ADDOOR

ಝೆನ್ ಪ್ರಸಂಗ: ಗುರುವಿನ ಬರಹದ ಸಂದೇಶ

Published on Saturday, November 07, 2020 - 12:30
ಝೆನ್ ಪ್ರಸಂಗ: ಗುರುವಿನ ಬರಹದ ಸಂದೇಶ

ಒಬ್ಬ ಶ್ರೀಮಂತನಿಗೊಂದು ಯೋಚನೆ ಬಂತು: ತನ್ನ ಕುಟುಂಬದವರ ನೆಮ್ಮದಿ ಹಾಗೂ ಸಮೃದ್ಧಿಗಾಗಿ ಸುಭಾಷಿತವನ್ನು ಗುರುಗಳಿಂದ ಬರೆಯಿಸಬೇಕೆಂದು. ಅದಕ್ಕಾಗಿ ಗುರು ಸೆನ್‌ಗೈ ಅವರನ್ನು ತನ್ನ ಬಂಗಲೆಗೆ ಕರೆ ತಂದು ವಿನಂತಿಸಿದ.

ಗುರು ಸೆನ್‌ಗೈ ಕಾಗದದ ದೊಡ್ಡ ಹಾಳೆ ತರಿಸಿಕೊಂಡು, ಅದರಲ್ಲಿ ಹೀಗೆ ಬರೆದರು: “ಅಜ್ಜ ತೀರಿಕೊಂಡು, ಅಪ್ಪ ತೀರಿಕೊಂಡು, ಮಗ ತೀರಿಕೊಂಡು ಸಾಗಲಿ ಕುಟುಂಬ."

ಇದನ್ನು ಓದಿದ ಶ್ರೀಮಂತನಿಗೆ ಸಿಟ್ಟು ಬಂತು. “ಏನು ಗುರುಗಳೇ, ನಮ್ಮ ಕುಟುಂಬದ ನೆಮ್ಮದಿಗಾಗಿ, ಸಮೃದ್ಧಿಗಾಗಿ ಒಳ್ಳೆಯ ಮಾತು ಬರೆದು ಕೊಡಿ ಅಂದರೆ ಇಂತಹ ಕೆಟ್ಟ ಸಂದೇಶ ಬರೆಯುವುದೇ?" ಎಂದು ಕೋಪದಿಂದ ಕೇಳಿದ.

ಆಗ ಗುರು ಸೆನ್‌ಗೈ ತನ್ನ ಸಂದೇಶದ ಅರ್ಥ ವಿವರಿಸಿದರು, “ನಿನ್ನ ಕುಟುಂಬದವರ ಒಳಿತಿಗಾಗಿ ಮಂಗಳಕರವಾದ ಸಂದೇಶವನ್ನೇ ಬರೆದಿದ್ದೇನೆ. ನೀನು ಬದುಕಿರುವಾಗಲೇ ನಿನ್ನ ಮಗ ಸತ್ತರೆ, ನಿನಗೆ ಅಪಾರ ದುಃಖವಾಗದೇ? ಹಾಗೆಯೇ, ನೀನು ಮತ್ತು ನಿನ್ನ ಮಗ ಜೀವದಿಂದ ಇರುವಾಗಲೇ ನಿನ್ನ ಮೊಮ್ಮಗ ತೀರಿಕೊಂಡರೆ ನಿಮಗಿಬ್ಬರಿಗೂ ಸಹಿಸಲಾಗದ ದುಃಖ, ಅಲ್ಲವೇ?ಅದಕ್ಕಾಗಿ, ಯಾವ ಮಗನೂ ತನ್ನ ತಂದೆಗಿಂತ ಮುಂಚೆ ಸಾಯದಿರಲಿ ಎಂದು ಹಾರೈಸಿದ್ದೇನೆ. ಯಾವುದೇ ಕುಟುಂಬದವರಿಗೆ ಇದಕ್ಕಿಂತ ಹೆಚ್ಚಿನ ಭಾಗ್ಯ ಒದಗೀತೇ?”