ADDOOR

85. ಸನ್ಯಾಸಿಯ ಸಲಹೆ: ಯಶಸ್ಸಿಗೆ ಏಕಾಗ್ರತೆ ಮುಖ್ಯ

Published on Wednesday, August 09, 2023 - 12:11
85. ಸನ್ಯಾಸಿಯ ಸಲಹೆ: ಯಶಸ್ಸಿಗೆ ಏಕಾಗ್ರತೆ ಮುಖ್ಯ

ಹಲವು ವರುಷಗಳ ಮುಂಚೆ ಒಂದು ಹಳ್ಳಿಯಲ್ಲಿ ನಾಲ್ವರು ಗೆಳೆಯರಿದ್ದರು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು. ಅದೊಂದು ದಿನ ಅವರು ಕೋವಿಯಿಂದ ಗುರಿಯಿಟ್ಟು ಗುಂಡು ಹೊಡೆಯಲು ಅಭ್ಯಾಸ ಮಾಡತೊಡಗಿದರು. ಸ್ವಲ್ಪ ದೂರದಲ್ಲಿ ಇರಿಸಿದ್ದ ನಾಲ್ಕು ಮಡಕೆಗಳೇ ಅವರ “ಗುರಿ". ಆ ಮಡಕೆಗಳತ್ತ ಗುರಿಯಿಟ್ಟು ಅವರು ಗುಂಡುಗಳನ್ನು ಹೊಡೆದದ್ದೇ ಹೊಡೆದದ್ದು. ಆದರೆ ಒಂದೇ ಒಂದು ಮಡಕೆಯನ್ನೂ ಗುಂಡಿನಿಂದ ಒಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ, ಅವರು ಮಾತಾಡುತ್ತಾ ನಗುತ್ತಾ ಮಡಕೆಗಳತ್ತ ಗುರಿ ಇಡುತ್ತಿದ್ದರು.

ಇದನ್ನೆಲ್ಲ ನೋಡುತ್ತಿದ್ದ ಸನ್ಯಾಸಿಯೊಬ್ಬ ಪೆಚ್ಚಾಗಿ ನಿಂತಿದ್ದ ಗೆಳೆಯರನ್ನು ಕಂಡು ನಗತೊಡಗಿದ. ಆಗ ಗೆಳೆಯರಲ್ಲೊಬ್ಬ ಆ ಸನ್ಯಾಸಿಯ ಹತ್ತಿರ ಹೋಗಿ ಕೇಳಿದ, “ನೀವು ಯಾಕೆ ನಗುತ್ತಿದ್ದೀರಿ? ನಿಮಗೆ ಬಂದೂಕಿನಿಂದ ಗುಂಡು ಹೊಡೆಯಲು ಗೊತ್ತೇ?” ಅವನ ಕೋವಿಯನ್ನು ಕೈಗೆತ್ತಿಕೊಂಡ ಸನ್ಯಾಸಿ, ಗುರಿಯಿಟ್ಟು ಗುಂಡು ಹಾರಿಸಿ ಎಲ್ಲ ಮಡಕೆಗಳನ್ನು ಚೂರುಚೂರು ಮಾಡಿದ.

ನಾಲ್ವರು ಗೆಳೆಯರು ಪುನಃ ಪೆಚ್ಚಾದರು. “ನೀವು ಮ್ಯಾಜಿಕ್ ಮಾಡುವವರೇ?” ಎಂದು ಸನ್ಯಾಸಿಯನ್ನು ಗೆಳೆಯರು ಪ್ರಶ್ನಿಸಿದರು. ಆಗ ಸನ್ಯಾಸಿ ಉತ್ತರಿಸಿದರು, "ನಾನು ಮ್ಯಾಜಿಕ್ ಮಾಡುವವನೂ ಅಲ್ಲ, ನಿಪುಣ ಗುರಿಕಾರನೂ ಅಲ್ಲ. ನಾವು ಯಾವುದೇ ಕೆಲಸದಲ್ಲಿ ಯಶಸ್ಸು ಸಾಧಿಸಬೇಕಾದರೆ, ಏಕಾಗ್ರತೆಯಿಂದ ಆ ಕೆಲಸವನ್ನು ಮಾಡಬೇಕು. ನಾನು ನನ್ನ ಕೆಲಸವನ್ನು ಅಪ್ಪಟ ಏಕಾಗ್ರತೆಯಿಂದ ಮಾಡಿದೆ; ಅದರ ಫಲಿತಾಂಶ ನಿಮ್ಮ ಕಣ್ಣೆದುರಿಗಿದೆ. ನಮ್ಮ ಎಲ್ಲ ಕೆಲಸಕಾರ್ಯಗಳಲ್ಲಿ ಯಶಸ್ಸು ಸಾಧಿಸುವ ಮಂತ್ರ ಏಕಾಗ್ರತೆ."