ADDOOR

ಝೆನ್ ಪ್ರಸಂಗ: ಚಂಚಲ ಮನಸ್ಸು

Published on Saturday, November 07, 2020 - 12:49
ಝೆನ್ ಪ್ರಸಂಗ: ಚಂಚಲ ಮನಸ್ಸು

ಎರಡು ಗುರುಕುಲಗಳಿದ್ದವು: ಪೂರ್ವ ಮತ್ತು ಪಶ್ಚಿಮ. ಅಲ್ಲಿನ ಶಿಷ್ಯರೊಳಗೆ ಯಾವಾಗಲೂ ಪೈಪೋಟಿ. ಅದೊಂದು ದಿನ, ಮಾರುಕಟ್ಟೆಗೆ ಹೋಗುವ ಹಾದಿಯಲ್ಲಿ ಪೂರ್ವ ಗುರುಕುಲದ ಒಬ್ಬ ಶಿಷ್ಯ ಮತ್ತು ಪಶ್ಚಿಮ ಗುರುಕುಲದ ಇನ್ನೊಬ್ಬ ಶಿಷ್ಯನ ಮುಖಾಮುಖಿ.
ಆಗ ಪೂರ್ವ ಗುರುಕುಲದ ಶಿಷ್ಯ, ದೂರದ ದೇವಾಲಯದ ಮೇಲೆ ಹಾರಾಡುತ್ತಿದ್ದ ಧ್ವಜವನ್ನು ತೋರಿಸುತ್ತಾ ಹೇಳುತ್ತಾನೆ, “ಧ್ವಜ ಅಲ್ಲಾಡುತ್ತಿದೆ ನೋಡು.” ತಕ್ಷಣವೇ ಪಶ್ಚಿಮ ಗುರುಕುಲದ ಶಿಷ್ಯನ ಪ್ರತಿಕ್ರಿಯೆ: “ಧ್ವಜ ಅಲ್ಲಾಡುತ್ತಿಲ್ಲ, ಗಾಳಿ ಅಲ್ಲಾಡುತ್ತಿದೆ.” ಇಬ್ಬರೂ ತಮ್ಮದೇ ಸರಿ ಎಂದು ವಾದ ಮಾಡುತ್ತಾ, ಹೊಡೆದಾಡಲು ಮುನ್ನುಗ್ಗುತ್ತಾರೆ.
ಆಗ, ಅಲ್ಲಿ ಹಾದು ಹೋಗುತ್ತಿದ್ದ ಹಿರಿಯರೊಬ್ಬರು ಧಾವಿಸಿ ಬಂದು, ಇಬ್ಬರನ್ನೂ ತಡೆಯುತ್ತಾರೆ. “ಏನು ನಿಮ್ಮ ಜಗಳ” ಎಂದು ಅವರು ಪ್ರಶ್ನಿಸಿದಾಗ, ಇಬ್ಬರೂ ಶಿಷ್ಯರಿಂದ ತಮ್ಮತಮ್ಮ ವಾದ ಮಂಡನೆ. ಆಗ ಹಿರಿಯರು ಮುಗುಳ್ನಗುತ್ತಾ, “ಧ್ವಜವೂ ಅಲ್ಲಾಡುತ್ತಿಲ್ಲ, ಗಾಳಿಯೂ ಅಲ್ಲಾಡುತ್ತಿಲ್ಲ; ಅಲ್ಲಾಡುತ್ತಿರುವುದು ನಿಮ್ಮ ಮನಸ್ಸು” ಎಂದಾಗ ಶಿಷ್ಯರ ವಾಗ್ವಾದ ಅಂತ್ಯ.