97. ಬಿತ್ತಿದ್ದನ್ನು ಬೆಳೆದುಕೋ

ಹಲವಾರು ವರುಷಗಳ ಮುಂಚೆ, ಇಬ್ಬರು ಸೋದರರು ತಂದೆಯೊಂದಿಗೆ ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅಪ್ಪನ ಆಸ್ತಿಯೆಲ್ಲವೂ ತನಗೇ ದಕ್ಕುತ್ತದೆ ಎಂದು ಭಾವಿಸಿದ್ದ ದರ್ಪದ ಮತ್ತು ಸೊಕ್ಕಿನ ಅಣ್ಣ. ಹೀಗಿರುವಾಗ ತನ್ನ ಕೊನೆಗಾಲ ಸಮೀಪಿಸಿದೆ ಎಂದು ಅರಿತುಕೊಂಡ ತಂದೆ, ಅದೊಂದು ದಿನ ಮಕ್ಕಳಿಬ್ಬರನ್ನೂ ಕರೆಸಿಕೊಂಡ. ಅವನು ಮಕ್ಕಳಿಗೆ ಅಂತಿಮ ಮಾತು ಹೇಳಿದ, “ನೀವು ಬಿತ್ತಿದ್ದನ್ನೇ ಬೆಳೆದುಕೊಳ್ಳುತ್ತೀರಿ ಎಂಬುದು ನಿಮಗೆ ಗೊತ್ತಿರಲಿ. ನನ್ನ ಜಮೀನನ್ನು ನಿಮಗಿಬ್ಬರಿಗೂ ಬಿಟ್ಟು ಹೋಗುತ್ತಿದ್ದೇನೆ. ಅದನ್ನು ಪಾಲು ಮಾಡಿಕೊಂಡು, ಇಬ್ಬರೂ ಜೊತೆಯಾಗಿ ದುಡಿದು ಬಾಳುವೆ ಮಾಡಿ."

ತಂದೆಯ ಮರಣಾ ನಂತರ ತಮ್ಮನನ್ನು ಅಣ್ಣ ಮನೆಯಿಂದ ಹೊರಕ್ಕೆ ಹಾಕಿದ. ಅವನು ಹಳ್ಳಿಯನ್ನೇ ಬಿಟ್ಟು ಹೊರಟ. ಮುಂದೇನು ದಾರಿ ಎಂದು ಚಿಂತಿಸುತ್ತಾ ಸಾಗುತ್ತಿದ್ದಾಗ, ಒಂದು ಮರದ ಮೇಲಿನಿಂದ ಚೀರುವ ಸದ್ದು ಕೇಳಿ ಬಂತು. ಅದೇನೆಂದು ತಮ್ಮ ಪರಿಶೀಲಿಸಿದಾಗ, ಪುಟ್ಟ ಹಕ್ಕಿಯ ಮೇಲೆ ಹಾವೊಂದು ದಾಳಿ ಮಾಡುತ್ತಿತ್ತು. ಆ ಹಾವನ್ನು ಕೋಲಿನಿಂದ ಓಡಿಸಿ, ಪುಟ್ಟ ಹಕ್ಕಿಯನ್ನು ರಕ್ಷಿಸಿದ ತಮ್ಮ. ಆ ಹಕ್ಕಿ ಅವನಿಗೊಂದು ಬೀಜ ಕೊಟ್ಟು, ಅದನ್ನು ಬಿತ್ತ ಬೇಕೆಂದು ಸೂಚಿಸಿತು.

ಮುಂದಿನ ಹಳ್ಳಿ ತಲಪಿದ ತಮ್ಮ ಅಲ್ಲೇ ಜಮೀನೊಂದನ್ನು ಗೇಣಿಗೆ ಪಡೆದು ನೆಲೆಸಿದ. ಹಕ್ಕಿಯ ಸೂಚನೆಯಂತೆ ಆ ಬೀಜವನ್ನು ಜಮೀನಿನಲ್ಲಿ ಬಿತ್ತಿದ. ಒಂದೇ ದಿನದಲ್ಲಿ ಆ ಬೀಜ ಮೊಳೆತು ಅದರಿಂದ ಹತ್ತಡಿ ಉದ್ದದ ಬಳ್ಳಿ ಬೆಳೆಯಿತು. ಮರುದಿನವೇ ಅದರಲ್ಲೊಂದು ಕುಂಬಳಕಾಯಿ ಬೆಳೆದು, ಸಂಜೆಯ ಹೊತ್ತಿಗೆ ಕೊಯ್ಲಿಗೆ ತಯಾರಾಗಿತ್ತು! ಕುಂಬಳಕಾಯಿ ಕೊಯ್ದು ಮನೆಗೆ ತಂದ ತಮ್ಮ ಕುತೂಹಲದಿಂದ ಅದನ್ನು ಕೊಯ್ದು ನೋಡಿದ. ಅದರೊಳಗೆ ಬಂಗಾರದ ನಾಣ್ಯಗಳು ತುಂಬಿದ್ದವು! ಆಗ ತಮ್ಮನಿಗೆ ತಂದೆ ಹೇಳಿದ ಮಾತು ನೆನಪಾಯಿತು: “ನೀವು ಬಿತ್ತಿದ್ದನ್ನೇ ಬೆಳೆದುಕೊಳ್ಳುತ್ತೀರಿ.” ಕೆಲವೇ ದಿನಗಳಲ್ಲಿ ಶ್ರೀಮಂತನಾದ ತಮ್ಮ ನೆಮ್ಮದಿಯ ಜೀವನ ನಡೆಸತೊಡಗಿದ.