My Books

Saturday, August 19, 2023 - 12:00

ಲೇಖಕರು: ಶಾಂತಾ ರಂಗಾಚಾರಿ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
ಆರನೇ ಮುದ್ರಣ: 2015       ಪುಟ: 64         ಬೆಲೆ: ರೂ.40/-

ಶಾಂತಾ ರಂಗಾಚಾರಿ ಮಕ್ಕಳಿಗಾಗಿ ಇಂಗ್ಲಿಷಿನಲ್ಲಿ ಬರೆದ ಐದು ಪೌರಾಣಿಕ ಕತೆಗಳ ಸಂಕಲನ ಇದು. ಇವನ್ನು ಕನ್ನಡಕ್ಕೆ ಅನುವಾದಿಸಿದವರು ಕೆ.ವಿ. ಸುಬ್ಬಣ್ಣ. ಚಂದದ ಚಿತ್ರಗಳನ್ನು ಬರೆದವರು ಪಿ. ಖೇಮರಾಜ್. ಇದರಲ್ಲಿರುವ ಕತೆಗಳು:
ಸಾವಿನ ಜತೆಗೆ ಸಂಭಾಷಣೆ (ಸಾವಿತ್ರಿ - ಸತ್ಯವಾನ)
ಏಳು ದಿನಗಳ ಕಾವಲು (ಪರೀಕ್ಷಿತ ರಾಜ - ತಕ್ಷಕ ಸರ್ಪ)
ಉಪಮನ್ಯು ಕಲಿತ ಪಾಠ (ಗುರು ಧೌಮ್ಯ ಆಚಾರ್ಯ - ಶಿಷ್ಯ ಉಪಮನ್ಯು)
ಭೀಮ ಕೊಂದ ಬಕಾಸುರ
ಖಾಂಡವ ದಹನ (ಅಗ್ನಿಯ ಖಾಂಡವ ವನ ದಹನಕ್ಕೆ ಅರ್ಜುನನ ರಕ್ಷಣೆ)

ಇವೆಲ್ಲ ನಮ್ಮಲ್ಲಿ ಹಲವರಿಗೆ ಗೊತ್ತಿರುವ ಪೌರಾಣಿಕ ಕತೆಗಳೇ ಆಗಿವೆ. ಶಾಂತಾ ರಂಗಾಚಾರಿ ಅವರು ಮಕ್ಕಳಿಗಾಗಿ ಅವನ್ನು ಸರಳ ಭಾಷೆಯಲ್ಲಿ ಹೇಳಿರುವುದೇ ಈ ಕತೆಗಳ ವಿಶೇಷ. ಜೊತೆಗೆ, ಕತೆಗಳ ಸಂದೇಶವು ಮನಮುಟ್ಟುವಂತೆ ಅವನ್ನು ವಿಸ್ತಾರವಾಗಿ ಹೇಳಿದ್ದಾರೆ.

ಉದಾಹರಣೆಗೆ, ಸಾವಿನ ಜತೆಗೆ ಸಂಭಾಷಣೆ ಕತೆ. ಆ ದಿನ ಕಾಡಿನಲ್ಲಿ ಸೌದೆ ಕಡಿಯಲು ಸತ್ಯವಾನ ಹೊರಟಾಗ ಅದು ಅವನ ಸಾವಿನ ನಿಗದಿತ ದಿನ ಎಂಬುದು ಪತ್ನಿ ಸಾವಿತ್ರಿಗೆ ತಿಳಿದಿತ್ತು. ಆದ್ದರಿಂದ ಅವಳು ಹಟಮಾಡಿ ಆ ದಿನ ಅವನೊಂದಿಗೆ ಕಾಡಿಗೆ ಹೋಗುತ್ತಾಳೆ. ಅವನ ಮೃತ್ಯು ಎಲ್ಲಿಂದ ಯಾವ ರೂಪದಲ್ಲಿ ಬರುತ್ತದೆಯೋ ಎಂಬ ಆತಂಕದಲ್ಲಿ ಸತ್ಯವಾನನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತ ಇರುತ್ತಾಳೆ. ಆತನ ಪ್ರಾಣ ತೆಗೆಯಲು ಹುಲಿ ಅಥವಾ ಹಾವು ಬರಲಿಲ್ಲ. ಅಚಾನಕ್ ಅವನು ಕುಸಿದು ಬೀಳುತ್ತಾನೆ. ಆಗ, ಸತ್ಯವಾನನ ದೇಹವನ್ನು ಯಮರಾಜ ಎಳೆದೊಯ್ಯುತ್ತಾನೆ.

Saturday, August 19, 2023 - 11:54

ಲೇಖಕರು: ಸು.ರಂ. ಎಕ್ಕುಂಡಿ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ವರುಷ: 2011          ಪುಟ: 217          ಬೆಲೆ: ರೂ.50/-

ಹೆಸರುವಾಸಿ ಕವಿ ಸು.ರಂ. ಎಕ್ಕುಂಡಿಯವರ “ಕಥನ ಕವನ” ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯಲ್ಲಿ ಮರುಮುದ್ರಣವಾದ ಸಂಪುಟ. ಆ ಮಾಲೆಗೆ ಆಯ್ಕೆಯಾದ 100 ಮೇರುಕೃತಿಗಳಲ್ಲೊಂದು.

ಇದರಲ್ಲಿವೆ 53 ಕಥನ ಕವನಗಳು. ಕೆಲವು ಸರಳ ಕವನಗಳು. ಉದಾಹರಣೆಗೆ “ಪಾರಿವಾಳಗಳು" ಕವನ ಇಲ್ಲಿದೆ:

ದಟ್ಟಕಾಡಿನಲೊಂದು ಹೆಮ್ಮರದ ಹೊದರಿನಲಿ ಇರುತ್ತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿಪಾರಿವಾಳಗಳ ಜೋಡಿ (1)
ಹಗಲಿರುಳು ಜತೆಗೂಡಿ ಬಾಳಿದವು ಈ ಜೋಡಿ ಎಂದಿಗೂ ಅಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು (2)
ಇಟ್ಟ ಮೊಟ್ಟೆಯನೊಡೆದು ಹಿಗ್ಗಿತಿವುಗಳ ಪ್ರೀತಿ ಮುದ್ದು ಮರಿಗಳ ಮಧುರ ಸದ್ದು ಕೇಳಿ
ದಿನಕಳೆದವಾನಂದದಿಂದ ಬಾಳಿ (3)
ಬೇಡನೊಬ್ಬನು ಬಂದು ಬಲೆಯ ಹರಡಿದನೊಮ್ಮೆ ಪುಟ್ಟ ಮರಿಗಳು ಹಾರಿ ಸಿಲುಕಿ ಸೆರೆಗೆ
ಚೀತ್ಕರಿಸತೊಡಗಿದವು ಬರಲು ಹೊರಗೆ (4)
ಕಂಡು ಮರಿಗಳ ಪಾಡು ತಾಯಿ ಧುಮುಕಿತು ಬಲೆಗೆ ಹೆಂಡತಿಯನಗಲಿರದ ಗಂಡು ಹಕ್ಕಿ
ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ (5)
ಕುರುಡು ವಾತ್ಸಲ್ಯದಲಿ ಕಳೆದುಕೊಂದು ವಿವೇಕ ಬಲೆಗೆ ನುಗ್ಗಿದ ಪಾರಿವಾಳ ಹಿಂಡು
ಹಸಿದ ಬೇಡನು ನಡೆದ ಹೊತ್ತುಕೊಂಡು (6)
ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನು ತೊರೆದು ಬಾಳಬೇಕು
ಏನು ಬಂದರು ಕೂಡ ತಾಳಬೇಕು (7)

Saturday, August 19, 2023 - 11:49

ಲೇಖಕರು: ಎಚ್.ಎಸ್. ವೆಂಕಟೇಶಮೂರ್ತಿ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ವರುಷ: 2011           ಪುಟ: 64           ಬೆಲೆ: ರೂ.25/-

ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ ಇದು. ಹೊಸ ಪೀಳಿಗೆಯ ಕವಿ ಎಂದು ಆರಂಭದಲ್ಲಿ ಗುರುತಿಸಲ್ಪಟ್ಟ ಎಚ್.ಎಸ್. ವೆಂಕಟೇಶಮೂರ್ತಿ ಅವರು ಕನ್ನಡಿಗರ ಮೆಚ್ಚಿನ ಕವಿ ಹಾಗು ಸಾಹಿತಿಯಾಗಿ ಬೆಳೆದವರು. ಕನ್ನಡದ ಮೇರುಕೃತಿಗಳ ಆ ಮಾಲೆಗೆ ಇದು ಆಯ್ಕೆಯಾದದ್ದು ಅವರ ಪ್ರತಿಭೆಯ ದ್ಯೋತಕ.

ಕನ್ನಡದ ಪ್ರಸಿದ್ಧ ವಿಮರ್ಶಕರಾದ ಕೀರ್ತಿನಾಥ ಕುರ್ತುಕೋಟಿ ಅವರು ಇದರ ಮುನ್ನುಡಿಯಲ್ಲಿ ಬರೆದಿರುವ ಮಾತುಗಳು: “.... “ಇಂಡಿಯಾದ ನಿಬಿಡಾರಣ್ಯಗಳಲ್ಲಿ” ಎಂಬ ಇವರ ಒಂದು ಕವಿತೆಯನ್ನು ಈ ಮೊದಲೇ ಪತ್ರಿಕೆಯೊಂದರಲ್ಲಿ ಓದಿದ್ದೆ.
ತಂಗೊಳಕ್ಕೆ ಹುಣ್ಣಿಮೆ ರಾತ್ರಿ ಕೊಡ
ಕೊಡ ಹಾಲು ಸುರಿವ ಗಳಿಗೆ ಹುಲಿ ಚಿರತೆ
ಕರಡಿ ಆನೆ ಜಿಂಕೆ ಹಾಲು ಮೊಲಗಳ
ನಿಬ್ಬೆರಗು ನೆಳಲು, ನಿಂತ ನೀರಲ್ಲಿ …..

Saturday, August 19, 2023 - 11:44

ಲೇಖಕರು: ಕೈಯ್ಯಾರ ಕೆ. ರೈ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ವರುಷ: 2011          ಪುಟ: 36 + 287            ಬೆಲೆ: ರೂ.75/-

ಕೈಯ್ಯಾರರ “ಶತಮಾನದ ಗಾನ” ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ. ಕೈಯ್ಯಾರರು ಕವಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಈಗ ಕೇರಳದ ಭಾಗವಾಗಿರುವ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಹೋರಾಟದ ನಾಯಕರಾಗಿ ಗುರುತಿಸಲ್ಪಟ್ಟವರು.

ಅವರ 111 ಕವನಗಳು ಈ ಸಂಪುಟದಲ್ಲಿವೆ. ಜೂನ್ 1986ರ ಇದರ ಮೊದಲ ಮುದ್ರಣದ ಪ್ರತಿಗಳು ಒಂದು ವರುಷದಲ್ಲಿಯೇ ಮುಗಿದು ಹೋಗಿದ್ದವು. ಮುನ್ನುಡಿಯಲ್ಲಿ ಕೈಯ್ಯಾರರು “ಇಲ್ಲಿ ನೂರಕ್ಕೂ ಮಿಕ್ಕಿದ ಕವನಗಳು ಇರುವುದರಿಂದ, ಆ ಸಂಖ್ಯಾಸಂಕೇತವಾಗಿಯೂ, ಈ ಶತಮಾನದ ಕಾಲಾವಧಿ, ಕವಿಯ ಬದುಕಿಗೆ ನೀಡಿದ ನೋವು ನಲಿವುಗಳ ಅಭಿವ್ಯಕ್ತಿಯ ದ್ಯೋತಕವಾಗಿಯೂ ಕೃತಿಗೆ “ಶತಮಾನದ ಗಾನ” ಎಂಬೀ ಹೆಸರು ಸಂದಿದೆ" ಎಂದು ತಿಳಿಸಿದ್ದಾರೆ.

ಮುಂದುವರಿದು ಮುನ್ನುಡಿಯಲ್ಲಿ ಕೈಯ್ಯಾರರು ಬರೆದಿದ್ದಾರೆ, “ಇವಿಷ್ಟು ಆಯ್ದ ಕವನಗಳೆಂದು ಹೇಳಲಾರೆ. ಆಯ್ಕೆ ಶತಮಾನದ ಲೆಕ್ಕಕ್ಕೆ ಹೊರತು ತರತಮ ಯೋಗ್ಯತೆಯ ದೃಷ್ಟಿಯಿಂದಲ್ಲ. ಹೆತ್ತವರಿಗೆ ತಮ್ಮ ಎಲ್ಲಾ ಮಕ್ಕಳಲ್ಲೂ ಒಂದೇ ತೆರನ ವಾತ್ಸಲ್ಯ. ಕವಿಗೂ ಅಂತೆಯೇ…" ಮುನ್ನುಡಿಯ ಮುಕ್ತಾಯದಲ್ಲಿವೆ ಅವರ ವಿನಯದ ಹಾಗೂ ಕನ್ನಡಾಭಿಮಾನದ ಮಾತುಗಳು: "ಕನ್ನಡದ ಈ ಹಿರಿಯ (ಕವಿಗಳ) ಪಂಕ್ತಿಯಲ್ಲಿ ನಾನು ಅತ್ಯಂತ ಕಿರಿಯನು. ಹೆಬ್ಬೆರಳು ತೋರುಬೆರಳು ನಡುವೆರಳುಗಳ ಸಾಲಿನಲ್ಲಿ ಕೇವಲ ಕಿರುಬೆರಳಿನಂತಿರುವವನು. ಆದರೂ ಅದೇ ಕನ್ನಡದ ಕುಲಗೋತ್ರಕ್ಕೆ ಸೇರಿದವನೆಂಬ ಅಭಿಮಾನ ನನ್ನದು."

Saturday, August 19, 2023 - 11:40

ಲೇಖಕರು: ಕೆನ್ನೆತ್ ಆಂಡರ್ ಸನ್
ಕನ್ನಡ ಸಂಗ್ರಹಾನುವಾದ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು: ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು
ಮೊದಲ ಮುದ್ರಣ:  1998           ಪುಟ: 103           ಬೆಲೆ: ರೂ. 63/-

ಶಿಕಾರಿ ಕತೆಗಳು ಅಪರೂಪದ ಬರಹಗಳು. ಇದರಲ್ಲಿನ ನಾಲ್ಕು ಶಿಕಾರಿಗಳಲ್ಲಿ ಕೋವಿ ಗುರಿಯಿಟ್ಟವರು, ಅನಂತರ ಅದನ್ನೆಲ್ಲ ರೋಚಕವಾಗಿ ಇಂಗ್ಲಿಷಿನಲ್ಲಿ ಬರೆದವರು ನರಭಕ್ಷಕ ಹುಲಿಗಳ ಬೇಟೆಯ ದಂತಕತೆಯಾಗಿರುವ ಬೇಟೆಗಾರ ಕೆನ್ನೆತ್ ಆಂಡರ್ ಸನ್. ಅದನ್ನು ಸಮರ್ಥವಾಗಿ ಕನ್ನಡಕ್ಕೆ ಸಂಗ್ರಹಾನುವಾದ ಮಾಡಿದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು.

ಇದರ ಮೊದಲ ಶಿಕಾರಿ ಕತೆಯೇ ಪುಸ್ತಕದ ಶೀರ್ಷಿಕೆ ಕತೆ: ಮುನಿಶಾಮಿ ಮತ್ತು ಮಾಗಡಿ ಚಿರತೆ. ಮುನಿಶಾಮಿ ಎಂಬಾತ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಶಿಕಾರಿಯ ಹುಚ್ಚು ಇದ್ದವರಿಗೆ ತಾನು “ಜಂಟಲ್‌ಮನ್ ಶಿಕಾರಿದಾರರ ಗೈಡ್” ಎಂದು ಪರಿಚಯಿಸಿಕೊಳ್ಳುತ್ತಿದ್ದ. ಅವರಿಗೆ ಹುಲಿ ಅಥವಾ ಚಿರತೆ ಬೇಟೆಯ ಆಶೆ ಹುಟ್ಟಿಸಿ, ಮುಂಗಡ ಹಣ ಗಿಟ್ಟಿಸುತ್ತಿದ್ದ. ಕೆನೆತ್ ಆಂಡರ್ ಸನ್ನರಿಗೂ ನಾಲ್ಕು ಸಲ ಟೋಪಿ ಹಾಕಿದ್ದ ಅವನು ಕೊನೆಗೊಮ್ಮೆ ರೆಡ್-ಹ್ಯಾಂಡಾಗಿ ಅವರ ಕೈಯಲ್ಲಿ ಸಿಕ್ಕಿ ಬಿದ್ದ. ಆಗ ತನ್ನ ಮೋಸದ ವಿಧಾನವನ್ನೆಲ್ಲ ಬಹಿರಂಗ ಪಡಿಸಿದ.

Saturday, August 19, 2023 - 11:35

ಲೇಖಕರು: ಪಂಜೆ ಮಂಗೇಶರಾಯರು
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಮೊದಲ ಮುದ್ರಣ: 1973             ಎರಡನೇ ಮುದ್ರಣ: 2015          ಪುಟ: 48        ಬೆಲೆ: ರೂ.50/-

ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಶ್ರೀನುಡಿ ಬರೆದವರೇ ಪಂಜೆ ಮಂಗೇಶರಾಯರು. ಅವರ ಹಲವು ಪದ್ಯಗಳು ಮೂರು ತಲೆಮಾರುಗಳ ಮಕ್ಕಳ ಬಾಯಿಯಲ್ಲಿ ನಲಿದಾಡಿದವು. ಮಕ್ಕಳಿಗೆ ಕನ್ನಡ ನುಡಿಯ ಸೊಗಡನ್ನು ಪರಿಚಯಿಸಿದವು. ಮಕ್ಕಳ ಪದಸಂಪತ್ತನ್ನು ಹೆಚ್ಚಿಸಿದವು.

ಕನ್ನಡ ನಾಡಿನ ಹೆತ್ತವರ ಇಂಗ್ಲಿಷ್ ಮಾಧ್ಯಮದ ಮೋಹದಲ್ಲಿ, ಖಾಸಗಿ ಶಾಲೆಗಳ ಬಾಲವಾಡಿಗಳ ಇಂಗ್ಲಿಷ್ ಮಾಧ್ಯಮದ ಅಬ್ಬರದಲ್ಲಿ, ಬ್ರಿಟಿಷರು ತಮಗೆ ಬೇಕಾದ ಕಾರಕೂನರನ್ನು ರೂಪಿಸಲು ಆರಂಭಿಸಿದ "ಮೆಕಾಲೆ ಶಿಕ್ಷಣ ಪದ್ಧತಿ”ಯ ಅಂಧ ಅನುಸರಣೆಯಲ್ಲಿ, ಕ್ರಮೇಣ ಪಂಜೆಯವರ ಮಕ್ಕಳ ಪದ್ಯಗಳು ಕನ್ನಡಿಗರ ನೆನಪಿನಿಂದ ಮರೆಯಾದವು.

ಆ ಹೊತ್ತಿನಲ್ಲಿ, 2015ರಲ್ಲಿ, ಪ್ರಕಾಶಕರು ಪಂಜೆಯವರ ಮಕ್ಕಳ ಪದ್ಯಗಳ ಸಂಪುಟದ ಮರುಮುದ್ರಣ ಮಾಡಿರುವುದು ಸಂತೋಷದ ಸಂಗತಿ. ಇದರಿಂದಾಗಿ ಈಗಿನ ತಲೆಮಾರಿನ ಮಕ್ಕಳು ಪಂಜೆಯವರ ಪದ್ಯಗಳನ್ನು ಕಲಿತು ಬೆಳೆಯುವ ಅವಕಾಶ. ಹಳೆಯ ತಲೆಮಾರಿನವರಿಗೆ ಅವರ ಮನಸೂರೆಗೊಳ್ಳುವ ಪದ್ಯಗಳನ್ನು ಮತ್ತೆ ಆಸ್ವಾದಿಸುವ ಅವಕಾಶ.

“ಹಾವಿನ ಹಾಡು" ಎಂಬ ಸುಪ್ರಸಿದ್ಧ ಕವನದಲ್ಲಿ ಇರೋದು ನಾಲ್ಕು ಚೌಪದಿಗಳು. ಪ್ರತಿಯೊಂದು ಚೌಪದಿಯ ಕೊನೆಯ ಸಾಲಿನಲ್ಲಿ ಒಂದಕ್ಷರದ ಪದ ಎಂಟು ಸಲ ಪುನರಾವರ್ತನೆ: ಬಾ, ನೀ, ತಾ ಮತ್ತು ಪೋ.  ಅದನ್ನು ಹಾಡುವಾಗ ಅದು ಮಕ್ಕಳಲ್ಲಿ ತುಂಬುವ ಉತ್ಸಾಹವನ್ನು ನೋಡಿಯೇ ನಂಬಬೇಕು. ಅದರ ಮೊದಲ ಎರಡು ಚೌಪದಿಗಳು ಹೀಗಿವೆ:
ನಾಗರ ಹಾವೆ! ಹಾವೊಳು ಹೂವೆ!
ಬಾಗಿಲ ಬಿಲದಲಿ ನಿನ್ನಯ ಠಾವೆ?
ಕೈಗಳ ಮುಗಿವೆ, ಹಾಲನ್ನೀವೆ!
ಬಾ ಬಾ ಬಾ ಬಾ ಬಾ ಬಾ ಬಾ ಬಾ

ಹಳದಿಯ ಹೆಡೆಯನು ಬಿಚ್ಚೋ ಬೇಗಾ!

Saturday, August 19, 2023 - 11:30

ಲೇಖಕರು: ಎಮ್.ಎಸ್. ಶ್ರೀರಾಮ್
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ವರುಷ: 2010             ಪುಟ: 136            ಬೆಲೆ: ರೂ.95/-
 
ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ.  ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್‌ನಲ್ಲಿ ವ್ಯಾಸಂಗ ಮಾಡಿದವರು. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯಲ್ಲಿ ಎರಡು ವರುಷ ಕೆಲಸ ಮಾಡಿದರು. ಅನಂತರ ಆಣಂದದ ಗ್ರಾಮೀಣ ನಿರ್ವಹಣಾ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು.

ಈ ಎಲ್ಲ ಅನುಭವಗಳಿಂದ ಇದರಲ್ಲಿನ ಕತೆಗಳನ್ನು ರೂಪಿಸಲು ಅವರಿಗೆ ಸಹಾಯವಾಗಿದೆ. ಮೊದಲನೆಯ ಕತೆ “ಲಾಟರಿ". ಇದು ಸಂಕಲನದ ಅತಿ ದೀರ್ಘ ಕತೆ (40 ಪುಟ) ಮೈಸೂರಿನಲ್ಲಿ ಸುಮಾರು ನಲುವತ್ತು ವರುಷ ಉದ್ಯೋಗ ನಿರ್ವಹಿಸಿ, ನಿವೃತ್ತರಾದ ಭಾಸ್ಕರರಾಯರು ಮಧ್ಯಮವರ್ಗದವರು. "ಅವರ ಬದುಕಿನಲ್ಲಿ ಯಾವ ದೊಡ್ಡ ಏರುಪೇರೂ ಆಗಿರಲಿಲ್ಲ” ಎಂಬ ವಾಕ್ಯದಿಂದಲೇ ಕತೆ ಶುರು. ಇದೀಗ ಹೈದರಾಬಾದಿನಲ್ಲಿ ಮಗ ಶ್ರಾವಣನೊಂದಿಗೆ ಅವರ ಜೀವನ.

Saturday, August 19, 2023 - 11:27

ಲೇಖಕರು: ಎಚ್.ಎಸ್. ವೆಂಕಟೇಶಮೂರ್ತಿ
ಪ್ರಕಾಶಕರು: ಗುಲ್ಮೊಹರ್, ಬೆಂಗಳೂರು
ಪ್ರಕಟ: 2010          ಪುಟ: 200           ಬೆಲೆ: ರೂ. 130/-

ಎಚ್. ಎಸ್. ವೆಂಕಟೇಶಮೂರ್ತಿಯವರ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಪುಟ "ಅನಾತ್ಮ ಕಥನ.” ಇವನ್ನು ಓದುತ್ತಿದ್ದಂತೆ, ಇವು ನಮ್ಮದೇ ಅನುಭವ ಅನಿಸುತ್ತದೆ. ಹಾಗಿದೆ ಎಚ್.ಎಸ್. ವಿ. ಅವರ ಮನಮುಟ್ಟುವ ಮತ್ತು ಹೃದಯಕ್ಕೇ ಇಳಿಯುವ ಶೈಲಿ. ಜೊತೆಗೆ ಈ ಬರಹಗಳಿಗಾಗಿ ಅವರು ತಮ್ಮ ಅನುಭವದಿಂದ ಆಯ್ದುಕೊಂಡ ಸಂಗತಿಗಳೂ ಅಂಥವೇ.

ಕನ್ನಡಿಗರ ಮೆಚ್ಚಿನ ಕವಿಗಳಲ್ಲಿ ಒಬ್ಬರಾಗಿರುವ ಎಚ್.ಎಸ್.ವಿ. ಅವರು ಜನಿಸಿದ್ದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೋದಿಗ್ಗೆರೆಯಲ್ಲಿ. ಆರಂಭದ ಮೂವತ್ತು ವರುಷ ಅವರು ಗ್ರಾಮ ಪರಿಸರದಲ್ಲೇ ಬೆಳೆದವರು. ಅಲ್ಲಿನ ಅನುಭವಗಳ ಗಾಢ ಛಾಯೆ ಅವರ ಹಲವು ಬರಹಗಳಲ್ಲಿ ಕಾಣಿಸುತ್ತದೆ. ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ತಮ್ಮ ಅಧ್ಯಾಪನ ವೃತ್ತಿ ಶುರು ಮಾಡಿದ ಎಚ್.ಎಸ್.ವಿ. ಅವರು, ಅನಂತರ 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿಕೊಂಡರು. ಇಸವಿ 2000ದಲ್ಲಿ ನಿವೃತ್ತರಾಗಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಸಾಹಿತ್ಯದ ಆಳವಾದ ಅಧ್ಯಯನದ ಛಾಯೆ ಅವರ ಬರವಣಿಗೆಯಲ್ಲಿ ಎದ್ದು ಕಾಣಿಸುತ್ತದೆ. ಹಲವಾರು ನಾಟಕಗಳನ್ನು ರಚಿಸಿರುವ ಎಚ್.ಎಸ್.ವಿ. ಅವರು ಮಕ್ಕಳಿಗಾಗಿಯೂ ಕವನ, ಕತೆ, ನಾಟಕಗಳನ್ನು ಬರೆದಿದ್ದಾರೆ.

Saturday, August 19, 2023 - 11:20

ಲೇಖಕರು: ಡಾ. ಸೋಂದಾ ಭಾಸ್ಕರ ಭಟ್, ಕಟೀಲು
ಪ್ರಕಾಶಕರು: ಮೇಧಾ ಪ್ರಕಾಶನ, ಕಟೀಲು
ಪ್ರಕಟಣೆ: 2016           ಪುಟ: 100           ಬೆಲೆ: ರೂ. 125/-

ಪ್ರಾಚೀನ ಭಾರತದ ಸಾಧನೆಯನ್ನು ತಿಳಿಸುವ ಲೇಖನಗಳ ಸಂಗ್ರಹ ಈ ಕೃತಿ. ಇದರ ಪ್ರಕಟಣೆಗೆ ಸಹಕಾರ ನೀಡಿದವರು ಸುರತ್ಕಲ್‌ನ ಶ್ರೀ ಶಾರದಾ ಮಹೋತ್ಸವ ಸಮಿತಿ. 2016ರಲ್ಲಿ ಅದರ 42ನೇ ಶಾರದೋತ್ಸವ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು.

ಶಾರದೋತ್ಸವದಲ್ಲಿ ಭಕ್ತರು ಶಾರದೆಯನ್ನು ಪೂಜಿಸಿ, ಪ್ರಸಾದವನ್ನು ಕೊಂಡೊಯ್ಯುವುದರ ಜೊತೆಗೆ, ಸಂಸ್ಕಾರ ನೀಡುವ ಕೃತಿಯೊಂದನ್ನು ಪ್ರಸಾದರೂಪವಾಗಿ ಒಯ್ದು ಮನೆಮಂದಿಗೆ ಸಂಸ್ಕಾರದ ಸುಗಂಧವನ್ನೂ ನೀಡುವಂತಾಗಬೇಕೆಂಬುದು ಸಮಿತಿಯ ಆಶಯ. ಅದಕ್ಕಾಗಿ, ಸಂಸ್ಕಾರಪೂರ್ಣ ಕೃತಿಯೊಂದನ್ನು ಪ್ರಸಾದದ ಜೊತೆಗೆ ಕೊಡುವ ಪರಿಪಾಠವನ್ನು 2010ರಿಂದ ಆರಂಭಿಸಲಾಯಿತು.

ಸನಾತನ ಪರಂಪರೆಯ ವಾರಸುದಾರರಾದ ನಮಗೆ ಪೂರ್ವಜರ ಸಾಧನೆಯ ಬಗ್ಗೆ ಅರಿವು ಮೂಡಬೇಕು ಮತ್ತು ನಮ್ಮ ಸಾಧನೆಯನ್ನು ಅರಿತು ಅಭಿಮಾನ ಪಡಬೇಕು ಎಂಬ ಉದ್ದೇಶದಿಂದ ಈ ಕೃತಿಯನ್ನು ಪ್ರಸಾದರೂಪದಲ್ಲಿ ನೀಡಲು ತೀರ್ಮಾನಿಸಲಾಯಿತು ಎಂದು ಶ್ರೀ ಶಾರದಾ ಮಹೋತ್ಸವ ಸಮಿತಿ ಹೇಳಿಕೊಂಡಿದೆ.

Saturday, August 19, 2023 - 11:15

ಲೇಖಕರು: ಡಿ. ಎಸ್. ಶರ್ಮಾ
ಕನ್ನಡ ಅನುವಾದಕರು: ಎನ್. ಪಿ. ಶಂಕರನಾರಾಯಣ ರಾವ್
ಪ್ರಕಾಶಕರು: ಭಾರತೀಯ ವಿದ್ಯಾ ಭವನ, ಬೆಂಗಳೂರು ಕೇಂದ್ರ
ವರುಷ: 1986           ಪುಟ: 145          ಬೆಲೆ: ರೂ.8/-

ಹಿಂದು ಧರ್ಮದ ಬಗ್ಗೆ ಎಲ್ಲ ಅವಶ್ಯ ಮಾಹಿತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಪುಸ್ತಕ ಇದು. ಲೇಖಕರು 1939ರಲ್ಲಿ ಆಗಿನ ಮದ್ರಾಸಿನ ಪಚ್ಚೆಯಪ್ಪಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾಗ, ಆ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಪ್ರಸ್ತುತಗೊಳಿಸಲಿಕ್ಕಾಗಿ ಬರೆದ ಪುಸ್ತಕ. ಇದನ್ನು ಎನ್. ಪಿ. ಶಂಕರನಾರಾಯಣ ರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ.

ಇಂಗ್ಲಿಷಿನಲ್ಲಿ “ವಾಟ್ ಈಸ್ ಹಿಂದುಯಿಸಂ" ಎಂಬ ಶೀರ್ಷಿಕೆಯ ಈ ಪುಸ್ತಕ ಹಲವಾರು ಬಾರಿ ಮರುಮುದ್ರಣಗೊಂಡಿದೆ. ಇದು ಅದರ ತಿದ್ದಿದ ಆವೃತ್ತಿ. ಇದರಲ್ಲಿ ಏಳು ಅಧ್ಯಾಯಗಳಿವೆ: (1) ಪೀಠಿಕೆ (2) ಹಿಂದು ಧರ್ಮ ಗ್ರಂಥಗಳು (3) ಹಿಂದು ಸಂಸ್ಕಾರಗಳು ಮತ್ತು ಪುರಾಣಗಳು (4) ಹಿಂದು ನೀತಿ ಸೂತ್ರಗಳು (5) ಹಿಂದು ದೈವ ಸಾಧನಗಳು (6) ಹಿಂದು ತತ್ತ್ವ ಜಿಜ್ನಾಸೆ ಮತ್ತು (7) ಉಪಸಂಹಾರ

Pages