ADDOOR

50. ರೈತನಿಗೆ ರಾಜನಿಂದ ಬಹುಮಾನ

Published on Wednesday, August 09, 2023 - 10:33
50. ರೈತನಿಗೆ ರಾಜನಿಂದ ಬಹುಮಾನ

ಕರುಣಾಮಯಿ ರಾಜನೊಬ್ಬನಿಗೆ ಏಕಾಂಗಿಯಾಗಿ ರಾಜ್ಯದಲ್ಲಿ ಸುತ್ತಾಡುವ ಹವ್ಯಾಸ. ಒಂದು ದಿನ ರಾಜನಿಗೆ ದಾರಿ ತಪ್ಪಿತು. ಅಂತೂ ಆತ ಹಳ್ಳಿಯೊಂದನ್ನು ತಲಪಿದ. ಅಲ್ಲಿ ರೈತನೊಬ್ಬ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ರಾಜ ಅವನ ಬಳಿ ಹೋಗಿ ವಿನಂತಿಸಿದ, “ನನಗೆ ಬಹಳ ಹಸಿವು ಮತ್ತು ಬಾಯಾರಿಕೆ ಆಗಿದೆ, ಸಹಾಯ ಮಾಡು." ರೈತ ಉಳುಮೆಯನ್ನು ನಿಲ್ಲಿಸಿ ಹೇಳಿದ, “ಮಹಾರಾಜಾ, ಇಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯಿರಿ. ನಾನು ಮನೆಗೆ ಹೋಗಿ ನಿಮಗಾಗಿ ಆಹಾರ ಮತ್ತು ನೀರು ತರುತ್ತೇನೆ.”

ರೈತ ಮನೆಗೆ ಹೋದಾಗ, ರಾಜ ಯೋಚಿಸಿದ: ನನ್ನಿಂದಾಗಿ ಅವನ ದುಡಿಮೆಗೆ ಅಡಚಣೆ ಆಯಿತು. ಅವನಿಗೆ ಸ್ವಲ್ಪ ಸಹಾಯ ಮಾಡತಕ್ಕದ್ದು. ಹೀಗೆ ಯೋಚಿಸಿದ ರಾಜ, ಹೊಲದ ಉಳುಮೆ ಮುಂದುವರಿಸಿದ. ಆತ ಹೊಲದ ಮೂಲೆಯಲ್ಲಿ ಉಳುತ್ತಿದ್ದಾಗ ನೇಗಿಲಿಗೆ ಏನೋ ತಗಲಿತು. ಅದೇನೆಂದು ನೋಡಿದಾಗ ಪಾತ್ರೆಯೊಂದು ಕಾಣಿಸಿತು. ಅದರ ಮುಚ್ಚಳ ತೆಗೆದಾಗ ಪಾತ್ರೆಯ ತುಂಬ ಚಿನ್ನದ ನಾಣ್ಯಗಳಿದ್ದವು!

ಅಷ್ಟರಲ್ಲಿ ರೈತ ಆಹಾರ ಮತ್ತು ನೀರು ತಗೊಂಡು ಹೊಲಕ್ಕೆ ಮರಳಿದ. ರಾಜ ಅಲ್ಲೇ ಆಹಾರ ತಿಂದು, ನೀರು ಕುಡಿದ. ಅನಂತರ, ರೈತನನ್ನು ಹೊಲದ ಮೂಲೆಗೆ ಕರೆದೊಯ್ದು ಚಿನ್ನದ ನಾಣ್ಯಗಳ ಪಾತ್ರೆಯನ್ನು ತೋರಿಸಿ, ನಡೆದದ್ದನ್ನು ತಿಳಿಸಿದ. ತಕ್ಷಣವೇ ರೈತ ಹೇಳಿದ, “ಮಹಾರಾಜಾ, ಅದೆಲ್ಲವೂ ನಿಮಗೆ ಸೇರಿದ್ದು.” ರೈತನ ದೊಡ್ಡ ಗುಣ ಕಂಡು ಮಹಾರಾಜನಿಗೆ ಮನಸ್ಸು ತುಂಬಿ ಬಂತು. ಕೊನೆಗೆ ಆ ಪಾತ್ರೆಯಲ್ಲಿದ್ದ ಚಿನ್ನದ ನಾಣ್ಯಗಳಲ್ಲಿ ಅರ್ಧ ಭಾಗವನ್ನು ರೈತನಿಗೆ ರಾಜ ಬಹುಮಾನವಾಗಿತ್ತ.