ADDOOR

48. ಯುವರಾಜನಿಗೆ ನೀತಿ ಪಾಠ

Published on Wednesday, August 09, 2023 - 10:31
48. ಯುವರಾಜನಿಗೆ ನೀತಿ ಪಾಠ

ಬುದ್ಧಿವಂತ ರಾಜನಿಗೆ ತನ್ನ ಯುವರಾಜನ ಬಗ್ಗೆ ಚಿಂತೆಯಾಗಿತ್ತು. ಯಾಕೆಂದರೆ ಯುವರಾಜ ಮುಂಗೋಪಿ ಮತ್ತು ಸಿಟ್ಟಿನ ಭರದಲ್ಲಿ ಇತರರಿಗೆ ನೋವು ನೀಡುತ್ತಿದ್ದ. ಕೊನೆಗೊಂದು ದಿನ ರಾಜ ತನ್ನ ನಂಬಿಕಸ್ಥ ಸಲಹೆಗಾರನ ಬಳಿ ಹೋಗಿ ತನ್ನ ಚಿಂತೆ ತಿಳಿಸಿದ. "ನಾಳೆ ಯುವರಾಜನನ್ನು ನನ್ನ ಬಳಿ ಕಳಿಸಿ ಕೊಡಿ” ಎಂದ ಸಲಹೆಗಾರ.

ಅಂತೆಯೇ ಮರುದಿನ ಯುವರಾಜ ಆ ಸಲಹೆಗಾರನ ಬಳಿ ಬಂದ. ಇಲ್ಲೇ ಸುತ್ತಾಡಿ  ಬರೋಣ ಎನ್ನುತ್ತಾ ಯುವರಾಜನನ್ನು ಸಲಹೆಗಾರ ಕರೆದೊಯ್ದ. ಆತ ಒಂದು ಮರದ ಬಳಿ ನಿಂತು. “ಈ ಮರದ ಎಲೆಯೊಂದನ್ನು ತಿಂದು ನೋಡು. ರುಚಿ ಹೇಗಿದೆ ಹೇಳು” ಎಂದು ಯುವರಾಜನಿಗೆ ಹೇಳಿದ. ಯುವರಾಜ ಆ ಮರದ ಎಲೆಯೊಂದನ್ನು ತಿಂದು ಮುಖ ಕಿವಿಚಿಕೊಂಡ. “ಇದು ಭಾರಿ ಕಹಿ. ಇದು ವಿಷದ ಮರ ಆಗಿರಲೂ ಬಹುದು. ಇದನ್ನು ತಕ್ಷಣವೇ ಬೇರು ಸಹಿತ ಕಿತ್ತು ಹಾಕಬೇಕು. ಇಲ್ಲವಾದರೆ ಇದು ಬೆಳೆದು ದೊಡ್ಡದಾಗಿ ಹಲವರಿಗೆ ತೊಂದರೆಯಾದೀತು” ಎಂದ ಯುವರಾಜ.

ಆಗ ಸಲಹೆಗಾರ ಯುವರಾಜನಿಗೆ ತಿಳಿಯ ಹೇಳಿದ, "ಹೌದು ಯುವರಾಜಾ, ನೀನು ಹೇಳಿದ್ದು ಸರಿ. ಹಾಗೆಯೇ ನಿನ್ನ ಕೋಪ ಮತ್ತು ಉದ್ಧಟತನ ಮುಂದುವರಿದರೆ, ನಿನ್ನಿಂದ ಹಲವರಿಗೆ ತೊಂದರೆಯಾದೀತು. ಆಗ ಜನರು ನಿನ್ನನ್ನು ರಾಜನಾಗಿ ಸ್ವೀಕರಿಸುವುದಿಲ್ಲ.” ಈಗ ಯುವರಾಜನಿಗೆ ಸಲಹೆಗಾರನ ನೀತಿ ಪಾಠ ಅರ್ಥವಾಯಿತು. ಆತ ಕೋಪ ಮಾಡಿಕೊಳ್ಳದಿರಲು ನಿರ್ಧರಿಸಿದ. ಮುಂದೆ ರಾಜನಾಗಿ, ಎಲ್ಲರ ಪ್ರೀತಿಪಾತ್ರನಾದ.