ADDOOR

ಹಕ್ಕು ಹೋರಾಟ 7: ರಾಜೀವಿ ಬಿ. ಶೆಟ್ಟಿಯವರಿಗೆ ಪರ್ಮಿಟ್ ಸಿಕ್ಕಿತು

Published on Friday, April 19, 2024 - 04:15
ಹಕ್ಕು ಹೋರಾಟ 7: ರಾಜೀವಿ ಬಿ. ಶೆಟ್ಟಿಯವರಿಗೆ ಪರ್ಮಿಟ್ ಸಿಕ್ಕಿತು

ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ರಾಜೀವಿ ಬಿ.ಶೆಟ್ಟಿಯವರ ಮೇಲೆ ಅರಣ್ಯ ತಕ್ಷೀರೊಂದು 1997ರಲ್ಲಿ ದಾಖಲಾಗಿತ್ತು. ಸದ್ರಿ ತಕ್ಷೀರಿಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ದಂಡನೆ ವಿಧಿಸಿದ್ದರು. ಶ್ರೀಮತಿ ಶೆಟ್ಟಿಯವರು ದಂಡನಾ ಶುಲ್ಕವನ್ನು ಪೂರ್ತಿಯಾಗಿ ಕಟ್ಟಿದ್ದರೂ ಕಡಿದ ಮರವನ್ನು ಸಾಗಿಸಲು ಈ ತನಕ ರಹದಾರಿ ನೀಡಿರಲಿಲ್ಲ.

ಕಾರ್ಕಳ ವಲಯ ಅರಣ್ಯಾಧಿಕಾರಿಗಳ ಕಚೇರಿಯನ್ನು ಈ ಬಗ್ಗೆ ಅನೇಕ ಸಲ ಸಂಪರ್ಕಿಸಿದರು. ಇವರ ಕಡತವು ಕಾರ್ಕಳ ಕಚೇರಿಯಿಂದ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಗೆ ಮತ್ತು ಕುಂದಾಪುರದಿಂದ ಕಾರ್ಕಳಕ್ಕೆ ಓಡಾಡುತ್ತಿತ್ತೇ ವಿನಹ ಶ್ರೀಮತಿ ಶೆಡ್ತಿಯವರಿಗೆ ಸಾಗಾಟ ಪರ್ಮಿಟು ಸಿಕ್ಕಿರಲಿಲ್ಲ. ತಾ. 2-1-99ರಂದು ಶ್ರೀಮತಿ. ರಾಜೀವಿ ಬಿ.ಶೆಟ್ಟಿಯವರು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಒಂದು ಪತ್ರ ಬರೆದು ಅದರ ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿಕೊಟ್ಟರು.

ಇವರ ಪತ್ರವನ್ನು ಅನುಸರಿಸಿ ವೇದಿಕೆಯು ತಾ. 25-2-99ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಒಂದು ಪತ್ರ ಬರೆಯಿತು. ಪರಿಣಾಮವಾಗಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಇದೀಗ ವೇದಿಕೆಗೆ ಪತ್ರ ಬರೆದಿದ್ದು ಶ್ರೀಮತಿ ರಾಜೀವಿ ಬಿ.ಶೆಟ್ಟಿಯವರಿಗೆ ರಹದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.


ಪ್ರಾತಿನಿಧಿಕ ಫೋಟೋ: ಸಾಗಾಟಕ್ಕೆ ತಯಾರಾದ ಮರದ ದಿಮ್ಮಿಗಳು