿನಿಂದ ನಳನಳಿಸಿತು. ಇದೀಗ ಅವರಿಗೆ ಕೇಂದ್ರ ಸರಕಾರದಿಂದ 2022ನೇ ವರುಷದ "ಪದ್ಮಶ್ರೀ" ಪುರಸ್ಕಾರ. ಅಂದು ನಕ್ಕವರೆಲ್ಲ ಈಗ ಬೆರಗಾಗಿದ್ದಾರೆ. ಇದು ಶಾಲೆಗೆ ಹೋಗಿ ಕಲಿಯದಿದ್ದರೂ, ಜೀವನದಿಂದಲೇ ಪಾಠ ಕಲಿತು, ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾದ 70 ವರುಷ ವಯಸ್ಸಿನ ರೈತ ಅಮೈ ಮಹಾಲಿಂಗ ನಾಯ್ಕರ ಯಶೋಗಾಥೆ.

ಮಂಗಳೂರು - ಉಡುಪಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ಮುಲ್ಕಿ ಹತ್ತಿರದ ಕೊಲ್ನಾಡಿನಲ್ಲಿ 11ರಿಂದ 13 ಮಾರ್ಚ್ 2022  ವರೆಗೆ (ಮೂರು ದಿನಗಳ) ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳ ಜರಗಲಿದೆ.

ಕೊಲ್ನಾಡು - ಮುಲ್ಕಿಯ ವಿನಯ ಕೃಷಿ ಬೆಳೆಗಾರರ ಸಂಘ (ರಿ.) ಮತ್ತು ಮಂಗಳೂರಿನ ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಜಂಟಿಯಾಗಿ ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ, ಲಯನ್ಸ್ ಕ್ಲಬ್ - ಕದ್ರಿ ಹಿಲ್ಸ್ ಹಾಗೂ ಇತರ ಹಲವು ಸಂಸ್ಥೆಗಳ ಸಹಕಾರದಿಂದ ಈ ಕೃಷಿ ಮೇಳವನ್ನು ಸಂಘಟಿಸಿವೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ೧೨ ಎಕ್ರೆ ವಿಶಾಲ ಮೈದಾನದಲ್ಲಿ ಕೃಷಿ ಮೇಳಕ್ಕೆ ಸರ್ವ ಸಿದ್ಧತೆ ಮಾಡಲಾಗಿದೆ. ಸುಮಾರು ೨೦೦ ಮಳಿಗೆಗಳೂ ಸಾಂಪ್ರದಾಯಿಕ ಶೈಲಿಯ ಭಾರೀ ವೇದಿಕೆಯೂ ಸಜ್ಜಾಗಿವೆ.

ಈ ಕೃಷಿ ಮೇಳದಲ್ಲಿ ಏನೇನಿರುತ್ತವೆ?
ಫಲಪುಷ್ಪ ಪ್ರದರ್ಶನ, ಜಾನುವಾರು ಜಾತ್ರೆ, ಕುಕ್ಕುಟ ಮೇಳ, ಹಲವಾರು ಕುಲ ಕಸುಬಿನ ಮತ್ತು ಗುಡಿ ಕೈಗಾರಿಕೆಗಳ ಪ್ರದರ್ಶನ ಹಾಗೂ ಸಿದ್ಧವಸ್ತುಗಳ ಮಾರಾಟ, ಔಷಧೀಯ ಗಿಡಗಳ ವನಸಿರಿ, ಹಣ್ಣು-ತರಕಾರಿ-ಧಾನ್ಯಗಳ ಮಾರಾಟ, ವಿಷಮುಕ್ತ ಆಹಾರವಸ್ತುಗಳ ಮಾಹಿತಿ ಮತ್ತು ಮಾರಾಟ, ಕೃಷಿ ಉಪಕರಣಗಳ ಹಾಗೂ ಯಂತ್ರಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ.

ಕೃಷಿ ಮೇಳದ ವಿಶೇಷತೆಗಳು:

Pages