ADDOOR

ಕಗ್ಗ ದರ್ಶನ – 7

Published on Friday, August 31, 2018 - 12:18
ಕಗ್ಗ ದರ್ಶನ – 7

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು
ಬೇಕೆನುತ ಬೊಬ್ಬಿಡುತಲಿಹ ಘಟವನಿದನು
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ
ಸಾಕೆನೆಪುದೆಂದಿಗೆಲೊ - ಮಂಕುತಿಮ್ಮ
“ಬೇಕು, ಬೇಕು, ಇನ್ನೂ ಬೇಕು, ಮತ್ತೂ ಬೇಕು” ಎಂದು ಬಾಯಿ ಬಿಡುವ ನಮ್ಮ ಅವಸ್ಥೆಯನ್ನು ಈ ಮುಕ್ತಕದಲ್ಲಿ ಚೆನ್ನಾಗಿ ಬಣ್ಣಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ತಿನ್ನುವುದರಿಂದ ತೊಡಗಿ ರಾಶಿರಾಶಿ ಸಂಪತ್ತನ್ನು ಕೂಡಿ ಹಾಕುವುದರ ತನಕ – ಎಲ್ಲದರಲ್ಲಿಯೂ ಎದ್ದು ಕಾಣುವುದು ಮನುಷ್ಯನ ಈ ತಣಿಯದ ದುರಾಶೆ.
ಒಬ್ಬ ಮಾವಿನ ಮರದಡಿ ನಿಂತಿದ್ದಾನೆ ಎಂದಿರಲಿ. ಅವನ ಬಗಲಲ್ಲೊಂದು ಚೀಲ. ಆ ಮಾವಿನ ಮರದಲ್ಲಿ ಕೈಗೆಟಕುವಂತೆ ಗೊಂಚಲುಗೊಂಚಲು ಮಾವಿನ ಹಣ್ಣು. ಅವನ್ನು ಕೊಯ್ದುಕೊಯ್ದು ಚೀಲ ತುಂಬಿಸಿಕೊಳ್ಳುತ್ತಾನೆ ಈಗ. ದಿನಕ್ಕೆ ಐದಾರು ಮಾವು ತಿಂದರೂ, ಒಂದು ವಾರದಲ್ಲಿ ೪೦ ಹಣ್ಣು ತಿಂದಾನು. ಅವನ ಚೀಲದಲ್ಲಿ ಈಗಾಗಲೇ ೫೦ಕ್ಕಿಂತ ಜಾಸ್ತಿ ಹಣ್ಣು ತುಂಬಿವೆ. ಆದರೂ ಅವನಿಗೆ ತೀರದ ಆಸೆ – ಇನ್ನೊಂದು ಚೀಲ ತರಲಿಲ್ಲವಲ್ಲ ಎಂಬ ಪರಿತಾಪ.
ಹಣ, ಚಿನ್ನ, ಸೈಟು, ಮನೆ, ವಾಹನ – ಎಲ್ಲದರ ಬಗ್ಗೆಯೂ ಮನುಷ್ಯರ ಪ್ರವೃತ್ತಿ ಇದೇ. “ಇನ್ನೊಂದು ಬೇಕು, ಮತ್ತೊಂದು ಬೇಕು” ಎಂದು ಬೊಬ್ಬೆ ಹಾಕುವ ಈ ಮಾನವನನ್ನು ಎಂದಿಗೂ ತುಂಬದ ಮಡಕೆಯಂತೆ ಏಕೆ ಮಾಡಿದನೋ ಆ ಸೃಷ್ಟಿಕರ್ತ? ಸದಾ ಕಾಲವೂ “ಇದು ಬೇಕು, ಅದು ಬೇಕು, ಇನ್ನಷ್ಟು ಬೇಕು, ಮತ್ತಷ್ಟು ಬೇಕು” ಎಂಬ ಜಪವನ್ನು ಈ ಮನುಜನಲ್ಲಿ ಯಾಕೆ ಹುಟ್ಟಿಸಿದನೋ ಆ ಬ್ರಹ್ಮ?
ಮನುಷ್ಯನ ಅವಸ್ಥೆ ಹೀಗಿರುವಾಗ ಅವನಿಗೆ “ಸಾಕು” ಎನಿಸುವುದು ಯಾವಾಗ? ಎಂದು ಮಾರ್ಮಿಕವಾಗಿ ಕೇಳುತ್ತಾರೆ ಗುಂಡಪ್ಪನವರು. ನಮ್ಮ ಆಸೆಗಳಿಗೆ ಕೊನೆಯೇ ಇಲ್ಲ. ಸಮುದ್ರದ ಅಲೆಗಳಂತೆ ನಮ್ಮ ಆಸೆಗಳು; ಒಂದಾದ ಮೇಲೊಂದು ನುಗ್ಗಿ ಬರುತ್ತಲೇ ಇರುತ್ತವೆ. ಸಣ್ಣ ಒಡವೆ; ದೊಡ್ದ ಒಡವೆ; ಅನಂತರ ಇನ್ನೂ ದೊಡ್ಡ ಒಡವೆಯ ಆಸೆ. ಆದರೆ ಕೊನೆಗೊಂದು ದಿನ ಇವೆಲ್ಲವನ್ನೂ ಬಿಟ್ಟು ಹೋಗಬೇಕೆಂಬುದು ದೊಡ್ಡ ಸತ್ಯ. ಈ ಸತ್ಯದ ಅರಿವು ಆದಾಗಲಾದರೂ “ಸಾಕು” ಎನಿಸಿತೇ ನಮಗೆ?


ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ
ಲೋಕವೃತ್ತಿಯ ನಯವದಾತ್ಮ ನೀತಿಯದು
ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ
ವ್ಯಾಕುಲತೆ ತಪ್ಪೀತೇ?– ಮರುಳ ಮುನಿಯ
ನಮ್ಮ ಬದುಕಿನ ನೆಮ್ಮದಿಗೊಂದು ಸರಳ ಸೂತ್ರ ಸೂಚಿಸಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರು. ನಮ್ಮ ಒಳಗೂ ನಮ್ಮ ಹೊರಗೂ ಕಲಹ ಯಾಕಾಗುತ್ತದೆ? “ಅದು ಬೇಕು, ಇದು ಬೇಕು” ಎಂದು ಹಪಹಪಿಸುತ್ತಾ ಇದ್ದರೆ, ಬೇಕಾದ್ದನ್ನು ದಕ್ಕಿಸಿಕೊಳ್ಳಲು ಜಿದ್ದಿಗೆ ಬಿದ್ದರೆ, ಅದರಿಂದಾಗಿಯೇ ಜಗಳ. ಈ ವರ್ತನೆಯಿಂದ ಶಾಂತಿ ಸಿಗದು.
ಮಾನಸಿಕ ಶಾಂತಿ ಬೇಕೆಂದಾದರೆ, “ಸಾಕು, ಸಾಕು” ಎಂಬ ವರ್ತನೆಯನ್ನು ರೂಢಿಸಿಕೊಳ್ಳಬೇಕು. ಇದ್ದುದರಲ್ಲೇ ಸುಖ ಕಂಡುಕೊಳ್ಳಬೇಕು. ನಮಗೆ ದಕ್ಕಿದ್ದೇ ನಮ್ಮ ಭಾಗ್ಯ ಎಂದು ನಂಬಬೇಕು. ಕಿಂಚಿತ್ ಚಿನ್ನವಿಲ್ಲದೆ ಬದುಕಲು ಸಾಧ್ಯವೇ? ನಮ್ಮದೇ ಕಾರು ಇಲ್ಲದೆ ಬದುಕಲಾದೀತೇ? ಸ್ವಂತ ಮನೆಯಿಲ್ಲದೆ ಜೀವಿಸಬಹುದೇ? ನೆಮ್ಮದಿಯ ಬದುಕಿಗೆ ಇದ್ಯಾವುದೂ ಅಗತ್ಯವಿಲ್ಲ. ಹಸಿವಾದಾಗ ತಿನ್ನಲು ಏನಾದರೂ ಸಿಕ್ಕರೆ, ಮಾಡಲಿಕ್ಕೆ ಯಾವುದಾದರೊಂದು ಕೆಲಸವಿದ್ದರೆ, ಅದುವೇ ನೆಮ್ಮದಿ. ಉಳಿದ ಯಾವುದೂ ಸುಖ ಜೀವನಕ್ಕೆ ಅಗತ್ಯವಿಲ್ಲ.
ಇಂತಹ ಸೂಕ್ಷ್ಮತೆಯಿಂದ ಬದುಕುವುದನ್ನು (ಲೋಕವೃತ್ತಿಯ ನಯ) ಪ್ರಪಂಚದ ವ್ಯವಹಾರಗಳನ್ನು ನಡೆಸುವುದನ್ನು ಕಲಿಯುವುದೇ ನಮ್ಮ ಆತ್ಮೋನ್ನತಿಗೆ ದಾರಿ. ಎಂತಹ ಸರಳ ಸೂತ್ರ! ಎಂತಹ ಉದಾತ್ತ ಹಾದಿ!
ಇದನ್ನು ಕಲಿಯಲು ಸಾಧ್ಯವೇ? ಯಾಕಾಗದು? “ಬೇಕು ಬೇಕು” ಎಂಬ ಪ್ರವೃತ್ತಿ ನಮ್ಮ ಹುಟ್ಟಿನೊಂದಿಗೆ ಬಂದದ್ದಲ್ಲ. ಅದು ನಾವು ಕ್ರಮೇಣ ಕಲಿತ ವರ್ತನೆ. ಅದನ್ನು ಕಲಿಯಲು ಸಾಧ್ಯ ಎಂದಾದರೆ, “ಸಾಕು ಸಾಕು” ಎಂಬುದನ್ನೂ ಕಲಿಯಲು ಸಾಧ್ಯ. ನಿಜವೇನೆಂದರೆ “ಸಾಕು ಸಾಕು” ಎನ್ನುವುದನ್ನು ನಾವು ಕಲಿತಿದ್ದೇವೆ (ಹೊಟ್ಟೆ ತುಂಬಿದ ಬಳಿಕ ಊಟದ ಬಟ್ಟಲಿಗೆ ಇನ್ನಷ್ಟು ಅನ್ನ ಹಾಕಿದರೆ, “ಸಾಕು ಸಾಕು” ಎನ್ನುವುದಿಲ್ಲವೇ?). ಆದರೆ, ಕ್ರಮೇಣ ಮರೆತಿದ್ದೇವೆ.
ಈ ಮರೆವಿನಿಂದ ನಮಗೆ ವ್ಯಾಕುಲತೆ ತಪ್ಪಿದ್ದಲ್ಲ. ಒಂದು ಮನೆ ಕಟ್ಟಿಸಿದ ನಂತರ, “ಸಾಕು” ಎಂದು ಭಾವಿಸುವುದಿಲ್ಲ. ನನ್ನ ಮಗನಿಗೊಂದು ಮನೆ, ಮಗಳಿಗಾಗಿ ಮತ್ತೊಂದು ಮನೆ ಎಂಬ ಸುಳಿಗೆ ಸಿಲುಕುತ್ತೇವೆ. ಮತ್ತೆ ಹೊರಬರಲಾಗದೆ ಚಡಪಡಿಸುತ್ತೇವೆ. ಇನ್ನಾದರೂ ಸಾಕುಸಾಕೆನ್ನುತ್ತಾ ಬದುಕಲು ನೆನಪಿರಲಿ.