ADDOOR

61. ಪ್ರಾಮಾಣಿಕ ವ್ಯಕ್ತಿಗಳು ಇದ್ದಾರೆ - ಹುಡುಕುವುದೇ ಸವಾಲು

Published on Wednesday, August 09, 2023 - 10:58
61. ಪ್ರಾಮಾಣಿಕ ವ್ಯಕ್ತಿಗಳು ಇದ್ದಾರೆ - ಹುಡುಕುವುದೇ ಸವಾಲು

ಪುರುಷೋತ್ತಮ ರಾಯರು ಶ್ರೀಮಂತರು. ಅವರಿಗೆ ವಯಸ್ಸಾಗಿದ್ದು ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು. ಅವರ ಪತ್ನಿ ತೀರಿಕೊಂಡಿದ್ದು, ಮಕ್ಕಳೆಲ್ಲರೂ ಸ್ಥಿತಿವಂತರಾಗಿದ್ದರು. ತಮ್ಮ ಸಂಪತ್ತನ್ನೆಲ್ಲ ಪ್ರಾಮಾಣಿಕ ವ್ಯಕ್ತಿಯೊಬ್ಬನಿಗೆ ದಾನ ಮಾಡಬೇಕೆಂದು ಪುರುಷೋತ್ತಮ ರಾಯರು ಯೋಚಿಸುತ್ತಿದ್ದರು. ಈ ಬಗ್ಗೆ ತನ್ನ ಗೆಳೆಯನೊಬ್ಬನೊಂದಿಗೆ ಮಾತನಾಡಿದಾಗ ಆತ ಸಲಹೆಯೊಂದನ್ನಿತ್ತ. “ನೀನು ಯಾರಿಗಾದರೂ ಏನಾದರೂ ಉಪಕಾರ ಮಾಡಿದಾಗ ಆತ ನಿನಗೆ ಪ್ರತ್ಯುಪಕಾರ ಮಾಡಿದರೆ ಅವನನ್ನು ಪ್ರಾಮಾಣಿಕ ವ್ಯಕ್ತಿ ಎಂದು ಪರಿಗಣಿಸಬಹುದು.”

ಅವತ್ತಿನಿಂದ ಪುರುಷೋತ್ತಮ ರಾಯರು ಹಲವರಿಗೆ ಸಣ್ಣಪುಟ್ಟ ಉಪಕಾರ ಮಾಡುತ್ತಲೇ ಇದ್ದರು. ಆದರೆ ಅವರಿಗೆ ಯಾರೂ ಪ್ರತ್ಯುಪಕಾರ ಮಾಡಲಿಲ್ಲ. ಹಾಗಿರುವಾಗ ಅವರ ಆರೋಗ್ಯ ಹದಗೆಟ್ಟಿತು. ಪುರುಷೋತ್ತಮ ರಾಯರು ತಮ್ಮ ನಾಲ್ವರು ಸೇವಕರಿಗೆ ಪ್ರತಿಯೊಬ್ಬರಿಗೂ ದೊಡ್ದ ಮೊತ್ತದ ಹಣ ನೀಡಿದರು. “ಮುಂದೆ ಆದಂತೆ ಆಗಲಿ” ಎಂದು ನಿಟ್ಟುಸಿರು ಬಿಟ್ಟರು.

ಅವರ ಸೇವಕರಲ್ಲೊಬ್ಬ ಗುಣವಂತ. ಹೆಸರಿಗೆ ತಕ್ಕಂತೆ ಅವನು ಗುಣವಂತನೇ ಆಗಿದ್ದ. ಅವನು ರಾಯರನ್ನು ಕಾಳಜಿಯಿಂದ ಆರೈಕೆ ಮಾಡಿದ. ಅವರಿತ್ತ ಹಣದಿಂದಲೇ ಅವರಿಗೆ ಔಷಧಿಗಳನ್ನು ತಂದಿತ್ತ. ಹಗಲೂ ರಾತ್ರಿ ಅವರ ಜೊತೆಗೇ ಇದ್ದು ಅವರ ಶುಶ್ರೂಷೆ ಮಾಡಿದ. ಅವನ ಆರೈಕೆಯಿಂದಾಗಿ ಪುರುಷೋತ್ತಮ ರಾಯರ ಆರೋಗ್ಯ ಸುಧಾರಿಸಿತು. ಅದಲ್ಲದೆ ಗುಣವಂತ ಪ್ರಾಮಾಣಿಕ ವ್ಯಕ್ತಿಯೆಂದು ಅವರಿಗೆ ಮನದಟ್ಟಾಯಿತು. ತನ್ನ ಉಳಿದ ಸಂಪತ್ತನೆಲ್ಲ ಆತನಿಗೇ ದಾನ ಮಾಡಬೇಕೆಂದು ಅವರು ನಿರ್ಧರಿಸಿದರು.